Advertisement

ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಾಳೆ

09:58 PM Dec 20, 2019 | Lakshmi GovindaRaj |

ಪಿರಿಯಾಪಟ್ಟಣ: ಕನ್ನಡ ಸಾಹಿತ್ಯ ಪರಿಷತ್‌(ಕಸಾಪ) ತಾಲೂಕು ಘಟಕದಿಂದ 22ರಂದು ತಾಲೂಕಿನ ಬೆಟ್ಟದಪುರದ ಕನ್ನಡ ಮಠದ ಆವರಣದಲ್ಲಿ ಅಕ್ಕಮಹಾದೇವಿ ಕ್ರೀಡಾಂಗಣದಲ್ಲಿ ಜರುಗಲಿರುವ 3ನೇ ತಾಲೂಕು ಕಸಾಪದ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ. ಕಳೆದ ಬಾರಿ ಜಿಲ್ಲಾ ಕನ್ನಡ ಸಮ್ಮೇಳನ ಆಯೋಜಿಸಿ ಯಶಸ್ವಿಯಾಗಿರುವ ತಾಲೂಕು ಕಸಾಪ ಘಟಕ, ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳ ಸಹಭಾಗಿತ್ವದಲ್ಲಿ 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಸಿದ್ಧಗೊಂಡಿದೆ.

Advertisement

ಸಮ್ಮೇಳನಕ್ಕೆ ಸಂಬಂಧಿಸಿದಂತೆ ಸಮಿತಿಗಳನ್ನು ರಚಿಸಿದ್ದು, ಅಧಿಕಾರಿಗಳು ಹಾಗೂ ಕಸಾಪ ಪದಾಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರುಗಳನ್ನು ಸಮಿತಿಗೆ ಸಂಚಾಲಕರಾಗಿ ನೇಮಿಸಿದೆ. ಆಯಾ ಸಮಿತಿಗಳಿಗೆ ವಹಿಸಿದ ಕೆಲಸ ಕಾರ್ಯಗಳು ಭರದಿಂದ ಸಾಗಿದ್ದು, ಕೊನೆಯ ಹಂತದ ಸಿದ್ಧತೆ ನಡೆದಿದೆ.

ತೃತೀಯ ತಾಲೂಕು ಸಮ್ಮೇಳನ: ತಾಲೂಕು ಕಸಾಪ ಘಟಕ, ಈಗಾಗಲೇ ಪಟ್ಟಣದಲ್ಲಿ ಮೊದಲ ಹಾಗೂ ರಾವಂದೂರಿನಲ್ಲಿ ದ್ವಿತೀಯ ಸಮ್ಮೇಳನಗಳನ್ನು ಆಯೋಜಿಸಿ ಯಶಸ್ವಿಯಾಗಿದೆ. ಈಗ ಹೋಬಳಿ ಕೇಂದ್ರಗಳಲ್ಲಿ ಐತಿಹಾಸಿಕ ಹಿನ್ನೆಲೆ, ಪ್ರವಾಸಿ ತಾಣ ಮತ್ತು ವ್ಯಾಪಾರ ವಹಿವಾಟಿನಲ್ಲಿ ಪ್ರಸಿದ್ಧಿ ಪಡೆದಿರುವ ಬೆಟ್ಟದಪುರದಲ್ಲಿ ಸಮ್ಮೇಳನಕ್ಕೆ ಸಿದ್ಧವಾಗಿದ್ದು, ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ಪಡೆದಿದೆ. ಇದಕ್ಕಾಗಿ ತಾಲೂಕು ಹಾಗೂ ಸ್ಥಳೀಯ ಮಟ್ಟದಲ್ಲಿ ಪೂರ್ವಭಾವಿ ಸಭೆಗಳನ್ನು ಆಯೋಜಿಸಿ, ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಜತಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಕಾರ್ಯಕ್ರಮಗಳ ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ.

ವಿವಿಧ ಕಾರ್ಯಕ್ರಮಗಳು: ಕಲಾ ತಂಡ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ, ಧ್ವಜಾರೋಹಣ, ಉದ್ಘಾಟನೆ, ಕವಿಗೋಷ್ಠಿ, ವಿಚಾರಗೋಷ್ಠಿ, ಸಮಾನಾಂತರ ಗೋಷ್ಠಿ, ಅಭಿನಂದನೆ ಸಮಾರಂಭ ಸೇರಿದಂತೆ ಮಕ್ಕಳ ಗೋಷ್ಠಿ ಮುಖಾಂತರ ಕಾವ್ಯ ಪ್ರಸ್ತುತಿ ನಡೆಯಲಿದೆ. ಉಪನ್ಯಾಸ, ಶಾಲಾ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ತಾಲೂಕಿನಲ್ಲಿ ಕಸಾಪ ವತಿಯಿಂದ ದ್ವಿತೀಯ ಕುವೆಂಪು ಪುತ್ಥಳಿ ಅನಾವರಣ, ರಸ್ತೆ ಹಾಗೂ ವೃತ್ತಗಳಿಗೆ ಕವಿ ಸಾಹಿತಿಗಳ ಹೆಸರು ನಾಮಕರಣ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈಗಾಗಲೇ ಸಮ್ಮೇಳನದ ವಿಶೇಷ ಲಾಂಛನ ಬಿಡುಗಡೆಗೊಳಿಸಿದ್ದು, ಲಾಂಛನದಲ್ಲಿ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿನ ಜ್ಯೋತಿರ್ಲಿಂಗಕ್ಕೆ ಕಾಮಧೇನು ಕ್ಷೀರಾಭಿಷೇಕ, ಬೆಟ್ಟದ ಸುಂದರ ನೋಟ, ತಾಲೂಕಿನ ಹೆಸರಾಂತ ಮಸಣಿಕಮ್ಮ ಹಾಗೂ ಕನ್ನಂಬಾಡಿಯಮ್ಮ ದೇವರ ಚಿತ್ರವಿದೆ. ಆಹ್ವಾನ ಪತ್ರಿಕೆ ವಿಶೇಷವಾಗಿ ತಯಾರಾಗಿದ್ದು ಸಮಾರಂಭಕ್ಕೆ ಆಗಮಿಸುವ ಗಣ್ಯರ ಆಹ್ವಾನ ಕಾರ್ಯ ನಡೆದಿದೆ. ಒಟ್ಟಾರೆ ತಾಲೂಕಿನ ಬೆಟ್ಟದಪುರದಲ್ಲಿ ನಡೆಯಲಿರುವ 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಮಿತಿಗಳ ಪೂರ್ವ ಸಿದ್ಧತೆ ಸಭೆಗಳು ಸೇರಿದಂತೆ ಇತರೆ ಕಾರ್ಯಗಳ ಸಿದ್ಧತೆಗಳು ಭರದಿಂದ ಸಾಗಿವೆ.

Advertisement

ಒಟ್ಟು 21 ಸಮಿತಿಗಳ ಕಾರ್ಯನಿರ್ವಹಣೆ: ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸುವ ಉದ್ದೇಶದಿಂದ ಸ್ವಾಗತ, ಹಣಕಾಸು, ಆಹಾರ, ಮೆರವಣಿಗೆ, ಸಾಂಸ್ಕೃತಿಕ, ವೇದಿಕೆ ಸಿದ್ಧತೆ, ನಗರ ಶೃಂಗಾರ ಮತ್ತು ಸ್ವತ್ಛತೆ, ಸ್ವಯಂ ಸೇವಕರ ನಿರ್ವಹಣೆ, ಪ್ರಚಾರ, ಸ್ತಬ್ಧಚಿತ್ರ, ಸಮ್ಮೇಳನ ಪ್ರಚಾರ ರಥ, ಸ್ಮರಣ ಸಂಚಿಕೆ, ಆಹ್ವಾನ ಪತ್ರಿಕೆ ವಿತರಣೆ, ವಸ್ತು ಪ್ರದರ್ಶನ, ಸಾಹಿತಿಗಳ ಭಾವಚಿತ್ರ ಸಿದ್ಧತೆ, ಆರೋಗ್ಯ, ಪುಸ್ತಕ ಮಳಿಗೆ, ಮಹಿಳಾ ಸಮಿತಿ, ಮೇಲುಸ್ತುವಾರಿ, ಸನ್ಮಾನ, ಸದಸ್ಯತ್ವ ನೋಂದಣಿ ಸೇರಿದಂತೆ ಒಟ್ಟು 21 ಸಮಿತಿಗಳನ್ನು ರಚಿಸಿ ಪ್ರತಿ ಸಮಿತಿಯಲ್ಲೂ ಸರ್ಕಾರಿ ಅಧಿಕಾರಿ, ಜನಪ್ರತಿನಿಧಿಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಸಂಚಾಲಕರುಗಳನ್ನು ನೇಮಿಸಲಾಗಿದೆ.

ಸಮ್ಮೇಳನಾಧ್ಯಕ್ಷ ವಸಂತರಾಜೇ ಅರಸ್‌: ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಗೆ ಹಲವು ಹೆಸರುಗಳು ಮುಂಚೂಣಿಯಲ್ಲಿದ್ದವು. ಆಯ್ಕೆ ಸಂಬಂಧವೇ ಹಲವು ಬಾರಿ ಸಭೆಗಳನ್ನು ನಡೆಸಲಾಗಿದ್ದು, ಅಂತಿಮವಾಗಿ ತಾಲೂಕಿನ ಬೆಟ್ಟದತುಂಗ ಗ್ರಾಮದ ಹಿರಿಯ ಶಿಕ್ಷಣ ತಜ್ಞ ಟಿ.ಸಿ. ವಸಂತರಾಜೇ ಅರಸ್‌ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಕನ್ನಡ ಸಮ್ಮೇಳನದ ಮೂಲಕ ನಾಡು, ನುಡಿ, ಸಂಸ್ಕೃತಿ ಕುರಿತು ಎಲ್ಲರಿಗೂ ಅರಿವು ಮೂಡಸುವ ಕಾರ್ಯವನ್ನು ಕಸಾಪ ಮಾಡುತ್ತಿದೆ. ಜಿಲ್ಲ ಸಮ್ಮೇಳನ ಸಂಪೂರ್ಣ ಯಶಸ್ವಿಯಾಗಿದ್ದು, ತಾಲೂಕು ಸಮ್ಮೇಳನದ ಯಶಸ್ಸಿಗೆ ಅಗತ್ಯವಿರುವ ಎಲ್ಲ ಸಹಕಾರ ನೀಡುತ್ತೇನೆ.
-ಕೆ.ಮಹದೇವ್‌, ಶಾಸಕ

ಕಸಾಪದ ಇತಿಹಾಸದಲ್ಲಿ ಪಿರಿಯಾಪಟ್ಟಣ, ರಾಜ್ಯಕ್ಕೆ ಹತ್ತು ಹಲವು ಪ್ರಥಮಗಳನ್ನು ನೀಡಿದ ಹೆಗ್ಗಳಿಕೆಯಿದೆ. ತಾಲೂಕು ಕಸಾಪ ಘಟಕದಿಂದ 3ನೇ ಸಮ್ಮೇಳನವನ್ನು ಬೆಟ್ಟದಪುರದಲ್ಲಿ ಆಯೋಜಿಸಿದೆ. ಇಲ್ಲಿ ಸ್ಥಳೀಯ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು.
-ಡಾ.ವೈ.ಡಿ. ರಾಜಣ್ಣ, ಕಸಾಪ ಜಿಲ್ಲಾಧ್ಯಕ್ಷರು

ಕೆ.ಮಹದೇವ್‌ ಮಾರ್ಗದರ್ಶನದಲ್ಲಿ ಕಳೆದ ವರ್ಷ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜಿಸಿ ಯಶಸ್ವಿಗೊಳಿಸಲಾಗಿದೆ. ಈ ಬಾರಿಯೂ ತಾಲೂಕು ಸಮ್ಮೇಳನ ಯಶಸ್ವಿಯಾಗುವ ನಿರೀಕ್ಷೆಯಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಪಾಲಗೊಂಡು ಸಮ್ಮೇಳನ ಯಶಸ್ವಿಗೊಳಿಸಬೇಕು.
-ಗೊರಳ್ಳಿ ಜಗದೀಶ್‌, ಕಸಾಪ ತಾಲೂಕು ಅಧ್ಯಕ್ಷರು

* ಪಿ.ಎನ್‌. ದೇವೇಗೌಡ

Advertisement

Udayavani is now on Telegram. Click here to join our channel and stay updated with the latest news.

Next