Advertisement

ಸಾಲಮನ್ನಾದ ನನ್ನ ಬದ್ಧತೆ ಪ್ರಶ್ನಿಸುವ ನೈತಿಕತೆ ಬಿಎಸ್‌ವೈಗಿಲ್ಲ

07:00 AM Sep 24, 2018 | |

ಹಾಸನ: ರೈತರ ಸಾಲಮನ್ನಾದ ಬಗ್ಗೆ ನನ್ನ ಬದ್ಧತೆಯನ್ನು ಪ್ರಶ್ನಿಸುವ ನೈತಿಕತೆ ಯಡಿಯೂರಪ್ಪ ಅವರಿಗಿಲ್ಲ. ಅವರಿಂದ ಉಪದೇಶ ಪಡೆದು ಆಡಳಿತ ನಡೆಸುವ ಪರಿಸ್ಥಿತಿ ಬಂದರೆ ರಾಜಕೀಯ ನಿವೃತ್ತಿಯಾಗುವೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

Advertisement

ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಿಲಾನ್ಯಾಸ, ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸಾಲಮನ್ನಾದ ಬಗ್ಗೆ ಗಮನಹರಿಸದೆ ಮುಖ್ಯಮಂತ್ರಿ ಟೆಂಪಲ್‌ ರನ್‌ ಮಾಡುತ್ತಿದ್ದಾರೆಂದು ಯಡಿಯೂರಪ್ಪ ಟೀಕೆಯನ್ನು ಪ್ರಸ್ತಾಪಿಸಿದ ಅವರು, ಯಡಿಯೂರಪ್ಪ ಅವರು ನನ್ನ ಮಂತ್ರಿಮಂಡಲದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆಯೂ ಸಾಲಮನ್ನಾ ಬಗ್ಗೆ ಮಾತನಾಡಲಿಲ್ಲ. ಹಾಗಾಗಿ ಈಗ ಅವರಿಗೆ  ಸಾಲಮನ್ನಾ ಬಗ್ಗೆ ನನಗಿರುವ ಬದ್ಧತೆಯನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಹರಿಹಾಯ್ದರು.

ದೇವರು ನನಗೆ ಅಧಿಕಾರ ಕೊಟ್ಟಿದ್ದಾನೆ. ಎಷ್ಟು ದಿನ ಅಧಿಕಾರದಲ್ಲಿರಬೇಕೆಂಬ ತೀರ್ಮಾನವನ್ನೂ ದೇವರು ಮಾಡಿದ್ದಾನೆ. ಅಲ್ಲಿಯವರೆಗೂ ನನ್ನನ್ನು ಅಧಿಕಾರದಿಂದ ಇಳಿಸಲು ಬಿಜೆಪಿಯವರಿಗೆ ಸಾಧ್ಯವಿಲ್ಲ ಎಂದರು.

ಬಿಜೆಪಿ ವಿರುದ್ಧ ದಂಗೆ ಏಳಿ ಎಂದಷ್ಟೇ ನಾನು ಹೇಳಿಲ್ಲ. ನಾನು ತಪ್ಪು ಮಾಡಿದರೆ ನನ್ನ ವಿರುದ್ಧವೂ ದಂಗೆ ಏಳಿ ಎಂದು ಹೇಳಿದ್ದೇನೆ. ಬುದ್ಧಿಪೂರ್ವಕವಾಗಿಯೇ ಈ ಹೇಳಿಕೆ ನೀಡಿದ್ದೇನೆ. ನನ್ನ ವಿರುದ್ಧವೂ ದಂಗೆ ಏಳಿ ಎಂಬುದರ ಬಗ್ಗೆ ಏಕೆ ಬಿಜೆಪಿಯವರು ಪ್ರಸ್ತಾಪಿಸುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ರಾಜ್ಯದ ಜನರ ಸಂಕಷ್ಟಗಳಿಗೆ ನಾನು ಶಕ್ತಿಮೀರಿ ಸ್ಪಂದಿಸುವೆ. ರಾಜ್ಯದ 7 ಕೋಟಿ ಜನರೂ ನನ್ನ ಕುಟುಂಬದ ಸದಸ್ಯರಿದ್ದಂತೆ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಸಮಸ್ಯೆಯನ್ನು ನನ್ನ ಬಳಿ ಹೇಳಿಕೊಳ್ಳಿ. ಆನಂತರ ಸಮಯಾವಕಾಶ ನೀಡಿ. ನಿಮ್ಮನ್ನು ಉಳಿಸಿಕೊಳ್ಳುತ್ತೇನೆ. ರಾಜ್ಯದ ಜನರನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದಾಗ ನಾನೇ ಗೌರವದಿಂದ ನಿರ್ಗಮಿಸುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next