Advertisement

ಗಣೇಶೋತ್ಸವಕ್ಕೆ ಚಿಗುರೊಡೆದ ವ್ಯಾಪಾರ

10:32 PM Aug 21, 2020 | mahesh |

ಉಡುಪಿ: ಕೋವಿಡ್ ಲಾಕ್‌ಡೌನ್‌ನಿಂದಾಗಿ ಹಲವಾರು ಆಚರಣೆಗಳಿಗೆ ಈ ಬಾರಿ ತಡೆಯಾಗಿದ್ದರೂ ಚೌತಿ ಆಚರಣೆಗೆ ಸರಕಾರ ಷರತ್ತುಬದ್ಧ ಅನುಮತಿ ನೀಡಿರುವುದರಿಂದ ನಗರದೆಲ್ಲೆಡೆ ವ್ಯಾಪಾರ ಮತ್ತೆ ಚಿಗುರೊಡೆದಿದೆ. ಶುಕ್ರವಾರ ಸುರಿಯುತ್ತಿದ್ದ ಮಳೆಯ ನಡುವೆಯೂ ನಗರದಲ್ಲಿ ಹಲವು ಗ್ರಾಹಕರು ಅಗತ್ಯ ವಸ್ತುಗಳನ್ನು ಬಂದು ಖರೀದಿಸು ತ್ತಿರುವುದು ಕಂಡುಬಂತು.

Advertisement

ಉಡುಪಿಯ ರಥಬೀದಿ, ನಗರಸಭೆಯ ಎದುರುಭಾಗ, ಕೆ.ಎಂ. ಮಾರ್ಗ, ಚಿತ್ತರಂಜನ್‌ ಸರ್ಕಲ್‌, ಸಿಟಿ ಬಸ್‌ ನಿಲ್ದಾಣದ
ಬಳಿಯಲ್ಲಿ ಹೂ, ಕಬ್ಬು, ತರಕಾರಿ, ಹಣ್ಣು- ಹಂಪಲುಗಳ ವ್ಯಾಪಾರ ಜೋರಾಗಿತ್ತು. ಕಬ್ಬು ಪ್ರತಿಯೊಂದಕ್ಕೆ 50ರಿಂದ 70 ರೂ.ನಂತೆ ಮಾರಾಟವಾಗಿದೆ. ಚೌತಿ ಕೊಟ್ಟೆಗೆ 100 ರೂ.ಗೆ 6ರಿಂದ 7ರಂತೆ ಮಾರಾಟವಾಗುತ್ತಿತ್ತು.  ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿಯ ವ್ಯಾಪಾರ ವಿರಳವಾಗಿದೆ. ಗದ್ದೆಯಲ್ಲಿ ಬೆಳೆದ ಕಬ್ಬುಗಳು ಹಾಗೆ ಉಳಿದಿದ್ದು ಮಾರಾಟಕ್ಕೆ ತಂದಿರುವ ಕಬ್ಬುಗಳು ಮಾರಾಟವಾಗುವವರೆಗೆ ನೆಮ್ಮದಿಯಿಲ್ಲ ಎನ್ನುತ್ತಾರೆ ಕಬ್ಬು ವ್ಯಾಪಾರಿಗಳಾದ ಪ್ರಭಾಕರ್‌ ಮತ್ತು ಉಮೇಶ್‌ ಪೆರಂಪಳ್ಳಿ.

ಮಾರುಕಟ್ಟೆಯಲ್ಲಿ ಚಟುವಟಿಕೆ
ಇತ್ತ ಕುಂದಾಪುರದಲ್ಲಿ ಚೌತಿ ಸಡಗರ ಮಾರುಕಟ್ಟೆಗೆ ತುಸು ಚೈತನ್ಯ ಮೂಡಿಸಿದೆ. ಜನರ ಓಡಾಟ, ವ್ಯಾಪಾರ, ಖರೀದಿ ಎಂದು ಆಶಾದಾಯಕವಾಗಿ ವಹಿವಾಟು ಆರಂಭವಾಗಿದೆ. ಹೆಚ್ಚಿನ ಮನೆಗಳಲ್ಲಿ ಹಬ್ಬದ ಆಚರಣೆ ಇರುವುದರಿಂದ ಮಾರುಕಟ್ಟೆಯಲ್ಲಿ ವ್ಯಾಪಾರ ಚುರುಕು ಪಡೆದಿದೆ. ನಿರೀಕ್ಷಿತವಾಗಿ ಅಲ್ಲದಿದ್ದರೂ ಭಾರೀ ಇಳಿಮುಖವೇನೂ ಆಗಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ಹೂವಿನ ಮಾರು
ಕಟ್ಟೆ, ದಿನಸಿ, ತರಕಾರಿ, ಫ್ಯಾನ್ಸಿ ಅಂಗಡಿಗಳಲ್ಲಿ ವ್ಯಾಪಾರ ನಡೆದಿವೆ. ಕಬ್ಬಿನ ದರದಲ್ಲಿ ಇಳಿಕೆಯಾಗಿಲ್ಲ. ಇನ್ನು, ಕಾರ್ಕಳ ಪೇಟೆಯಲ್ಲಿ ವ್ಯಾಪಾರಕ್ಕೆ ಹಬ್ಬದ ಗೌಜಿ ಇರಲಿಲ್ಲ. ಸರಕಾರದ ಮಾರ್ಗಸೂಚಿಗಳನ್ವಯ ಆಚರಣೆ ಮಾಡಬೇಕಿರುವುದರಿಂದ ಸಾರ್ವಜನಿಕ ಸಮಿತಿಗಳು ಸರಳ ಆಚರಣೆಗೆ ನಿರ್ಧರಿಸಿವೆ.  ಜನರೂ ಮನೆ ಆಚರಣೆಗೆ ಹೆಚ್ಚು ಒತ್ತು ಕೊಟ್ಟಿರುವುದು ಕಂಡುಬಂದಿದೆ. ಮಾರುಕಟ್ಟೆಯಲ್ಲಿ ಖರೀದಿ ಸಾಮಾನ್ಯ ವಾಗಿದ್ದರೂ ಹೂವು, ಹಣ್ಣುಗಳ ಬೆಲೆ ಏರಿಕೆಯಾಗಿತ್ತು.

ವ್ಯಾಪಾರ ಕಡಿಮೆ
ಗಣೇಶನಿಗೆ ಪ್ರಿಯವಾದ ಕಬ್ಬು, ಲಡ್ಡು, ಮೋದಕ ಮೊದಲಾದ ಸಿಹಿ ಪದಾರ್ಥಗಳು ಒಂದೆಡೆಯಾದರೆ ಅಲಂಕಾರಕ್ಕೆ ಸೇವಂತಿಗೆ, ಕಾಕಡ, ಹಿಂಗಾರ, ಮಲ್ಲಿಗೆ ಮೊದಲಾದ ಹೂವುಗಳ ಮಾರಾಟ ನಡೆದಿತ್ತು. ಸೇವಂತಿಗೆ ಮಾರಿಗೆ 50ರಿಂದ 70 ರೂ., ಉಳಿದ ಹೂವುಗಳನ್ನು 20-30 ರೂ. ದರದಲ್ಲಿ ಮಾರಾಟವಾಗುತ್ತಿತ್ತು. ಬಾಳೆ ಎಲೆ 10ಕ್ಕೆ 20 ರೂ. ಇತ್ತು. ಜತೆಗೆ ಕೆಲವೊಂದು ಸ್ಥಳೀಯ ತರಕಾರಿ ಮಾರಾಟ
ಮಾಡಲಾಗುತ್ತಿತ್ತು. ಕೊರೊನಾದಿಂದಾಗಿ ಜನರು ದುಂದುವೆಚ್ಚಕ್ಕೆ ಕಡಿವಾಣ ಹಾಕಿದ್ದು ಹಾಗೂ ಸಾರ್ವಜನಿಕ ಗಣೇಶೋತ್ಸವಗಳಿಲ್ಲದೆ ವ್ಯಾಪಾರ ಕುಂಠಿತವಾಗಿತ್ತು ಎನ್ನುತ್ತಾರೆ ಹಾಸನದ ವ್ಯಾಪಾರಿ ದಿನೇಶ್‌.

Advertisement

ತರಕಾರಿ, ಹೂವು ಬೆಲೆ ಹೆಚ್ಚಳ
ಚೌತಿ ಹಬ್ಬದ ಸಂಭ್ರಮದಲ್ಲಿ ಹೂವು ಮತ್ತು ತರಕಾರಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಇವೆರಡೂ ವಸ್ತುಗಳ ಬೆಲೆ ಮಾರುಕಟ್ಟೆಯಲ್ಲಿ ಏರಿಕೆಯಾಗಿವೆ. ಸೇವಂತಿಗೆ 100; ಚಾಂದಿನಿ 200; ಗೊಂಡೆ 100; ಮಲ್ಲಿಗೆ (ಚೆಂಡು) 150; ಶುಂಠಿ ಗಿಡ 15, ಬೆಂಡೆ 200 ರೂ., ಮುಳ್ಳು ಸೌತೆ 120 ರೂ., ಹೀರೆಕಾಯಿ 100 ರೂ., ಹರಿವೆ ದಂಟು 50 ರೂ., ಶುಂಠಿ ಗಿಡ 20 ರೂ., ಅಲಸಂಡೆ 80 ರೂ., ಸೌತೆ 30 ರೂ., ಹಸಿ ಮೆಣಸು 60 ರೂ., ಹಾಗಲಕಾಯಿ 200 ರೂ.ಗೆ ಮಾರಾಟವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next