Advertisement

ಪಾಲಿಕೆ ನಿರ್ಣಯದಂತೆ ಸ್ವಾಧೀನಾನುಭವ ಪತ್ರ ನಿರ್ಧಾರ

06:31 AM Feb 13, 2019 | Team Udayavani |

ಬೆಂಗಳೂರು: ಬಿಬಿಎಂಪಿ ಈ ಹಿಂದೆ ತೆಗೆದುಕೊಂಡ ನಿರ್ಣಯದಂತೆಯೇ 3,000 ಚದರಡಿ ಮೇಲ್ಪಟ್ಟ ವಿಸ್ತೀರ್ಣದ ಗೃಹಬಳಕೆ ಸಂಪರ್ಕಕ್ಕೆ ಹಾಗೂ 5,000 ಚದರಡಿ ಮೇಲ್ಪಟ್ಟ ವಿಸ್ತೀರ್ಣದ ವಾಣಿಜ್ಯ ಸಂಪರ್ಕಕ್ಕೆ ಮಾತ್ರ ಒಸಿ (ಸ್ವಾಧೀನಾನುಭವ ಪತ್ರ) ಕೇಳುತ್ತಿದ್ದೇವೆ. ಪಾಲಿಕೆಯಿಂದ ಹೊಸ ತಿದ್ದುಪಡಿ ತಂದರೂ ಅದನ್ನು ಪಾಲಿಸಲು ಸಿದ್ಧರಿದ್ದೇವೆ ಎಂದು ಜಲಮಂಡಳಿ ಅಧ್ಯಕ್ಷ ತುಷಾರ ಗಿರಿನಾಥ್‌ ತಿಳಿಸಿದ್ದಾರೆ.

Advertisement

ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈ ಹಿಂದಿನ ಬಿಬಿಎಂಪಿ ನಿರ್ಣಯದಂತೆ ಕುಡಿಯುವ ನೀರು ಹಾಗೂ ಒಳಚರಂಡಿ ಸಂಪರ್ಕ ಬಯಸುವವರಿಗೆ ಒಸಿ ಕೇಳುತ್ತಿದೇವೆ. ಒದಗಿಸದವರಿಗೆ ಮಾಸಿಕ ಶುಲ್ಕದ ಶೇ.50 ರಷ್ಟು ದಂಡ ಹಾಕುತ್ತಿದ್ದೇವೆ. 2400 ಚದರಡಿ ವ್ಯಾಪ್ತಿಯ ನಿವೇಶನದಲ್ಲಿ ನಿರ್ಮಾಣವಾಗುವ ಎಲ್ಲಾ ಮನೆಗಳಿಗೂ ವಿನಾಯ್ತಿ ನೀಡುವ ಸಂಬಂಧ ಬಿಬಿಎಂಪಿ ತಿದ್ದುಪಡಿ ಮಾಡಿದರೆ ಅದನ್ನು ಕೂಡಲೇ ಜಾರಿಗೆ ತರುತ್ತೇವೆ ಎಂದರು.

ಈ ಹಿನ್ನೆಲೆಯಲ್ಲಿ ಸದಸ್ಯರೆಲ್ಲರೂ ಒಮ್ಮತದಿಂದ ಗೃಹಬಳಕೆಗೆ 5,000 ಚ.ಅಡಿ ವಿಸ್ತೀರ್ಣದವರೆಗೂ ಒಸಿ ವಿನಾಯ್ತಿ ಎಂಬ ತಿದ್ದುಪಡಿಯನ್ನು ಶೀಘ್ರದಲ್ಲಿಯೇ ಜಾರಿಗೆ ಆಗ್ರಹಿಸಿದರು. ಇದಕ್ಕೆ ಒಪ್ಪಿದ ಆಯುಕ್ತರು, ಮುಂದಿನ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು. 110 ಹಳ್ಳಿಗಳ ಕುಡಿಯುವ ನೀರಿನ ಯೋಜನೆ ಕುರಿತು ಮಾತನಾಡಿದ ಅವರು, 2023 ವರೆಗೂ ಯಾವುದೇ ಹೊಸ ನೀರು ಬರುವುದಿಲ್ಲ.

ಕಾವೇರಿಯಿಂದ ಬರುತ್ತಿರುವ ನೀರಿನಲ್ಲಿಯೇ ಸೋರಿಕೆಯನ್ನು ತಡೆಗಟ್ಟಿ 110 ಹಳ್ಳಿ ನೀರೊದಗಿಸಬೇಕಿದೆ. ಪ್ರಸ್ತುತ 110 ಹಳ್ಳಿ ನೀರೊದಗಿಸುವ ಯೋಜನೆಯಡಿ ಪ್ರಸ್ತುತ 36 ಹಳ್ಳಿಗಳಿಗೆ ನೀರು ಒದಗಿಸುತ್ತಿದ್ದೇವೆ. ಮುಂದಿನ 2 ವರ್ಷದಲ್ಲಿ ಎಲ್ಲಾ ಹಳ್ಳಿಗಳಿಗೂ ನೀರು ಒದಗಿಸಲಾಗುತ್ತದೆ. ಮೊದಲನೇ ಹಂತಲ್ಲಿ 2019 ಮೇ ಒಳಗೆ ಎಲ್ಲಾ 110 ಹಳ್ಳಿಗಳಿಗೆ ಕೊಳವೆ ಅಳವಡಿಸುವ ಕಾಮಗಾರಿ ಯಶಸ್ವಿಯಾಗಿ ಮುಕ್ತಾಯವಾಗಲಿದೆ ಎಂದು ಹೇಳಿದರು.

ಒಬ್ಬರಿಗೆ 130 ಲೀಟರ್‌ ನೀರು: ನಗರಕ್ಕೆ 1,400 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರತಿಯೊಬ್ಬರಿಗೆ ದಿನಕ್ಕೆ 100 ಲೀಟರ್‌ ಶುದ್ಧ ನೀರು, 25 ರಿಂದ 30 ಲೀಟರ್‌ ಸಂಸ್ಕರಿಸಿದ ನೀರು ಒಟ್ಟು 130 ರಿಂದ 135 ಲೀಟರ್‌ ನೀಡುವುದು ಗುರಿಯಾಗಿದೆ. ನಗರದಲ್ಲಿ ಶೇ.37.5 ರಷ್ಟು ನೀರಿನ ಸೋರಿಕೆ ಇದೆ. ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿವಿಧ ಯೋಜನೆಯಡಿ ಪ್ರಯತ್ನ ಮಾಡಲಾಗುತ್ತಿದೆ. ಹಳೇ ಕೊಳವೆಗಳನ್ನು ಬದಲಾವಣೆ ಮಾಡುವುದಕ್ಕೆ 360 ಕೋಟಿ ರೂ. ಬೇಕಾಗಲಿದೆ. ಅದನ್ನು ಪತ್ರಿ ವರ್ಷ 100 ಕೋಟಿ ರೂ. ಗಳನ್ನು ಹಂತ ಹಂತವಾಗಿ ಜಲಮಂಡಳಿ ಭರಿಸಲಿದೆ ಎಂದು ತಿಳಿಸಿದರು.

Advertisement

ತ್ಯಾಜ್ಯ ನೀರಿನ ಸಮಸ್ಯೆಗೆ ಪರಿಹಾರ: ನಗರಕ್ಕೆ ಕಾವೇರಿಯಿಂದ 1,400 ಎಂಎಲ್‌ಡಿ ಕಾವೇರಿ ನೀರು, 400 ಎಂಎಲ್‌ಡಿ ಕೊಳವೆ ಬಾವಿ ನೀರು ನಗರದಲ್ಲಿ ಪ್ರತಿದಿನ ಪೂರೈಕೆ ಆಗುತ್ತಿದೆ. ಇದರಿಂದ ನಿತ್ಯ 1,440 ಎಂಎಲ್‌ಡಿ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದೆ. ಇದಕ್ಕೆ ಸಮನಾಗಿ ತ್ಯಾಜ್ಯ ನೀರಿನ ಕೊಳವೆಗಳು, ತ್ಯಾಜ್ಯ ಸಂಸ್ಕರಣಾ ಘಟಕಗಳು ನಮ್ಮಲ್ಲಿ ಇಲ್ಲ.

2017ರ ವರೆಗೆ ಕೇವಲ 721 ಎಂಎಲ್‌ಡಿ (ಶೇ.50ರಷ್ಟು) ತ್ಯಾಜ್ಯ ನೀರು ಸಂಸ್ಕರಣಾ ಸಾಮರ್ಥ್ಯದ ಘಟಕಗಳನ್ನು ತೆರೆಯಲಾಗಿದೆ. ಹೀಗಾಗಿಯೇ ರಾಜಕಾಲುವೆ ಹಾಗೂ ಕೆರೆಗಳಿಗೆ ತ್ಯಾಜ್ಯ ನೀರು ನೇರವಾಗಿ ಹರಿಯುತ್ತಿದೆ ಎಂದರು. ಈ ಕುರಿತು ಪರಿಹಾರವಾಗಿ ಜೈಕಾ ವತಿಯಿಂದ ಅನುದಾನ ಪಡೆದು 336 ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಣೆ ಮಾಡುವ 10 ಎಸ್‌ಟಿಪಿ, ಹೆಬ್ಟಾಳ, ವೃಷಭಾವತಿ ವ್ಯಾಲಿ, ದೊಡ್ಡಬೆಲೆ, ಕೆಎನ್‌ಸಿ ವ್ಯಾಲಿಯಲ್ಲಿ 440 ಎಂಎಲ್‌ಡಿ ಸಾಮರ್ಥ್ಯದ ಎಸ್‌ಟಿಪಿ ಘಟಕ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ.

ಜತೆಗೆ ಅಮೃತ್‌ ಯೋಜನೆ ಅಡಿಯಲ್ಲಿ 75 ಎಂಎಲ್‌ಡಿ ಎಸ್‌ಟಿಪಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಕಾಮಗಾರಿಗಳು ಮುಗಿದರೆ 2020ರ ವೇಳೆಗೆ 1,575 ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಣೆ ಮಾಡಲಾಗುವುದು. ಮುಂದೆ 110 ಹಳ್ಳಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರಿಗೆ ಕೆರೆ ಸುತ್ತ ಎಸ್‌ಟಿಪಿ ನಿರ್ಮಾಣಕ್ಕೆ ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಜಿಪಿಎಸ್‌ ವ್ಯವಸ್ಥೆ: ನಗರದಲ್ಲಿರುವ ಜಲಮಂಡಳಿಯ 2.40 ಲಕ್ಷ ಮ್ಯಾನ್‌, 110 ಜಟ್ಟಿಂಗ್‌ ಮಷಿನ್‌ಗಳಿವೆ. ಅವುಗಳಿಗೆ ನಂಬರಿಂಗ್‌ ಮಾಡಿ ಜನವರಿಯಿಂದ ಜಿಪಿಎಸ್‌ ಅಳವಡಿಕೆ ಮಾಡಲಾಗಿದೆ. ಜಟಿಂಗ್‌ ಯಂತ್ರಗಳ ಕೊರತೆ ಹಿನ್ನೆಲೆ 36 ಹೊಸ ಯಂತ್ರ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಒಳಚರಂಡಿ ಹೂಳು ತೆಗೆಯುವುದಕ್ಕೆ ಹೊರ ಗುತ್ತಿಗೆಯಲ್ಲಿ 4 ಬೃಹತ್‌ ತಂತ್ರ ಪಡೆಯಲಾಗುತ್ತಿದೆ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು.

ಇವುಗಳ ಜತೆಗೆ ವಾರ್ಡ್‌ಗಳಲ್ಲಿ ತಿಂಗಳಲ್ಲಿ 1 ನೇ ಹಾಗೂ 3 ನೇ ಸೋಮವಾರ ಎಇಇ, ಎಇಗಳನ್ನು ಒಳಗೊಂಡು ಸಭೆ ನಡೆಸಲು ಸದ್ಯ ವೇಳಾಪಟ್ಟಿ ಸಿದ್ಧಪಡೆಸಿ ವೆಬ್‌ಸೈಟ್‌ನಲ್ಲಿ ಬಿಡುತ್ತೇವೆ. ಈ ಸಭೆಯಲ್ಲಿ ಬಿಬಿಎಂಪಿ ಸದಸ್ಯರು ತಮ್ಮ ವಾರ್ಡ್‌ ಸಮಸ್ಯೆ ಹೇಳಿಕೊಳ್ಳಬಹುದು ಎಂದರು. ಬೇಸಿಗೆಯಲ್ಲಿ ನಗರದಲ್ಲಿ ನೀರಿನ ಬವಣೆ ಉಂಟಾಗುವುದಿಲ್ಲ, ಅಗತ್ಯ ಬಿದ್ದರೆ ಕಾವೇರಿ ಪಂಪಿಂಗ್‌ನಿಂದ ಇನ್ನು 10 ಎಂಎಲ್‌ಡಿ ನೀರನ್ನು ತರಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next