Advertisement

ಶ್ರೀರಾಮನವಮಿಯ ದಿವಸ

07:30 AM Mar 25, 2018 | |

1968ರ ಮಾರ್ಚ್‌ನಲ್ಲಿ  “ಶ್ರೀರಾಮನವಮಿ’ಯ ನಿಮಿತ್ತ ಉಡುಪಿಯಲ್ಲಿ ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಆಯೋಜನೆಗೊಂಡ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ‌ವರು ಎಂ. ಗೋಪಾಲಕೃಷ್ಣ ಅಡಿಗರು. ಆ ಗೋಷ್ಠಿಗಾಗಿ ಅವರು ಬರೆದು ಓದಿದ ಪದ್ಯ “ಶ್ರೀರಾಮನವಮಿಯ ದಿವಸ’!  ಕೆ. ಎಸ್‌. ನರಸಿಂಹಸ್ವಾಮಿ, ಸು. ರಂ. ಎಕ್ಕುಂಡಿ, ಪಾ. ವೆಂ. ಆಚಾರ್ಯ, ಬನ್ನಂಜೆ ಗೋವಿಂದಾಚಾರ್ಯರೇ ಮೊದಲಾದವರು ಭಾಗವಹಿಸಿದ ಈ ಕವಿಗೋಷ್ಠಿಯನ್ನು ಮಣಿಪಾಲದ “ಹೆರಿಟೇಜ್‌ ವಿಲೇಜ್‌’ನ ವಿಜಯನಾಥ ಶೆಣೈ ಸಂಯೋಜನೆ ಮಾಡಿದ್ದರು. ವಿಜಯನಾಥ ಶೆಣೈಯವರು ತೀರಿಕೊಂಡು ಒಂದು ವರ್ಷವಾಗಿದೆ. ಗೋಪಾಲಕೃಷ್ಣ ಅಡಿಗರ ಶತಮಾನೋತ್ಸವ ವರ್ಷವಿದು. ಶ್ರೀರಾಮನ ಹೆಸರಿನಲ್ಲಿ ಇದು ಎಷ್ಟನೆಯ ನವಮಿಯೋ ಬಲ್ಲವರಾರು? ಶ್ರೀರಾಮನವಮಿಯೆಂದರೆ ಎಷ್ಟೊಂದು ನೆನಪುಗಳು !

Advertisement

ಎಂ. ಗೋಪಾಲಕೃಷ್ಣ ಅಡಿಗ
ಶ್ರೀರಾಮನವಮಿಯ ದಿವಸ ರಾಮನಾಮಾಮೃತವೆ
ಪಾನಕ, ಪನಿವಾರ, ಕೋಸಂಬರಿ;
ಕರಬೂಜ ಸಿಧ್ದೋಟುಗಳ ಹೋಳು, ಸೀಕರಣೆ :
ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ.

ಕಾದು ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ-
ಕುಳಿತ ಮೂಲಾಧಾರ ಜೀವಧಾತು
ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು ;
ಮಣ್ಣೊಡೆದು ಹಸುರು ಹೂ ಹುಲ್ಲುಮುಳ್ಳು .

ಮಣ್ಣುಟ್ಟ ಪುಟ್ಟ ಬಿತ್ತಕ್ಕೆ ಮಳೆಹನಿಸೇಕ ;
ಆಶ್ವತ್ಥದ ವಿವರ್ತ ನಿತ್ಯ ಘಟನೆ ;
ಗುಮ್ಮಟಗಿರಿಯ ನೆತ್ತಿಯಲ್ಲಿ ಕಲ್ಲರಳಿದ್ದು
ಕಾರ್ಯಕಾರಣದೊಂದಪೂರ್ವ ನಟನೆ.

ನೆಲಕ್ಕಂಟಿ ಬಿದ್ದ ಆಕಾಶಯಾನದ ಕನಸು
ಜೆಟ್‌ ವಿಮಾನವೇರಿ ಕೊಂಚ‌ ದೂರ
ತೇಲಿ ಮಣ್ಣಿಗೆ ಮರಳಿ, ರಾಕೆಟ್ಟು ಜಗಿದುಗುಳಿ
ತಿಂಗಳಿಗೆ ಬಡಿವಾಧುನಿಕ ವಿಕಾರ.

Advertisement

ವೇದೋಪನಿಷದಗಳ ಭೂತಗನ್ನಡಿಯೊಳಗೆ
ಪಡಿಮೂಡಿದಾಕೃತಿಗೆ ತಾನೆ ಮುಗ್ಧ
ಮತ್ಸéಕೂರ್ಮವರಾಹ ಮೆಟ್ಟಲುಗಳೇರುತ್ತ
ಹುತ್ತಗಟ್ಟಿದ್ದ ಕೈ ಕಡೆದ ನೋಟ;

ಕೌಸಲೆ ದಶರಥರ ಪುತ್ರಕಾಮೇಷ್ಟಿಗೆರೆ
ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ,
ಆಸ್ಫೋಟಿಸಿತ್ತು ಸಿಡಿತಲೆ; ಗರಿಷ್ಠ ತೇಜದ ಮೊನೆ
ಕೆಳಪಟ್ಟು ಮಣ್ಣುಟ್ಟು ನಿಂತ ಘಟನೆ :

ಬೆಳ್ಳಂಬೆಳಕಿನಲ್ಲಿ ಬಿಳಿಹಾಯಿಗಳ ಪರದಾಟ,
ಹಾಲ್ಗಡಲ ಬಗೆದೊಲೆವ ರಾಜಹಂಸ;
ಅಂತರಂಗದ ಸುರುಳಿ ಬಿಚ್ಚಿ ಸರ್ಚ್‌ಲೈಟಲ್ಲಿ
ಹೆದ್ದಾರಿ ಹಾಸಿದ್ದ ರಾಮಚರಿತ.

ಸಂಕಲ್ಪಬಲದ ಜಾಗರಣೆ; ಕತ್ತಲಿನೆದೆಗೆ
ಕಣೆ, ದಂಡಕಾರಣ್ಯಕ್ಕೆ ಹಗಲ ದೊಣ್ಣೆ ;
ಮಣ್ಣಿನಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ ;
ಸುಟ್ಟಲ್ಲದೇ ಮುಟ್ಟೆನೆಂಬುಡಾಫೆ.

ವಿಜೃಂಭಿಸಿತು ರಾಮಬಾಣ, ನಿಜ. ಕತ್ತಲಿಗೆ
ಹತ್ತೆ ತಲೆ? ನೂರಾರೆ? ಅದು ಅಸಂಖ್ಯ :
ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ
ಅನಾದಿ ; ಕೋದಂಡ ದಂಡವೂ ಹೀಗೆ ದಂಡ;

ಅಥವಾ ಚಕ್ರಾರಪಂಕ್ತಿ; ಚಕಮಕಿ ಕಲ್ಲನುಜ್ಜುತ್ತ
ಕೂತುಕೊಂಡಿದ್ದೇನೆ ಕತ್ತಲೊಳಗೆ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ.

ಪಟcಕ್ರ ರಾಕೆಟ್ಟುಗಳ ಹಂತ ಹಂತಕ್ಕೆ
ಅಂಚೆ ತಲುಪೀತೇ ಸಹಸ್ರಾರಕೆ?
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ?

ಗೋಪಾಲಕೃಷ್ಣ ಅಡಿಗರ “ಶ್ರೀರಾಮನವಮಿಯ ದಿವಸ’ ಪದ್ಯದ ಒಂದು ಮರುಓದು…
ಆಧುನಿಕ ಕನ್ನಡ ಕಾವ್ಯಕ್ಕೆ ಪ್ರತಿಮಾ ವಿಧಾನದ ಸಾಧ್ಯತೆಯನ್ನು ತೆರೆದಿಟ್ಟ ಕವಿ ಗೋಪಾಲಕೃಷ್ಣ ಅಡಿಗರಿಗೆ ಶ್ರೀರಾಮನೂ ಮಾನವ ವ್ಯಕ್ತಿತ್ವದ ಒಂದು ಸಾಧ್ಯತೆಯಾಗಿ ಕಾಣುತ್ತಾನೆ. ಅಡಿಗರಿಗೆ ರಾಮ ದೇವರೂ ಅಲ್ಲ; ರಾಜನೂ ಅಲ್ಲ. ಆತ ಪರಿಪೂರ್ಣತೆಯತ್ತ ಸಾಗುವ ವ್ಯಕ್ತಿತ್ವವೊಂದರ ಸಂಕೇತ. 

ರಾಮರಾಜ್ಯ, ಪುರಾತನದ ಪುನರುದ್ಧಾರ ಇವೆಲ್ಲವೂ ಅಡಿಗರಿಗೆ ಈ ವ್ಯಕ್ತಿತ್ವದ ವಿಕಾಸ ಯಾತ್ರೆಯ ಗುರಿಯೆನ್ನುವುದೇನೋ ನಿಜ. ಆದರೆ ಅದು ಹಿಂದೆಯೇ ಇದ್ದು ಇಂದು ಮರಳಿ ಪಡೆಯಬೇಕಾದ ವಸ್ತುವಲ್ಲ. ಪರಂಪರೆಯನ್ನು ಅವರು ಅರ್ಥೈಸುವ ಬಗೆಯೇ ಹಾಗೆ. ಪರಂಪರೆಯು ಅಪ್ಪಟ ಚಿನ್ನದ ಪುತ್ಥಳಿ, ಶುದ್ಧ ಬಂಗಾರ ಎಲ್ಲ ನಿಜ. ಆದರೆ ಅದನ್ನು ಸೋಸಿ ತೆಗೆದು ಇಷ್ಟದೇವತಾ ವಿಗ್ರಹಕ್ಕೆ ಒಗ್ಗಿಸುವ ಅಸಲು ಕಸುಬನ್ನು, ಅಪರಂಜಿ ವಿದ್ಯೆಯನ್ನು ನಾವು ತಿಳಿದಿರಬೇಕು. 

ಶ್ರೀರಾಮನೇ ಯಾಕೆ ಮುಖ್ಯ? ಆತ ದೈವಾಂಶಸಂಭೂತನೇ ಆದರೂ ಮಾನವನಾಗಿ ಬದುಕಿ ಎಲ್ಲ ಕಷ್ಟ-ಸುಖಗಳನ್ನು ಉಂಡವನು. ಶಿವ-ಕೃಷ್ಣರ ಹಾಗೆ ಸೀಮಾತೀತನೋ ಗಾತ್ರಾತೀತನೋ ಅಲ್ಲ. ಮನುಷ್ಯ ಬದುಕಿನ ಮಿತಿ, ಸಾಧ್ಯತೆ ಎರಡನ್ನೂ ಬಲ್ಲವನಾಗಿದ್ದು ಸವಾಲುಗಳನ್ನು ಎದುರಿಸಿದವನು. ತನ್ನ ಆಲೋಚನೆಗೆ ಆಷೇìಯ ಪ್ರತೀಕಗಳನ್ನೇ ಬಳಸುವ ಅಡಿಗರಿಗೆ ವ್ಯಕ್ತಿತ್ವದ ವಿಕಾಸಕ್ಕೆ ರಾಮನೇ ಆದರ್ಶವಾಗಿ ಕಂಡದ್ದರಲ್ಲಿ ಆಶ್ಚರ್ಯವೇನಿಲ್ಲ. ಈ ವಿಕಾಸವಾದರೋ ಮೂಲಾಧಾರದಿಂದ ಸಹಸ್ರಾರದೆಡೆಗೆ ! 

ಕಾಲಬದ್ಧ ವ್ಯಕ್ತಿಯೊಬ್ಬ ಕಾಲಾತೀತನಾಗುವುದು ವ್ಯಕ್ತಿತ್ವದ ನೆಲೆಯಲ್ಲಷ್ಟೇ ಸಾಧ್ಯ. ಹಾಗಾಗಿಯೇ ಈ ಪ್ರಕ್ರಿಯೆ ವ್ಯಕ್ತಿವಿಶಿಷ್ಟವಾದುದು. ಆ ಮಾಗುವಿಕೆಗೆ ವ್ಯಕ್ತಿ ಕಾಯಬೇಕಾಗುತ್ತದೆ; ಚಿತ್ತ ಹುತ್ತಗಟ್ಟಬೇಕಾಗುತ್ತದೆ. ಸಮಾಜದ ಹಿತಕ್ಕಾಗಿ ವೈಯಕ್ತಿಕ ಹಿತಗಳನ್ನು ಮೀರುವುದು ಅಂದುಕೊಂಡಷ್ಟು ಸುಲಭವಲ್ಲ. ಅದು ಆದರ್ಶದ ಹುಚ್ಚಿನಿಂದಲೋ ಸ್ವಾರ್ಥದಿಂದಲೋ ಆಗಬಾರದು. ಆತ್ಮಪ್ರಶಂಸೆಯ ತೆವಲಿನಲ್ಲಿ ಮುಳುಗಿ ಒ¨ªಾಡುತ್ತಿರುವ ಇಂದಿನ ಯುವಜನತೆ ಇದನ್ನು ಗಮನಿಸಬೇಕು. ಮಿಡಿಯಾದಾಗಲೇ ಹಣ್ಣಾಗಬಯಸುವ, ಈ ಕ್ಷಣಕ್ಕೇ ಎಲ್ಲವೂ ಸಿಗಬೇಕೆಂಬ ತವಕ ಸರಿಯಲ್ಲ. ಇಂಥವರಿಗೆ ಚಿತ್ತ ಹುತ್ತಗಟ್ಟುವ ರೂಪಕಗಳು ಅರ್ಥವಾಗಲಾರದು. ಅರ್ಥಮಾಡಿಕೊಡುವ ಸವಾಲು ಹಿರಿಯರದ್ದು.

ಹುಟ್ಟು-ಸಾವುಗಳೆಂಬ ಎರಡು ಅವ್ಯಕ್ತಗಳೆಡೆಯ ವ್ಯಕ್ತಮಧ್ಯವಾಗಿರುವ ನಮ್ಮ ಬದುಕು ಸಾಧಿಸಬೇಕಾದುದು, ವಿಕಾಸಗೊಳ್ಳಬೇಕಾದುದು ಈ ಮಣ್ಣಿನಲ್ಲೇ ಆಗಬೇಕು. ಮಣ್ಣು ಎನ್ನುವುದು ಅಡಿಗರ ಕವನಗಳಲ್ಲಿ ಮತ್ತೆ ಮತ್ತೆ ಮರುಕಳಿಸುವ ಪ್ರತಿಮೆಯಾಗಿದೆ. ಶ್ರೀರಾಮನೂ ಈ ಮಣ್ಣಿನಲ್ಲೇ ಮಾನವನಾಗಿ ಹುಟ್ಟಿ, ಎಲ್ಲ ಕಷ್ಟ-ಸುಖಗಳನ್ನು ಅನುಭವಿಸಿ ಈ ಮಣ್ಣಿನ ವ್ಯಾಮೋಹವನ್ನು ಮೀರಿ ಬೆಳೆಯುತ್ತಾನೆ. ಮಾನವನ ಆಕಾಶಯಾನವೂ ಚಂದ್ರಯಾನವೂ ಮರಳಿ ಮಣ್ಣಿಗೇ ಬಂದು ಕೊನೆಯಾಗಬೇಕಷ್ಟೆ. ನಮ್ಮೆಲ್ಲ ಕನಸುಗಳೂ ನೆಲಬಿಟ್ಟ ಸ್ಥಿತಿಯಲ್ಲಿರಬಾರದು. ನೆಲದ ಮೇಲಿನ ವ್ಯಾಮೋಹವನ್ನಷ್ಟೆ ಬಿಡಬೇಕು. ಅತ್ಯದ್ದಿಷ್ಟದ್ದಶಾಂಗುಲಮ್‌ ಎಂದಾಗಲೂ ಕಾಲು ನೆಲದಲ್ಲಿರಬೇಕು ತಾನೇ? ಏಕಕಾಲದಲ್ಲಿ ಸ್ಥಳೀಯವೂ ಸಾರ್ವತ್ರಿಕವೂ ಆಗುವ ವಿಕಾಸ ಕ್ರಮವಿದು. 

ಅಡಿಗರಿಗೆ ಶ್ರೀರಾಮ, ಗಾಂಧಿ, ಆನಂದತೀರ್ಥ ಮುಂತಾದವರೆಲ್ಲರೂ ಪರಿಪೂರ್ಣತೆಯೆಡೆಗೆ ಸಾಗುವ ವ್ಯಕ್ತಿತ್ವಗಳಾಗಿ ಕಾಣುತ್ತಾರೆ. ಅವರೆಲ್ಲರೂ ಪರಿಪೂರ್ಣರೇನೂ ಆಗಿಲ್ಲ. ಕವಿ ಅವರನ್ನು ವ್ಯಂಗ್ಯದಿಂದಲೂ ನೋಡಬಲ್ಲ. “ಸುಟ್ಟಲ್ಲದೆ ಮುಟ್ಟೆನೆಂಬ ಉಡಾಫೆ’ ಎಂದು ಗೇಲಿ ಮಾಡಬಲ್ಲ. ಅಸಂಖ್ಯ ತಲೆಗಳ ಕತ್ತಲನ್ನು ಎದುರಿಸಲು ರಾಮನಿಗೆ ಸಾಧ್ಯವಿಲ್ಲದಾದಾಗ ಆತನ “ದೋರ್ದಂಡ ದಂಡವೂ ಹೀಗೆ ದಂಡ’ ಎಂದು ಹಂಗಿಸಬಲ್ಲ! ಆದರೂ ಕವಿಗೆ ಆ “ಪುರುಷೋತ್ತಮ’ ಎಂಬ ಕಲ್ಪನೆಯ ಬಗ್ಗೆ ನಂಬಿಕೆಯಿದೆ. ಮೂಲಾಧಾರದಿಂದ ಹೊರಟ ಜೀವಧಾತುವಿಗೆ ಮೇಲೆದ್ದು ಸ್ಫೋಟಿಸುವ ಸಾಮರ್ಥ್ಯ ಇದೆ ಎಂಬ ನಂಬಿಕೆ. ಇಂಥ ಜೀವನಶ್ರದ್ಧೆಯೇ ನಮ್ಮನ್ನು ಕಾಯಬಲ್ಲುದು. ಅಸಂಖ್ಯ ತಲೆಯ ಕತ್ತಲು ನಮ್ಮೊಳಗಿನ ರಾಕ್ಷಸ ಪ್ರವೃತ್ತಿಯ ಸಂಕೇತ. ಅದನ್ನು ಗೆಲ್ಲುವುದು ಈ ವಿಕಾಸಯಾತ್ರೆಯ ಪ್ರಮುಖ ಸವಾಲುಗಳಲ್ಲೊಂದು.

ಈ ಕವನದ ಕೊನೆಯಲ್ಲಿ, “ಷಟcಕ್ರ ರಾಕೆಟ್ಟುಗಳು ಹಂತ ಹಂತಕ್ಕೆ- ಅಂಚೆ ತಲುಪೀತೇ ಸಹಸ್ರಾರಕೆ?’ ಎಂಬೊಂದು ಸಾಲು ಬರುತ್ತದೆ. ಇಲ್ಲಿ ರಾಕೆಟ್ಟು ವೈಜ್ಞಾನಿಕ ಸಂಕೇತವಾದರೆ, ಅಂಚೆ ಆಧ್ಯಾತ್ಮಿಕತೆಯ ಸಂಕೇತ. ವಿಕಾಸವು ಈ ಎರಡೂ ನೆಲೆಗಳಲ್ಲಿ ಆಗಬೇಕು ಎಂಬುದು ಕವಿಯ ಆಶಯ. ಅದಕ್ಕೆ ಮೊದಲು ಆಗಬೇಕಾದುದು ವ್ಯಕ್ತಿಗೆ ತನಗಿರುವ ಅಗಾಧ ಸಾಮರ್ಥ್ಯದ ಅರಿವು. ಆದರೆ ಅದಕ್ಕೆ ಕಾಯಬೇಕು. ತಾಯ ಗರ್ಭದಲ್ಲಿ ಶಿಶು ನವಮಾಸಗಳನ್ನು ಕಾಯುವ ಹಾಗೆ; ಮಣ್ಣೊಡೆದು ಜೀವ ಮೊಳಕೆಯೊಡೆಯುವ ಹಾಗೆ ಕಾಯಬೇಕು. ಆ ಮೊಳಕೆ ಚಿಗುರೊಡೆದು, ಗಿಡವಾಗಿ ಮರವಾಗುವ ವರೆಗೂ ಕಾಯಬೇಕು. ಚಿತ್ತ ಹುತ್ತಗಟ್ಟುವುದೆಂದರೆ ಇದೇ. ನಮ್ಮ ನೋಂಪಿಗಳು ಕೇವಲ ಪಾನಕ, ಪನಿವಾರಕ್ಕಷ್ಟೆ ಸೀಮಿತವಾಗಬಾರದು.

ಹೀಗೆ ಹುತ್ತಗಟ್ಟಿದ ವ್ಯಕ್ತಿತ್ವಕ್ಕೆ ರಾಮನು ಸಂಕೇತವಾದರೆ, ಹುತ್ತಗಟ್ಟುವ ಪ್ರಕ್ರಿಯೆಗೆ ವಾಲ್ಮೀಕಿಯೂ ಒಂದು ಸಂಕೇತ!

ವರದರಾಜ ಚಂದ್ರಗಿರಿ

Advertisement

Udayavani is now on Telegram. Click here to join our channel and stay updated with the latest news.

Next