Advertisement

Teachers’ Day: ನಾನೇ ಬರಿತೀನಿ ಸರ್‌!

03:27 PM Sep 03, 2023 | Team Udayavani |

ಅದೊಂದು ಪರೀಕ್ಷಾ ಸಮಯ. ಮಕ್ಕಳ ಕಲಿಕೆಯನ್ನು ಅಂಕದೊಂದಿಗೆ ಅಳತೆ ಮಾಡುವ ಪರೀಕ್ಷೆ. ಹೆಚ್ಚು ಅಂಕ ಪಡೆದುಕೊಂಡರೆ ವಿದ್ಯಾರ್ಥಿಗಳು ಚೆನ್ನಾಗಿ ಓದಿದ್ದಾರೆ ಎಂಬುದಕ್ಕಿಂತ ಶಿಕ್ಷಕರು ಚೆನ್ನಾಗಿ ಕಲಿಸಿದ್ದಾರೆ ಎಂಬ ಅರ್ಥ ಬರುವುದು ಎಂಬುದು ಬಹಳ ಜನರ ನಂಬಿಕೆ.

Advertisement

ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯಬೇಕಿತ್ತು. ಚೆನ್ನಾಗಿ ಬರೆದರೆ ಅವರು ಬರೆದಷ್ಟುಅಂಕ ಬರುತ್ತವೆ. ಹೆಚ್ಚು ಅಂಕ ಬರಲು ಉತ್ತರಗಳನ್ನು ಬರೆಸಬೇಕು. ಇಂಗ್ಲೀಷ್‌ ಪರೀಕ್ಷೆ ಬರೆಯುತ್ತಿದ್ದ ಒಬ್ಬ ವಿದ್ಯಾರ್ಥಿಯ ಹತ್ತಿರ ಹೋಗಿ ಕುಳಿತು, ಉತ್ತರ ಬರೆಸಲು ಮುಂದಾದೆ. ಹೀಗೆ ಬರೆಯಬೇಕು ಎಂದು ಹೇಳುವುದು ನನ್ನ ಇಂಗಿತವಾಗಿತ್ತು. ತಕ್ಷಣ ಆ ವಿದ್ಯಾರ್ಥಿ – “ಇಲ್ಲ ಸರ್‌, ನಾನೇ ಬರೆಯುತ್ತೇನೆ’ ಎಂದು ಹೇಳಿದಾಗ ನಾನು ಅನುಭವಿಸಿದ ಪರಿಸ್ಥಿತಿಯನ್ನು ಹೇಗೆ ವಿವರಿಸಲಿ? ಅದನ್ನು ವಿಶ್ಲೇಷಣೆ ಮಾಡುವುದಾದರೂ ಹೇಗೆ? ನನಗೆ ನಾನೇ ಅವಮಾನ ಮಾಡಿಕೊಂಡಂತೆ. ಮುಜುಗರ ಎಂದರೆ ತುಂಬಾ ಚಿಕ್ಕದಾದೀತು! ಪರೀಕ್ಷಾ ಕೊಠಡಿಯಿಂದ ಹೊರಗೆ ಬಂದುಬಿಟ್ಟೆ.

ಆ ವಿದ್ಯಾರ್ಥಿಯ ಬಗ್ಗೆ ಹೆಮ್ಮೆ ಅನಿಸಿತು. ಆ ವಿದ್ಯಾರ್ಥಿಯ ಆತ್ಮವಿಶ್ವಾಸ ಮೆಚ್ಚಿಕೊಂಡು ಖುಷಿಪಟ್ಟೆ. ಕಲಿಕೆ ಎಂದರೆ ಏನು ಎಂಬುದಕ್ಕೆ ಉತ್ತರ ಸಿಕ್ಕಿತ್ತು. ಪರೀಕ್ಷೆಯ ದಿನ ಪ್ರತಿ ವಿದ್ಯಾರ್ಥಿಗೆ ತೋರುವ ವೈಯಕ್ತಿಕ ಕಾಳಜಿಯನ್ನು, ಪ್ರತಿ ದಿನದ ತರಗತಿಯಲ್ಲಿ ಒಂದು ಗಂಟೆ ತೋರಿಸಿದರೆ ಸಾಕು; ಮಕ್ಕಳು ಕಲಿಯುತ್ತಾರೆ. ಅವರ ಮುಂದೆ ಮಂಡಿಯೂರುವ ದೈನೇಸಿತನ ಶಿಕ್ಷಕರಿಗೆ ಎದುರಾಗುವುದಿಲ್ಲ ಎಂಬುದರ ಅರಿವಾಯಿತು.

 

-ಸೋಮು ಕುದರಿಹಾಳ,
ಶಿಕ್ಷಕರು, ಲಕ್ಷ್ಮೀಕ್ಯಾಂಪ್‌
ಕುಂಟೋಜಿ, ಗಂಗಾವತಿ ತಾ

Advertisement
Advertisement

Udayavani is now on Telegram. Click here to join our channel and stay updated with the latest news.

Next