Advertisement

ಹಿಂದುಳಿದ ವರ್ಗಕ್ಕೆ ಸೇರಿದ ಕುಟುಂಬಗಳ ಕುರಿತಾಗಿಯೂ ಸಮೀಕ್ಷೆ ನಡೆಯಲಿ 

07:20 AM Aug 01, 2017 | |

ಕಾಪು: ಕಾಪು ಪುರಸಭೆ ವ್ಯಾಪ್ತಿಯಲ್ಲಿರುವ ಎಲ್ಲ ಹಿಂದುಳಿದ ವರ್ಗಗಳ ಕುಟುಂಬಗಳ ಕುರಿತಾಗಿ ಸಮಗ್ರ ಸಮೀಕ್ಷೆ ನಡೆಸಬೇಕು. ಆ ಮೂಲಕ ಹಿಂದುಳಿದ ವರ್ಗಗಳ ಕುಟುಂಬದ ವಸತಿ ಹಾಗೂ ಶೌಚಾಲಯ ರಹಿತರನ್ನು ಗುರುತಿಸಿ ಆದ್ಯತೆ ಮೇರೆಗೆ ಸೌಲಭ್ಯ ಒದಗಿಸಲು ಪುರಸಭೆ ವತಿಯಿಂದ ಕ್ರಮ ಕೈಗೊಳ್ಳಬೇಕು ಎಂದು ಕಾಪು ಪುರಸಭೆಯ ವಿರೋಧ ಪಕ್ಷದ ನಾಯಕ ಅರುಣ್‌ ಶೆಟ್ಟಿ  ಆಗ್ರಹಿಸಿದರು.

Advertisement

ಕಾಪು ಪುರಸಭೆಯ ಅಧ್ಯಕ್ಷೆ ಕು| ಸೌಮ್ಯಾ ಅವರ ಅಧ್ಯಕ್ಷತೆಯಲ್ಲಿ ಜು. 31ರಂದು ನಡೆದ ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳಲ್ಲಿರುವ ಬಡ ಕುಟುಂಬಗಳ ಪಟ್ಟಿಯನ್ನು ಸಿದ್ಧ ಪಡಿಸದೇ ಇರುವುದರಿಂದ ಅವರಿಗೆ ಅನ್ಯಾಯ ಮಾಡಿದಂತಾಗುತ್ತಿದೆ. ಈ ಬಗ್ಗೆ ಪುರಸಭೆ ತತ್‌ಕ್ಷಣ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಮುಖ್ಯಾಧಿಕಾರಿ ರಾಯಪ್ಪ ಅವರು ಇದಕ್ಕೆ ಉತ್ತರಿಸಿ, ಪುರಸಭಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಪಟ್ಟಿಯೇ ಇದುವರೆಗೆ ಸಿದ್ಧವಾಗಿಲ್ಲ. ಪ್ರಸ್ತುತ ಈ ಕುಟುಂಬಗಳ ಸಮೀಕ್ಷೆ ನಡೆಸಲಾಗುತ್ತಿದ್ದು, ಬಳಿಕ ಹಿಂದುಳಿದ ವರ್ಗಗಳ ಸ್ಥೂಲವಾದ ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದರು.

ಸದಸ್ಯರ ಗಮನಕ್ಕೆ 
ತಾರದೇ ಫಲಾನುಭವಿಗಳ ಪಟ್ಟಿ ರಚನೆ

ಪುರಸಭೆ ವ್ಯಾಪ್ತಿಯಲ್ಲಿ ಸದಸ್ಯರ ಗಮನಕ್ಕೆ ತಾರದೆಯೇ ಪಕ್ಕಾಮನೆ ನಿರ್ಮಾಣದ ಫಲಾನುಭವಿಗಳ ಪಟ್ಟಿ ತಯಾರಿಸಲಾಗಿದೆ. ಅಸಮರ್ಪಕ ರೀತಿಯಲ್ಲಿ ತಮಗಿಷ್ಟ ಬಂದಂತೆ ತಯಾರಿಸಿದ ಪಟ್ಟಿಯನ್ನು ತಡೆಹಿಡಿಯಬೇಕು ಎಂದು ವಿಪಕ್ಷ ಸದಸ್ಯ ಕಿರಣ್‌ ಆಳ್ವ ಒತ್ತಾಯಿಸಿದರು.

ವಸತಿ ಯೋಜನೆಯಲ್ಲಿ ಈಗಾಗಲೇ 138 ಮನೆಗಳು ಮಂಜೂರಾಗಿದ್ದು, 42 ಫಲಾನುಭವಿಗಳು ಇನ್ನೂ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿಲ್ಲ. ಇದರಿಂದ ಅನುದಾನ ಸ್ಥಗಿತವಾಗುವ ಸಾಧ್ಯತೆಗಳಿವೆ. ಮನೆ ಪೂರ್ಣಗೊಳಿಸಿದ ಫಲಾನುಭವಿಗಳಿಗೆ ಶೀಘ್ರ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುವುದು. ಪಕ್ಕಾ ಮನೆ ನಿರ್ಮಾಣಕ್ಕಾಗಿ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಸದಸ್ಯರ ಒಪ್ಪಿಗೆ ಪಡೆದು ಮಂಜೂರಾತಿ ನೀಡಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.

Advertisement

ಸದಸ್ಯರ ಬಗ್ಗೆ ಜನರಿಗೆ 
ಸಂಶಯ ನಿವಾರಿಸಿ

ಪುರಸಭಾ ವ್ಯಾಪ್ತಿಯಲ್ಲಿ ನಡೆದಿರುವ ಕೆಲವೊಂದು ಕಾಮಗಾರಿಗಳ ಗುಣಮಟ್ಟ ಮತ್ತು ಅನುಷ್ಠಾನದ ರೀತಿಯ ಬಗ್ಗೆ ಸಾರ್ವಜನಿಕರಲ್ಲಿ ಸಂಶಯಗಳು ಎದ್ದಿವೆ. ಇದನ್ನು ಪ್ರಶ್ನಿಸುವಲ್ಲಿ ಸದಸ್ಯರು ವಿಫಲರಾಗಿದ್ದಾರೆ, ಸದಸ್ಯರಿಗೂ ಲಾಭ ಮಾಡಿದ್ದಾರೆ ಎಂಬಿತ್ಯಾದಿ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ ಎಂದು ಸದಸ್ಯ ಅನಿಲ್‌ ಕುಮಾರ್‌ ಆರೋಪಿಸಿದರು. 

ಕಾಪು ಪಡುಗ್ರಾಮದ ನಡೆಯುತ್ತಿರುವ ಶ್ಮಶಾನ ಕಾಮಗಾರಿಯ ಬಗ್ಗೆ ಸದಸ್ಯರಾದ ಮಮತಾ ಸಾಲ್ಯಾನ್‌, ಅನಿಲ್‌ ಕುಮಾರ್‌, ನಾಗೇಶ್‌ ಸುವರ್ಣ ಮೊದಲಾದವರು ಆಕ್ಷೇಪ ವ್ಯಕ್ತಪಡಿಸಿದರು. ಕಾಮಗಾರಿ ಯನ್ನು ಕಾಟಾಚಾರಕ್ಕೆ ಎಂಬಂತೆ ನಡೆಸದೇ ಸ್ವತ್ಛ ಮನಸ್ಸಿನಿಂದ ನಡೆಸುವಂತೆ ಆಗ್ರಹಿಸಿದರು.
 
ಕಾಪು ಪುರಸಭೆ ಉಪಾಧ್ಯಕ್ಷ ಕೆ. ಎಚ್‌. ಉಸ್ಮಾನ್‌, ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್‌ ಮೂಳೂರು, ವ್ಯವಸ್ಥಾಪಕ ಉರ್ಬನ್‌ ಡಿ. ಸೋಜಾ ಮೊದಲಾದವರು ಉಪಸ್ಥಿತರಿದ್ದರು.

ಕಾಪು ಪೇಟೆಯಲ್ಲಿ  ಶೌಚಾಲಯ ನಿರ್ಮಾಣಕ್ಕೆ  ಆಗ್ರಹ
ಕಾಪು ಪೇಟೆಯಲ್ಲಿ ಶೌಚಾಲಯದ ಕೊರತೆಯಿದೆ. ಶೌಚಾಲಯವನ್ನು ನಿರ್ಮಿಸುವಂತೆ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್‌ ಹಮೀದ್‌ ಒತ್ತಾಯಿಸಿದರು. ಪೇಟೆಯಲ್ಲಿ ಜಾಗದ ಕೊರತೆಯಿದೆ. ಸರಿಯಾದ ಜಾಗ ಸಿಕ್ಕಿದಲ್ಲಿ ಶೌಚಾಲಯ ನಿರ್ಮಿಸಲು ಪ್ರಯತ್ನಿಸಲಾಗುವುದು. ಈ ಬಗ್ಗೆ ನಾವು  ಸ್ಥಳ ಸಮೀಕ್ಷೆ ನಡೆಸೋಣ ಎಂದು ರಾಯಪ್ಪ ಹೇಳಿದರು. 

ಹೆದ್ದಾರಿ ದುಸ್ಥಿತಿ ಸರಿಪಡಿಸುವಿಕೆ, ಬೀದಿ ನಾಯಿ ನಿಯಂತ್ರಣ ಸಾಧ್ಯವಿಲ್ಲವೇ 
ಕಲ್ಯ ಕ್ರಾಸ್‌ ಬಳಿಯ ರಾ. ಹೆ. 66ರ ದುಸ್ಥಿತಿ ಮತ್ತು ಬೀದಿ ನಾಯಿ ನಿಯಂತ್ರಣದ ನಿರ್ಣಯದ ಬಗ್ಗೆ ಹಿಂದಿನ ಸಭೆಗಳಲ್ಲಿ ನಡೆದಿರುವ ಚರ್ಚೆಗೆ ಸಂಬಂಧಪಟ್ಟು ಇನ್ನೂ ಕೆಲಸಗಳು ನ‌ಡೆಯುತ್ತಿಲ್ಲ. ಇದನ್ನು ಅನುಷ್ಟಾನಕ್ಕೆ ತರಲು ಸಾಧ್ಯವಿಲ್ಲವೇ ಎಂದು ಸದಸ್ಯ ಲಕ್ಷ್ಮೀಶ ತಂತ್ರಿ ಪ್ರಶ್ನಿಸಿದರು. 

ಹೆದ್ದಾರಿ ಕ್ರಾಸ್‌ ದುರಸ್ಥಿ ಬಗ್ಗೆ ಹೆದ್ದಾರಿ ಇಲಾಖೆ ಮತ್ತು ಪ್ರಾಧಿಕಾರಕ್ಕೆ ಹಲವು ಬಾರಿ ಪತ್ರ ಮುಖೇನ ಮನವಿ ಮಾಡಲಾಗಿದೆ. ಇನ್ನೂ ಸಮರ್ಪಕ ಉತ್ತರ ಸಿಕ್ಕಿಲ್ಲ. ಬೀದಿ ನಾಯಿಗಳ ನಿಯಂತ್ರಣದ ಕುರಿತಾಗಿ ಟೆಂಡರ್‌ ಕರೆಯಲಾಗಿದ್ದು ಟೆಂಡರ್‌ ಆಗಿರುವವರು ಇನ್ನೂ ಕೆಲಸ ಪ್ರಾರಂಭಿಸಿಲ್ಲ. ಸೆಪ್ಟಂಬರ್‌ ಒಳಗೆ ಕಾರ್ಯಯೋಜನೆ ಸಿದ್ಧಪಡಿಸಲಾಗುವುದು ಎಂದರು. 

ಬೀದಿ ದೀಪದ ಆರಿಸುವಲ್ಲಿ ಸದಸ್ಯರ ಸಹಕಾರ ಅಗತ್ಯ
ಪುರಸಭಾ ವ್ಯಾಪ್ತಿಯ ಕೆಲವೆಡೆಗಳಲ್ಲಿ ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ ಎಂದು ಕೆಲವು ಸದಸ್ಯರು ದೂರಿದರು. ಇದಕ್ಕೆ ಮುಖ್ಯಾಧಿಕಾರಿ ರಾಯಪ್ಪ ಪ್ರಕ್ರಿಯಿಸಿ ಬೀದಿ ದೀಪ ಆರಿಸುವ ಬಗ್ಗೆ ಯಾರು ಇಚ್ಚಾಶಕ್ತಿಯನ್ನೇ ಹೊಂದಿಲ್ಲ. ಹಲವಾರು ಕಡೆ ನಾನೇ ಬೀದಿ ದೀಪಗಳನ್ನು ಆರಿಸಿದ್ದೇನೆ. ಸದಸ್ಯರು ಈ ಬಗ್ಗೆ ಸ್ಥಳೀಯರಿಗೆ ಮನವರಿಕೆ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next