Advertisement

ಹುಡುಗರ ಅಹವಾಲು

05:58 PM Sep 22, 2017 | |

ನಮಗೆ ಹುಡುಗರಿಗೆ ನೂರಾರು ಸಮಸ್ಯೆಗಳಿರುತ್ತವೆ. ವಯಸ್ಸು 24 ದಾಟಿ 25ರ ಹತ್ತಿರ ಬರುತ್ತಿರೋ ಈ ಹೊತ್ತಲ್ಲಿ ನಮ್ಮಲ್ಲಿ ವಿಚಿತ್ರ ತಲ್ಲಣಗಳು, ಕನವರಿಕೆಗಳು ಶುರುವಾಗುತ್ತಿರುತ್ತವೆ. ಮೊದಲಿನ ಹಾಗೆ ಉಡಾಫೆಯಿಂದ ಇರಲಿಕ್ಕಾಗದೆ ಕೆಲವೊಮ್ಮೆ ಬಲವಂತವಾಗಿ ಬಹಳ ಜವಾಬ್ದಾರಿ ಬಂದಿದೆ ಅನ್ನೋ ಹಾಗೆ ನಾಟಕವಾಡುತ್ತಿರುತ್ತೇವೆ.

Advertisement

ಈ ಕಾಲು ಶತಮಾನದ ಬದುಕಲ್ಲಿ ಕಳಕೊಂಡಿದ್ದು ಏನು? ಪಡಕೊಂಡಿದ್ದು ಎಷ್ಟು? ಮುಂದೇನು ಮಾಡಬೇಕು, ಇಷ್ಟು ದಿನ ಸರಿಯಾಗಿ ಬದುಕಿದ್ದೇನಾ? ಯಾಕೆ ಅಸಹನೆ ಹೆಚ್ಚಾಗುತ್ತಿದೆ, ತುಂಬಾ ಕೋಪ ಮಾಡಿಕೊಳ್ಳುತ್ತಿದ್ದೆನಾ? ಸ್ವಲ್ಪ ಒಂಟಿಯಾಗಿದ್ದೇನೆ ಅಲ್ಲವಾ? ಹೀಗೆ ನೂರಾರು ಪ್ರಶ್ನೆಗಳು ಎದುರು ಕೂತು ಮಂಡಕ್ಕಿ ತಿನ್ನುತ್ತಾ ನಮ್ಮ ಉತ್ತರಕ್ಕಾಗಿ ಹಂಬಲಿಸುತ್ತಿರುತ್ತವೆ.

ಉತ್ತರ ಹುಡುಕುವಷ್ಟರಲ್ಲಿ ಮತ್ತೂಂದಿಷ್ಟು ವಯಸ್ಸಾಗಿರುತ್ತದೆ. ನಿಜ ಹೇಳಬೇಕೆಂದರೆ, ನಾವು ಹುಡುಗರು ಅತಿಯಾದ ಒತ್ತಡದಲ್ಲಿ ಬದುಕುತ್ತಿರುತ್ತೇವೆ. ಒಮ್ಮೊಮ್ಮೆ ನಾನು ನನಗಾಗಿ ಬದುಕುತ್ತಿದ್ದೇನೋ, ಹೊರಗಡೆ ಪ್ರಪಂಚಕ್ಕಾಗಿ ಬದುಕುತ್ತಿದ್ದೇನೋ ಅನ್ನೋ ಅನುಮಾನ ಶುರುವಾಗುತ್ತದೆ. ಆ ಒತ್ತಡದಲ್ಲೂ ನಿಯತ್ತಾಗಿ ಬದುಕೋಕೆ ಪ್ರಾಮಾಣಿಕ ಪ್ರಯತ್ನ ಮಾಡುವ ಜಗತ್ತಿನ ಅತ್ಯಂತ ಭಾವಜೀವಿಗಳು ನಾವು.

ನಮಗೆ ಬಯ್ಯದಿರುವವರು ಯಾರಿದ್ದಾರೆ ಹೇಳಿ? `ಭಾರಿ ಜಿಪುಣ ಆಗಿದ್ದಿಯಾ, ಪಾರ್ಟಿ ಕೊಡಿಸೋಕೂ ಅಳ್ತಿಯ’ ಅಂತ ಫ್ರೆಂಡ್ಸ್  ಬಯ್ತಾರೆ, ಹೊಸ ಹುಡುಗಿ `ಯಾಕೆ ಫೋನು ಮಾಡಲ್ಲ  ಅಂತ ಬಯ್ದರೆ, ಹಳೇ ಹುಡುಗಿ “ಯಾಕೆ ಮತ್ತೆ ಮತ್ತೆ ಫೋನು ಮಾಡ್ತೀಯಾ’ ಅಂತ ಬಯ್ತಾಳೆ. ಇಎಮ್‌ಐ ಕಟ್ಟಿಲ್ಲ ಅಂತ ಬ್ಯಾಂಕಿನವರು, ಹೇಳಿದ ಟೈಮಿಗೆ ಕೆಲಸ ಮುಗಿಸಿಲ್ಲ ಅಂತ ಬಾಸು, ದುಡಿದದ್ದು ಸಾಕಾಗಿಲ್ಲ ಅಂತ ಅಪ್ಪ , ದಿನಾ ಬರಲ್ಲಾ ಅಂತ ಜಿಮ್ಮಿನವರು, ಬಾಡಿಗೆ ಕಟ್ಟಿಲ್ಲ ಅಂತ ಓನರು, ಸಿಗ್ನಲ್‌ ಜಂಪ್‌ ಮಾಡ್ತಿರಾ ಅಂತ ಟ್ರಾಫಿಕ್‌ನವರು, ಚೇಂಜ್‌ ತರೋಕೆ ಏನು ರೋಗ ಅಂತ ಬಿಎಂಟಿಸಿ ಕಂಡಕ್ಟರ್‌ನಿಂದ ಹಿಡಿದು ಗೂಡಂಗಡಿಯಲ್ಲಿ ಸಿಗರೇಟು ಕೊಡುವವನ ತನಕ ಬಯ್ಯೋದು ನಮಗೇ.

ಕೊನೆಗೆ ನಾವು ಬರೆದಿದ್ದು ಓದ್ತಾ ಇಲ್ಲ ನೀವು, ಸರಿಯಿಲ್ಲ ಈಗಿನ ಕಾಲದ ಹುಡುಗರು ಅಂತ ಸಾಹಿತಿಗಳು ಬೈಯ್ತಾರೆ.

Advertisement

ಎಲ್ಲರಿಗೂ ನಮ್ಮನ್ನು ಕಂಡರೆ ಸದರ, ಎಷ್ಟೊಂದು ಜನರ ನಿರೀಕ್ಷೆಗಳನ್ನ ತಲುಪೋಕೆ ನಾವು ಹೆಣಗಾಡಬೇಕಲ್ಲ ಅಂತ ನೆನೆದರೆ ಭಯವಾಗುತ್ತದೆ. ಇದೆಲ್ಲದರ ಮಧ್ಯೆ ಓದಬೇಕೆಂದಿರುವ ಪುಸ್ತಕಗಳು ಹಾಗೆ ಮಲಗಿರುತ್ತವೆ, ಹೋಗಬೇಕೆಂದಿರುವ ದಾರಿಗಳು ದೂರದಲ್ಲೆಲ್ಲೋ ನಮಗಾಗೆ ಕಾಯುತ್ತಿರುತ್ತವೆ. ಈ ಎಲ್ಲ ನಿರೀಕ್ಷೆಗಳನ್ನ ದಾಟಿ, ಬದುಕೋಕೆ ಒಂಚೂರು ದುಡ್ಡು ಕೂಡಿಟ್ಟುಕೊಂಡು, ಇನ್ನೇನು ಎಲ್ಲ ಸರಿಯಾಗಿ ನಡೆಯುತ್ತಿದೆ ಅಂದುಕೊಳ್ಳುವಷ್ಟರಲ್ಲಿ ಮತ್ತೂಂದು ಅಗ್ನಿಪರೀಕ್ಷೆಗೆ ನಮ್ಮನ್ನೂ ನೂಕೋಕೆ ಎಲ್ಲರೂ ಟೊಂಕಕಟ್ಟಿ ನಿಲ್ಲುತ್ತಾರೆ. ಅದೇ ಮದುವೆ ಅನ್ನೋ ಮಹಾಯುದ್ಧ.

25 ದಾಟಿದ ಹುಡುಗರಿಗೆಲ್ಲ ಕನಸಲ್ಲೂ ಬೆಚ್ಚಿಬೀಳಿಸೋ ಸಂಗತಿ ಅಂದರೆ ಮದುವೆ.

ನಮ್ಮನ್ಮೂ ನಮಗೆ ನೆಟ್ಟಗೆ ನೋಡಿಕೊಳ್ಳೋಕೆ ಬರಲ್ಲ, ಹತ್ತಿಕ್ಕಿಕೊಂಡ ಆಸೆಗಳು, ಬಿಟ್ಟುಬಂದ ಕನಸುಗಳು ನೂರಾರು ಇರುವಾಗ ಈ ದೊಡ್ಡವರು ಅನಿಸಿಕೊಂಡಿರುವವರು, ಸುತ್ತಲಿನ ಸಮಾಜ ಅದು ಹೇಗೆ ನಾವು ಇನ್ನೊಂದು ಜೀವವನ್ನು ನೋಡಿಕೊಳ್ಳಬೇಕು, ಕೆಲವೊಮ್ಮೆ ಸಾಕಬೇಕು, ಆಗಾಗ ಜೊತೆಗಿರಬೇಕು ಅಂತ ಅವರ ನಿರೀಕ್ಷೆಗಳನ್ನ ನಮ್ಮ ಮೇಲೆ ಹೇರುತ್ತಾರೋ ಇದು ನನಗೆ ಅರ್ಥವಾಗದ ವಿಷಯ. ಈಗಿನ ನಗರಗಳ cost of living ನ ಮಲ್ಟಿಪ್ಲೆಕ್ಸ್‌ಗಳು ನಿರ್ಧರಿಸುವಂತೆ, ಇವರೆಲ್ಲಾ ನಮ್ಮ ಜೀವನದ ಬಹುಮುಖ್ಯ ಘಟ್ಟವನ್ನ ನಿರ್ಧರಿಸುತ್ತಿದ್ದಾರೆ. ನಿಜ ಹೇಳಬೇಕೆಂದರೆ, ನಮ್ಮ ದೇಶದಲ್ಲಿ ಮದುವೆ ಅನ್ನೋದು ಅವರವರ ವೈಯಕ್ತಿಕ ವಿಷಯ ಅಂತ ಹೆಚ್ಚಿನವರು ಪರಿಗಣಿಸೇ ಇಲ್ಲ. ಬಹಳಷ್ಟು ಬಾರಿ ಅದು ಕೇವಲ ಹಣ ಮತ್ತು ಪ್ರತಿಷ್ಠೆಯ ಪ್ರದರ್ಶನವಾಗಿರುತ್ತದಷ್ಟೆ.

ನಿಮಗೆ ಮದುವೆ ಬ್ರೋಕರ್‌ಗಳು ಎಲ್ಲೆಲ್ಲಿ ಸಿಗೋಲ್ಲ ಹೇಳಿ, ಮದುವೆ ಮನೆಗಳಲ್ಲಿ, ಮಕ್ಕಳನ್ನು ತೊಟ್ಟಿಲಿಗೆ ಹಾಕುವ ಸಮಾರಂಭಗಳಲ್ಲಿ, ಕೆಲವೊಮ್ಮೆ ಯಾರದೋ ತಿಥಿ ಕಾರ್ಯಕ್ರಮಗಳಲ್ಲೂ ಕೂಡ ಜನ, “ನೋಡಿ ಇಂತಿಂಥವರ ಮಗನಿಗೆ ಇಷ್ಟಿಷ್ಟು ವಯಸ್ಸಾಗಿದೆ. ಇಂತಿಷ್ಟು ದುಡಿಯುತ್ತಾನೆ. ಸಿಗರೇಟು ಹೆಂಡದ ಅಭ್ಯಾಸ ಇಲ್ಲ, ಮನೆ ಕಡೆ ಬಹಳ ಅನುಕೂಲ ಇದೆ…’ ಅಂತ ಹುಡುಗರನ್ನು ಅವರವರ ಮಾರ್ಕೆಟ್ಟುಗಳಲ್ಲಿ ಮಾರಲು ಶುರುವಿಟ್ಟುಕೊಳ್ಳುತ್ತಾರೆ.

ನಮ್ಮ ಮಲೆನಾಡಿನಲ್ಲಿ ಈ ವಿದ್ಯಮಾನಕ್ಕೆ “ಶೆಟ್ಲುಮೆಂಟು’ ಅನ್ನೋ ಪದ ಬೇರೆ ಸೃಷ್ಟಿ ಮಾಡಿದ್ದಾರೆ. settlement  ಅನ್ನೋ ಪದದ ಕನ್ನಡ ರೂಪಾಂತರ ಅದು! ಮಲೆನಾಡಿನಲ್ಲಿ ಮದುವೆ ಮಾತುಕತೆ ಶುರುವಾಗೋದೆ ಹುಡುಗನ ಮನೆಯವರಿಗೆ ಎಷ್ಟು ಎಕರೆ ಅಡಿಕೆ ತೋಟ ಇದೆ ಹಾಗೂ ಎಷ್ಟು ಕ್ವಿಂಟಾಲ್‌ ಅಡಿಕೆ ಆಗುತ್ತೆ ಅನ್ನೋದರ ಮೂಲಕ. ಇದಕ್ಕೆ ನಮ್ಮ ಮನೆ ಕೂಡ ಹೊರತಲ್ಲ.

ನಾನು ಇಂಜಿನಿಯರಿಂಗ್‌ ಓದಬೇಕು ಅಂದಾಗ, ಎಲ್ಲ ಹುಡುಗರ ಹಾಗೆ ಬೈಕು ಕೊಳ್ಳಬೇಕು ಅಂದಾಗ ನಮ್ಮಪ್ಪ , `ನಿನಗೆ ದುಡ್ಡಿನ ಬೆಲೆ ಗೊತ್ತಾಗಬೇಕಾದರೆ, ಬ್ಯಾಂಕಿನಿಂದ ಸಾಲ ತೆಗೆದುಕೊಂಡು ಓದು’ ಅಂತ ಹೇಳಿದ್ದರು. ಆಮೇಲೆ ನಾನು ಓದು ಮುಗಿಸಿ, ಕೆಲಸಕ್ಕೆ ಸೇರಿ ದುಡಿದ ಹಣವನ್ನೆಲ್ಲಾ ಬ್ಯಾಂಕಿಗೆ ಕಟ್ಟಿ , ನನ್ನದೇ ಒಂದು ಬದುಕು ಕಟ್ಟಿಕೊಳ್ಳುವಷ್ಟರಲ್ಲಿ ಸಾಕು ಬೇಕಾಯಿತು. ಈಗ ಯೌವ್ವನ ಹದವಾಗುತ್ತಿರುವ ಹೊತ್ತಲ್ಲಿ “ಯಾವಾಗ ಮದುವೆ ಮಾಡಿಕೊಳ್ಳುತ್ತೀಯಾ’ ಅಂತ ಕೇಳ್ಳೋಕೆ ಶುರುಮಾಡಿಕೊಂಡಿದ್ದಾರೆ. ಅದಕ್ಕೆ ದುಡ್ಡು ಬೇರೆ ಕೊಡುತ್ತಾರಂತೆ.

ಅಪ್ಪನ ಹತ್ತಿರ ಜಗಳ ಮಾಡೋಕೆ ಕಾಯುವ ನನಗೇ ಹೊಸ ವಿಷಯ ಸಿಕ್ಕಿ ಖುಷಿಯಾಗಿ ನಾನು “ಬೈಕು ಬೇಕು ಅಂದಾಗ ಲೋನು ತಗೋ ಅಂತ ಹೇಳಿದಿರಿ, ಈಗ ಮದುವೆಗೆ ದುಡ್ಡು ಯಾಕೆ ಕೊಡುತ್ತೀರಿ. ನಾನು ಲೋನು ತಗೊಂಡೇ ಮದುವೆ ಆಗೋದು’ ಅಂತ ಸ್ವಲ್ಪ ಜೋರಾಗೇ ಹೇಳಿದೆ. ಬಹುತೇಕ ಹೆತ್ತವರ ಸಮಸ್ಯೆಯೇ ಇದು.

ಮಕ್ಕಳಿಗೆ ಮದುವೆ ಮಾಡಬೇಕು ಅಂತಾನೇ ದುಡಿಯುವುದು ಯಾವ ನ್ಯಾಯ? ನಿಮ್ಮ ಹತ್ತಿರ ದುಡ್ಡಿದೆ ಅಂತ, ನಿಮಗೆ ಅದೊಂದು ದೊಡ್ಡ ಜವಾಬ್ದಾರಿ ಅಂತ ನಮ್ಮನ್ನು ಮದುವೆಯಾಗಿ ಕೇಳ್ಳೋದು ಸರಿಯಾ? ಅಷ್ಟಕ್ಕೂ ನಾನು ಯಾಕೆ ಮದುವೆ ಆಗಬೇಕು? ಅಂತ ಕೇಳಿದರೆ ಅವರ ಬಳಿ ಉತ್ತರವಿರೋಲ್ಲ.

ಹೀಗೆ ಪ್ರಶ್ನೆಗಳನ್ನು ಕೇಳಿದಾಕ್ಷಣ, `ನಿಂಗೆ ದುರಹಂಕಾರ. ನೆಟ್ಟಗೆ ಬದುಕೋಕೆ ಬರಲ್ಲ’ ಅಂತ ಬೈಯ್ತಾರೆ. ಮದುವೆ ಮಾಡಿಸುವುದೊಂದು ವ್ರತದಂತೆ ಸ್ವೀಕರಿಸುವವರಿಂದ, 25 ಆದರೂ ಮದುವೆ ಆಗದಿದ್ದರೆ ಹುಡುಗರನ್ನು ಹುಡುಗಿಯರನ್ನೂ ಮುಪ್ಪು ಆವರಿಸಿಕೊಂಡಿತೇನೋ ಅನ್ನೋ ಹಾಗೆ ಟ್ರೀಟ್‌ ಮಾಡುವವರಿಂದ, ಅದ್ದೂರಿಯಾಗಿ ಮದುವೆ ಮಾಡುವುದನ್ನು ಪ್ರತಿಷ್ಠೆಯಾಗಿ ಮಾಡಿಕೊಂಡಿರುವವರಿಂದ ಬಹಳಷ್ಟು ಹುಡುಗರ ಜೀವನ ದಿಕ್ಕು ತಪ್ಪುತ್ತಿದೆ. ಕುವೆಂಪು ಅನ್ನೋ ಪುಣ್ಯಾತ್ಮರು `ಮಂತ್ರ ಮಾಂಗಲ್ಯ’ ಅನ್ನೋ ವಿವಾಹ ಪದ್ಧತಿಯೊಂದನ್ನು ಹುಟ್ಟುಹಾಕಿದ್ದಾರೆ ಅನ್ನೋ ವಿಷಯವೇ ನಮ್ಮೂರಿನಲ್ಲಿ ಅನೇಕರಿಗೆ ಗೊತ್ಲಿಲ್ಲ. 

ಹೆತ್ತವರಿಗೆ, ದೊಡ್ಡವರಿಗೆ, ಮದುವೆಯಾಗಿ ನಮ್ಮನ್ನೂ ಆ ಅಗ್ನಿಕುಂಡದೊಳಗೆ ದೂಕಲು ಬಹಳ ಅರ್ಜೆಂಟಿನಲ್ಲಿರುವ ಗೆಳೆಯರಿಗೆ ನಾವು ಹುಡುಗರು ಕೇಳಿಕೊಳ್ಳುವುದಿಷ್ಟೆ.

ನಿಮ್ಮ ಸಂಭ್ರಮ, ಧಾವಂತ, ಗಾಬರಿ ನಮಗೆ ಅರ್ಥವಾಗುತ್ತದೆ. ಪ್ರೀತಿಸಿದ ಹುಡುಗಿ ತಲೆ ತಿನ್ನುತ್ತಿದ್ದಾಳೆ ಅಂತ ಗೋಳಾಡುವವರಿಗೆ ನೀವು ಮದುವೆ ಮಾಡಿಸಿ, ನಮ್ಮದೇನೂ ಅಭ್ಯಂತರವಿಲ್ಲ. ಆದರೆ ನಾವೊಂದಿಷ್ಟು ಹುಡುಗರಿದ್ದೇವೆ, ನಾವು ಪ್ರೇಮಿಗಳ್ಳೋ, ಭಗ್ನಪ್ರೇಮಿಗಳ್ಳೋ, ವಿರಹಿಗಳ್ಳೋ ನಮಗೆ ಕ್ಲಾರಿಟಿ ಇಲ್ಲ. ನಾವು ಪ್ರತಿಕ್ಷಣ ನಮ್ಮನ್ನೇ ಸರಿಮಾಡಿಕೊಳ್ಳಲು ಹೆಣಗುತ್ತಿರುತ್ತೇವೆ.

ನಮಗೆ ನಾಳೆಗಳು ಹೇಗಿರುತ್ತವೋ ಗೊತ್ತಿಲ್ಲ. ಜೀವನದಲ್ಲಿ ಸೆಟಲ್‌ ಆಗೋಕೆ ನಮಗೆ ಇಷ್ಟವಿಲ್ಲ. ದುಡ್ಡು ಅನ್ನೋದು ನಮಗೆ ಅಗತ್ಯ ಮಾತ್ರ. ಒಂಟಿಯಾಗಿ ಎಷ್ಟು ದಿನ ಇರಬಲ್ಲೆವು ಅಂತ ಅಂದಾಜು ಮಾಡುತ್ತಿದ್ದೇವೆ. ನಾವೇನೂ ನೀವು ರೇಸಿಗೆ ಬಿಟ್ಟ ಕುದುರೆಯಲ್ಲ, ಯಾವಾಗಲೂ ಗೆಲ್ಲೋಕೆ. ನಮಗೆ ಸೋಲೋಕೆ ಇಷ್ಟ, ಹಸಿದು ತಿನ್ನಬೇಕು, ಧ್ಯಾನಿಸಿ ಬದುಕಬೇಕು ಅಂತ ಆಸೆ, ಹಟ.

ಸಚಿನ್‌ ತೀರ್ಥಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next