Advertisement

ಮಂಡ್ಯದಲ್ಲಿ ರಣಕಹಳೆ ಮೊಳಗಿಸಿದ ಸುಮಲತಾ

09:22 PM May 23, 2019 | Team Udayavani |

ಮಂಡ್ಯ: ತೀವ್ರ ಕುತೂಹಲ ಕಾಯ್ದಿರಿಸಿಕೊಂಡಿದ್ದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಎ.ಸುಮಲತಾ ಅಂಬರೀಶ್‌ 1,25,876 ಮತಗಳ ಅಂತರದಿಂದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿ ಕೆ.ನಿಖೀಲ್‌ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದಾರೆ.

Advertisement

ಸುಮಲತಾ ಅಂಬರೀಶ್‌ ಒಟ್ಟು 7,03,660 ಮತಗಳನ್ನು ಪಡೆದುಕೊಂಡು ವಿಜಯದ ನಗೆ ಬೀರಿದರೆ, ಮೈತ್ರಿ ಅಭ್ಯರ್ಥಿ ಕೆ.ನಿಖೀಲ್‌ ಕುಮಾರಸ್ವಾಮಿ 5,77,784 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಇವಿಎಂನಲ್ಲಿ 7,02,167 ಮತಗಳು, ಅಂಚೆ ಮತದಾನದಲ್ಲಿ 1,493 ಮತಗಳು ಸೇರಿ ಒಟ್ಟು 7,03,660 ಮತಗಳು ದೊರಕಿದ್ದರೆ, ನಿಖೀಲ್‌ ಕುಮಾರಸ್ವಾಮಿಗೆ ಇವಿಎಂನಲ್ಲಿ 5,76,545 ಮತಗಳು, ಅಂಚೆ ಮತದಾನದಲ್ಲಿ 1239 ಮತಗಳು. ಒಟ್ಟು ಮತಗಳು 5,77,784 ಮತಗಳು ಲಭಿಸಿವೆ.

ಜಿಲ್ಲೆಯ ಒಟ್ಟು 17,11,182 ಮತದಾರರಿದ್ದು, ಈ ಪೈಕಿ 13,76,149 ಮತಗಳು ಚಲಾವಣೆಗೊಂಡಿದ್ದವು. 6,95,262 ಪುರುಷರು, 6,80,859 ಮಹಿಳೆಯರು ಹಾಗೂ 28 ಇತರೆ ಮತದಾರರು ಮತ ಚಲಾಯಿಸಿದ್ದರು.

ಕಳೆದ ಚುನಾವಣೆಗಳ ಮತ ವಿವರ: ಕಳೆದ 2014ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಒಟ್ಟು 16,69,262 ಮತದಾರರಲ್ಲಿ 6,04,491 ಪುರುಷರು ಹಾಗೂ 5,87,306 ಮಹಿಳೆಯರು ಹಾಗೂ ಇತರೆ 8 ಮತದಾರರು ಸೇರಿ 11,91,805 ಮಂದಿ ಮತ ಚಲಾಯಿಸಿದ್ದರು. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಪುಟ್ಟರಾಜು 5,24,370 ಮತಗಳನ್ನು ಪಡೆದು ವಿಜಯಿಯಾದರೆ, ಕಾಂಗ್ರೆಸ್‌ ಅಭ್ಯರ್ಥಿ ರಮ್ಯಾ 5,18,852 ಮತಗಳನ್ನು ಪಡೆದು ಪರಾಭವಗೊಂಡಿದ್ದರು. ಆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಪುಟ್ಟರಾಜು 5518 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

Advertisement

ಲೋಕಸಭಾ ಸಾರ್ವತ್ರಿಕ ಚುನಾವಣೆ ಹಾಗೂ ಉಪ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಜೆಡಿಎಸ್‌ಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಆಘಾತ ನೀಡಿದೆ. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕಳೆದುಕೊಂಡಿರುವ ಜೆಡಿಎಸ್‌ ವರ್ಚಸ್ಸಿಗೆ ಇದೀಗ ಧಕ್ಕೆಯಾಗಿದೆ.

108 ಟೇಬಲ್‌ಗ‌ಳಲ್ಲಿ ಎಣಿಕೆ: ಮತ ಎಣಿಕೆ ನಡೆದ ಸರ್ಕಾರಿ ಮಹಾ ವಿದ್ಯಾಲಯದ 14 ಕೊಠಡಿಗಳಲ್ಲಿ ಹಾಕಿದ್ದ 108 ಟೇಬಲ್‌ಗ‌ಳಲ್ಲಿ ಎಣಿಕೆ ಕಾರ್ಯ ನಡೆಯಿತು. ಎರಡು ಇವಿಎಂ ಯಂತ್ರಗಳಲ್ಲಿ ಕ್ಲೋಸ್‌ ಬಟನ್‌ ಒತ್ತದ ಕಾರಣ ಅದನ್ನು ತಜ್ಞರು ವೀಕ್ಷಕರ ಸಮ್ಮುಖದಲ್ಲಿ ಕ್ಲೋಸ್‌ ಬಟನ್‌ ಒತ್ತಿ ಬಳಿಕ ಅದರಲ್ಲಿ ದಾಖಲಾಗಿರುವ ಮತಗಳನ್ನು ಎಣಿಕೆಗೆ ಪರಿಗಣಿಸಿದರು.

ಎಲ್ಲಾ ಇವಿಎಂಗಳಲ್ಲಿ ದಾಖಲಾಗಿರುವ ಮತಗಳ ಎಣಿಕೆ ನಂತರ ಪ್ರತಿ ವಿಧಾನಸಭಾ ಕ್ಷೇತ್ರದ ಐದು ವಿವಿ ಪ್ಯಾಟ್‌ಗಳನ್ನು ಎಣಿಕೆ ಮಾಡಲಾಯಿತು. ಜೊತೆಗೆ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 60ನೇ ಮತಗಟ್ಟೆಯಲ್ಲಿ ಅಣಕು ಮತದಾನದ ನಂತರದ ಮಾಕ್‌ ಪೋಲ್‌ ಕ್ಲಿಯರ್‌ ಮಾಡದೆ ಮತದಾನ ಪ್ರಕ್ರಿಯೆ ಆರಂಭಿಸಿದ್ದರಿಂದ ಹೆಚ್ಚುವರಿ ಮತಗಳು ದಾಖಲಾಗಿದ್ದವು. ಆ ಹಿನ್ನೆಲೆಯಲ್ಲಿ ಈ ಮತಕೇಂದ್ರದ ವಿವಿ ಪ್ಯಾಟ್‌ನ ಪೇಪರ್‌ ಸ್ಲಿಪ್‌ಗ್ಳನ್ನು ಎಣಿಕೆ ಮಾಡಲಾಯಿತು.

ಮತ ಎಣಿಕಾ ಕೇಂದ್ರದ ಒಳಗೆ ಮೊಬೈಲ್‌ ಫೋನ್‌ಗಳನ್ನು ಮಾಧ್ಯಮದವರು ಹಾಗೂ ಕೆಲವು ಅಧಿಕಾರಿಗಳನ್ನು ಹೊರತುಪಡಿಸಿ ಎಲ್ಲರಿಗೂ ನಿಷೇಧ ಹೇರಲಾಗಿತ್ತು. ಆದರೆ, ಕೆಲ ಏಜೆಂಟರು ಮತ ಎಣಿಕಾ ಕೇಂದ್ರಗಳೊಳಗೆ ಮೊಬೈಲ್‌ಗ‌ಳನ್ನು ತಂದು ಮಾತನಾಡುತ್ತಿದ್ದುದು ಕಂಡು ಬಂದಿತು.

ಬಿಗಿ ಭದ್ರತೆ: ಅತಿ ಸೂಕ್ಷ್ಮ ಕ್ಷೇತ್ರವೆಂದೇ ಬಿಂಬಿತವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಮತ ಎಣಿಕಾ ಕಾರ್ಯಕ್ಕೆ ಯಾವುದೇ ಅಡಚಣೆ ಉಂಟಾಗಬಾರದೆಂಬ ಕಾರಣಕ್ಕೆ ಮತ ಎಣಿಕಾ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಿಆರ್‌ಪಿಎಫ್, ಬಿಎಸ್‌ಎಫ್, ಕೆಎಸ್‌ಆರ್‌ಪಿ ಹಾಗೂ ಡಿಎಆರ್‌ ತುಕಡಿಗಳಲ್ಲದೆ, 400 ಮಂದಿ ಪೊಲೀಸ್‌ ಅಧಿಕಾರಿಗಳನ್ನು ನಿಯೋಜಿಸಿ ಭದ್ರತೆ ಒದಗಿಸಲಾಗಿತ್ತು. ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next