Advertisement

ಜಿಲ್ಲೆಗೆ ಕ್ರೈಸ್ತರ ಕೊಡುಗೆ ಅಪಾರ

03:27 PM Dec 24, 2020 | Suhan S |

ಹೊನ್ನಾವರ: ಲೋಕವನ್ನು ಅಜ್ಞಾನ, ಅನಕ್ಷರತೆ, ರೋಗ, ಅಶಾಂತಿ, ಯುದ್ಧ, ಭಯೋತ್ಪಾದನೆಗಳಿಂದ ಮುಕ್ತಗೊಳಿಸು. ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆಮ್ಮನು ಎಂದು ಕರುಣಾಳು ಬೆಳಕನ್ನುಶತಶತಮಾನಗಳಿಂದ ಮಾನವಕುಲ ವಿವಿಧ  ರೂಪದಲ್ಲಿ, ವಿವಿಧ ರೀತಿಯಲ್ಲಿ ಪ್ರಾರ್ಥಿಸುತ್ತಲೇ ಬಂದಿದೆ.

Advertisement

ಕಾಲಕಾಲಕ್ಕೆ ಪುಣ್ಯಪುರುಷರು ಜನಿಸಿ ಕತ್ತಲೆಯಿಂದ ಬೆಳಕಿನ ಕಡೆ ನಡೆಯುವ  ಮಾರ್ಗವನ್ನು ನಮಗೆ ತೋರಿದರು. ಆದರೂ ಪುನಃಪುನಃ ಪ್ರಾರ್ಥಿಸಲೇ ಬೇಕಾಗಿದೆ. ಅವರು ತೋರಿದ ಮಾರ್ಗದಲ್ಲಿ ನಾವೆಷ್ಟು ನಡೆದೆವೋ ಗೊತ್ತಿಲ್ಲ. ನಡೆದಿದ್ದರೆ ಜಗತ್ತು ಹೀಗಿರುತ್ತಿರಲಿಲ್ಲ.ನಾಳೆ ಬೆಳಗಾದರೆ ಇಂತಹ ಮಹಾಪುರುಷರಲ್ಲಿ ಒಬ್ಬರಾದ ಏಸು ಕ್ರಿಸ್ತರ ಜನ್ಮದಿನ. ಕ್ರಿಶ್ಚಿಯನ್‌ ಲೋಕ ಅದ್ದೂರಿಯಿಂದ ಆಚರಿಸುವ ಕ್ರಿಸ್ತಜನ್ಮಾಚರಣೆಗೆ ಕೋವಿಡ್‌ ತಡೆಬಿದ್ದಿದೆ.

ಎರಡುಸಾವಿರ ವರ್ಷಗಳಿಗೂ ಪೂರ್ವದಲ್ಲಿ ಜನಿಸಿದ ಕ್ರಿಸ್ತರು ಪ್ರೀತಿ, ಪ್ರೇಮದ ಸಂದೇಶ ನೀಡಿದ್ದಾರೆ. ಬಡವರ, ದೀನದಲಿತರ,ರೋಗಿಗಳ, ಅಜ್ಞಾನಿಗಳ ಸೇವೆಯಲ್ಲಿ ನನ್ನನ್ನು ಕಾಣಿರಿ ಎಂಬ ಸಂದೇಶ ನೀಡಿ ಹೋಗಿದ್ದಾರೆ. ಮಂಜೇಶ್ವರ ಗೋವಿಂದ ಪೈಗಳು ತಮ್ಮ ಕ್ರಿಸ್ತಕಾವ್ಯ ಗೋಲ್ಗೋಥಾದಲ್ಲಿ ಹೇಳಿದಂತೆ “ತನ್ನ ಶಿಲುಬೆಯ ತಾನು ಹೊತ್ತನಲ ಗುರುಏಸು’. ಶ್ರೀ ಸಾಮಾನ್ಯರು ಈಗಲೂ ತಮ್ಮ ಶಿಲುಬೆಯನ್ನು ತಾವು ಹೊರುತ್ತಲೇ ಇದ್ದಾರೆ. ಕ್ರಿಸ್ತ ಸಂದೇಶ ನೆನಪಿಸಲು ಕ್ರಿಸ್‌ಮಸ್‌ ಮತ್ತೆ ಝಗಮಗಿಸುತ್ತಿದೆ.

ಬರಿ ಕಾಡೇ ಆಗಿದ್ದ ಉತ್ತರ ಕನ್ನಡದಲ್ಲಿ ಆ ಕಾಲದಲ್ಲಿ ಔಷಧ ಇಲ್ಲದಂತ ಪ್ಲೇಗ್‌, ಮಲೇರಿಯಾಗಳಂತಹ ರೋಗಗಳು ಜಿಲ್ಲೆಯಅರ್ಧಕರ್ಧ ಜನರನ್ನು ಬಲಿಪಡೆದಿದ್ದವು. 120ವರ್ಷಗಳ ಹಿಂದೆ ಕ್ರಿಶ್ಚಿಯನ್‌ ಧರ್ಮಗುರುಗಳು ಉತ್ತರ ಕನ್ನಡಕ್ಕೆ ಬಂದರು. ಗುಂಡಬಾಳದಂತಹ ಕಾಡಿನಲ್ಲಿ ಆರೋಗ್ಯಮಾತೆಯ ಮಂದಿರನಿರ್ಮಿಸಿ ರೋಗ ನಿವಾರಣೆಗೆ ಪ್ರಾರ್ಥಿಸಿದರು.ಅದೇ ಸುಮಾರು ಕೇರಳದಿಂದ ಬಂದಕ್ರಿಶ್ಚಿಯನ್‌ ಸೀರಿಯನ್‌ ಮಿಶನ್‌ ಪಂಗಡದವರು ಹೊನ್ನಾವರದಲ್ಲಿ ಆ ಕಾಲದಲ್ಲಿ 100ಹಾಸಿಗೆಗಳ ಸೀರಿಯನ್‌ ಮಿಶನ್‌ ಶಾಂತಿ ಆಸ್ಪತ್ರೆನಿರ್ಮಿಸಿದರು. ಜಾಕೋಬೈಟ್ಸ್‌ ಪಂಗಡದವರು ನ್ಯಾಶನಲ್‌ ಮಿಶನ್‌ 50 ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳನ್ನು, ಸೇಂಟ್‌ ಥಾಮಸ್‌ಪ್ರೌಢಶಾಲೆಯನ್ನು ನಿರ್ಮಿಸಿದರು. ಸ್ವಾತಂತ್ರ್ಯಕ್ಕೂ 50 ವರ್ಷ ಪೂರ್ವದಲ್ಲಿ ಜಿಲ್ಲೆಯಲ್ಲಿ ಪ್ರಥಮವಾಗಿಹೊನ್ನಾವರದಲ್ಲಿ ಶಾಲೆ, ಆಸ್ಪತ್ರೆಗಳನ್ನು ನಿರ್ಮಿಸಿದ ಕ್ರಿಶ್ಚಿಯನ್‌ ಸಂಸ್ಥೆಗಳನ್ನು ನೆನೆಯಬೇಕಾಗಿದೆ.  ಕೆಲವು ವರ್ಷಗಳ ನಂತರ ಕ್ಯಾಥೋಲಿಕ್‌ ಪಂಗಡದವರು ಗೋವಾ ಕಡೆಯಿಂದ ಬಂದರು.

ಬೆಳಗಾವಿ ಧರ್ಮಕ್ಷೇತ್ರಕ್ಕೆ ಬಹುಕಾಲ ಉತ್ತರ ಕನ್ನಡ ಒಳಪಟ್ಟಿತ್ತು. ಆಗ ಕ್ಯಾಥೋಲಿಕ್‌ ಪಂಗಡದ ಚಟುವಟಿಕೆ ಚರ್ಚ್‌ಗಳಿಗೆ ಧರ್ಮಪ್ರಸಾರಕ್ಕೆ ಮೀಸಲಾಗಿತ್ತು. ಹರಕೆಹೊತ್ತ ಬಡ ಮೀನುಗಾರನಿಗೆಅಪಾರ ಮೀನು ದೊರೆಯುವಂತೆ ಮಾಡಿದ ಸಂತ ಝೇವಿಯರ್‌ನ ಅವಶೇಷಗಳುಳ್ಳ ಚರ್ಚ್‌ ಚಂದಾವರದಲ್ಲಿದೆ. ಇಲ್ಲಿ ಸರ್ವಧರ್ಮಿಯರು ಪ್ರಾರ್ಥಿಸುತ್ತಾರೆ.

Advertisement

ಕಾರವಾರ ಧರ್ಮಪ್ರಾಂತ್ಯ ರಚನೆಯಾದಮೇಲೆ ಜಿಲ್ಲೆಯ ಕ್ರಿಶ್ಚಿಯನ್‌ ಸಮುದಾಯ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಸಾಧಿಸಿತು. ಕಾರವಾರ ಧರ್ಮಪ್ರಾಂತ್ಯ ಜಿಲ್ಲೆಯಾದ್ಯಂತ50ಕ್ಕೂ ಹೆಚ್ಚು ಶೈಕ್ಷಣಿಕ ಮತ್ತು ಆರೋಗ್ಯಸಂಸ್ಥೆಗಳನ್ನು ಸ್ಥಾಪಿಸಿತು. ಜಿಲ್ಲೆಯಲ್ಲಿದೊಡ್ಡದಾದ ಸೇಂಟ್‌ ಇಗ್ನೇಷಿಯಸ್‌ ಆಸ್ಪತ್ರೆಹೊನ್ನಾವರದಲ್ಲಿದೆ. ಎಲ್ಲ ಕ್ರಿಶ್ಚಿಯನ್‌ ಸಂಸ್ಥೆಗಳಲ್ಲಿ ಕಲಿಯುವ, ದುಡಿಯುವ, ಚಿಕಿತ್ಸೆ ಪಡೆಯುವಅವಕಾಶ ಸರ್ವಧರ್ಮಿಯರಿಗೂ ಸಿಗುತ್ತಲಿದೆ. 10 ಸಾವಿರಕ್ಕೂ ಹೆಚ್ಚು ಬಡಕುಟುಂಬಗಳನ್ನುಗುರುತಿಸಿ ಅವರ ಸರ್ವತೋಮುಖ ಅಭಿವೃದ್ಧಿಗೆ ಕ್ರಿಶ್ಚಿಯನ್‌ ಸಂಸ್ಥೆಗಳು ನೆರವಾಗುತ್ತ ಬಂದಿದೆ.

ಜಿಲ್ಲೆಯ ಕ್ರಿಶ್ಚಿಯನ್‌ ಸಂಸ್ಥೆಗಳಿಂದ ಪ್ರಯೋಜನ ಪಡೆದುಕೊಂಡ ಅದೆಷ್ಟೋ ಜನ ಜಗತ್ತಿನಾದ್ಯಂತ ಚದುರಿಹೋಗಿ ತಮ್ಮ ಅನ್ನ ಕಂಡುಕೊಂಡಿದ್ದಾರೆ.ವಾದ, ಅಪವಾದಗಳೇನೇ ಇರಲಿ ಶೈಕ್ಷಣಿಕ,ಆರೋಗ್ಯ ಕ್ಷೇತ್ರದಲ್ಲಿ ಶತಮಾನದ ಹಿಂದಿನಿಂದಸೇವೆಸಲ್ಲಿಸುತ್ತ ಬಂದ ಕ್ರಿಶ್ಚಿಯನ್‌ ಸೇವಾಸಂಸ್ಥೆಗಳಕೆಲಸವನ್ನು ಅಭಿನಂದಿಸಿ ಅವರಿಗೆ ಕ್ರಿಸ್‌ಮಸ್‌ಶುಭಾಶಯ ಕೋರುವುದು ಕರ್ತವ್ಯ. ಕತ್ತಲುಕಳೆದು ಬೆಳಕಿನತ್ತ ಸಾಗುವ ಪ್ರಯತ್ನ ನಿರಂತರನಡೆಯಬೇಕು ಎಂದು ಎಲ್ಲ ಧರ್ಮಗಳುಹೇಳುತ್ತಲೇ ಬಂದಿದೆ. ಮುಸುಕು, ಮಬ್ಬು ಸರಿಯುತ್ತಿಲ್ಲ, ಸರಿಯಲಿ ಎಂದು ಪ್ರಾರ್ಥನೆ ಜೊತೆ ಸಾಧನೆಯನ್ನು ಮುಂದುವರಿಸೋಣ.

 

-ಜೀಯು ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next