Advertisement

ಕಣ್ಣು ತೆರೆಸಬೇಕಾದ ವಾಸ್ತವ: ಕಾಶ್ಮೀರ ಪರಿಸ್ಥಿತಿ ಶೋಚನೀಯ

03:50 AM Apr 11, 2017 | Team Udayavani |

ಶ್ರೀನಗರ ಉಪ ಚುನಾವಣೆಯಲ್ಲಿ ಪಾಲ್ಗೊಳ್ಳಲು ಜನರ ನಿರುತ್ಸಾಹಕ್ಕೆ ಕಾರಣ ಏನು ಎಂಬುದರ ವಾಸ್ತವ ನೆಲೆಗಟ್ಟಿನ ವಿಶ್ಲೇಷಣೆ ನಡೆಯಬೇಕು. ಇದನ್ನು ಪಾಕ್‌ ಮತ್ತು ಪ್ರತ್ಯೇಕತಾವಾದಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಸಾಧ್ಯತೆಯಿದೆ. ಅದಾಗದಂತೆ ತಡೆಯಬೇಕು. ಜಮ್ಮು ಕಾಶ್ಮೀರ ಭಾರತದ ಭಾಗವಾಗಿ ಉಳಿಯಬೇಕು.

Advertisement

ಜಮ್ಮು-ಕಾಶ್ಮೀರದ ಶ್ರೀನಗರ ವಿಧಾನಸಭೆ ಕ್ಷೇತ್ರಕ್ಕೆ ರವಿವಾರ ನಡೆದ ಉಪಚುನಾವಣೆಯಲ್ಲಿ 30 ವರ್ಷಗಳಲ್ಲಿಯೇ ಅತಿ ಕಡಿಮೆ ಮತದಾನ ಆಗಿರುವುದು ಕಣಿವೆ ರಾಜ್ಯದ ವಾಸ್ತವ ಸ್ಥಿತಿಯನ್ನು ಜಾಹೀರುಗೊಳಿಸಿದೆ. ಮತದಾನದುದ್ದಕ್ಕೂ ಕ್ಷೇತ್ರದ ವಿವಿಧ ಭಾಗಗಳಲ್ಲಿ ಹಿಂಸಾಚಾರ ನಡೆದು ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ 8 ಮಂದಿ ಬಲಿಯಾಗಿದ್ದಾರೆ. ಮತದಾನ ಹಿಂಸೆಯಿಂದ ಶುರುವಾಗಿ ಹಿಂಸೆಯಲ್ಲೇ ಕೊನೆಗೊಂಡಿದೆ. 

ಇಡೀ ದಿನ ಈ ಪುಟ್ಟ ಕ್ಷೇತ್ರದಲ್ಲಿ ಕಡಿಮೆ ಎಂದರೂ 300 ಹಿಂಸಾ ಕೃತ್ಯಗಳು ನಡೆದಿವೆ ಎನ್ನುವುದು ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಮಾಮೂಲಿಯಂತೆ ಪ್ರತ್ಯೇಕವಾದಿಗಳು ಮತದಾನ ಬಹಿಷ್ಕರಿಸಲು ಕರೆ ನೀಡಿದ್ದರು. ಮುನ್ನಾ ದಿನ ರಾತ್ರಿಯಿಂದಲೇ ಇಂಟರ್‌ನೆಟ್‌ ಸಂಪರ್ಕ ಕಡಿತ ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ ಹಿಂಸಾಚಾರ ತಡೆಯಲು ಸಾಧ್ಯವಾಗಿಲ್ಲ ಎನ್ನುವುದು ಚಿಂತಿಸಬೇಕಾದ ವಿಚಾರ.  

ಶ್ರೀನಗರದ ಉಪಚುನಾವಣೆಯ ಮತ ಚಲಾವಣೆ ಪ್ರಮಾಣವನ್ನು ನೋಡಿದ ಬಳಿಕ ಮುಖ್ಯಮಂತ್ರಿ ಮೆಹ 
ಬೂಬಾ ಮುಫ್ತಿ ಎ.12ರಂದು ನಡೆಯ ಲಿರುವ ಅನಂತನಾಗ್‌ ಲೋಕಸಭಾ ಕ್ಷೇತ್ರದ ಉಪಚುನಾವಣೆಯನ್ನು ಮುಂದೂಡಲು ಒತ್ತಾಯಿಸಿದ್ದಾರೆ. ಅಂದರೆ ರಾಜ್ಯದ ಪರಿಸ್ಥಿತಿ ಈಗ ತನ್ನ ಕೈಮೀರಿ ಹೋಗಿದೆ ಎನ್ನುವುದನ್ನು ಸ್ವತಃ ಮುಖ್ಯಮಂತ್ರಿಯೇ ಒಪ್ಪಿಕೊಂಡಿದ್ದಾರೆ ಎಂದಾಯಿತು. 2014ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನರು ಭಾರೀ ಹುಮ್ಮಸ್ಸಿನಿಂದ ಭಾಗವಹಿಸಿದ್ದರು. 25 ವರ್ಷಗಳಲ್ಲೇ ಗರಿಷ್ಠ ಶೇ.66 ಮತದಾನವಾಗಿತ್ತು. ಹಿಂಸಾಚಾರವೂ ಕಡಿಮೆಯಿತ್ತು. ಆದರೆ ಮೂರೇ ವರ್ಷಗಳಲ್ಲಿ ರಾಜ್ಯದ ಪರಿಸ್ಥಿತಿ ಬದಲಾಗಲು ಏನು ಕಾರಣ ಎನ್ನುವುದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿ. ಪಿಡಿಪಿ- ಬಿಜೆಪಿ ಸ್ನೇಹವನ್ನು ಕಾಶ್ಮೀರದ ಜನತೆ ಅಪವಿತ್ರ ಮೈತ್ರಿ ಎಂದೇ ಜನರು ಭಾವಿಸಿದ್ದಾರೆಯೇ? ಬಿಜೆಪಿ ಮತ್ತು ಪಿಡಿಪಿ ಎರಡೂ ಪಕ್ಷಗಳು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುವ ಅಗತ್ಯವಿದೆ. 

ಜಮ್ಮು-ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿ ಸರಕಾರಗಳು ಮಾತ್ರವಲ್ಲದೆ ಬೇಹುಪಡೆಗಳು ಕೂಡ ವಾಸ್ತವವನ್ನು ತಿಳಿದುಕೊಳ್ಳಲು ವಿಫ‌ಲ ಗೊಂಡಿವೆ. ಮತದಾನಕ್ಕೆ ಜನರು ಇಷ್ಟು ನೀರಸವಾಗಿ ಪ್ರತಿಕ್ರಿಯಿಸುತ್ತಾರೆ ಎನ್ನುವ ಮುನ್ಸೂಚನೆ ಯಾರಿಗೂ ಸಿಕ್ಕಿರಲಿಲ್ಲ. ಒಟ್ಟಾರೆಯಾಗಿ ಇದು ಸರಕಾರ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ವೈಫ‌ಲ್ಯ ಎನ್ನಬಹುದೇ? ನಿರ್ದಿಷ್ಟವಾಗಿ ಹೇಳಬೇಕಾದರೆ ಶ್ರೀನಗರದ ಜನರು ಮುಖ್ಯವಾಹಿನಿ ರಾಜಕೀಯವನ್ನು ತಿರಸ್ಕರಿಸಿದ್ದಾರೆ. ಪಿಡಿಪಿಯ ಭದ್ರಕೋಟೆಯಾಗಿರುವ ಶ್ರೀನಗರದಲ್ಲೇ ಹೀಗಾಗಿರುವುದು ಮುಫ್ತಿ ಮೆಹಬೂಬಾಗೆ ಆಗಿರುವ ಹಿನ್ನಡೆಯೂ ಹೌದು.  ಉಗ್ರರ ಮತ್ತು ಪ್ರತ್ಯೇಕತಾವಾದಿಗಳ ಬೆದರಿಕೆ ಜನರು ಮತಗಟ್ಟೆಗೆ ಬರದಂತೆ ತಡೆಯಿತು ಎನ್ನುವುದು ಅರ್ಧ ಸತ್ಯ. ಹಿಂದಿನ ಚುನಾವಣೆಯಲ್ಲೂ ಈ ಬೆದರಿಕೆ ಇದ್ದರೂ ಜನರು ಲೆಕ್ಕಿಸದೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. 2014ರ ಚುನಾವಣೆಯಲ್ಲಾದ ಭಾರೀ ಪ್ರಮಾಣದ ಮತದಾನ ಕಾಶ್ಮೀರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದು ಕೇಂದ್ರ ಸರಕಾರ ಹೇಳಿಕೊಂಡಿತ್ತು. ಆದರೆ ಮೂರೇ ವರ್ಷದಲ್ಲಿ ಕಾಶ್ಮೀರದ ಜನರ ಭಾರತೀಯತೆ ದೂರವಾಯಿತೆ? ಮರಳಿ ಅವರು ಪ್ರತ್ಯೇಕವಾದಿಗಳ ಪ್ರಭಾವಕ್ಕೆ ಒಳಗಾದರೆ? ಬರೇ ಶೇ.6.5 ಮತದಾನವಾಗಿರುವುದನ್ನು ಪ್ರಜಾಪ್ರಭುತ್ವ ಎನ್ನಬಹುದೇ? ಈ ಶೇ.6.5 ಮತಗಳಲ್ಲೇ ಗೆದ್ದು ಬರುವ ಅಭ್ಯರ್ಥಿ ಇಡೀ ಶ್ರೀನಗರದ ಪ್ರತಿನಿಧಿ ಎಂದು ಒಪ್ಪಿಕೊಳ್ಳಲು ಸಾಧ್ಯವೇ? ಹೀಗೆ ಶ್ರೀನಗರ ಉಪಚುನಾವಣೆ ಹಲವು ಪ್ರಶ್ನೆಗಳನ್ನು ಇಟ್ಟಿದೆ. 

Advertisement

ಜಮ್ಮು-ಕಾಶ್ಮೀರ ಭಾರತದ ಭಾಗ ಎಂದು ಸಾಧಿಸಲು ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಅಲ್ಲಿನ ಜನರ ಸಹಭಾಗಿತ್ವವೇ ಪ್ರಮುಖ ಆಧಾರ. 2014ರಲ್ಲಿ ಶೇ.66 ಮತದಾನವಾದಾಗ ಬಹುತೇಕ ಜನರು ಭಾರತದ ಜತೆಗಿದ್ದಾರೆ ಎಂದು ಎದೆತಟ್ಟಿ ಹೇಳಿಕೊಂಡಿದ್ದೆವು. ಇದೀಗ ಮೂರೇ ವರ್ಷದಲ್ಲಿ ಪರಿಸ್ಥಿತಿ ತಿರುಗಿ ಬಿದ್ದಿರುವುದನ್ನು ನೆಪಮಾಡಿಕೊಂಡು ಪಾಕಿಸ್ಥಾನ ಜಮ್ಮು-ಕಾಶ್ಮೀರದ ಕುರಿತು ಹೊಸದಾಗಿ ತಗಾದೆ ತೆಗೆಯುವ ಸಾಧ್ಯತೆಯಿದೆ. ಪ್ರತ್ಯೇಕವಾದಿಗಳೂ ಇದನ್ನು ಮುಂದು ಮಾಡಬಹುದು. ಮೋದಿ ಸರಕಾರಕ್ಕೆ ಇದು ಎಚ್ಚರಿಕೆ ಕರೆ. ಇನ್ನಾದರೂ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡಲಿ.

Advertisement

Udayavani is now on Telegram. Click here to join our channel and stay updated with the latest news.

Next