Advertisement

ಉಡುಪಿ ಜಿಲ್ಲೆಯಲ್ಲಿ ಮತ್ತೆ ಡೆಂಗ್ಯೂ ಜ್ವರ ಉಲ್ಬಣ

11:47 AM Mar 17, 2017 | Team Udayavani |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಉಡುಪಿಯ ರಾಜೀವ ನಗರ ಹಾಗೂ ಕೊಡಂಕೂರು ಕಾಲನಿ, ಕೊಡವೂರಿನಲ್ಲಿ ಡೆಂಗ್ಯೂ ಜ್ವರ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. 

Advertisement

ಈಗಾಗಲೇ 8 ಮಂದಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಭಾಗಗಳಲ್ಲಿ ನೀರಿನ ಸಮಸ್ಯೆ ಇರುವುದರಿಂದ ಹೆಚ್ಚಾಗಿ ಬ್ಯಾರಲ್‌ಗ‌ಳಲ್ಲಿ ನೀರು ಸಂಗ್ರಹ ಮಾಡುತ್ತಿದ್ದಾರೆ. ಆದರೆ ಅದನ್ನು ಸಮರ್ಪಕವಾಗಿ ಮುಚ್ಚಿಡುವುದಿಲ್ಲ. ವಾರಕ್ಕೊಮ್ಮೆ ಶುದ್ಧ ಮಾಡದೇ ಇರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ.

ನಿಟ್ಟೂರು ನ್ಯೂ ಕಾಲನಿ, ಕೊಡಂಕೂರು, ರಾಜೀವ ನಗರ ಭಾಗದ ಜನರು ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಡೆಂಗ್ಯೂ ಜ್ವರದಿಂದ ಹೈರಾಣಾಗಿದ್ದಾರೆ. ಕೊಡವೂರಿನಲ್ಲಿ 2, ರಾಜೀವ ನಗರದಲ್ಲಿ 4, ಕೊಡಂಕೂರಿನಲ್ಲಿ 1 ಅನುಮಾನಾಸ್ಪದ ಪ್ರಕರಣಗಳು ಪತ್ತೆಯಾಗಿವೆ. ಈಗಾಗಲೇ ಮಣಿಪಾಲ, ಜಿಲ್ಲಾಸ್ಪತ್ರೆ, ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡೆಂಗ್ಯೂ ಜ್ವರದ ಲಕ್ಷಣಗಳು
ಇದ್ದಕ್ಕಿದ್ದಂತೆ ತೀವ್ರಜ್ವರ, ವಿಪರೀತ ತಲೆನೋವು, ಮಾಂಸಖಂಡ, ಕೀಲುಗಳಲ್ಲಿ ವಿಪರೀತ ನೋವು, ಕಣ್ಣುಗಳ ಹಿಂಭಾಗ ಭಾರೀ ನೋವು ಕಾಣಿಸಿಕೊಳ್ಳುತ್ತದೆ. ಜ್ವರ ಕಾಣಿಸಿಕೊಂಡ ಬಳಿಕ ರಕ್ತಸ್ರಾವ, ಮೈಊತ, ರಕ್ತದೊತ್ತಡ ಕುಸಿತ ಉಂಟಾದರೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿದೆ.

ಡೆಂಗ್ಯೂ ಪ್ರಕರಣ: 2ನೇ ಸ್ಥಾನದಲ್ಲಿ  ಉಡುಪಿ
ಉಡುಪಿ ಜಿಲ್ಲೆ ಡೆಂಗ್ಯೂ ಪ್ರಕರಣಗಳಲ್ಲಿ ರಾಜ್ಯದಲ್ಲೇ ದ್ವಿತೀಯ ಸ್ಥಾನಿಯಾಗಿದ್ದು, ಮೈಸೂರು ಪ್ರಥಮ ಸ್ಥಾನದಲ್ಲಿದೆ.ದಿನೇ ದಿನೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಡೆಂಗ್ಯೂನಿಂದ ಕಾರ್ಕಳದ ಬಜಗೋಳಿಯಲ್ಲಿ ಕಳೆದ ಜುಲೈನಲ್ಲಿ ಒಂದು ಸಾವು ಸಂಭವಿಸಿದೆ. ಮಾಳದಲ್ಲೂ ಒಬ್ಬರು ಸಾವನ್ನಪ್ಪಿದ್ದಾರೆ. ಈ ವರ್ಷ 29 ಪ್ರಕರಣ ದೃಢಪಟ್ಟಿದೆ. ಫೆಬ್ರವರಿಯಲ್ಲಿ 107 ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದ್ದು, 11 ಪ್ರಕರಣಗಳು ದೃಢಪಟ್ಟಿವೆ. ಕಳೆದ ವರ್ಷ ಜನವರಿಯಲ್ಲಿ 21 ಹಾಗೂ ಫೆಬ್ರವರಿಯಲ್ಲಿ 16 ಪ್ರಕರಣಗಳು ದಾಖಲಾಗಿದ್ದವು. ಇದೇ ಅವಧಿಯಲ್ಲಿ 2015ರಲ್ಲಿ ಕೇವಲ 6 ಪ್ರಕರಣಗಳು ಮಾತ್ರ ದೃಢಪಟ್ಟಿವೆ.

Advertisement

ಜನರು ಏನು ಮಾಡಬೇಕು?
– ಜ್ವರ ಬಂದ ತತ್‌ಕ್ಷಣ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿಮನೆಯ ಸುತ್ತಮುತ್ತ ಸ್ವತ್ಛತೆ ಕಾಪಾಡಿ
– ಯಾವುದೇ ರೋಗಗಳಾಗಿರಲಿ ನಿರ್ಲಕ್ಷ é ಮಾಡದೇ ಚಿಕಿತ್ಸೆ ಪಡೆಯಿರಿ
-ನೀರು ಸಂಗ್ರಹದಲ್ಲಿ ಎಚ್ಚರ ವಹಿಸಿ, ಮುಚ್ಚಿಡಿ
-ಎಳನೀರು ಚಿಪ್ಪು, ಗರಟೆ, ಟಯರ್‌, ಬಾಟಿÉ ಇತ್ಯಾದಿಗಳಲ್ಲಿ ನೀರು ನಿಲ್ಲದಂತೆ ವಿಲೇವಾರಿ ಮಾಡಿ
-ಬಾವಿಗಳಲ್ಲಿ ಗಪ್ಪಿ /ಗಂಬೂಶಿಯಾ ಮೀನು ಸಾಕಿ. ಅದು ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳನ್ನು ತಿನ್ನುತ್ತವೆ.
-ಮನೆಯ ಸುತ್ತಮುತ್ತಲ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ
-ಮಲಗುವಾಗ ಹೆಚ್ಚಾಗಿ ಸೊಳ್ಳೆ ಪರದೆ ಬಳಸಿ
-ಚರಂಡಿ, ಇನ್ನಿತರ ಕಡೆಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ
-ಘನತ್ಯಾಜ್ಯ ವಸ್ತು ಹಾಗೂ ತ್ಯಾಜ್ಯ ನೀರು ವಿಲೇವಾರಿಗೆ ಸಮರ್ಪಕ ಕ್ರಮ ಕೈಗೊಳ್ಳಿ
-ಕಟ್ಟಡ ಕಾಮಗಾರಿ ವೇಳೆ ನೀರು ನಿಂತ ಸ್ಥಳಗಳಿಗೆ ಒಮ್ಮೆ ರಾಸಾಯನಿಕ ಸಿಂಪಡಿಸಿ
ಈ ವರ್ಷ ಎಲ್ಲ ಕಡೆಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಸ್ವಲ್ಪ ನೀರು ನಿಲ್ಲುವ ಕಡೆಗಳಲ್ಲಿ, ನೀರಿನ ಟ್ಯಾಂಕ್‌, ಕೊಳೆ ಪ್ರದೇಶಗಳಲ್ಲಿ ನೀರಿನ ಸ್ವಲ್ಪ ಅಂಶ ಇದ್ದರೂ ಸಾಕು ಸೊಳ್ಳೆಗಳು ಮೊಟ್ಟೆ ಇಡುತ್ತವೆ. ಮೊಟ್ಟೆಯಿಡಲು ಕೇವಲ 40ರಿಂದ 50 ಸೆಕೆಂಡುಗಳು ಸಾಕಾಗುತ್ತವೆ. ಕೆಲವು ಕಡೆಗಳಲ್ಲಿ ಸಣ್ಣಗೆ ಮಳೆ ಬಂದಿರುವುದರಿಂದ ಸೊಳ್ಳೆಗಳಿಗೆ ಉಪಯೋಗವಾಗಿದೆ. ಇದು ಡೆಂಗ್ಯೂ ಜ್ವರ ಉಲ್ಬಣಗೊಳ್ಳುವ ಸಮಯವಾಗಿದ್ದು, ಜನರು ಜಾಗೃತಿ ವಹಿಸಬೇಕಾದ ಅಗತ್ಯವಿದೆ.

ನಿರ್ದಿಷ್ಟ ಚಿಕಿತ್ಸೆ ಇಲ್ಲ, 
ಬದಲಿ ವ್ಯವಸ್ಥೆಯಿದೆ

ಡೆಂಗ್ಯೂ ವೈರಲ್‌ ಜ್ವರವಾಗಿರುವುದರಿಂದ ಅದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ಸಪೋಟಿವ್‌ ಔಷಧಗಳು ಇವೆ. ಲಕ್ಷಣಗಳಲ್ಲಿ ಒಂದಾದ ಜ್ವರಕ್ಕೆ ಪ್ಯಾರಸಿಟಮಾಲ್‌ ಕೊಡಬಹುದು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬದಲಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ತದ ಪ್ಲೇಟ್‌ಲೆಟ್‌ ಕಡಿಮೆಯಾವುದು ಈ ರೋಗದ ಲಕ್ಷಣ. ಆಗ ನಾವು ರಕ್ತದ ಪ್ಲೇಟ್‌ಲೆಟ್‌ ಹೆಚ್ಚಿಸುವಂತಹ ಚಿಕಿತ್ಸೆ ನೀಡಿದರೆ ಪ್ರಯೋಜನವಾಗಬಹುದು.
 – ಡಾ| ಮಧುಸೂದನ್‌ ನಾಯಕ್‌, 
ಜಿಲ್ಲಾ ಶಸ್ತ್ರಚಿಕಿತ್ಸಕ

ಪರಿಹಾರ ಮಾರ್ಗ ಕೈಗೊಂಡಿದ್ದೇವೆ
ನಿಟ್ಟೂರಿನ ರಾಜೀವ ನಗರದಲ್ಲಿ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ವೈದ್ಯರು, ನರ್ಸ್‌ಗಳ 6 ತಂಡಗಳು 300 ಮನೆಗಳಿಗೆ ಸೋಮವಾರ ಭೇಟಿ ನೀಡಿ ಮಾಹಿತಿ, ಜ್ವರ ಪರೀಕ್ಷೆ, ಸೊಳ್ಳೆಗಳು ಇರುವ ಬಗ್ಗೆ ಪತ್ತೆ ಮಾಡಿದ್ದಾರೆ. ಮಂಗಳವಾರ ಇನ್ನು 5 ತಂಡಗಳು ಸೇರಿ ಸರ್ವೇ ಮಾಡಲಿವೆ. ಸುಮಾರು 1,000ಕ್ಕೂ ಅಧಿಕ ಮನೆಗಳಿಗೆ ತೆರಳಿ ಸರ್ವೇ ಮಾಡಲಿದ್ದಾರೆ. ಹೆಚ್ಚಿನ ಕಡೆ ಸೊಳ್ಳೆ ಪರದೆ ನೀಡಲಾಗಿದೆ. ಹಲವೆಡೆ ಫಾಗಿಂಗ್‌ ಮಾಡಲಾಗಿದೆ. ನೀರಿನ ಸಂಗ್ರಹ ಕ್ರಮದಲ್ಲಿ ಜಾಗ್ರತೆ ವಹಿಸಬೇಕು. ಪರಿಸರದ ಶುಚಿತ್ವ ಕಾಪಾಡಿದರೆ ಮಾತ್ರ ರೋಗ ಹರಡುವಿಕೆ ತಡೆಗಟ್ಟಬಹುದು.
 – ಡಾ| ಪ್ರೇಮಾನಂದ, 
ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣಾಧಿಕಾರಿ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next