Advertisement

ರೈತರಿಗೆ ತೊಂದರೆಯಾಗದಂತೆ ಕ್ರಮಕೆ ಸೂಚನೆ

01:51 PM Jan 05, 2018 | |

ವಿಜಯಪುರ: ಜಿಲ್ಲೆಯಲ್ಲಿ ಬೆಂಬಲ ಬೆಲೆಯ ತೊಗರಿ ಖರೀದಿ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ವೇಳೆ ರೈತರಿಗೆ ಯಾವುದೇ ರೀತಿಯ ಅನಾನೂಕೂಲ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ ಸೂಚಿಸಿದ್ದಾರೆ.

Advertisement

ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕೃಷಿ ಪತ್ತಿನ ಸಹಕಾರಿ ಸಂಘಗಳ ಕಾರ್ಯದರ್ಶಿಗಳು ಹಾಗೂ ಕೃಷಿ ಮಾರಾಟ ಇಲಾಖೆ ಅಧಿಕಾರಿಗಳ ಸಭೆಯ ನಡೆಸಿ ಅವರು ಮಾತನಾಡಿದರು. ಜಿಲ್ಲೆಯಾದ್ಯಂತ 51 ಖರೀದಿ ಕೇಂದ್ರ ತೆರೆದಿದ್ದು, 26 ಖರೀದಿ ಕೇಂದ್ರಗಳು ಅನುಮೋದನೆ ಹಂತದಲ್ಲಿವೆ. ಜ. 15ರ ವರೆಗೆ ಈ ಖರೀದಿ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.

ತೊಗರಿ ಖರೀದಿ ಕೇಂದ್ರಗಳಲ್ಲಿ ಪ್ರತಿಯೊಬ್ಬ ರೈತರಿಂದ ಎಫ್‌ .ಎ.ಕ್ಯೂ ಗುಣಮಟ್ಟ ಹೊಂದಿದ 20 ಕ್ವಿಂಟಲ್‌ ತೊಗರಿಯನ್ನು ಮಾತ್ರ ಖರೀದಿಸಲಾಗುವುದು. ರೈತರು ತಮ್ಮ ಆಧಾರ್‌ ಕಾರ್ಡ್‌, ಪಹಣಿ ಪತ್ರಿಕೆ(ಆರ್‌.ಟಿ.ಸಿ.), ಬ್ಯಾಂಕ್‌ ಖಾತೆ ಝೆರಾಕ್ಸ್‌ ಪ್ರತಿಯೊಂದಿಗೆ ಬೆಳೆ ಪ್ರಮಾಣ ಪತ್ರವನ್ನು ಹಾಜರುಪಡಿಸಿ ತೊಗರಿಯನ್ನು ನೀಡಬಹುದಾಗಿದೆ.

ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಲ್ಲಿ ವರ್ತಕರು ತರುವ ತೊಗರಿ ಉತ್ಪನ್ನವನ್ನು ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳಲ್ಲಿ ಯಾವುದೇ ರೀತಿಯ ದುರುಪಯೋಗ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಬೆಂಬಲ ಬೆಲೆ ಯೋಜನೆ ಮಾರ್ಗಸೂಚಿ ಹಾಗೂ ಆವರ್ತ ನಿಧಿ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ತೊಗರಿ
ಉತ್ಪನ್ನ ಖರೀದಿಸುವ ಪೂರ್ವ ಪಹಣಿ ಪತ್ರ ಕಡ್ಡಾಯವಾಗಿ ಸಂಬಂಧಪಟ್ಟವರಿಂದ ಪಡೆಯಬೇಕು. ಪಹಣಿಯನ್ನು ಪರಿಶೀಲಿಸಿ ತೊಗರಿ ಉತ್ಪನ್ನ ಬೆಳೆದಿರುವ ಕುರಿತು ದಾಖಲಾಗಿರುವ ಕುರಿತು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಘೊಷಿಸಿರುವಂತೆ ಎಫ್‌.ಎ.ಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಲ್‌ ತೊಗರಿಗೆ 5,450 ಹಾಗೂ ರಾಜ್ಯ ಸರ್ಕಾರದಿಂದ 550 ರೂ. ಸೇರಿ 6 ಸಾವಿರ ರೂ. ನಿಗದಿಪಡಿಸಲಾಗಿದೆ. ರೈತರಿಂದ ಪಡೆಯುವ ತೊಗರಿಯನ್ನು ಸುರಕ್ಷಿತವಾಗಿ ಆಯಾ ಉಗ್ರಾಣಗಳಲ್ಲಿ ಶೇಖರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿ, ಆನ್‌ಲೈನ್‌ ನೋಂದಣಿ ವ್ಯವಸ್ಥೆ ವ್ಯವಸ್ಥಿತವಾಗಿ ಜಾರಿಯಾಗುವಂತೆ ನೋಡಿಕೊಳ್ಳಲು ಸಲಹೆ
ನೀಡಿದರು.

Advertisement

ತೊಗರಿ ಖರೀದಿಯಲ್ಲಿ ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು, ದೂ: 08352-250073ಗೆ ಸಂಪರ್ಕಿಸುವಂತೆ ಹೇಳಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಚಬನೂರ, ಮಾರ್ಕೆಟಿಂಗ್‌ ಫೆಡರೇಶನ್‌ನ ವೆಂಕಟೇಶ ಹಾಗೂ ಜುಂಜರವಾಡಿ, ಕೃಷಿ ಪತ್ತಿನ ಸಹಕಾರಿ ಸಂಘಗಳ ಕಾರ್ಯದರ್ಶಿಗಳು ಇದ್ದರು.

ಪೊಲೀಸ್‌ ಬಂದೋಬಸ್ತ್ನಲ್ಲಿ ನೋಂದಣಿ ಕಾರ್ಯ 
ಸಿಂದಗಿ: ಪಟ್ಟಣದ ಎಪಿಎಂಸಿಯಲ್ಲಿನ ಸಿಂದಗಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತದ ಕಚೇರಿ ಸೇರಿದಂತೆ ತಾಲೂಕಿನ ಆಲಮೇಲ, ದೇವರಹಿಪ್ಪರಗಿ (ಹೊಸೂರ), ಹಿಕ್ಕನಗುತ್ತಿ, ಚಾಂದಕವಠೆ, ಮೋರಟಗಿ, ಗೋಲಗೇರಿ, ಕಲಕೇರಿ, ಕೊಂಡಗೂಳಿ, ಜಾಲವಾದ ತೊಗರಿ ಖರೀದಿ ಕೇಂದ್ರಗಳಲ್ಲಿ ತೊಗರಿ ಬೆಳೆದ ರೈತರ ಹೆಸರು ನೋಂದಾಯಿಸಿಕೊಳ್ಳುವ ಕಾರ್ಯ ಗುರುವಾರ ಮುಂದುವರೆದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗಿದೆ. ಮಂಗಳವಾರ ಮತ್ತು ಬುಧವಾರ ರೈತರಿಗೆ ನೀಡಿದ ಚೀಟಿಯ ಪ್ರಕಾರ ಹೆಸರು ನೋಂದಣಿ ಕಾರ್ಯ ನಡೆದಿದೆ.

ತಾಲೂಕಿನ 10 ಕೇಂದ್ರಗಳಲ್ಲಿ ಹೆಸರು ನೋಂದಣಿ ಕಾರ್ಯ ನಡೆದಿದ್ದರಿಂದ ರೈತರ ದಟ್ಟಣೆ ಕಡಿಮೆಯಾಗಿದೆ. ಚೀಟಿ ಪ್ರಕಾರ ಸರದಿಯಲ್ಲಿ ಬಂದು ನೋಂದಣಿ ಮಾಡಿಸುತ್ತಿದ್ದಾರೆ. ಇನ್ನು ರೈತರಿಗೆ ಅನುಕೂಲವಾಗಲಿ ಎಂದು ಪಟ್ಟಣ ಸೇರಿದಂತೆ 10 ಕೇಂದ್ರಗಳಲ್ಲದೇ ಹೆಚ್ಚುವರಿಯಾಗಿ 10 ಕೇಂದ್ರ ಪ್ರಾರಂಭಿಸಲಾಗಿದೆ. ಅವು ಶುಕ್ರವಾರ ದಿಂದ
ಕಾರ್ಯ ನಿರ್ವಹಿಸಲಿವೆ.

ಪಟ್ಟಣದಲ್ಲಿ ಪಿಎಫ್‌ಒ ಸಿಂದಗಿ (ಕೋರ್ಟ್‌ ಎದುರುಗಡೆ) ಸೇರಿದಮತೆ ಚಟ್ಟರಕಿ, ಕೋರವಾರ, ಮಾಡಬಾಳ,
ಬಿಂಜಭಾವಿ, ಮಲಘಾಣ, ಸೋಮಜಾಳ, ಬ್ಯಾಕೋಡ, ತಿಳಗೂಳ, ಸುಂಗಠಾಣ ಗ್ರಾಮಗಳಲ್ಲಿನ ಪಿಕೆಪಿಎಸ್‌ ಕೇಂದ
ಹೆಸರು ನೋಂದಣಿ ಕಾರ್ಯ ಮಾಡಿಕೊಳ್ಳಲಾಗುವುದು. ಹತ್ತಿರದ ರೈತರು ಆಯಾ ಕೇಂದ್ರಗಳಲ್ಲಿ ಹೆಸರು ನೋಂದಣಿ ಕಾರ್ಯ ಮಾಡಬೇಕು ಎಂದು ತಹಶೀಲ್ದಾರ ವೀರೇಶ ಬಿರಾದಾರ ಉದಯವಾಣಿಗೆ ತಿಳಿಸಿದ್ದಾರೆ.

ತೊಗರಿ ಖರೀದಿ ಸಮಯದಲ್ಲಿ ತೋಗರಿ ಇಂತಿಷ್ಟೇ ಖರೀದಿ ಮಾಡುತ್ತೇವೆ ಎಂದು ಸರಕಾರ ನಿರ್ಬಂಧ ಹೇರಬಾರದು. ರೈತ ಎಷ್ಟು ತೊಗರಿ ಬೆಳೆದಿರುತ್ತಾನೋ ಅಷ್ಟು ತೊಗರಿ ಖರೀದಿ ಮಾಡಬೇಕು. ಆಗ ರೈತರಿಗೆ  ನುಕೂಲಕರವಾಗುತ್ತದೆ. 
 ಭಾಗಪ್ಪಗೌಡ ಪಾಟೀಲ, ರೈತ, ಆಹೇರಿ

ಪಾರದರ್ಶಕತೆ ಕಾಪಾಡಿ
ನಾಲತವಾಡ: ರೈತರ ಹಿತದೃಷ್ಟಿಯಿಂದ ಸರಕಾರ ತೊಗರಿ ಖರೀದಿಗಾಗಿ ಆನ್‌ಲೈನ್‌ ಮೂಲಕ ಸರದಿ ನೋಂದಣಿ ಜಾರಿಗೆ ತಂದಿದ್ದು, ಇದರಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವಂತೆ ಉಪ ತಹಶೀಲ್ದಾರ್‌ ಬಸವರಾಜ ಭದ್ರಣ್ಣನವರು ಮನವಿ ಮಾಡಿದ್ದಾರೆ. ಪಟ್ಟಣದ ಟಿಎಪಿಸಿಎಂಎಸ್‌ ಸಂಘದ ಆವರಣದಲ್ಲಿ ಗುರುವಾರ ತೊಗರಿ ಖರೀದಿ ರೈತರ ಸರದಿ ನೋಂದಣಿ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.  ಮಧ್ಯವರ್ತಿಗಳ ಹಾವಳಿಯಿಂದ ದೂರವಿರಬೇಕು. ನಿಮ್ಮ ಸರದಿ ಬೇಗನೇ ನೀಡಲಾಗುವುದು ಎಂದು ವಂಚಿಸುವ ಪ್ರಕರಣಗಳಿಂದ ಎಚ್ಚರವಿರಬೇಕು ಎಂದರು.

ನೋಂದಣಿ ಕಾರ್ಯ ಜ. 15ರ ವರೆಗೆ ಚಾಲ್ತಿಯಲ್ಲಿದ್ದು, ನಿಮ್ಮ ಜಮೀನಿನ ಉತಾರೆ, ಆಧಾರ್‌, ಬೆಳೆ ಪ್ರಮಾಣ ಪತ್ರ, ಸರ್ವೇ ಸಂಖ್ಯೆ, ಖಾತಾ ಉತಾರೆ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ ಉಳಿತಾಯ ಖಾತೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next