ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಗಲ್ಲಾಪೆಟ್ಟಿಗೆಯಲ್ಲಿಯೂ ಭರ್ಜರಿ ಸದ್ದು ಮಾಡಿದೆ. ಏತನ್ಮಧ್ಯೆ ಸುಮಲತಾ ಅಂಬರೀಶ್ ಕೂಡಾ ಸಿನಿಮಾ ವೀಕ್ಷಿಸಿ ಬಹುಪರಾಕ್ ಹೇಳಿದ್ದಾರೆ.
ಯಶ್ ಹಾಗೂ ಶ್ರೀನಿಧಿ ಶೆಟ್ಟಿ ಅಭಿನಯದ ಕೆಜಿಎಫ್ ಸಿನಿಮಾ ಬಿಡುಗಡೆಗೊಂಡ ದಿನ ಒಟ್ಟಾರೆ 15 ಕೋಟಿ ರೂಪಾಯಿ ಸೇರಿದಂತೆ ಕರ್ನಾಟಕದಲ್ಲಿ ಮೂರು ದಿನಗಳಲ್ಲಿ 30 ಕೋಟಿ ಗಳಿಕೆ ಕಂಡಿರುವುದಾಗಿ ವರದಿ ತಿಳಿಸಿದೆ.
ಬಿ ಮತ್ತು ಸಿ ಸೆಂಟರ್ ಗಳಲ್ಲಿ ಶನಿವಾರ ಮತ್ತು ಭಾನುವಾರ ಕೆಜಿಎಫ್ ತುಂಬಿದ ಪ್ರದರ್ಶನ ಕಂಡಿದೆ. ತೆಲುಗು ಭಾಷಾ ಪ್ರದೇಶದಲ್ಲಿ ಕೆಜಿಎಫ್ ಮೂರು ದಿನಗಳಲ್ಲಿ 3.08 ಕೋಟಿ ಗಳಿಕೆ ಕಂಡಿದ್ದರೆ. ನೆರೆಯ ತಮಿಳುನಾಡು ಹಾಗೂ ಕೇರಳದಲ್ಲಿ ವಾರಾಂತ್ಯಕ್ಕೆ 1.08 ಕೋಟಿ ರೂ. ಬಾಚಿಕೊಂಡಿದೆ ಎಂದು ವರದಿ ವಿವರಿಸಿದೆ.
ಹಿಂದಿಯಲ್ಲಿ ಕಳೆದ ಮೂರು ದಿನಗಳಲ್ಲಿ ಕೆಜಿಎಫ್ ಗಲ್ಲಾಪೆಟ್ಟಿಗೆಯಲ್ಲಿ 12.05 ಕೋಟಿ ರೂ. ಗಳಿಸಿದೆ. ಕೆಜಿಎಫ್ ಬಿಡುಗಡೆಯಾದ ದಿನದಿಂದ ಈವರೆಗೆ ಗಳಿಕೆಯಲ್ಲಿ ನಾಗಾಲೋಟ ಕಾಣತೊಡಗಿದೆ ಎಂದು ವರದಿ ತಿಳಿಸಿದೆ.
Related Articles
ಸಿನಿಮಾ ನೋಡಿ ಸುಮಲತಾ ಅಂಬರೀಶ್ ಟ್ವೀಟ್ !
ಕೆಜಿಎಫ್ ಸಿನಿಮಾ ವೀಕ್ಷಿಸಿದ ಸುಮಲತಾ ಅಂಬರೀಶ್ ಅವರು, ಕೆಜಿಎಫ್ ಅಪ್ಪಟ ಚಿನ್ನ. ನಾನು ಹಿಂದೆಂದೂ ಕನ್ನಡ ಚಿತ್ರರಂಗದಲ್ಲಿ ಇಂತಹ ಸಿನಿಮಾವನ್ನು ಕಂಡಿಲ್ಲ. ಕೊನೆಗೂ ಎರಡು ವರ್ಷಗಳ ಕಠಿಣ ಶ್ರಮದಿಂದಾಗಿಯೇ ಯಶ್ ಅದ್ಭುತ ನಟನೆ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಇಂತಹ ಸಿನಿಮಾಗಳು ಒಂದು ವೇಳೆ ಆರು ತಿಂಗಳಲ್ಲಿ ನಿರ್ಮಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿ ಶಹಬ್ಬಾಸ್ ಗಿರಿ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಯಶ್, ಥ್ಯಾಂಕ್ ಯು ಸೋ ಮಚ್ ಅಕ್ಕಾ ಎಂದು ತಿಳಿಸಿದ್ದಾರೆ. ನೀವು ಸಿನಿಮಾ ನೋಡಿರುವುದೇ ನನಗೆ ಎಲ್ಲದಕ್ಕಿಂತ ಹೆಚ್ಚಿನ ಸಂತೋಷ. ಈ ವೇಳೆ ಅಣ್ಣಾ(ಅಂಬಿ) ಇದ್ದಿದ್ದರೆ ಸಿನಿಮಾ ನೋಡಿ ಖುಷಿ ಹಂಚಿಕೊಳ್ಳುತ್ತಿದ್ದರು. ಆದರೂ ಅವರು ಅಲ್ಲಿಂದಲೇ ನೋಡಿ ನನ್ನ ಯಾವತ್ತೂ ಹರಿಸುತ್ತಿರುತ್ತಾರೆ ಎಂದು ಉತ್ತರಿಸಿದ್ದಾರೆ.