Advertisement

ಕಮಲ ಅರಳಿಸಲು ಕಸರತ್ತು

11:00 AM Dec 13, 2019 | Lakshmi GovindaRaj |

ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಪ ಚುನಾವಣೆಯ ಅಖಾಡಕ್ಕೆ ಸಾಕ್ಷಿಯಾಗುತ್ತಿರುವ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಚಾರದ ಭರಾಟೆ ರಂಗೇರಿದೆ. ಕಾಂಗ್ರೆಸ್‌ನ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಪಕ್ಷಾಂತರಗೊಂಡಿರುವ ಡಾ.ಕೆ.ಸುಧಾಕರ್‌ ಸೆಣಸಾಟ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ ಪಾಲಿಗೆ ಭದ್ರಕೋಟೆ. ಜೊತೆಗೆ, ಸೋಲು-ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅಹಿಂದ ಮತಗಳು ಕೈ ಬೆನ್ನಿಗೆ ಇದೆ.

Advertisement

ರಾಜಕೀಯವಾಗಿ ಯಾವುದೇ ನೆಲೆ ಇಲ್ಲದ ಬಿಜೆಪಿ, ಪ್ರಬಲ ಕಾಂಗ್ರೆಸ್‌, ಜೆಡಿಎಸ್‌ ವಿರುದ್ದ ಗೆಲುವಿಗಾಗಿ ಹೋರಾಟ ನಡೆಸಬೇಕಿದೆ. 2013, 2018ರಲ್ಲಿ ಸತತ ಎರಡು ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸುಲಭವಾಗಿ ಗೆದ್ದ ಡಾ.ಕೆ.ಸುಧಾಕರ್‌, ಉಪ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆ ಹೊಂದಿದ್ದಾರೆ. ಆದರೆ, ಅವರಿಗೆ ಪಕ್ಷಾಂತರ, ಅನರ್ಹತೆಯ ಬಿಸಿ ಜೊತೆಗೆ ಕಾಂಗ್ರೆಸ್‌, ಜೆಡಿಎಸ್‌ನ ಪ್ರಬಲ ಪೈಪೋಟಿ ಎದುರಾಗಿದೆ.

ಸುಧಾಕರ್‌ರಿಂದ ಅಭಿವೃದ್ದಿ ಜಪ: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷದಿಂದ ವಜಾಗೊಂಡು ಸುಧಾಕರ್‌ ಬಿಜೆಪಿ ಸೇರಿದ ಬಳಿಕ ಕ್ಷೇತ್ರದ ಬಹುತೇಕ ಕಾಂಗ್ರೆಸ್‌ ನಾಯಕರು ಪಕ್ಷ ನಿಷ್ಠೆ ಬದಲಿಸಿದೇ ಕಾಂಗ್ರೆಸ್‌ನಲ್ಲಿ ಉಳಿದುಕೊಂಡಿರುವುದು ಸುಧಾಕರ್‌ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಜೊತೆಗೆ ಎಲ್ಲಿ ಅಹಿಂದ ಮತಗಳು ತಮಗೆ ಕೈ ಕೊಡುತ್ತೇವೆಯೋ ಎಂಬ ಆತಂಕ ಮನೆ ಮಾಡಿದೆ. ಆದರೂ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ದಿ ತಮ್ಮ ಕೈ ಹಿಡಿಯಲಿದೆ ಎಂಬ ವಿಶ್ವಾಸದಲ್ಲಿ ಸುಧಾಕರ್‌ ಇದ್ದು, ತಮ್ಮದೇ ಆದ ರಾಜಕೀಯ ತಂತ್ರಗಾರಿಕೆ ಬಳಸಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ.

ಮುಖ್ಯವಾಗಿ ಜಿಲ್ಲೆಗೆ ಬಿಜೆಪಿ ಸರ್ಕಾರದಲ್ಲಿ ಘೋಷಣೆ ಮಾಡಿಸಿರುವ ಮೆಡಿಕಲ್‌ ಕಾಲೇಜ್‌, ಗೌರಿಬಿದನೂರು ತಾಲೂಕಿಗೆ ಸೇರಿಸಿದ ಮಂಚೇನಹಳ್ಳಿ ಹೋಬಳಿ ಹೊಸ ತಾಲೂಕು ಎಂದು ಘೋಷಿಸಿರುವುದು, ಬಡವರಿಗೆ 2,000 ನಿವೇಶನ ವಿತರಿಸುವುದಾಗಿ ಹೇಳಿಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸುಧಾಕರ್‌ ಪರ ಬಿಎಸ್‌ವೈ, ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಪ್ರಚಾರ ನಡೆಸಿ ಹೋಗಿದ್ದು, ಸಚಿವ ಸಿ.ಟಿ.ರವಿ, ಸಂಸದ ಪಿ.ಸಿ.ಮೋಹನ್‌ ಮತ್ತಿತರರು ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ್ದಾರೆ. ಆದರೂ, ಎರಡು ಬಾರಿ ಶಾಸಕರಾದರೂ ಜಿಲ್ಲೆಯ ಬಹುದಿನಗಳ ನೀರಾವರಿ ಸಮಸ್ಯೆ ಈಡೇರಿಸಿಲ್ಲ. ಉದ್ಯೋಗ ಒದಗಿಸುವ ಕೈಗಾರಿಕೆ ತರಲಿಲ್ಲ ಎಂಬ ಅಸಮಾಧಾನ ಸುಧಾಕರ್‌ ಮೇಲಿದೆ.

“ಕೈ’ಗೆ ಪಕ್ಷಾಂತರ, ಅನರ್ಹತೆ ಅಸ್ತ್ರ: 2013ರಲ್ಲಿ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿಸಿಕೊಂಡಿದ್ದ ನಂದಿ ಅಂಜನಪ್ಪ ಈಗ ಕಾಂಗ್ರೆಸ್‌ ಹುರಿಯಾಳು. ಕ್ಷೇತ್ರದಲ್ಲಿ ಸಾಂಪ್ರದಾಯಿಕ ಅಹಿಂದ ಮತಗಳನ್ನು ನೆಚ್ಚಿಕೊಂಡಿದ್ದಾರೆ. ಜೊತೆಗೆ, ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ದಿ ಕಾರ್ಯಗಳು ಆಗಿವೆ. ಸುಧಾಕರ್‌ ಉಂಡ ಮನೆಗೆ ದ್ರೋಹ ಬಗೆದು ಕಾಂಗ್ರೆಸ್‌ನಿಂದ ಎಲ್ಲವನ್ನು ಪಡೆದು ಪಕ್ಷಕ್ಕೆ ದ್ರೋಹ ಮಾಡಿದ್ದಾರೆಂದು ಸುಧಾಕರ್‌ ವಿರುದ್ದ ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಶಿಷ್ಯರಾಗಿರುವ ನಂದಿ ಅಂಜನಪ್ಪಗೆ ಇಬ್ಬರ ಬಲ ಇದೆ. ಈ ಹಿಂದೆ ಕ್ಷೇತ್ರದಲ್ಲಿ ಬರಗಾಲ ಆವರಿಸಿದ್ದ ಸಂದರ್ಭದಲ್ಲಿ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ತಾವೇ ಹಣ ಕೊಟ್ಟು ಉಚಿತವಾಗಿ ಅಕ್ಕಿ ವಿತರಿಸಿ “ಅಕ್ಕಿ ಅಂಜನಪ್ಪ’ ಎಂದು ಖ್ಯಾತಿಯಾಗಿರುವುದರಿಂದ ಜನ ಕೈ ಹಿಡಿಯತ್ತಾರೆಂದು ವಿಶ್ವಾಸ ಹೊಂದಿದ್ದಾರೆ.

Advertisement

ಒಕ್ಕಲಿಗ ಮತಗಳು ಮೂರೂ ಪಕ್ಷಗಳಿಗೆ ವಿಭಜನೆ ಆಗುತ್ತಿದ್ದು, ಪರಿಶಿಷ್ಟ ಜಾತಿ, ಕುರುಬರು, ಅಲ್ಪಸಂಖ್ಯಾ ತರು ಕೈ ಹಿಡಿಯುತ್ತಾರೆಂಬ ವಿಶ್ವಾಸ ಕಾಂಗ್ರೆಸ್‌ ನಾಯಕರಲ್ಲಿದೆ. ಕಾಂಗ್ರೆಸ್‌ ಪರ ಡಿಕೆಶಿ ಎರಡು ಬಾರಿ ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ನಡೆಸಿದ್ದಾರೆ. ಜೊತೆಗೆ, ಕುಮಾರಸ್ವಾಮಿ ಸರ್ಕಾರ ಪತನಕ್ಕೆ ಕಾರಣವಾಗಿರುವ ಅನರ್ಹ ಶಾಸಕನ ಸೋಲಿಸಲು ಜೆಡಿಎಸ್‌ ಕಾರ್ಯಕರ್ತರು ಸ್ವಾಭಿಮಾನ ಎತ್ತಿ ಹಿಡಿದು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡುವಂತೆ ಬಹಿರಂಗವಾಗಿ ಪ್ರಚಾರ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಪೈಪೋಟಿ ನೀಡುತ್ತಿರುವ ದಳಪತಿಗಳು: ಉಪ ಚುನಾವಣೆಯ ಸ್ಪರ್ಧೆಗೆ ಆಸಕ್ತಿ ಇಲ್ಲ ಎನ್ನುತ್ತಿದ್ದ ಕ್ಷೇತ್ರದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರ ಬದಲಾಗಿ ಕೊನೆ ಕ್ಷಣದಲ್ಲಿ ಉದ್ಯಮಿ ಎ.ರಾಧಾಕೃಷ್ಣರನ್ನು ಜೆಡಿಎಸ್‌ ಕಣಕ್ಕೆ ಇಳಿಸಿದೆ. ಅಭ್ಯರ್ಥಿ ಬದಲಾಗುತ್ತಿದ್ದಂತೆ ಜೆಡಿಎಸ್‌ ಕಡೆಗೆ ಇತರ ಪಕ್ಷಗಳಿಂದ ವಾಲುತ್ತಿರುವರ ಸಂಖ್ಯೆ ಹೆಚ್ಚಾಗಿದ್ದು, ಜೆಡಿಎಸ್‌ ತನ್ನ ಬಲ ಹೆಚ್ಚಿಸಿಕೊಳ್ಳುತ್ತಿ ರುವುದು ಕಾಂಗ್ರೆಸ್‌, ಬಿಜೆಪಿ ಪಾಳೆಯವನ್ನು ತಲ್ಲಣ ಗೊಳಿಸಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ 50 ಸಾವಿರಕ್ಕೂ ಅಧಿಕ ಮತ ಪಡೆದಿತ್ತು. ಕ್ಷೇತ್ರದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯ ಜೆಡಿಎಸ್‌ಗೆ ಮತ ಬ್ಯಾಂಕ್‌ ಆಗಿದೆ. ಈಗಾಗಲೇ ಕುಮಾರಸ್ವಾಮಿ ಎರಡು ಬಾರಿ ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ನಡೆಸಿದ್ದು, ಮೈತ್ರಿ ಸರ್ಕಾರ ಪತನಕ್ಕೆ ಸುಧಾಕರ್‌ನೆà ಸೂತ್ರಧಾರಿ. ಆದ್ದರಿಂದ ಅವರು ಯಾವುದೇ ಕಾರಣಕ್ಕೂ ಮತ್ತೆ ಉಪ ಚುನಾವಣೆಯಲ್ಲಿ ಶಾಸಕರಾಗಬಾರದು. ಸೋಲಿಸಬೇಕೆಂದು ಕರೆ ಕೊಟ್ಟಿದ್ದಾರೆ.

ಚರ್ಚಾ ವಿಷಯ: ಕಾಂಗ್ರೆಸ್‌, ಸುಧಾಕರ್‌ ಅನರ್ಹತೆ, ಪಕ್ಷ ದ್ರೋಹವನ್ನು ಮುಂದಿಟ್ಟುಕೊಂಡು ಪ್ರಚಾರಕ್ಕೆ ಇಳಿದಿದೆ. ಸುಧಾಕರ್‌, ಮೈತ್ರಿ ಸರ್ಕಾರ ಅಭಿವೃದ್ದಿಗೆ ಸ್ಪಂದಿಸಿಲ್ಲ. ಮೆಡಿಕಲ್‌ ಕಾಲೇಜ್‌ಗೆ ಅನುದಾನ ಕೊಡಲಿಲ್ಲ. ಮಂಚೇನಹಳ್ಳಿ ತಾಲೂಕು ಮಾಡಲಿಲ್ಲ ಎಂದು ಹೇಳಿ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್‌, ಕುಮಾರಸ್ವಾಮಿ ಸಿಎಂ ಆಗಿದ್ದ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾದ ಪಕ್ಷಾಂತರಿ, ಅನರ್ಹ ಸುಧಾಕರ್‌ರನ್ನು ಸೋಲಿಸಿ, ಸ್ವಾಭಿಮಾನ ಎತ್ತಿ ಹಿಡಿಯುವಂತೆ ಮತದಾರರಲ್ಲಿ ಮನವಿ ಮಾಡುತ್ತಿದೆ. ಆದರೆ, ಮೂರು ಪಕ್ಷಗಳಿಗೂ ಜಿಲ್ಲೆಯ ಜ್ವಲಂತ ಸಮಸ್ಯೆಯಾದ ನೀರಾವರಿ ವಿಷಯ ನಗಣ್ಯವಾಗಿದೆ.

ಕ್ಷೇತ್ರದ ಇತಿಹಾಸ: ದಶಕಗಳಿಂದ ಪರಿಶಿಷ್ಠ ಜಾತಿಯ ಮೀಸಲು ಕ್ಷೇತ್ರವಾಗಿದ್ದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ, 2008ರ ಚುನಾವಣೆಯಿಂದ ಸಾಮಾನ್ಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ಸಾಮಾನ್ಯವಾದ ಬಳಿಕ ಮೊದಲ ಚುನಾವಣೆಯಲ್ಲಿ ಜೆಡಿಎಸ್‌ ಗೆಲುವು ಸಾಧಿಸಿದ್ದು ಬಿಟ್ಟರೆ ಉಳಿದ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್‌ ತನ್ನ ಪ್ರಾಬಲ್ಯ ಮೆರೆದಿದೆ. ಇಲ್ಲಿ ಅಹಿಂದ ವರ್ಗ ಸೋಲು, ಗೆಲುವಿನಲ್ಲಿ ನಿರ್ಣಾಯಕ.

ಜಾತಿವಾರು ಲೆಕ್ಕಾಚಾರ
ಪ.ಜಾತಿ -55,000
ಪ. ವರ್ಗ – 25,000
ಒಕ್ಕಲಿಗರು – 45,000
ಕುರುಬರು – 16,000
ಬಲಿಜಿಗರು -35,000
ಅಲ್ಪಸಂಖ್ಯಾತರು -20,000
ಇತರರು- 25,000

ಒಟ್ಟು ಮತದಾರರು: 2,00,622
ಪುರುಷರು : 99,825
ಮಹಿಳೆಯರು: 1,00,776
ಇತರರು: 21
ಹೊಸ ಮತದಾರರು: 3,435

* ಕಾಗತಿ ನಾಗರಾಜಪ್ಪ, ಚಿಕ್ಕಬಳ್ಳಾಪುರ

Advertisement

Udayavani is now on Telegram. Click here to join our channel and stay updated with the latest news.

Next