Advertisement

ಹಿಂದುಳಿದವರಿಗೆ ಕನಸಿನ ಶಕ್ತಿ ನೀಡಿದ್ದು ಸಂವಿಧಾನ; ಚಿಂತಕ ಡಾ. ಕುಂ. ವೀರಭದ್ರಪ್ಪ

06:04 PM Apr 19, 2022 | Team Udayavani |

ಚಿಕ್ಕಮಗಳೂರು: ದಲಿತರಿಗೆ, ಹಿಂದುಗಳಿದ ವರ್ಗದವರಿಗೆ ಕನಸು ಕಾಣುವ ಶಿಕ್ತಿ ನೀಡಿದ್ದು ಸಂವಿಧಾನ ಎಂದು ಹಿರಿಯ ಸಾಹಿತಿ, ಚಿಂತಕ ಡಾ| ಕುಂ. ವೀರಭದ್ರಪ್ಪ ಹೇಳಿದರು.

Advertisement

ಸೋಮವಾರ ನಗರದ ಆಜಾದ್‌ ವೃತ್ತದಲ್ಲಿ ಡಾ| ಬಿ.ಆರ್‌. ಅಂಬೇಡರRರ್‌ ಜಯಂತಿ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಅರವ 131ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಇಡೀ ಜಗತ್ತಿಗೆ ಜಗದ್ಗುರು. ಅವರ ತಂಟೆಗೆ ಹೋದರೆ ದೇಶದಲ್ಲಿ ಪ್ರಳಯ ಸಂಭವಿಸುತ್ತದೆ. ಅಂಬೇಡ್ಕರ್‌ ಅನೇಕ ಅಪಮಾನಗಳನ್ನು ಸಹಿಸಿಕೊಂಡು ಶೂದ್ರರ ವಿಮೋಚನೆಗೆ ಅವಿರತವಾಗಿ ಹೋರಾಟ ನಡೆಸಿದರು. ನಾವೆಲ್ಲ ಅದರ ಫಲಾನುಭವಿಗಳು ಎಂಬುದನ್ನು ಮರೆಯಬಾರದು ಎಂದರು.

ಅಂಬೇಡ್ಕರ್‌ ಅತ್ಯುತ್ತಮ ದಾರ್ಶನಿಕ, ಅದ್ವೀತಿಯ ಪಂಡಿತ ಎಂದ ಅವರು, ಮಹಿಳೆಯರ ಪರವಾಗಿ ಹೋರಾಟ ನಡೆಸಿದವರು. ಅವರಿಗೆ ಪಿತ್ರಾರ್ಜಿತ ಆಸ್ತಿಯನ್ನು ಹಂಚಿಕೆ ಮಾಡಲು ಹಿಂದೂ ಕೋಡ್‌ ಬಿಲ್‌ ತಂದರು. ಪಾರ್ಲಿಮೆಂಟ್‌ನಲ್ಲಿ ಸೋಲುಂಟಾದಾಗ ಹಿಂದೆ, ಮುಂದೆ ನೋಡದೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದರು ಎಂದರು. ದೇಶ ಸರ್ವ ಜನಾಂಗದ ಶಾಂತಿಯ ತೋಟ. 12 ಸಾವಿರ ಜಾತಿ, ಭಾಷೆ, ಸಂಸ್ಕೃತಿಯನ್ನು ಹೊಂದಿರುವ ವೈವಿಧ್ಯಮಯ ದೇಶ ಇದು. ನಾನೇಕೆ ಜೈ ಶ್ರೀರಾಮ್‌ ಎನ್ನಬೇಕು. ಜೈ ಭೀಮ್‌ ಎನ್ನುವೆ ಎಂದ ಕುಂ.ವೀ, ದೇಶವನ್ನು ಪ್ರೀತಿಸಿದವರು ಅಂಬೇಡ್ಕರ್‌ ಅವರು ಎಂದರು.

ಜನಪರ ಹೋರಾಟಗಾರ ಶಾಫಿ ಬೆಳ್ಳಾರೆ ಮಾತನಾಡಿ, ಅಂಬೇಡ್ಕರ್‌ ಜಯಂತಿ ಶೋಷಿತ ವರ್ಗದ ಹಬ್ಬವಾಗಿ ಪರಿವರ್ತನೆಯಾಗಬೇಕು. ಸಂವಿಧಾನ ಇರುವ ಕಾರಣಕ್ಕೆ ನಾವೆಲ್ಲರೂ ಒಟ್ಟಿಗೆ ಇರಲು ಸಾಧ್ಯವಾಗಿದೆ. ಅಂಬೇಡ್ಕರ್‌ ಅವರು ಸಮಾನತೆಯನ್ನು ಪ್ರತಿಪಾದಿಸಿದರು ಎಂದು ತಿಳಿಸಿದರು.

Advertisement

ಮನುಸ್ಮೃತಿಯನ್ನು ಪೋಷಣೆ ಮಾಡಿದವರು ಇಂದು ಅಧಿ ಕಾರದಲ್ಲಿ ಇದ್ದಾರೆ. ಈ ಬಗ್ಗೆ ನಾವೆಲ್ಲರೂ ಚಿಂತಿಸಬೇಕು. ಶೋಷಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಮನೆಯಲ್ಲಿ ಒಬ್ಬ ಅಂಬೇಡ್ಕರ್‌ ಸೃಷ್ಟಿಸಬೇಕಾಗಿದೆ. ಪ್ರತಿಯೊಬ್ಬ ಅಸ್ಪೃಶ್ಯರು ಸ್ವಾಭಿಮಾನದಿಂದ ಬದುಕುವ ಕನಸು ಕಂಡಿದ್ದಾರೆ. ಮನುವಾದಿಗಳ ವಿರುದ್ಧ ಹೋರಾಟದ ಕಿಚ್ಚು ಹತ್ತಿಸಬೇಕಾಗಿದೆ ಎಂದರು.

ಮೈಸೂರಿನ ಸಾಹಿತಿ ಮತ್ತು ಚಿಂತಕ ಮಹೇಶ್ಚಂದ್ರ ಗುರು ಮಾತನಾಡಿ, ಈ ಹಿಂದೆ ಅಸ್ಪೃಶ್ಯರ ಮೂಲಭೂತ ಹಕ್ಕುಗಳನ್ನು ರಕ್ಷಣೆ ಮಾಡುವ ಗ್ರಂಥಗಳು ಇರಲಿಲ್ಲ. ಅಮೆರಿಕದಲ್ಲಿ ಪ್ರಕೃತಿ ಧರ್ಮವನ್ನು ಒಪ್ಪಿಕೊಂಡಂತೆ ಭಾರತದಲ್ಲಿ ಪ್ರಕೃತಿ ಧರ್ಮವನ್ನು ಒಪ್ಪಿಕೊಳ್ಳಲು ಏಕೆ ಸಾಧ್ಯವಾಗಲಿಲ್ಲ? ಹಿಂದೂ ಧರ್ಮ ಪ್ರಕೃತಿ ಧರ್ಮಕ್ಕೆ ವಿರುದ್ಧವಾದದ್ದು ಎಂದರು.

ಎಲ್ಲಾ ಧರ್ಮಗ್ರಂಥಗಳಿಗಿಂತ ಸಂವಿಧಾನವೇ ಶ್ರೇಷ್ಟವಾದದ್ದು. ಇದರಿಂದ ಸರ್ವಜನಾಂಗದ ಸಮಸ್ತ ಬಾಂಧವರು ಬಂಧನದಿಂದ ಮುಕ್ತವಾಗಿ ಸ್ವತಂತ್ರವಾಗಿ ಜೀವನ ನಡೆಸಲು ಸಾಧ್ಯವಾಗಿದೆ. ಅವಕಾಶ ವಂಚಿತರು ಸಂವಿಧಾನ ಜಾರಿ ಮಾಡುವ ಜಾಗದಲ್ಲಿದ್ದಾಗ ಮಾತ್ರ ಸರ್ವರಿಗೂ ಸಮಪಾಲು, ಸಮಬಾಳು ದೊರೆಯುತ್ತದೆ ಎಂದು ತಿಳಿಸಿದರು.

ಚಾಮರಾಜನಗರದ ನಳಂದ ಬೌದ್ಧ ವಿಶ್ವವಿದ್ಯಾನಿಲಯದ ಪ್ರಧಾನ ಕಾರ್ಯದರ್ಶಿ ಭಂತೆ ಬೋ ದತ್ತ ಥೇರ ಇದ್ದರು. ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ದಂಟರಮಕ್ಕಿ ಶ್ರೀನಿವಾಸ ಅಧ್ಯಕ್ಷತೆ ವಹಿಸಿದ್ದರು. ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಇದ್ದರು.

ಬೃಹತ್‌ ಮೆರವಣಿಗೆ
ನಗರದ ಕೆಇಬಿ ವೃತ್ತದಿಂದ ಆರಂಭಗೊಂಡು ಮೆರವಣಿಗೆ ಮುಖ್ಯರಸ್ತೆಯಲ್ಲಿ ಸಂಚರಿಸಿ ಆಜಾದ್‌ ವೃತ್ತ ತಲುಪಿತು. ಪುಷ್ಪಾಲಂಕೃತ ವಾಹನದಲ್ಲಿ ಅಂಬೇಡ್ಕರ್‌ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ನಾಸಿಕ್‌ ಡೋಲ್‌ವಾದಕ್ಕೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು. ವೇದಿಕೆ ಸಮೀಪ ಮೆರವಣಿಗೆ ಬರುತ್ತಿದ್ದಂತೆ ಸುರಿದ ಮಳೆಯನ್ನೂ ಲೆಕ್ಕಿಸದೆ ಅಂಬೇಡ್ಕರ್‌ ಅಭಿಮಾನಿಗಳು ಹೆಜ್ಜೆ ಹಾಕಿದರು.

ವರುಣನ ಅಡ್ಡಿ
ಅಂಬೇಡ್ಕರ್‌ ಜಯಂತಿ ತಡವಾಗಿ ಆರಂಭವಾಗಿದ್ದು, ವೇದಿಕೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ವರುಣ ದೇವನ ಸಿಂಚನವಾಯಿತು. ಕಾರ್ಯಕ್ರಮಕ್ಕೆ
ಆಗಮಿಸಿದ ಸಭಿಕರು ಮಳೆಯಲ್ಲೇ ಗಣ್ಯರ ಭಾಷಣ ಆಲಿಸಿದರು.

ರೀಲ್‌ ಸ್ವಾಮಿ ಕೈಯಲ್ಲಿ ಅಧಿಕಾರ ಕೊಟ್ಟು ಸಾಯುತ್ತಿದ್ದೇವೆ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಆಗಲಿಲ್ಲ, ವಿನಾಶ್‌ ಆಗುತ್ತಿದೆ. ನಮಗೆಲ್ಲ ಸಂವಿಧಾನವೇ ಶಕ್ತಿ, ಸಂವಿಧಾನವೇ ಮುಕ್ತಿ. ಮನುವಾದಿ ಸರ್ಕಾರವನ್ನು ಸಂವಿಧಾನ ನೀಡಿರುವ ಶಕ್ತಿಯಿಂದ ಕಿತ್ತೋಗೆಯಬೇಕು.
ಡಾ| ಮಹೇಶ್ಚಂದ್ರ ಗುರು

Advertisement

Udayavani is now on Telegram. Click here to join our channel and stay updated with the latest news.

Next