Advertisement

ಬೇಸಿಗೆ ನೀರಿನ ಬವಣೆ ತಪ್ಪಿಸಿದ ಸೋಂಕು

11:24 AM Mar 28, 2020 | Suhan S |

ಬೆಂಗಳೂರು: ಬೇಸಿಗೆ ಬಂದರೆ ಸಾಕು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಬೆವರುತ್ತಿದ್ದರು. ಆದರೆ, ಈ ಬಾರಿ ಒಂದಿಷ್ಟು ರಿಲಾಕ್ಸ್‌ ಮೂಡ್‌ನ‌ಲ್ಲಿದ್ದಾರೆ. ಇದಕ್ಕೆ ಕಾರಣ ಕೊರೊನಾ ಸೋಂಕು.

Advertisement

ಹೌದು, ರಾಜಧಾನಿಯಲ್ಲಿ ಭಯ ಹುಟ್ಟಿಸಿದರುವ ಕೋವಿಡ್ 19 ಸೋಂಕು ಬೆಂಗಳೂರು ಜಲಮಂಡಳಿಯ ಬೇಸಿಗೆ ನಿರ್ವಹಣೆಯನ್ನು ಒಂದಷ್ಟು ಸರಳಗೊಳಿಸಿದೆ. ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಅಂತರ್ಜಲ ಬತ್ತಿ ಸಾಮಾನ್ಯ ದಿನಗಳಿಗಿಂತ 5 ಕೋಟಿ ಲೀ. ಹೆಚ್ಚು ನೀರಿನ ಬೇಡಿಕೆ ಇರುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ.

ಬೆಂಗಳೂರು ಲಾಕ್‌ಡೌನ್‌ ಹಿನ್ನೆಲೆ ಜಲಮಂಡಳಿಯ ವಾಣಿಜ್ಯ ಪೂರೈಕೆ ಭಾಗಶಃ ಬಂದ್‌ ಆಗಿದ್ದು, ನಿತ್ಯ 10 ಕೋಟಿ ಲೀ.ನಷ್ಟು (100 ಎಂಎಲ್‌ಡಿ) ನೀರು ಉಳಿಯುತ್ತಿದೆ. ಈ ಉಳಿಕೆ ನೀರನ್ನು ವಸತಿ ಸಂಪರ್ಕಗಳಿಗೆ ನೀಡಿ ಬೇಸಿಗೆ ನೀರಿನ ಬವಣೆಯನ್ನು ನಿಭಾಯಿಸಲು ಮುಂದಾಗಿದೆ.

ಉಳಿಕೆ ನೀರೇ ಆಧಾರ: ನಗರಕ್ಕೆ ಸಾಮಾನ್ಯ ದಿನಗಳಲ್ಲಿ 1,45 ಕೋಟಿ ಲೀ. ನೀರು ಪೂರೈಸಲಾಗುತ್ತಿದ್ದು, ಇದು ಜಲಮಂಡಳಿ ಪೂರೈಸಲು ಸಾಧ್ಯವಾಗುವ ಗರಿಷ್ಠ ನೀರಿನ ಪ್ರಮಾಣವು ಆಗಿದೆ. ಆದರೆ, ಬೇಸಿಗೆ ಅವಧಿ (ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ) 1,50 ಕೋಟಿ ಲೀ.ಗಿಂತಲೂ ಹೆಚ್ಚು ನೀರಿಗೆ ಬೇಡಿಕೆ ಇರುತ್ತದೆ. ಕೆಲ ಪ್ರದೇಶದಲ್ಲಿ ವ್ಯತ್ಯಯವಾಗುವ ಸಾಧ್ಯತೆಯೂ ಇರುತ್ತದೆ. ಇನ್ನು ಪೈಪ್‌ಲೈನ್‌ ಸಾಮರ್ಥ್ಯ 1,45 ಕೋಟಿ ಲೀ. ಮಾತ್ರವಿದ್ದು, ಜಲಾಶಯದಲ್ಲಿ ನೀರಿದ್ದರೂ ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ವಾಜ್ಯ ನೀರನ ಬೇಡಿಕೆ ಕಡಿಮೆಯಾಗಿ ಉಳಿಯುತ್ತಿರುವ ನೀರನ್ನು ಬೇಡಿಕೆ ಇರುವ ವಸತಿಗೆ ಪೂರೈಕೆ ಮಾಡಲಾಗುತ್ತಿದೆ’ ಎಂದು ಜಲಮಂಡಳಿ ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ತಿಳಿಸಿದ್ದಾರೆ.

ವಾಲ್‌ಗ‌ಳೇ ಬಂದ್‌: ಲಾಕ್‌ಡೌನ್‌ ಹಿನ್ನೆಲೆ ನಗರದ ಎಲ್ಲಾ ಸಾವಿರಾರು ಖಾಸಗಿ ಕಂಪನಿಗಳು ಹಾಗೂ ಸರ್ಕಾರಿ ಕಚೇರಿಗಳು, ಐದು ಸಾವಿರಕ್ಕೂ ಹೆಚ್ಚು ಹೋಟೆಲ್‌ಗ‌ಳು, ಕ್ಲಬ್‌ಗಳು ಹಾಗೂ ಈಜುಕೊಳ ಗಳು, ಮಾಲ್‌ಗ‌ಳು, ಐಟಿ ಪಾರ್ಕ್‌ಗಳು ರೈಲ್ವೆ ನಿಲ್ದಾಣ ಗಳು, ಬಿಎಂಟಿಸಿ ನಿಲ್ದಾಣಗಳು ಬಂದ್‌ ಆಗಿವೆ. ಆ ಸ್ಥಳಗಳಲ್ಲಿ ನೀರಿನ ಬಳಕೆಯೇ ಇಲ್ಲ. ಇದರಿಂದ ಜಲ ಮಂಡಳಿಯೂ ಬಹುತೇಕ ವಾಣಿಜ್ಯ ಪೂರೈಕೆ ಮಾಡಿವ ಪ್ರದೇಶಗಳ ನೀರಿನ ವಾಲ್‌ಗ‌ಳನ್ನೇ ಬಂದ್‌ ಮಾಡಿದೆ. ಜತೆಗೆ ಜನರು ನಗರ ಬಿಟ್ಟು ಊರಿಗೆ ತೆರಳಿರುವುದರಿಂದ 10 ಕೋಟಿ ಲೀ.ನಷ್ಟು ನೀರು ಉಳಿದಿದೆ ಎನ್ನಲಾಗಿದೆ.

Advertisement

ನೀರಿನ ಶೇಖರಣೆ ಹೆಚ್ಚಿಸುವ ಲಾಕ್‌ಡೌನ್‌: ಲಾಕ್‌ ಡೌನ್‌ 18 ದಿನಗಳ ಮಾತ್ರವಲ್ಲದೇ ಒಂದು ತಿಂಗಳ ಮುಂದುವರೆಯುವ ಸಾಧ್ಯತೆಗಳಿದ್ದು, ಈ ವೇಳೆಯು ನಿತ್ಯ 10 ಕೋಟಿ ಲೀ.ನಂತೆ ನೀರು ಉಳಿಕೆಯಾದರೆ ಗೃಹಬಳಕೆಯ ಬೇಸಿಗೆ ಹೆಚ್ಚವರಿ 5 ಕೋಟಿ ಲೀ. ನೀರು ಪೂರೈಕೆ ಮಾಡಿ, ಬಾಕಿ ಉಳಿಯುವ ನೀರನ್ನು ಜಲಮಂಡಳಿ ಜಲಾಗಾರಗಳು ಅಥವಾ 145 ಕೋಟಿ ಲೀ.ನಲ್ಲಿ 100 ಅಥವಾ 50 ಕೋಟಿ ಲೀ, ಕಡಿಮೆ ಪಂಪ್‌ ಮಾಡುವ ಮೂಲಕ ಜಲಾಶಯದಲ್ಲಿಯೇ ಸಂಗ್ರಹಿಸಬಹುದು ಎನ್ನುತ್ತಾರೆ ತಜ್ಞರು.

ನೀರಿನ ಮರುಬಳಕೆಗೆ ಸಮಸ್ಯೆಯಿಲ್ಲ ಕೋವಿಡ್ 19  ಆತಂಕ ಹಿನ್ನೆಲೆ ಕೈತೊಳೆಯಲು ಅಥವಾ ಸ್ವತ್ಛತೆಗೆ ಬಳಸಿದ ನೀರನ್ನು ತ್ಯಾಜ್ಯನೀರು ಸಂಸ್ಕರಣಾ ಘಟಕದ ಮೂಲಕ ಸಂಸ್ಕರಿಸಿ (ಎಸ್‌ಟಿಪಿ)ಮರು ಬಳಕೆ ಮಾಡುಬಹುದೇ ಎಂಬ ಪ್ರಶ್ನೆ ಜನರಲ್ಲಿದೆ. ಈ ಕುರಿತು ನಿಮ್ಹಾನ್ಸ್‌ ನ್ಯೂರೋವೈರಾಲಜಿ ವಿಭಾಗದ ಮುಖ್ಯಸ್ಥ ಉದಯವಾಣಿಗೆ ಪ್ರತಿಕ್ರಿಯಿಸಿದ್ದು, “ಪೆಟ್ರೋಲಿಯಂ ಯುಕ್ತ ಸ್ಯಾನಿಟೈಸರ್‌ ಬಳಸಿ ಕೈತೊಳೆದಾಗ ಕೊರೊನಾ ವೈರಾಣು ಇದ್ದರೆ ಸಾಯುತ್ತದೆ. ಯಾವುದೇ ಆತಂಕ ಇಲ್ಲದೇ ಕೈತೊಳದ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡಬಹುದು ಎಂದು ತಿಳಿಸಿದ್ದಾರೆ.

ಜಲಮಂಡಳಿ ಮನವಿ :  ಜನರು ಜಲಮಂಡಳಿ ನೀರು ಪೂರೈಕೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಕಚೇರಿಗೆ ಆಗಮಿಸದೆ ಸಹಾಯವಾಣಿ 1916 ಅಥವಾ ವ್ಯಾಟ್ಸ್‌ ಆ್ಯಪ್‌ ಸಂಖ್ಯೆ 8762228888 ಮೂಲಕ ಸಂಪರ್ಕಿಸಲು ಕೋರಿದೆ.

ಲಾಕ್‌ಡೌನಿಂದ ಜಲಮಂಡಳಿ ವಾಣಿಜ್ಯ ಬಳಕೆಗೆ ಪೂರೈಸುತ್ತಿದ್ದ 10 ಕೋಟಿ ಲೀ. ನೀರು ಉಳಿಕೆಯಾಗುತ್ತಿದ್ದು, ಆ ನೀರನ್ನು ಬೇಡಿಕೆ ಇರುವ ವಸತಿ ಪ್ರದೇಶಗಳಿಗೆ ನೀಡಲಾಗುತ್ತಿದೆ. ಈ ಬಾರಿ ಬೇಸಿಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ.  ತುಷಾರ ಗಿರಿನಾಥ್‌, ನಗರ ಜಲಮಂಡಳಿ ಅಧ್ಯಕ್ಷ

 

-ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next