Advertisement

“ಮುಂಜಾಗ್ರತಾ ಕ್ರಮ ಅನುಷ್ಠಾನದಲ್ಲಿ ಲೋಪವಾದರೆ ಅಮಾನತು’

09:49 PM Oct 09, 2020 | mahesh |

ಪುತ್ತೂರು: ರಾಜ್ಯದಲ್ಲಿ ಅತಿ ಹೆಚ್ಚು ಕೊರೊನಾ ಬಾಧಿತ ಪ್ರಕರಣ ಹೊಂದಿರುವ ಪಟ್ಟಿಯಲ್ಲಿ ದ.ಕ.ಜಿಲ್ಲೆಯು ಸೇರಿದೆ. ಹೀಗಾಗಿ ಕೊರೊನಾ ಹರಡದಂತೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಅನುಷ್ಠಾನದಲ್ಲಿ ನಿರ್ಲಕ್ಷé ವಹಿಸುವ ಅಧಿಕಾರಿಗಳನ್ನು ತತ್‌ಕ್ಷಣವೇ ಅಮಾನತುಗೊಳಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Advertisement

ಪುತ್ತೂರು ತಾ.ಪಂ.ಸಭಾಂಗಣದಲ್ಲಿ ಅ.9 ರಂದು ನಡೆದ ಕೊರೊನಾ ನಿಯಂತ್ರಣ ಕುರಿತ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು. ಕೊರೊನಾ ನಿಯಂತ್ರಣ ಕುರಿತಂತೆ ಎಲ್ಲೆಡೆ ಗಂಭೀರ ಪ್ರಯತ್ನಗಳು ಆಗಬೇಕಿದೆ. ನಗರಸಭೆ ಮತ್ತು ಗ್ರಾ.ಪಂ.ಮಟ್ಟದಲ್ಲಿ ನಿಯಂತ್ರಣ ಕ್ರಮಗಳು, ಕೊವಿಡ್‌ ಪರೀಕ್ಷೆ ಹಾಗೂ ಕ್ವಾರಂಟೈನ್‌ ನಿಯಮ ಉಲ್ಲಂಘಿಸದಂತೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮ ಪಂಚಾಯತ್‌ ಆಡಳಿತ ಅವಧಿ ಮುಗಿದು ಅಲ್ಲಿ ಆಡಳಿತಾಧಿಕಾರಿ ವ್ಯವಸ್ಥೆ ಇದೆ. ಹೀಗಾಗಿ ಆಡಳಿತಾಧಿಕಾರಿಗಳು ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ, ಕಂದಾಯ ಇಲಾಖೆ ಸಹಕಾರ ಪಡೆದು ಗ್ರಾಮ ಪಂಚಾಯತ್‌ಕಾರ್ಯವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಅವರು ಹೇಳಿದರು.

53 ಮಂದಿ ಸಾವು
ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಕೊರೊನಾದಿಂದ 53 ಮಂದಿ ಮೃತಪಟ್ಟಿದ್ದಾರೆ. ಉಭಯ ತಾಲೂಕುಗಳಲ್ಲಿ ಒಟ್ಟು 2,039 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಈಗ 321 ಸಕ್ರಿಯ ಪ್ರಕರಣಗಳಿವೆ. 283 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಉಳಿದವರು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಪಾಸಿಟಿವ್‌ ಹೊಂದಿರುವವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಗುಣಮುಖರಾಗಿ ತೆರಳಲು ಅಗತ್ಯ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗಬಾರದು ಎಂದು ಜಿಲ್ಲಾಧಿಕಾರಿ ಅವರು ತಾಲೂಕು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದರು.

ಟಾಸ್ಕ್ ಪೋರ್ಸ್‌ ಸಮಿತಿ ನಿರಾಸಕ್ತಿ : ಮಠಂದೂರು
ಕೊರೊನಾ ಪ್ರಾರಂಭಿಕ ಹಂತದಲ್ಲಿ ಅದರ ನಿಯಂತ್ರಣಕ್ಕೆ ಸಂಬಂಧಿಸಿ ಗ್ರಾಮ ಮಟ್ಟದಲ್ಲಿ ಮತ್ತು ನಗರಸಭಾ ಮಟ್ಟದಲ್ಲಿ ಟಾಸ್ಕ್ ಪೋರ್ಸ್‌ ಸಮಿತಿ ರಚಿಸಲಾಗಿತ್ತು. ಲಾಕ್‌ಡೌನ್‌ ಸಂದರ್ಭದಲ್ಲಿ ಕ್ರಿಯಾಶೀಲವಾಗಿದ್ದ ಈ ಸಮಿತಿ ಈಗ ಆಸಕ್ತಿಯಿಂದ ಕೆಲಸ ಮಾಡುತ್ತಿಲ್ಲ. ಕೊರೊನಾ ಸಮುದಾಯಕ್ಕೆ ಹರಡುತ್ತಿದ್ದರೂ, ಗ್ರಾಮಾಂತರ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳು ಪಾಲನೆ ಆಗುತ್ತಿಲ್ಲ. ಇದು ಇನ್ನಷ್ಟು ಆತಂಕ ತಂದೊಡ್ಡಬಲ್ಲುದು ಎಂದು ಶಾಸಕ ಸಂಜೀವ ಮಠಂದೂರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಇಂತಹ ಕರ್ತವ್ಯ ಲೋಪಗಳನ್ನು ಸಹಿಸಲು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊರೊನಾ ನಿಯಂತ್ರಣದ ಕುರಿತಂತೆ ಎಲ್ಲ ವಿವರಗಳನ್ನು ಪಡೆಯುತ್ತಿವೆ. ಅದರ ಮಾರ್ಗ ಸೂಚಿಗಳ ಅನುಷ್ಠಾನಕ್ಕೆ ಸೂಚನೆ ನೀಡುತ್ತಿವೆ. ಅದನ್ನು ಸ್ಥಳೀಯ ಮಟ್ಟದಲ್ಲಿ ಅನುಷ್ಠಾನಿಸಲು ಸ್ಥಳೀಯ ಮಟ್ಟದ ಅಧಿಕಾರಿಗಳು ಮುಂದಾಗಬೇಕು. ಇದು ಜವಾಬ್ದಾರಿ ಎಂದರು.

Advertisement

ಸಹಾಯಕ ಕಮಿಷನರ್‌ ಡಾ| ಯತೀಶ್‌ ಉಳ್ಳಾಲ್‌, ಪುತ್ತೂರು ಉಪವಿಭಾಗದ ಎಎಸ್‌ಪಿ ಲಖನ್‌ ಸಿಂಗ್‌ ಯಾದವ್‌, ತಹಶೀಲ್ದಾರ್‌ ರಮೇಶ್‌ ಬಾಬು, ತಾ.ಪಂ.ಇಒ ನವೀನ್‌ ಕುಮಾರ್‌ ಭಂಡಾರಿ, ಪುತ್ತೂರು ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಉಪಸ್ಥಿತರಿದ್ದರು.

ಉಲ್ಲಂಘನೆ ವಿರುದ್ಧ ಪ್ರಕರಣ ದಾಖಲಿಸಿ
ಕ್ವಾರಂಟೈನ್‌ ನಿಯಮ ಪಾಲಿಸದೆ ಇರುವವರ ವಿರುದ್ಧ ಪೊಲೀಸರ ಸಹಕಾರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ ಅವರು, ಈ ಬಗ್ಗೆ ಯಾವುದೇ ಹಿಂಜರಿಕೆ ಬೇಡ. ಸರಕಾರದ ಸೂಚನೆಗಳನ್ನು ಪ್ರತಿಯೊಬ್ಬರು ಕಡ್ಡಾಯ ಆಗಿ ಪಾಲಿಸಬೇಕು. ರೋಗ ಪಸರಿಸದ ಹಾಗೆ ಆರೋಗ್ಯ ಇಲಾಖೆಯ ಜತೆಗೆ ಜನರ ಸಹಕಾರವು ಅಗತ್ಯ ಎಂದು ಡಿಸಿ ಹೇಳಿದರು.

“ಶಾಲೆಗೆ ಮಕ್ಕಳನ್ನು ಕಳುಹಿಸಲು ಒತ್ತಡ ಹೇರಬೇಡಿ’
ಅ. 15ರಿಂದ ಶಾಲೆಗಳನ್ನು ಪುನಾರಂಭಿಸುವಂತೆ ಸರಕಾರ ಸೂಚನೆ ನೀಡಿದ್ದರೂ ಈ ಬಗ್ಗೆ ಸಂಬಂಧಪಟ್ಟ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪೋಷಕರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಶಾಲೆಗೆ ಮಕ್ಕಳನ್ನು ಕಳುಹಿಸಲೇಬೇಕು ಎಂಬ ಒತ್ತಾಯ ಹೇರಬಾರದು. ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಸ್ಯಾನಿಟೈಸೇಶನ್‌, ಸಾಮಾಜಿಕ ಅಂತರ, ಮಾಸ್ಕ್ ಬಳಕೆ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಕೊರೊನಾ ಮುನ್ನೆಚ್ಚರಿಕೆ ನಿಟ್ಟಿನಲ್ಲಿ ಕೈಗೊಂಡಿರುವ ಯಾವುದೇ ಕ್ರಮಗಳಲ್ಲಿ ಸಡಿಲಿಕೆ ನೀಡುವಂತಿಲ್ಲ. ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೆಬೇಕು ಎಂದು ಜಿಲ್ಲಾಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next