ಲಖನೌ: ಭಾರತ್ ಬಂದ್ ವೇಳೆ ಅಮಾಯಕರ ವಿರುದ್ಧ ದಾಖಲಿಸಿರುವ ದೂರುಗಳನ್ನು ಹಿಂಪಡೆಯದಿದ್ದರೆ, ಮಧ್ಯ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರಕ್ಕೆ ನೀಡಿರುವ ಬಾಹ್ಯ ಬೆಂಬಲವನ್ನು ಹಿಂಪಡೆಯುವ ಬಗ್ಗೆ ಚಿಂತಿಸುವುದಾಗಿ ಬಿಎಸ್ಪಿ ನಾಯಕಿ ಮಾಯಾವತಿ ಎಚ್ಚರಿಕೆ ನೀಡಿದ್ದಾರೆ. ಎಪ್ರಿಲ್ 7ರಂದು ನಡೆದ ಭಾರತ್ ಬಂದ್ ವೇಳೆ ಅಮಾಯಕರ ವಿರುದ್ಧ ರಾಜಕೀಯ, ಜಾತಿ ಆಧಾರದಲ್ಲಿ ಬಿಜೆಪಿ ಸರಕಾರ ದೂರು ದಾಖಲಿಸಿತ್ತು ಎಂದು ಮಾಯಾವತಿ ಆರೋಪಿಸಿದ್ದಾರೆ. ಆದರೆ ಈಗ ಕಾಂಗ್ರೆಸ್ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದಿದ್ದು, ಈ ಪ್ರಕರಣಗಳನ್ನು ಹಿಂಪಡೆಯಬೇಕು. ಈಗ ಕೇವಲ ಘೋಷಣೆ ಮಾಡಿದರೆ ಸಾಲದು. ಹೀಗಾಗಿ ಎಚ್ಚರಿಕೆ ನೀಡಿದ್ದೇನೆ. ಭರವಸೆ ನೀಡುವ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಎರಡೂ ಒಂದೇ ಆಗಿವೆ ಎಂದು ಮಾಯಾವತಿ ಆರೋಪಿಸಿದ್ದಾರೆ. ಮಧ್ಯ ಪ್ರದೇಶ ದಲ್ಲಿ ಇಬ್ಬರು ಮತ್ತು ರಾಜಸ್ಥಾನ ದಲ್ಲಿ 6 ಮಂದಿ ಶಾಸಕರು ಇದ್ದಾರೆ. ಮಧ್ಯ ಪ್ರದೇಶ, ಛತ್ತೀಸ್ಗಡ, ರಾಜಸ್ಥಾನಗಳಲ್ಲಿ ಬಿಜೆಪಿ ಕೆಲಸ ಮಾಡಿ ದಂತೆ ಕಾಂಗ್ರೆಸ್ ರೈತರು, ನಿರುದ್ಯೋಗಿಗಳ ಪರ ಕೆಲಸ ಮಾಡಿಯೇ ಇಲ್ಲ ಎಂದು ದೂರಿದ್ದಾರೆ.