Advertisement

ಸವಾಲಿನ ನಡುವೆ ಶಿಕ್ಷಕರ ದಿನಾಚರಣೆ

11:05 PM Sep 04, 2020 | mahesh |

ಇಂದು ಸಮಾಜ ಮತ್ತು ಸರಕಾರ ಶಿಕ್ಷಕರಿಗೆ ಬೆನ್ನೆಲುಬಾಗಿ ನಿಲ್ಲಬೇಕಾದ ಅಗತ್ಯವಿದೆ.  ಅವರ ಸಮಸ್ಯೆಗ ಳಿಗೆ ತ್ವರಿತವಾಗಿ ಸ್ಪಂದಿಸಬೇಕಿದೆ. ಶಿಕ್ಷಣ ಕ್ಷೇತ್ರಕ್ಕೆ ಮರುವೇಗ ನೀಡುವ ಈ  ಯೋಧರಿಗೆ ಅಸೌಖ್ಯ, ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ.

Advertisement

ಕೋವಿಡ್‌ ಸಂಕಷ್ಟದ ಕಾಲದಲ್ಲೇ ಶಿಕ್ಷಕರ ದಿನಾಚರಣೆ ಎದುರಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಈ ರೀತಿಯ ಸವಾಲನ್ನು ಶಿಕ್ಷಣ ವಲಯ ಎಂದೂ ಎದುರಿಸಿರಲಿಲ್ಲ. ಖಾಸಗಿ ಶಾಲೆಗಳು, ಸರಕಾರಿ ಶಾಲೆಗಳು, ಕಾಲೇಜುಗಳು… ಒಟ್ಟಾರೆ ಯಾಗಿ ಶೈಕ್ಷಣಿಕ ರಂಗದ ಪ್ರತಿಯೊಂದು ಹಂತಕ್ಕೂ ಸವಾಲೊಡ್ಡಿ ಬಿಟ್ಟಿದೆ ಪುಟ್ಟ ವೈರಸ್‌.

ಶ್ಲಾಘನೀಯ ಸಂಗತಿಯೆಂದರೆ, ಈ ಅತೀವ ಸವಾಲುಗಳ ನಡುವೆಯೇ ನಮ್ಮ ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ, ಜತೆಗೆ ವೈಯಕ್ತಿಕ ಸಂಕಷ್ಟವನ್ನೂ ಎದುರಿಸುತ್ತಿದ್ದಾರೆ. ಹೊಸ ಸಹಜತೆಯ ಜತೆಗೆ ಹೆಜ್ಜೆಹಾಕಲೇಬೇಕಾದ ಅನಿವಾರ್ಯತೆ ಇದೆ. ಈ ಕಾರಣಕ್ಕಾಗಿಯೇ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಇಲಾಖೆ ವಿದ್ಯಾಗಮದಂಥ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಇದರಡಿಯಲ್ಲಿ ಶಿಕ್ಷಕರು ಗ್ರಾಮಗಳಿಗೆ ತೆರಳಿ, ವಿದ್ಯಾರ್ಥಿಗಳಿಗೆ ಪಾಠ ಮಾಡಿಬರುತ್ತಿದ್ದಾರೆ. ಸರಕಾರವು ಚಂದನ ವಾಹಿನಿಯ ಮೂಲಕವೂ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದೆ.

ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಶಿಕ್ಷಕರು ಕೋವಿಡ್‌ಗೆ ತುತ್ತಾಗಿರುವುದರಿಂದ ಸಹಜವಾಗಿಯೇ ಬೋಧಕರಲ್ಲಿ ಆತಂಕವಿದೆ. ಅಗತ್ಯ ಸುರಕ್ಷಾ ಪರಿಕರಗಳ ಅಲಭ್ಯತೆಯೂ ಅವರಲ್ಲಿನ ಆತಂಕವನ್ನು ಹೆಚ್ಚಿಸುತ್ತಿದೆ.

ಇನ್ನೊಂದೆಡೆ ಖಾಸಗಿ ಶಿಕ್ಷಣ ವಲಯಕ್ಕೂ ಇದು ಪರೀಕ್ಷೆಯ ಸಮಯವೇ. ಖಾಸಗಿ ಶಾಲೆಗಳಿಂದು ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ. ಇದರ ನೇರ ಪರಿಣಾಮ ಅಲ್ಲಿನ ಶಿಕ್ಷಕರ ಮೇಲೆ ಆಗತೊಡಗಿದೆ. ಕೆಲವು ಶಾಲೆಗಳಲ್ಲಂತೂ ಐದಾರು ತಿಂಗಳಿಂದ ಸಂಬಳವೇ ಸಿಗದೇ, ಶಿಕ್ಷಕರು ಜೀವನಾಧಾರಕ್ಕಾಗಿ ಅನ್ಯ ಕೆಲಸಗಳತ್ತ ಮುಖ ಮಾಡುವಂತಾಗಿದೆ. ಇವರೆಲ್ಲರ ಸಂಕಷ್ಟಗಳಿಗೆ ಸಮಾಧಾನ ಹೇಳುವ ವಿಚಾರದಲ್ಲಿ ಸರಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ತ್ವರಿತವಾಗಿಯೇ ಚರ್ಚೆ ನಡೆಸಿ, ಮುಂದಡಿ ಇಡಬೇಕಿದೆ.

Advertisement

ಶಿಕ್ಷಣವನ್ನು ಆನ್‌ಲೈನ್‌ ಮಾಡುವ ವಿಚಾರದಲ್ಲಿ ಈಗಲೂ ಹಲವಾರು ಅಡ್ಡಿಗಳಿವೆ. ನೆಟ್‌ವರ್ಕ್‌ ಸಮಸ್ಯೆ ಒಂದೆಡೆಯಾ ದರೆ, ರಾಜ್ಯದ ವಿದ್ಯಾರ್ಥಿ ಕುಟುಂಬಗಳ ಬಳಿ ಅಗತ್ಯ ಫೋನ್‌ಗಳು, ಟ್ಯಾಬ್‌ಗಳ ಕೊರತೆ ಕಾಡುತ್ತಿದೆ. ಈ ಸಮಸ್ಯೆಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕಿದೆ.

ಬದಲಾವಣೆಯೆನ್ನುವುದು ಜಗದ ನಿಯಮ ಎನ್ನುವ ನಾಣ್ನುಡಿಯೇ ಇದೆ ಯಾದರೂ, ಹಠಾತ್ತನೆ ಈ ಪ್ರಮಾಣದ ಬದಲಾವಣೆಗೆ ಒಗ್ಗಿಕೊಳ್ಳುವುದು ಸುಲಭದ ಕೆಲಸವಲ್ಲ. ಯಾವುದೇ ಬೃಹತ್‌ ಬದಲಾ ವಣೆಯಿರಲಿ, ಆರಂಭದಲ್ಲಿ ಅದು ಬಹಳ ಅಸೌಖ್ಯವನ್ನುಂಟು ಮಾಡುತ್ತದೆ ಎನ್ನುವುದು ಸತ್ಯ.

ಈ ಕಾರಣಕ್ಕಾಗಿಯೇ, ಇಂದು ಸಮಾಜ ಮತ್ತು ಸರಕಾರ ಶಿಕ್ಷಕರಿಗೆ ಬೆನ್ನೆಲುಬಾಗಿ ನಿಲ್ಲಬೇಕಾದ ಅಗತ್ಯವಿದೆ. ಅವರ ಸಮಸ್ಯೆಗ ಳಿಗೆ ತ್ವರಿತವಾಗಿ ಸ್ಪಂದಿಸಬೇಕಿದೆ. ಶಿಕ್ಷಣ ಕ್ಷೇತ್ರಕ್ಕೆ ಮರುವೇಗ ನೀಡುವ ಈ ಯೋಧರಿಗೆ ಅಸೌಖ್ಯ, ತೊಂದರೆ ಯಾಗದಂತೆ ನೋಡಿಕೊಳ್ಳಬೇಕಿದೆ. ಪಾಠಕ್ಕಿಂತ ಪಠ್ಯೇತರ ಹೊರೆಯೂ ಹೆಚ್ಚಾಗುತ್ತಿದೆ ಎನ್ನುವ ದೂರುಗಳೂ ಕೇಳಿಬರು ತ್ತಿದ್ದು, ಶಿಕ್ಷಕರ ಮೇಲಿಂದ ಈ ಭಾರವನ್ನು ತಗ್ಗಿಸಲು ಸರಕಾರ ಮುಂದಾಗಬೇಕು.

ಕೊರೊನಾ ವಾರಿಯರ್‌ಗಳ ಬಗ್ಗೆ ಚರ್ಚೆ ನಡೆಯುವಾಗಲೆಲ್ಲ ಶಿಕ್ಷಕರ ಹೆಸರು ಕೊನೆಗೆ ಬರುತ್ತಿರುವುದು ಬೇಸರದ ಸಂಗತಿ. ಎಲ್ಲ ಸಂಕಷ್ಟಗಳ ನಡುವೆಯೂ ನವಪೀಳಿಗೆಗೆ ಭದ್ರ ಜ್ಞಾನ ಬುನಾದಿ ಹಾಕಲು ಕಟಿಬದ್ಧರಾಗಿರುವ ಈ ವರ್ಗಕ್ಕೆ ಇಡೀ ಸಮಾಜ ಋಣಿಯಾಗಬೇಕು. ಈಗಿನ ಸಂಕಷ್ಟಗಳೆಲ್ಲ ಆದಷ್ಟು ಬೇಗನೇ ಬಗೆಹರಿಯುವಂತಾಗಲಿ ಎಂದು ಆಶಿಸೋಣ. ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

Advertisement

Udayavani is now on Telegram. Click here to join our channel and stay updated with the latest news.

Next