Advertisement

ಖಾಸಗಿ ಶಾಲೆ ಮೀರಿ ನಿಂತ ಶಂಭೂರು ಸರಕಾರಿ ಪ್ರೌಢಶಾಲೆ 

10:50 AM Apr 22, 2018 | Team Udayavani |

ಬಂಟ್ವಾಳ: ಸರಕಾರಿ ಶಾಲೆ ಎಂದರೆ ಜನಸಾಮಾನ್ಯರಲ್ಲಿ ತಾತ್ಸಾರದ ಭಾವನೆ, ಅಲ್ಲಿನ ಅವ್ಯವಸ್ಥೆ, ಶಿಕ್ಷಕರ ಕೊರತೆಯಿಂದಾಗಿ ಎಲ್ಲರೂ ಖಾಸಗಿ ಶಾಲೆಯನ್ನು ನೆಚ್ಚಿಕೊಳ್ಳು ತ್ತಾರೆ. ಆದರೆ ಇಲ್ಲೊಂದು ಸರಕಾರಿ ಪ್ರೌಢ ಶಾಲೆ ಶೈಕ್ಷಣಿಕ ಸಾಧನೆ -ಸೌಕರ್ಯ – ಸೌಲಭ್ಯ -ವ್ಯವಸ್ಥೆಯಲ್ಲಿ ಖಾಸಗಿ ಶಾಲೆಗಳನ್ನು ಮೀರುವ ಸಾಧನೆಗಳನ್ನು ಮಾಡಿದೆ.

Advertisement

ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಅಂತಹ ಸಾಧನೆಯ ಕೀರ್ತಿಗೆ ಪಾತ್ರವಾಗಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸೇರ್ಪಡೆ ಸಂಖ್ಯೆಯನ್ನು ಹೆಚ್ಚಿಸಿಕೊಂಡದ್ದಲ್ಲದೆ, ಊರಿನ ನೆಚ್ಚಿನ ಶಾಲೆಯಾಗಿ ಮಾರ್ಪಟ್ಟಿದೆ. ಶಾಲಾಭಿವೃದ್ಧಿ ಸಮಿತಿಯು ನಿರಂತರವಾಗಿ ಚಿತ್ರಕಲೆ, ಭರತನಾಟ್ಯ, ನಾಟಕ, ಯಕ್ಷಗಾನ ತರಬೇತಿಗಳನ್ನು ಮಕ್ಕಳಿಗೆ ಉಚಿತವಾಗಿ ನೀಡುತ್ತಾ ಪ್ರದರ್ಶನದ ಪ್ರಾಯೋಜಕತ್ವವನ್ನು ವಹಿಸುತ್ತಿದೆ. ಶಾಲೆಯಲ್ಲಿ ಪ್ರಸ್ತುತ ಬೆಳಗ್ಗಿನ ಉಪಹಾರವನ್ನೂ ನೀಡಲಾಗುತ್ತಿದೆ.

ಶಿಕ್ಷಣ ಪ್ರೇಮಿ ದಿ| ಬೊಂಡಾಲ ಜಗನ್ನಾಥ ಶೆಟ್ಟರ ಪ್ರಯತ್ನದಿಂದ 2003-04ನೇ ಸಾಲಿನಲ್ಲಿ ಸರಕಾರಿ ಪ್ರೌಢಶಾಲೆ ಮಂಜೂರಾಗಿತ್ತು. ಅವರು ಶಾಲೆಯನ್ನು ದತ್ತು ಸ್ವೀಕರಿಸಿದ್ದರು. ಅವರು ಸ್ವರ್ಗಸ್ಥರಾದ ಅನಂತರ ಅವರ ಹಿರಿಯ ಸಹೋದರ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ಬೊಂಡಾಲ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷರಾಗಿ ಶಾಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ರಾಷ್ಟ್ರಮಟ್ಟಕ್ಕೆ ಆಯ್ಕೆ
2015-16 ಸಾಲಿನಲ್ಲಿ ಶಾಲಾ ವಿದ್ಯಾರ್ಥಿಗಳ ವಿಜ್ಞಾನ ನಾಟಕ ಸ್ಪರ್ಧೆಯು ವಿಭಾಗ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು, ಅದೇ ವರ್ಷದಲ್ಲಿ ಎಂ.ಎಚ್‌.ಆರ್‌.ಡಿ. ಆಶ್ರಯದ ಕಲಾ ಉತ್ಸವದ ನಾಟಕ ಸ್ಪರ್ಧೆಯಲ್ಲಿ 10ನೇ ತರಗತಿ ಕನ್ನಡ ಪಠ್ಯಾಧಾರಿತ ಹಲಗಲಿಯ ಬೇಡರು ನಾಟಕ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಹೊಸದಿಲ್ಲಿಯಲ್ಲಿ ನಡೆದ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿತ್ತು ಎಂಬುದು ಹೆಮ್ಮೆಯ ವಿಚಾರವಾಗಿದೆ.

8ರಿಂದ ಆಂಗ್ಲ ಮಾಧ್ಯಮ
2015-16ನೇ ಸಾಲಿಗೆ 8ನೆಯ ತರಗತಿಯಿಂದ ಆಂಗ್ಲ ಮಾಧ್ಯಮ ವಿಭಾಗವನ್ನು ಪ್ರಾರಂಭಿಸಿದೆ. 2016-17ನೇ ಸಾಲಿನಲ್ಲಿ 8ನೆಯ ತರಗತಿಗೆ ಒಟ್ಟು 79 ವಿದ್ಯಾರ್ಥಿಗಳು ದಾಖಲಾಗಿದ್ದು, ಶಾಲೆಯ ಒಟ್ಟು ದಾಖಲಾತಿ 228 ಆಗಿದೆ. (118 ವಿದ್ಯಾರ್ಥಿಗಳು+110 ವಿದ್ಯಾರ್ಥಿನಿಯರು).

Advertisement

ವಿಶೇಷವೇನು?
ಶಾಲೆಯಲ್ಲಿ ತರಗತಿಗೊಂದರಂತೆ ಬೋಧನ ಕೊಠಡಿಗಳು, ಕಂಪ್ಯೂಟರ್‌ ಕೊಠಡಿ, ಕ್ರೀಡಾ ಕೊಠಡಿ, ಮುಖ್ಯ ಶಿಕ್ಷಕರ ಕೊಠಡಿ, ಶಿಕ್ಷಕರ ಕೊಠಡಿ, ಎಲ್ಲ ವಿದ್ಯಾರ್ಥಿಗಳು ಏಕಕಾಲದಲ್ಲಿ ಸಮಾವೇಶಗೊಳ್ಳಲು ವಿಶಾಲವಾದ ಸಭಾಂಗಣ, ಪೀಠೊಪಕರಣಗಳು, ಧ್ವನಿವರ್ಧಕ ವ್ಯವಸ್ಥೆ, ಸಭಾ ವೇದಿಕೆ ಹೀಗೆ ಸರ್ವ ರೀತಿಯ ಸೌಲಭ್ಯಗಳನ್ನು ಶಾಲೆ ಹೊಂದಿದೆ.

ಶಾಲೆಯನ್ನು ಸ್ವತ್ಛ ಮಾಡಲು ಆಧುನಿಕ ತಂತ್ರಜ್ಞಾನದ ಸ್ವಚ್ಛತಾ ಯಂತ್ರದ ಅಳವಡಿಕೆ, ಶಾಲಾ ಅಕ್ಷರ ದಾಸೋಹ ಯೋಜನೆಗೆ ಸ್ಟೀಮ್‌ ಅಳವಡಿಕೆ, ಕಂಪ್ಯೂಟರ್‌ ಕೊಠಡಿಗೆ ಏರ್‌ ಕಂಡೀಶನರ್‌ ಅಳವಡಿಕೆ, ತರಗತಿ ಕೊಠಡಿಗಳಿಗೆ ಇಂಟರ್‌ ಕಾಂ ವ್ಯವಸ್ಥೆ, ಶಾಲಾ ಭದ್ರತೆಗಾಗಿ ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸಿ.ಸಿ. ಕೆಮರಾ ಅಳವಡಿಕೆ, ಸಭಾಂಗಣ ಮತ್ತು ಶೌಚಾಲಯಗಳಿಗೆ ಟೈಲ್ಸ್‌ ಅಳವಡಿಕೆ, ಅನ್ನಪೂರ್ಣ ಭವನ ನಿರ್ಮಾಣ, ವಿದ್ಯಾರ್ಥಿಗಳಿಗೆ ಉಚಿತ ತಟ್ಟೆ ಮತ್ತು ಲೋಟ ವಿತರಣೆ, ಆಕರ್ಷಕವಾದ ಪ್ರವೇಶ ದ್ವಾರದ ನಿರ್ಮಾಣ, ವಿದ್ಯಾರ್ಥಿಗಳಿಗೆ ಉಚಿತವಾಗಿ ಗುರುತಿನ ಚೀಟಿ ನೀಡಿಕೆ, ಗೌರವ ಶಿಕ್ಷಕರ ಸಂಭಾವನೆ, ವಾರ್ಷಿಕ ವಿದ್ಯುತ್‌/ ದೂರವಾಣಿ ಶುಲ್ಕಗಳನ್ನು ಪಾವತಿಸುವುದರ ಮೂಲಕ ಶಾಲೆಯ ಸಂಪೂರ್ಣ ನಿರ್ವಹಣೆಯನ್ನು ದತ್ತು ಸ್ವೀಕಾರ ಸಮಿತಿ ಮಾಡುತ್ತಿರುವುದು ಇಲ್ಲಿನ ವಿಶೇಷತೆ. 

ದತ್ತು ಸ್ವೀಕಾರ
ಪ್ರಸ್ತುತ ವರ್ಷದಿಂದ ಕಡು ಬಡವರ ಶಿಕ್ಷಣ ವಂಚಿತರಾಗುವ ಹತ್ತು ವಿದ್ಯಾರ್ಥಿಗಳ ಸಂಪೂರ್ಣ ಖರ್ಚುವೆಚ್ಚದೊಂದಿಗೆ ದತ್ತು ಸ್ವೀಕರಿಸಲಾಗುವುದು. ಆಂಗ್ಲ ಮಾಧ್ಯಮ ಶಿಕ್ಷಣಕ್ಕಾಗಿ ಹೆಚ್ಚುವರಿ ಶಿಕ್ಷಕರ ನೇಮಕವನ್ನು ಸ್ವಂತ ವೆಚ್ಚದಿಂದ ನೀಡಲಾಗುತ್ತದೆ. ನಾನೊಬ್ಬನೇ ಕನಸು ಕಂಡರೆ ಅದು ಬರಿ ಕನಸಾಗುತ್ತದೆ. ನಾವೆಲ್ಲ ಒಡಗೂಡಿ ಕನಸು ಕಂಡರೆ ಅದು ನನಸಾಗುತ್ತದೆ. ಶಿಕ್ಷಣವೆಂದರೆ ಕೇವಲ ಓದಲ್ಲ, ಪುಸ್ತಕದ ಜ್ಞಾನವೂ ಅಲ್ಲ, ಅದು ಮಾನವತೆಯ ಸರ್ವತೋಮುಖ ಅಭಿವೃದ್ಧಿಯ ವಿಕಾಸ ಎಂದು ನಂಬಿದ್ದೇನೆ.
– ಸಚ್ಚಿದಾನಂದ ಶೆಟ್ಟಿ,
ಬೊಂಡಾಲ
ಅಧ್ಯಕ್ಷರು,ಬೊಂಡಾಲ ಚಾರಿಟೆಬಲ್‌
ಟ್ರಸ್ಟ್‌, ಶಾಲಾಭಿವೃದ್ಧಿ ಸಮಿತಿಯ
ಕಾರ್ಯಾಧ್ಯಕ್ಷರು

ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next