Advertisement

ಬದುಕಲು ಕಲಿಸಿದ ಸಂತ ಸ್ವಾಮಿ ಜಗದಾತ್ಮಾನಂದ

04:47 PM May 07, 2019 | Naveen |
ಭಯ ಎಂಬುದು ನಮ್ಮನ್ನು ತಪ್ಪು ಹಾದಿಯಲ್ಲಿ ಹೆಜ್ಜೆ ಹಾಕದಂತೆ ಪ್ರೇರಣೆ ನೀಡುತ್ತದೆ ಎಂದವರು ಸ್ವಾಮಿ ಜಗದಾತ್ಮಾನಂದ ಸ್ವಾಮೀಜಿ. ಬದುಕು ಎಂದರೇನು, ಬದುಕ ಬೇಕಾದ ರೀತಿ ಯಾವುದು, ಬದುಕಿನಲ್ಲಿ ನಾವು ಎಡವುದು ಎಲ್ಲಿ ಮೊದಲಾದ ಪ್ರಶ್ನೆಗಳಿಗೆ ಅತ್ಯದ್ಭುತ ವ್ಯಾಕ್ಯನವನ್ನು ನೀಡುತ್ತಾರೆ ಸ್ವಾಮೀಜಿ. ತಮ್ಮ ಬದುಕು ಹಾಗೂ ಚಿಂತನೆಗಳ ಮೂಲಕ ಇಂದಿನ ಯುವಪೀಳಿಗೆಗೆ ಆದರ್ಶವಾಗಿದ್ದಾರೆ.
ಹುಟ್ಟಿದ ಪ್ರತಿಯೊಬ್ಬರೂ ಸಾಯಲೇಬೇಕು. ಸಾವೆಂದರೆ ಒರೆಯಿಂದ ಖಡ್ಗ ತೆಗೆದಂತೆ. ಹೊರಗಿನ ಚೀಲವನ್ನು ಬಿಟ್ಟು ಒಳಗಿನ ಜೀವಾತ್ಮ ಹೊರಹೋಗುವುದೇ ಸಾವು ಎಂದವರು ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಸಂಸ್ಥಾಪಕರಾದ ಶ್ರೀ ಸ್ವಾಮಿ ಜಗದಾತ್ಮಾನಂದ.
ಆಂತರ್ಯದಲ್ಲಿದೆ ಅಪಾರ ಶಕ್ತಿ
ಮನುಷ್ಯನ ಆಳವಾದ ಆಂತರ್ಯದಲ್ಲಿ ಅಪಾರವಾದ ಶಕ್ತಿಯಿದೆ. ಯಾವುದನ್ನು ಬೇಕಾದರೂ ಪಡೆಯಬಲ್ಲ. ಆತನಿಗೆ ಆ ಶಕ್ತಿಯಿದೆ. ಆದರೆ ವಾಸ್ತವ ಏನೆಂದರೆ ತನ್ನಲ್ಲಿ ಆ ಅಪಾರ ಶಕ್ತಿಯಿದೆ ಎನ್ನುವುದರಲ್ಲಿಯೇ ಆತನಿಗೆ ನಂಬಿಕೆಯಿಲ್ಲ. ತನ್ನ ಬಗ್ಗೆ ತಾನೇ ಒಂದು ಸಂಕುಚಿತ ಭಾವನೆಯನ್ನು ಇಟ್ಟುಕೊಂಡು ಆತ ಬದುಕುತ್ತಿದ್ದಾನೆ. ಕಣ್ಣಿಗೆ ಕೈ ಮುಟ್ಟಿಕೊಂಡು ಕತ್ತಲೆಯೆನ್ನುತ್ತಿದ್ದಾನೆ. ಈ ಕಾರಣಕ್ಕಾಗಿಯೇ ನಾವು ಹಲವು ಬಾರಿ ಸೋತಿದ್ದೇವೆಯೇ ಹೊರತು, ನಮ್ಮಿಂದಾಗದೆ ಅಲ್ಲ ಎನ್ನುವುದು ಜಗದಾತ್ಮಾನಂದರ ನಿಲುವು.
ಚಿಂತೆಯೆಂಬ ಶತ್ರು
ಚಿಂತೆ ಮನುಷ್ಯನನ್ನು ಕಾಡುವ ಬಹುದೊಡ್ಡ ಶತ್ರು. ಆದಿ ಕವಿ ವಾಲ್ಮೀಕಿ ಹೇಳುವಂತೆ ಕೆರಳಿದ ಸರ್ಪವು ಬಾಲಕನನ್ನು ಕಚ್ಚಿ ಕೊಲ್ಲುವಂತೆ, ಚಿಂತೆಯು ಮನುಷ್ಯನನ್ನು ಮುತ್ತಿ, ಮನುಷ್ಯನನ್ನೇ ನಾಶ ಮಾಡುತ್ತದೆ. ಯಾರು ಶೋಕಾಕುಲನೂ ಚಿಂತಾಕ್ರಾಂತನೂ ನಿರುತ್ಸಾಹಿಯೂ ಆಗಿರುತ್ತಾನೋ ಆತನ ಎಲ್ಲ ಕಾರ್ಯಗಳೂ ಹಾಳಾಗುತ್ತವೆ. ಆತ ಬಹಳ ನರಳಬೇಕಾಗುತ್ತದೆ.
ಶ್ರಮಪಡಿ
ಇತಿಹಾಸವನ್ನು ಒಮ್ಮೆ ಮೆಲುಕು ಹಾಕಿ ನೋಡಿ. ಸಾಧನೆ ಮಾಡಿದವರೆಲ್ಲ ಶ್ರಮಪಟ್ಟು ದುಡಿದಿದ್ದಾರೆ. ಎಲ್ಲ ಮರೆತು ಆಸಕ್ತಿ, ಸಂತಸದಿಂದ ಮಾಡುತ್ತಿದ್ದ ಕೆಲಸವೇ ಅವರಿಗೆ ಅಪಾರ ವಿಶ್ವಾಸ ತುಂಬಿದ್ದು. ಎರಡು ಸಾವಿರಕ್ಕೂ ಹೆಚ್ಚು ಯಂತ್ರಗಳನ್ನು ಸೃಷ್ಟಿಸಿ ಅಸಾಧಾರಣ ಎನಿಸಿಕೊಂಡ ಥಾಮಸ್‌ ಆಲ್ವಾ
ಎಡಿಸನ್‌ ಹೇಳಿದಂತೆ, ಆವಿಷ್ಕಾರಗಳು ಆಕಸ್ಮಿಕಗಳಲ್ಲ. ಅವು ನಿರಂತರ ಪರಿಶ್ರಮಕ್ಕೆ ಒಲಿದ ವರಗಳು. ಸತತ ಪರಿಶ್ರಮ ಮತ್ತು ನಿಜವಾದ ಸಫ‌ಲತೆ ಇವೆರಡೂ ಒಡನಾಡಿಗಳು. ಶಬ್ದಕೋಶದಲ್ಲಿ ಮಾತ್ರ ಗೆಲುವು ಶ್ರಮದ ಮೊದಲು ಬರುತ್ತದೆಯೇ ವಿನಃ ನಿಜ ಜೀವನದಲ್ಲಿ ಅಲ್ಲ.
ನಿರ್ದಿಷ್ಟ ಗುರಿ ಇರಲಿ
ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ನಿರ್ದಿಷ್ಟ ಗುರಿ ಇರಬೇಕು. ಆ ಗುರಿ ತಲುಪುತ್ತೇನೆ ಎಂಬ ಅಚಲ ವಿಶ್ವಾಸ ಜತೆಗಿರಬೇಕು. ಮನಸ್ಸು, ಮಾಂಸಖಂಡ, ನರವ್ಯೂಹ ಎಲ್ಲವೂ ಅನುಕಅದನ್ನೇ ಚಿಂತಿಸಬೇಕು. ಆ ಬಗ್ಗೆಯೇ ಕನಸು ಕಾಣುತ್ತಿರಬೇಕು. ಮಹಾತ್ಮರಾಗಲು ಅದೊಂದೇ ದಾರಿ. ಮಹಾತ್ಮರೆನಿಸಿಕೊಳ್ಳಲು ಮತ್ತೊಬ್ಬರಂತೆಯೇ ಬದುಕಬೇಕು ಎಂದಿಲ್ಲ. ನಡೆ-ನುಡಿ, ಆಚಾರ-ವಿಚಾರ, ಸಂಸ್ಕಾರ, ಸಾಮರ್ಥ್ಯಗಳಲ್ಲಿ ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸಗಳಿರುತ್ತವೆ. ಇದರಿಂದಾಗಿ ನಾವು ಯಾರನ್ನೂ ಅನುಕರಣೆ ಮಾಡಬೇಕಿಲ್ಲ. ಇದು ಬಲ್ಲವರ ಮಾತು ಎನ್ನುತ್ತಾರೆ ಸ್ವಾಮೀಜಿ.
ಪ್ರೀತಿ ಅಂದರೆ ಏನು?
ಕೇವಲ ಭಾವಪರವಶತೆ, ಗಂಡು ಹೆಣ್ಣಿನ ಆಕರ್ಷಣೆಯೇ ಪ್ರೀತಿ ಎಂದು ಹಲವರು ಅಂದುಕೊಂಡಿದ್ದಾರೆ. ಕಾಮ ಮತ್ತು ಸೌಂದರ್ಯ ಭಾವನೆಗಳಿಂದ ಬಿಡಿಸಿ ಪ್ರೀತಿಯ ಸ್ವರೂಪವನ್ನು ತಿಳಿದುಕೊಳ್ಳಬೇಕು. ಪ್ರೀತಿ ಎಂದರೆ ನಾವು ಅರ್ಥೈಸುವ ಭಾವಪರವಶತೆಯೋ ತನ್ನ ಅಧೀನದಲ್ಲಿರಿಸಿಕೊಳ್ಳುವ ಭಾವೋದ್ವೇಗವೋ ಅಲ್ಲ. ಪ್ರತಿಯೊಬ್ಬರ ವೈಶಿಷ್ಟ್ಯವನ್ನು ಗುರುತಿಸಿ, ಅವರ ಅಭ್ಯುದಯಕ್ಕಾಗಿ ಶುಭಸಂಕಲ್ಪದೊಂದಿಗೆ ನಿರಂತರ ದುಡಿಯುವ ಪ್ರವೃತ್ತಿ ಎಂಬುದು ಜಗದಾತ್ಮಾನಂದರ ಅಭಿಪ್ರಾಯ.
ದಾಖಲೆಯ ಪುಸ್ತಕ
ಜಗದಾತ್ಮಾನಂದ ಸ್ವಾಮೀಜಿ ಬರೆದ ಬದುಕಲು ಕಲಿಯಿರಿ ಪುಸ್ತಕ ಕನ್ನಡ ಪ್ರಕಾಶನದಲ್ಲಿ ದಾಖಲೆಯನ್ನೇ ನಿರ್ಮಿಸಿದ್ದು, ಮೊದಲನೆಯ ಭಾಗ 1981ರಲ್ಲಿ ಪ್ರಕಟವಾಗಿತ್ತು. 13ನೇ ಮುದ್ರಣ 2003ರಲ್ಲಿ ಪ್ರಕಟವಾಯಿತು. ಈ ವೇಳೆ ಒಟ್ಟೂ 85,000 ಪ್ರತಿಗಳು ಮಾರಾಟವಾಗಿದ್ದವು. ಇದರ 2ನೇ ಭಾಗ 1986ರಲ್ಲಿ ಬೆಳಕಿಗೆ ಬಂತು. ಇದರ 9ನೇ ಮುದ್ರಣ 2002ರಲ್ಲಿ ಪ್ರಕಟವಾಗಿತ್ತು.
ಆರೋಗ್ಯಕರವಾದ ಭೀತಿ ನಮ್ಮನ್ನು ಜಾಗರೂಕರನ್ನಾಗಿ ಮಾಡುತ್ತದೆ
ಕಷ್ಟ, ನೋವು, ನರಳಾಟದಲ್ಲಿ ಸಿಲುಕಿದವರನ್ನು ಕಂಡು ಅವರಿಗೆ ನಮ್ಮಿಂದಾದ ಸಹಾಯ ಮಾಡುವುದು ಸತ್ಕರ್ಮವೆನಿಸುತ್ತದೆ.
ಅತಿರಂಜಿತ, ಕಲ್ಪನಾತ್ಮಕ ಮತ್ತು ನಿಷೇಧಾತ್ಮಕ ಭಯ ಕೆಟ್ಟದ್ದು ಎಂಬುದನ್ನು ನಾವು ಅರಿಯಬೇಕು… 
ನಾವು ಬದುಕು ಎಂದು ತಿಳಿದುಕೊಂಡಿದ್ದು ವೃತ್ತದ ಅರ್ಧಭಾಗ ಮಾತ್ರ. ಇನ್ನರ್ಧ ಭಾಗ ಬದುಕಿನ ಆಚೆಗೆ, ದೇಹಕ್ಕೆ ಅತೀತವಾದ ಅಸ್ತಿತ್ವದಲ್ಲಿ ಅಡಗಿಕೊಂಡಿದೆ.
ಪ್ರಸನ್ನ ಹೆಗಡೆ ಊರಕೇರಿ
Advertisement

Udayavani is now on Telegram. Click here to join our channel and stay updated with the latest news.

Next