Advertisement

ಟಿಡಿಆರ್‌ ಹಗರಣದ ದಾಖಲೆಗಳು ಭಸ್ಮ?

12:50 AM May 04, 2019 | Lakshmi GovindaRaj |

ಬೆಂಗಳೂರು/ಮಹದೇವಪುರ: ಬಿಬಿಎಂಪಿಯಲ್ಲಿ ನಡೆದಿದೆ ಎನ್ನಲಾದ ಟಿಡಿಆರ್‌ ಹಗರಣದ ತನಿಖೆ ಪ್ರಗತಿಯಲ್ಲಿರುವಾಗಲೇ ಮಹದೇವಪುರ ವಲಯದ ಬೆಳ್ಳಂದೂರಿನ ಎಂಜಿನಿಯರಿಂಗ್‌ ವಿಭಾಗದ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿ, ಮಹತ್ವ ದಾಖಲೆಗಳು ಭಸ್ಮವಾಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Advertisement

ಬೆಳ್ಳಂದೂರು ಉಪವಿಭಾಗದ ಎಂಜಿನಿಯರಿಂಗ್‌ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆ 7.30ರ ಸುಮಾರಿಗೆ ಶಾರ್ಟ್‌ಸರ್ಕಿಟ್‌ನಿಂದ ಸಂಭವಿಸಿದೆ ಎನ್ನಲಾದ ಅಗ್ನಿ ಅವಘಡದಿಂದ ಮಹತ್ವದ ದಾಖಲೆಗಳು, ಕಂಪ್ಯೂಟರ್‌, ಪೀಠೊಪಕರಣಗಳು ಸುಟ್ಟು ಕರಕಲಾಗಿವೆ. ಅಧಿಕಾರಿಗಳು ಶಾರ್ಟ್‌ಸರ್ಕಿಟ್‌ ಕಾರಣ ನೀಡುತ್ತಿದ್ದರೂ, ಬೆಂಕಿ ಅವಘಡದ ಹಿಂದೆ ಟಿಡಿಆರ್‌ ಮಾಫಿಯಾ ಕೆಲಸ ಮಾಡಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಮಹದೇವಪುರ ವಲಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣಲಾಲ್‌ ಅಕ್ರಮವಾಗಿ ಟಿಡಿಆರ್‌ ನೀಡುವ ಮೂಲಕ ಹಗರಣ ನಡೆಸಿದ್ದರು ಎಂಬ ಆರೋಪದ ಮೇಲೆ ಎಸಿಬಿ ದಾಳಿ ನಡೆಸಿತ್ತು. ಜತೆಗೆ ಕೆಲವು ಮಹತ್ವ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಇದೀಗ ಎಸಿಬಿ ತನಿಖೆ ನಡೆಯುತ್ತಿರುವಾಗಲೇ ಬೆಂಕಿ ಅವಘಡ ಸಂಭವಿಸಿ, ಟಿಡಿಆರ್‌ಗೆ ಸಂಬಂಧಿಸಿದ ದಾಖಲೆಗಳು ಸುಟ್ಟುಹೋಗಿವೆ ಎಂದು ಹೇಳುತ್ತಿರುವುದು ಸಂಶಯ ಹುಟ್ಟುಹಾಕಿದೆ.

ಇತ್ತೀಚೆಗೆ ಕೃಷ್ಣಲಾಲ್‌ ಅವರ ಮೇಲೆ ದಾಳಿ ನಡೆಸಿದ್ದ ಎಸಿಬಿ ತಂಡ, ಆತ ಕೆಲಸ ಮಾಡುತ್ತಿದ್ದ ಮಹದೇವಪುರ ವಲಯದ ಎಲ್ಲ ಎಂಜಿನಿಯರಿಂಗ್‌ ವಿಭಾಗಗಳ ಕಚೇರಿಗಳಲ್ಲಿಯೂ ಪರಿಶೀಲನೆ ಆರಂಭಿಸಿತ್ತು. ಅದರಂತೆ ಬೆಳ್ಳಂದೂರಿನ ಕಚೇರಿಯಲ್ಲಿಯೂ ದಾಖಲೆಗಳ ಪರಿಶೀಲನೆ ನಡೆಸಿತ್ತು. ಮತ್ತೂಮ್ಮೆ ದಾಖಲೆಗಳನ್ನು ಪರಿಶೀಲನೆ ನಡೆಸಲು ಎಸಿಬಿ ಮುಂದಾಗಿತ್ತು. ಅದಾಗಲೇ ದಾಖಲೆಗಳು ಬೆಂಕಿಯಲ್ಲಿ ಸುಟ್ಟುಹೋಗಿರುವುದರಿಂದ ತನಿಖೆಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ವರದಿ ನೀಡುವಂತೆ ಆಯುಕ್ತರ ಆದೇಶ: ಬೆಳ್ಳಂದೂರು ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಬಿದ್ದಿರುವುದು ಸಾಕಷ್ಟು ಸಂಶಯಗಳನ್ನು ಹುಟ್ಟುಹಾಕಿರುವ ಹಿನ್ನೆಲೆಯಲ್ಲಿ ಮಹದೇವಪುರ ಜಂಟಿ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಆದೇಶಿಸಿದ್ದಾರೆ. ಬೆಂಕಿ ಅನಾಹುತಕ್ಕೆ ನಿಖರ ಕಾರಣವೇನು? ಅದರಿಂದ ಯಾವೆಲ್ಲ ದಾಖಲೆಗಳು ಸುಟ್ಟಿವೆ? ಎಂಬುದರ ಬಗ್ಗೆ ವರದಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಅದರಂತೆ ಶನಿವಾರ ಬೆಳಗ್ಗೆ ಜಂಟಿ ಆಯುಕ್ತರು ವರದಿ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ.

Advertisement

ಸಂಶಯ ಮೂಡಲು ಕಾರಣವೇನು?: ಬೆಳ್ಳಂದೂರು ಉಪ ವಲಯ ಕಛೇರಿಯ ನೆಲ ಮಹಡಿಯಲ್ಲಿ ಪಾಲಿಕೆ ಸದಸ್ಯರ ಕಚೇರಿಯಿದ್ದು, ಮೊದಲ ಮಹಡಿಯಲ್ಲಿ ನಾಡ ಕಚೇರಿಗೆ ಹೊಂದಿಕೊಂಡು ಎಂಜಿನಿಯರಿಂಗ್‌ ಕೊಠಡಿಯಿದೆ. ಎಂಜಿನಿಯರಿಂಗ್‌ ಕೊಠಡಿಯಲ್ಲಿ ಕೆಲವೇ ದಿನಗಳ ಹಿಂದೆ ವಿದ್ಯುತ್‌ ವೈರಿಂಗ್‌ ಕೆಲಸ ಮಾಡಲಾಗಿದೆ. ಆದರೂ, ಎಂಜಿನಿಯರಿಂಗ್‌ ಕೊಠಡಿಯಲ್ಲಿ ಮಾತ್ರ ಬೆಂಕಿ ಕಾಣಿಸಿಕೊಂಡಿರುವುದು ಸಂಶಯ ಮೂಡಿಸಿದೆ.

ಇದರೊಂದಿಗೆ ಬೆಳ್ಳಂದೂರು ಸುತ್ತಮುತ್ತಲಿನ ಭಾಗಗಳಲ್ಲಿ ನೂರಾರು ಕಟ್ಟಡಗಳು ನಿರ್ಮಾನವಾಗುತ್ತಿವೆ. ಪರಿಣಾಮ ನಿಯಮಬಾಹಿರವಾಗಿ ಅನುಮತಿ ನೀಡಿರುವ ಬಗ್ಗೆ ಆರೋಪಗಳು ಹಿಂದಿನಿಂದಲೂ ಕೇಳಿಬರುತ್ತಿವೆ. ಅದರ ದಾಖಲೆಗಳು ಸಹ ಎಂಜಿನಿಯರ್‌ ಕೊಠಡಿಯಲ್ಲಿಯೇ ಇದ್ದಿದ್ದರಿಂದ ಮತ್ತಷ್ಟು ಹಗರಣಗಳು ಬಯಲಿಗೆ ಬರಬಹುದು ಎಂಬ ಉದ್ದೇಶದಿಂದ ಕಿಡಿಗೇಡಿಗಳು ಬೆಂಕಿ ಹಾಕಿರಬಹುದು ಎಂಬ ಅನುಮಾನಗಳನ್ನು ಕೆಲ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಕೊಠಡಿಯಲ್ಲಿದ್ದ ದಾಖಲೆಗಳು ಯಾವುವು?: ಬೆಳ್ಳಂದೂರು ಉಪವಿಭಾಗದ ಎಂಜಿನಿಯರಿಂಗ್‌ ಕೊಠಡಿಯಲ್ಲಿ ಲೋಕಾಯುಕ್ತ, ನ್ಯಾಯಾಲಯ ಮತ್ತು ಕಟ್ಟಡ ನಿರ್ಮಾಣ ಮಂಜೂರಾತಿಗೆ ಸಂಬಂಧಿಸಿದ ಕಡತಗಳನ್ನು ಇರಿಸಲಾಗಿತ್ತು ಎಂದು ಹೇಳಲಾಗಿದೆ. ಆ ಪೈಕಿ ಬಹುತೇಕ ಕಡತಗಳು ಸುಟ್ಟು ಹೋಗಿದ್ದು, ಮಹಜರು ಬಳಿಕ ಯಾವ ಕಡತಗಳು ಸುಟ್ಟಿವೆ ಎಂಬುದು ತಿಳಿಯಲಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿಜಿನಿಯರ್‌ ಪ್ರಕಾಶ್‌ ದೂರು ದಾಖಲಿಸಿದ್ದಾರೆ.

ಬೆಳ್ಳಂದೂರು ಎಂಜಿನಿಯರಿಂಗ್‌ ವಿಭಾಗದಲ್ಲಿ ಬೆಂಕಿ ಅವಘಡ ಸಂಭವಿಸಿರುವ ಬಗ್ಗೆ ವರದಿ ನೀಡುವಂತೆ ಜಂಟಿ ಆಯುಕ್ತರಿಗೆ ಆದೇಶಿಸಿದ್ದು, ಜಂಟಿ ಆಯುಕ್ತರು ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಧಿಕಾರಿಗಳು ನೀಡುವ ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಪಾಲಿಕೆ ಆಯುಕ್ತರು

ಎಂಜಿನಿಯರಿಂಗ್‌ ಕೊಠಡಿಯಲ್ಲಿದ್ದ ಲೋಕಯುಕ್ತ, ನ್ಯಾಯಾಲಯ ಮತ್ತು ಕಟ್ಟಡ ನಿರ್ಮಾಣದ ಮಂಜೂರಾತಿಗೆ ಸಂಬಂಧಿಸಿದ ಕಡತಗಳು ಸುಟ್ಟು ಹೋಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮಹಜರು ಮಾಡಿದ ಬಳಿಕ ಯಾವ ಕಡತಗಳು ಸುಟ್ಟಿವೆ ಎಂಬ ಮಾಹಿತಿ ದೊರೆಯಲಿದೆ.
-ಶೋಭಾ, ಮಹದೇವಪುರ ವಲಯ ಜಂಟಿ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next