Advertisement

ಶಿಕ್ಷಕರ ಮೇಲೆ ದಬ್ಟಾಳಿಕೆ ಹೆಚ್ಚಾಗುತ್ತಿದೆ

04:03 PM Mar 28, 2017 | Team Udayavani |

ಬ್ರಹ್ಮಾವರ: ಸರಕಾರದಿಂದ ಶಿಕ್ಷಕರ ಮೇಲೆ ದಬ್ಟಾಳಿಕೆ ಹೆಚ್ಚಾಗುತ್ತಿದೆ. ಯಾವುದೇ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿದೆ ಎಂದು ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಉಡುಪಿ ಜಿಲ್ಲಾ ಘಟಕದ ಗಣೇಶ ಶೆಟ್ಟಿಗಾರ್‌ ಹೇಳಿದರು.

Advertisement

ಅವರು ರವಿವಾರ ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಆಶ್ರಯದಲ್ಲಿ ನಡೆದ ಪಿಂಚಣಿ ವಂಚಿತ ನೌಕರರ ಉಡುಪಿ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು. ಮಕ್ಕಳ ಭವಿಷ್ಯದ ಬಗ್ಗೆ ಯಾವಾಗಲೂ ಚಿಂತಿಸುವ ಅಧ್ಯಾಪಕರು ತಮ್ಮ ಭವಿಷ್ಯದ ಭದ್ರತೆಯನ್ನು ಕಳೆದುಕೊಂಡಿದ್ದಾರೆ. ಸರ್ಕಾರ 2006ರ ಜೂನ್‌ ಅನಂತರ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ದುಡಿಯುತ್ತಿರುವ ಅಧ್ಯಾಪಕರಿಗೆ ಪಿಂಚಣಿಯನ್ನು ನೀಡುತ್ತಿಲ್ಲ. ಕಾರ್ಮಿಕರಿಗೆ ಸಿಗುವ ಪಿಎಫ್‌, ಇಎಸ್‌ಐ ಸೌಲಭ್ಯ ಕೂಡಾ ದೊರಕುತ್ತಿಲ್ಲ. ನಿವೃತ್ತಿಯ ಸಮಯದಲ್ಲಿಯೂ ಆ ತಿಂಗಳ ವೇತನದೊಂದಿಗೆ ಮನೆಗೆ ತೆರಳಬೇಕಾದ ಪರಿಸ್ಥಿತಿ ತಂದೊಡ್ಡಿದೆ. ಭವಿಷ್ಯಕ್ಕೆ ಯಾವುದೇ ಭದ್ರತೆಯನ್ನು ನೀಡದ ಸರ್ಕಾರದ ಈ ಕ್ರಮಕ್ಕೆ ಎಲ್ಲರೂ ಒಂದಾಗಿ ಹೋರಾಟ ನಡೆಸಿ ಈ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದರು.

ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿದ ಸಂಘದ ರಾಜ್ಯಾಧ್ಯಕ್ಷ ಜಿ.ಹನುಮಂತಪ್ಪ ಮಾತನಾಡಿ, ಸರಕಾರ ಅನುದಾನಿತ ಶಿಕ್ಷಣ ಸಂಸ್ಥೆಗಳ ಅಧ್ಯಾಪಕರಿಗೆ ಯಾವುದೇ ಸೇವಾ ಭದ್ರತೆ ನೀಡದೆ ನಿಕೃಷ್ಟವಾಗಿ ನೋಡಿಕೊಳ್ಳುತ್ತಿದೆ ಎಂದರು.

ಸಮಾವೇಶದಲ್ಲಿ ಸಂಘದ ಕಿರಣ್‌ ಕುಮಾರ್‌ ಹೆಗ್ಡೆ, ಸರ್ಕಾರಿ ನೌಕರರ ಜಿಲ್ಲಾ ಸಂಚಾಲಕ ರವಿ ಎಸ್‌., ಕಾರ್ಯದರ್ಶಿ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು. ಅಧ್ಯಾಪಕರಾದ ಸಚಿನ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು. ಪ್ರಸನ್ನ ಕುಮಾರ್‌ ಶೆಟ್ಟಿ ವಂದಿಸಿದರು. ಪ್ರಕಾಶ್‌ ಮಾಕೋಡಿ ಕಾರ್ಯಕ್ರಮ ನಿರೂಪಿಸಿದರು. ಅನಂತರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next