Advertisement

ಏಡಿಗಳ ಹನ್ನೊಂದು ಪ್ರಭೇದ;ಒಂದು  ಕುಲ ಪತ್ತೆಹಚ್ಚಿದ ತೇಜಸ್‌ ಠಾಕ್ರೆ

11:18 AM Jun 28, 2018 | |

ಮುಂಬಯಿ: ಠಾಕ್ರೆ ಕುಟುಂಬದ ಮೂರನೇ ತಲೆಮಾರು ಮತ್ತು ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರ ಹಿರಿಯ ಮಗ ಆದಿತ್ಯ ಠಾಕ್ರೆ ಅವರು ರಾಜಕೀಯ ರಂಗದಲ್ಲಿ  ತಮ್ಮ ಛಾಪನ್ನು  ಪ್ರದರ್ಶಿಸುತ್ತಿದ್ದರೆ,ಆದಿತ್ಯ ಅವರ  ಸಹೋದರ ತೇಜಸ್‌ ಠಾಕ್ರೆ ಅವರು ವನ್ಯಜೀವಿ ಸಂಶೋಧನೆಯಲ್ಲಿ  ಹೊಸ ಸಾಧನೆಯನ್ನು ಮಾಡುತ್ತ,  ಸಂಶೋಧನಾ ಕ್ಷೇತ್ರದಲ್ಲಿ  ಠಾಕ್ರೆ ಕುಟುಂಬದ ಹೆಸರನ್ನು ರಾರಾಜಿಸುವಂತೆ ಮಾಡುತ್ತಿದ್ದಾರೆ.

Advertisement

ಉದ್ಧವ್‌  ಠಾಕ್ರೆ ಅವರ ಕಿರಿಯ ಮಗ ತೇಜಸ್‌ ಠಾಕ್ರೆ ಅವರು ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ  ಏಡಿಗಳ 11 ಅಪರೂಪದ ಪ್ರಭೇದಗಳನ್ನು ಮತ್ತು ತಾಜಾ ನೀರಿನ ಏಡಿಗಳ ಹೊಸ ಕುಲವನ್ನು ಕಂಡುಹಿಡಿದಿದ್ದಾರೆ.

20ರ ಹರೆಯದ ವಿದ್ಯಾರ್ಥಿ  ತೇಜಸ್‌ ಠಾಕ್ರೆ ಅವರ ಈ ವೈಜ್ಞಾನಿಕಾ ಸಂಶೋಧನೆಯು ನ್ಯೂಜಿಲ್ಯಾಂಡ್‌ ಮೂಲದ ಅಂತಾರಾಷ್ಟ್ರೀಯ ನಿಯತಕಾಲಿಕೆ ಜುಟಾಕ್ಸಾದಲ್ಲಿ  ಪ್ರಕಟವಾಗಿದೆ ಎಂದು ಉದ್ಧವ್‌ ಠಾಕ್ರೆ ಅವರ ಆಪ್ತ ಸಹಾಯಕ ಹರ್ಷಲ್‌ ಪ್ರಧಾನ್‌ ತಿಳಿಸಿದ್ದಾರೆ.

ಈ ಸಂಶೋಧನೆಗಳಲ್ಲಿ ಭಾಗವಹಿಸಿರುವ ತಂಡವು ತಾವು ಕಂಡು ಹಿಡಿದ ಏಡಿಗಳ ಹೊಸ ಕುಲಕ್ಕೆ “ಸಹ್ಯಾದ್ರಿಯಾನಾ’ (ಪಶ್ಚಿಮ ಘಟ್ಟಗಳಿಗೆ ಮರಾಠಿ ಹೆಸರು ಸಹ್ಯಾದ್ರಿ) ಎಂಬ ಹೆಸರನ್ನಿಟ್ಟಿದೆ ಎಂದವರು ಹೇಳಿದ್ದಾರೆ.

Advertisement

ತೇಜಸ್‌ ಅವರು  ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತ ಸಮೂಹದಲ್ಲಿ ನೆಲೆಸಿರುವ ಕೊಂಕಣ, ಸತಾರ, ಕೊಲ್ಲಾಪುರ ಮತ್ತು ಅಹ್ಮದ್‌ನಗರ ಪ್ರದೇಶಗಳಲ್ಲಿ ಏಡಿಗಳ ಹೊಸ ಪ್ರಭೇದಗಳನ್ನು ಪತ್ತೆಮಾಡಿದ್ದಾರೆ. ತೇಜಸ್‌ ಅವರಿಗೆ ಈ ಕೆಲಸದಲ್ಲಿ  ಅವರ ಇಬ್ಬರು ಸಂಗಡಿಗರುಗಳಾದ ಡಾ| ಸಮೀರ್‌ ಕುಮಾರ್‌ ಪಾಟೀಲ್‌ ಮತ್ತು ಅನೀಲ್‌ ಖರೆ ಅವರು ಜೊತೆ ನೀಡಿದ್ದರು.

ಡಾ| ಎಸ್‌. ಕೆ. ಪಾಟೀಲ್‌ ಅವರು ಭಾರತೀಯ ಪ್ರಾಣಿವಿಜ್ಞಾನ ಸರ್ವೇಕ್ಷಣಾ ಇಲಾಖೆಗೆ ಸಂಬಂಧಪಟ್ಟವರಾಗಿದ್ದಾರೆ. ಇವರು ತೇಜಸ್‌ಗೆ ಸಂಶೋಧನಾ ದಾಖಲೆಗಳನ್ನು  ಬರೆಯಲು ಸಹಾಯ ಮಾಡಿದ್ದರು. 2015 ಮತ್ತು 2017ರ ಅವಧಿಯಲ್ಲಿ ಈ ಸಂಶೋಧನೆ ನಡೆದಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಜೀವವೈವಧ್ಯತೆಯಿಂದ ಕೂಡಿದ್ದು, ಸಸ್ಯ ಮತ್ತು ಪ್ರಾಣಿಗಳ ಸಾವಿರಾರು ಪ್ರಭೇದಗಳು ಅಲ್ಲಿವೆ. ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಸಂಶೋಧಕರು ವನ್ಯಜೀವಿಗಳು ಹಲವು ಬಗೆಯ ಪ್ರಭೇದಗಳನ್ನು ಇಲ್ಲಿ ಪತ್ತೆಮಾಡಿದ್ದಾರೆ.

2015ರ ಜುಲೈನಿಂದ ತೇಜಸ್‌ ಅವರು  ಏಡಿಯ ಹೊಸ ಪ್ರಭೇದವನ್ನು ಹುಡುಕುವ ಕೆಲಸವನ್ನು ಆರಂಭಿಸಿದ್ದರು. ಇದಕ್ಕಾಗಿ ಅವರಿಗೆ  ಹಲವು ತಿಂಗಳು ಕೊಂಕಣದಲ್ಲಿ  ನೆಲೆಸಿದ್ದರು. ಇಷ್ಟೇ ಅಲ್ಲದೆ, ಅವರು ತಮ್ಮ ಸಂಶೋಧನೆ ಕೆಲಸಕ್ಕಾಗಿ  ಹೆಚ್ಚಿನ ದಿನಗಳವರೆಗೆ ದಟ್ಟ ಕಾಡುಗಳಲ್ಲಿ  ಜಿಗಣೆ ಮತ್ತು ವಿಷಪೂರಿತ ಹಾವುಗಳ ನಡುವೆ  ಉಳಿದ್ದಿದ್ದರು. ಮಳೆಗಾಲದ ಸಮಯದಲ್ಲಿ ಕ್ಯಾಮೆರಾ ಮತ್ತು ಇತರ ಉಪಕರಣಗಳನ್ನು ಮಳೆನೀರಿನಿಂದ ರಕ್ಷಿಸುವುದು ತೇಜಸ್‌ ಅವರ ಮುಂದೆ ಸವಾಲಾಗಿತ್ತು.  ಎಲ್ಲಕ್ಕೂ ಮೊದಲಾಗಿ ಅವರು ಸರೀಸೃಪಗಳು ಮತ್ತು ಉಭಯಚರಗಳ ಮೇಲೆ ಸಂಶೋಧನೆಯನ್ನು ಪ್ರಾರಂಭಿಸಿದ್ದರು. ಏಡಿಗಳನ್ನು ಪತ್ತೆಹಚ್ಚುವ, ಅವುಗಳ ಫೋಟೋ ತೆಗೆಯುವ ಹಾಗೂ ಅವುಗಳ ಮಾದರಿಗಳನ್ನು  ಸಂಗ್ರಹಿಸುವ ಕೆಲಸವನ್ನು  ಕೇವಲ  ತೇಜಸ್‌ ಅವರೇ ಮಾಡಿದ್ದರು.  ತಂಡದ ಇತರ ಸದಸ್ಯರು ಶೋಧಿಸಲ್ಪಟ್ಟ  ಪ್ರಭೇದಗಳಿಗೆ  ಹೆಸರು ಸೂಚಿಸುವುದರಿಂದ ಹಿಡಿದು  ಅವುಗಳ ಬಗ್ಗೆ  ಬರೆಯುವ ಕೆಲಸ ಮಾಡಿದ್ದರು.

ಈ ಸಂಪೂರ್ಣ ಯೋಜನೆ ನನ್ನ ಫೀಲ್ಡ್‌ ಟೀಮ್‌ನ ಕಠಿನ ಪರಿಶ್ರಮದ ಫಲಿತಾಂಶವಾಗಿದೆ. ಈ ಸಂಶೋಧನೆಗಾಗಿ ನಮಗೆ ಪರವಾನಿಗೆಯನ್ನು ನೀಡಿದ್ದಕ್ಕಾಗಿ ನಾಮ ಮಹಾರಾಷ್ಟ್ರ ರಾಜ್ಯ ಅರಣ್ಯ ಇಲಾಖೆಯವರಿಗೆ ಧನ್ಯವಾದ ಹೇಳುತ್ತೇನೆ ಎಂದು ತೇಜಸ್‌ ನುಡಿದಿದ್ದಾರೆ. ತೇಜಸ್‌ ಅವರಿಗೆ ರಾಜಕೀಯದಲ್ಲಿ ಸೇರುವ ಯಾವುದೇ ಯೋಜನೆಗಳು ಇಲ್ಲವಂತೆ.

Advertisement

Udayavani is now on Telegram. Click here to join our channel and stay updated with the latest news.

Next