Advertisement

ಟೆಂಟ್‌ ನಿವಾಸಿಗಳಿಗೆ ಬೇಕಿದೆ ಸ್ವಂತ ಸೂರು!

02:31 PM Jun 11, 2018 | |

ಹಗರಿಬೊಮ್ಮನಹಳ್ಳಿ: ಪಟ್ಟಣದ ಚಿಂತ್ರಪಳ್ಳಿ ರಸ್ತೆಯಲ್ಲಿ ಕಳೆದ 20 ವರ್ಷಗಳಿಂದಲೂ ಬೀಡುಬಿಟ್ಟಿರುವ ದುರುಮುರುಗಿ,
ಸಿಂಧೋಳ ಸಮಾಜದ ಅಲೆಮಾರಿ ಕುಟುಂಬಗಳಿಗೆ ಸರ್ಕಾರದ ಕನಿಷ್ಠ ಸೌಲಭ್ಯ ಈವರೆಗೂ ಮರೀಚಿಕೆಯಾಗಿವೆ.
ಸುಮಾರು 35ಕ್ಕೂ ಹೆಚ್ಚಿರುವ ಟೆಂಟ್‌ ನಿವಾಸಿಗಳಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಈವರೆಗೂ ದೊರೆತಿಲ್ಲ. ಇದುವರೆಗೂ ದಕ್ಕಿರುವುದು ಒಂದೇ ಚುನಾವಣೆ ಗುರುತಿನ ಚೀಟಿ ಮಾತ್ರ. ಅಲೆಮಾರಿಗಳಿಗೆ ಈ ಹಿಂದೆ ಕೆಚ್ಚಿನಬಂಡಿ ಬಳಿ ನಿವೇಶನ ಒದಗಿಸುವ ಭರಸೆ ನೀಡಲಾಗಿತ್ತು. ಆದರೆ, ಸಿದ್ಧವಾದ ನಿವೇಶನಗಳು ವಾಸಕ್ಕೆ ಯೋಗ್ಯವಲ್ಲವೆಂದು ಅಂದಿನ ಜಿಲ್ಲಾಧಿಕಾರಿ ತಡೆಯೊಡ್ಡಿದ್ದ ಪರಿಣಾಮ ಪುನಃ ಅವರಿವರ ನಿವೇಶನವೇ ಇವರಿಗೆ ಗತಿಯಾಗಿವೆ.

Advertisement

 ಈ ಹಿಂದಿನ ಗ್ರಾಪಂ ಮತ್ತು ಇಂದಿನ ಪುರಸಭೆಯೂ ವಸತಿ ಸೌಲಭ್ಯ ನೀಡುವಲ್ಲಿ ವಿಫಲವಾಗಿವೆ. ಪುರಸಭೆಯಿಂದ ನಿವೇಶನ ಸೃಷ್ಠಿಗೆ ಸಾಕಷ್ಟು ಅನುದಾನ ಲಭ್ಯವಿದ್ದರೂ ಜನಪ್ರತಿನಿಧಿಗಳ ಕಾಳಜಿ ಕೊರತೆ ಅಲೆಮಾರಿ ಸಮುದಾಯಕ್ಕೆ ಮುಳುವಾಗಿದೆ. 

 ಸೌಲಭ್ಯ ದಕ್ಕಿಲ್ಲ: ಪಟ್ಟಣದ ವಿವಿಧೆಡೆಗಳಲ್ಲಿ ಟೆಂಟ್‌ ಹಾಕಿಕೊಂಡೇ ಬದುಕು ಕಟ್ಟಿಕೊಂಡ ಸಮುದಾಯಕ್ಕೆ ಜನಪ್ರತಿನಿಧಿಗಳಿಂದ ಕನಿಷ್ಠ ಸೌಲಭ್ಯ ದಕ್ಕಿಲ್ಲ. ಆರಂಭದಲ್ಲಿ ಹಳೇವೂರಿನ ಬಸ್‌ನಿಲ್ದಾಣದ ಬಳಿ ಟೆಂಟ್‌ ಕಟ್ಟಿಕೊಂಡಿದ್ದರು. ಇಳಿಜಾರು ಪ್ರದೇಶದಲ್ಲಿನ ಟೆಂಟ್‌ಗಳಿದ್ದ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಮಳೆಗಾಲದಲ್ಲಿ ನೀರು ಹೊರ ಚೆಲ್ಲುವುದಲ್ಲಿ ರಾತ್ರಿ ಜಾಗರಣೆ ಆಚರಿಸುತ್ತಿದ್ದರು. ನಂತರ ಅಂದಿನ ಗ್ರಾಮ ಪಂಚಾಯತ್‌ ಒತ್ತಡದಿಂದಾಗಿ ಟೆಂಟ್‌ ತೆರವುಗೊಳಿಸಿ, ಪಟ್ಟಣದ ಚಿತ್ರಮಂದಿರದ ಹಿಂಭಾಗದ ಖಾಲಿ ನಿವೇಶನದಲ್ಲಿ ಕೆಲ ವರ್ಷ ಬಿಡಾರ ಹೂಡಿದರು. ಮಾಲೀಕರು ಜಾಗ ತೆರವುಗೊಳಿಸುವಂತೆ ಸೂಚನೆ ನೀಡಿದಾಗ ಅನಿವಾರ್ಯವಾಗಿ ಕೊಟ್ಟೂರು ರಸ್ತೆಯ ನಿವೇಶನಕ್ಕೆ ಟೆಂಟ್‌ಗಳು ಸ್ಥಳಾಂತರಗೊಂಡವು. ಒಟ್ಟು 35ಕ್ಕೂ ಹೆಚ್ಚು ಕುಟುಂಬಗಳಿಗೆ ಏಕೈಕ ನಲ್ಲಿ ಮತ್ತು ಒಂದು ಬೀದಿದೀಪವೇ ಆಸರೆಯಾಗಿದೆ.

ಸ್ಥಳಾಂತರ ನಿರಂತರ: ಟೆಂಟ್‌ ವಾಸಿಗಳ ಸ್ಥಳಾಂತರ ನಿರಂತರವಾಗಿದ್ದ ಹಿನ್ನೆಲೆಯಲ್ಲಿ ಆರು ವರ್ಷದಿಂದಲೂ ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯಿಂದಲೂ ವಂಚಿತರಾಗಿದ್ದರು. ಲೋಕಸಭೆ ಚುನಾವಣೆ ವೇಳೆ ಮತದಾರರ ಗುರುತಿನ ಚೀಟಿ ಪಡೆದಿದ್ದಾರೆ. ಟೆಂಟ್‌ ವಾಸಿಗಳ ಕೆಲ ಕುಟುಂಬಗಳು ಇಂದಿಗೂ ಭಿಕ್ಷಾಟನೆ ಮೂಲಕ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ. ಕೆಲವರು ಜಿಪ್‌ ರಿಪೇರಿ, ಕೂದಲು ಸಂಗ್ರಹಣೆ, ಮಿಕ್ಸಿ ರಿಪೇರಿ, ಕೊಡೆ ಮಾರಾಟ ಮೂಲಕ ಕುಟುಂಬಗಳನ್ನು ನಿರ್ವಹಿಸುತ್ತಿದ್ದಾರೆ.  ಸಮುದಾಯಗಳ 20ಕ್ಕೂ ಹೆಚ್ಚು ಮಕ್ಕಳು ಶಾಲೆ ಮುಖ ಕಂಡವರಲ್ಲ. ಒಬ್ಬ ಎಸ್ಸೆಸ್ಸೆಲ್ಸಿ ಫೇಲ್‌ ಆಗಿರುವುದೆ ಸಮುದಾಯದವರ ಪಾಲಿನ ಉನ್ನತ ಶಿಕ್ಷಣವಾಗಿದೆ.

ಮಕ್ಕಳಿಗಿಲ್ಲ ಶಾಲೆ ದರ್ಶನ: ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯಲ್ಲಿ ಟೆಂಟ್‌ವಾಸಿಗಳ ಮಕ್ಕಳದ್ದೆ ಸಿಂಹಪಾಲು. ಟೆಂಟ್‌ಶಾಲೆ ಆರಂಭಿಸುವ ನಿಯಮ ಶಿಕ್ಷಣ ಇಲಾಖೆಗೆ ಅನ್ವಯಿಸಿದಂತಿಲ್ಲ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಉಪೇಕ್ಷಿತ ಸಮುದಾಯದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಕಾಳಜಿ ವಹಿಸಿಲ್ಲ. ಟೆಂಟ್‌ ವಾಸಿಗಳು ಕೊಳೆತು ನಾರುವ ನೀರಿನ ಗುಂಡಿಗಳ ಮಧ್ಯ ದಿನನಿತ್ಯನ ಜೀವನ ಸಾಗಿಸುತ್ತಿದ್ದಾರೆ.

Advertisement

ಸಿಂಧೋಳ ಸಮಾಜದವರಿಗೆ ಸಿಂಧೋಳ ಸರ್ಟಿಫಿಕೇಟ್‌ (ಪರಿಶಿಷ್ಟ ಜಾತಿ) ಕೊಡಿಸಲು ಈಗಾಗಲೇ ಸಮಾಜ
ಕಲ್ಯಾಣ ಇಲಾಖೆಯವರಿಗೆ ಪತ್ರ ಬರೆಯಲಾಗಿದೆ. ಮೇಲ್ನೋಟಕ್ಕೆ ಸಿಂಧೋಳ ಸಮಾಜದವರಿಗೆ ಜಾತಿ ಪ್ರಮಾಣ ಪತ್ರ ನೀಡಲು ಯಾವುದೇ ತೊಂದರೆಯಿಲ್ಲ. ನಿವೇಶನ, ವಸತಿ ಸೌಲಭ್ಯ ಒದಗಿಸಲು ಪುರಸಭೆ ಮುಖ್ಯಾಧಿಕಾರಿಗೆ
ಲಿಖೀತವಾಗಿ ತಿಳಿಸಲಾಗುವುದು. ಸಿಂಧೋಳ ಸಮಾಜದ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುವಂತೆ ಶಿಕ್ಷಣ ಇಲಾಖೆಯವರೊಂದಿಗೆ ಚರ್ಚಿಸಲಾಗುವುದು.
 ಮಹಾಬಲೇಶ್ವರ, ತಹಶೀಲ್ದಾರ್‌ ಹಗರಿಬೊಮ್ಮನಹಳ್ಳಿ.

ಸಿಂಧೋಳ ಸಮಾಜದ 40 ಕುಟುಂಬದ 200 ಜನ ಟೆಂಟ್‌ನಲ್ಲಿ ವಾಸವಾಗಿದ್ದೇವೆ. ಸರ್ಕಾರದವರು ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಚುನಾವಣೆ ಗುರುತಿನ ಚೀಟಿ ಕೊಟ್ಟಿದ್ದಾರೆ. ಆದರೆ, ಈವರೆಗೂ ಸಾಕಷ್ಟು ತಹಶೀಲ್ದಾರರು ಬಂದು ಹೋದರೂ ನಮಗೆ ಸಿಂಧೋಳ ಜಾತಿ ಪ್ರಮಾಣಪತ್ರ ಮಾತ್ರ ದೊರೆತಿಲ್ಲ. ಹೀಗಾಗಿ ನಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುತ್ತಿಲ್ಲ. ಈ ವಿಷಯವನ್ನು ಈಗೀನ ತಹಶೀಲ್ದಾರ್‌ ಗಮನಕ್ಕೆ ತಂದಿದ್ದೇವೆ. ಜಾತಿ ಪ್ರಮಾಣಪತ್ರ ಕೊಡಿಸುವ ಭರವಸೆ ನೀಡಿದ್ದಾರೆ. ಟೆಂಟ್‌ ವಾಸಿಗಳ ಸಮಸ್ಯೆಗಳು ನೂರಾರೂ ಇದ್ದರೂ ಜನಪ್ರತಿನಿಧಿಗಳು ಕಾಳಜಿ ವಹಿಸಿಲ್ಲ. ನಿವೇಶನ, ವಸತಿ ಸೌಲಭ್ಯದಿಂದ ಟೆಂಟ್‌ ವಾಸಿಗಳು ವಂಚಿತರಾಗಿದ್ದಾರೆ.
 ನರಸಿಂಹ, ಸಿಂಧೋಳ ಸಮಾಜದ ಅಧ್ಯಕ್ಷ ಹಗರಿಬೊಮ್ಮನಹಳ್ಳಿ

 ಪುರಸಭೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನ ಗುರುತಿಸಿ ಟೆಂಟ್‌ ವಾಸಿಗಳಿಗೆ ನಿವೇಶನ, ವಸತಿ ಸೌಲಭ್ಯವನ್ನು ನೀಡುವಂತೆ ಪುರಸಭೆಯವರಿಗೆ ಆದೇಶಿಸಲಾಗುವುದು. ಸಿಂದೋಳ ಸಮಾಜದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಗೆ ಒತ್ತಾಯಿಸಲಾಗುವುದು. ಟೆಂಟ್‌ ವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರೂಪುರೇಷ ಸಿದ್ಧಪಡಿಸಲಾಗುವುದು.   
ಎಸ್‌. ಭೀಮಾನಾಯ್ಕ, ಶಾಸಕ, ಹಗರಿಬೊಮ್ಮನಹಳ್ಳಿ ಕ್ಷೇತ್ರ 

ಸುರೇಶ ಯಳಕಪ್ಪನವರ

Advertisement

Udayavani is now on Telegram. Click here to join our channel and stay updated with the latest news.

Next