Advertisement

ಮೂತ್ರಪಿಂಡದ ತೀವ್ರ ಹಠಾತ್‌ (AKI) –ಪೋಷಕಾಂಶಗಳ ನಿರ್ವಹಣೆ

03:45 AM Jan 08, 2017 | Team Udayavani |

ಮೂತ್ರಪಿಂಡದ ವಿಸರ್ಜನಾ ವ್ಯವಸ್ಥೆಯು ಹಠಾತ್ತಾಗಿ (1 ರಿಂದ 7 ದಿನಗಳಲ್ಲಿ ) ಮತ್ತು ನಿರಂತರ (24 ಗಂಟೆಗಿಂತಲೂ ಹೆಚ್ಚು ಸಮಯ) ವಿಫ‌ಲಗೊಳ್ಳುವುದನ್ನು ಅಥವಾ  ಅದರ ಕಾರ್ಯಸಾಮರ್ಥ್ಯದಲ್ಲಿ ವ್ಯತ್ಯಯವಾಗುವುಕ್ಕೆ ಮೂತ್ರಪಿಂಡದ ಹಠಾತ್‌ ಹಾನಿ ಅಥವಾ ಅಕ್ಯೂಟ್‌ ಕಿಡ್ನಿ ಇಂಜ್ಯೂರಿ (ಅಓಐ) ಎಂದು ಹೆಸರು. ವಿರ್ಸಜನೆಯಾಗದೆ ಸಂಗ್ರಹವಾಗಿರುವ ಅಂತಿಮ ಉತ್ಪನ್ನಗಳು (ಯೂರಿಯಾ ಮತ್ತು ಕ್ರಿಯಾಟಿನೈನ್‌) ಅಥವಾ ಮೂತ್ರವಿಸರ್ಜನೆ ಕಡಿಮೆಯಾಗುವುದು ಅಥವಾ ಈ ಎರಡೂ ಅಂಶಗಳ ಪತ್ತೆ ಹಚ್ಚುವಿಕೆಯ ಮೂಲಕ ಮೂತ್ರಪಿಂಡದ ತೀವ್ರ ಹಾನಿಯನ್ನು ಪತ್ತೆ ಮಾಡಬಹುದು. 

Advertisement

ಈ ಕಾಯಿಲೆಯಲ್ಲಿ  ಬೇರೆ ಬೇರೆ ರೀತಿಯ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು ಅಂದರೆ ಸಾಮಾನ್ಯಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮೂತ್ರವಿಸರ್ಜನೆ ಆಗುವುದು, ವಾಕರಿಕೆ, ವಾಂತಿ, ಹಸಿವು ಕಡಿಮೆ ಆಗುವುದು, ಕಾಲು ಅಥವಾ ದೇಹದ ಇತರ ಭಾಗಗಳು ಊದಿಕೊಳ್ಳುವುದು, ಉಸಿರಾಡಲು ಕಷ್ಟವಾಗುವುದು ಇತ್ಯಾದಿ. 

ಡಯಾಲಿಸಿಸ್‌ ಚಿಕಿತ್ಸೆಯಿಂದ ರೋಗಿಗಳು ಚೇತರಿಸಿಕೊಳ್ಳುವ ಪ್ರಮಾಣ ಹೆಚ್ಚು ಮತ್ತು ಉತ್ತಮ ಪೋಷಣಾ ಬೆಂಬಲ ದೊರೆತರೂ ಸಹ ಈ ಕಾಯಿಲೆಯ ಕಾರಣದ ಮರಣ ಪ್ರಮಾಣ ಹೆಚ್ಚೇ ಇದೆ. ಅಪಾಯ ಪೂರಕ ಅಂಶಗಳಾದ ವಯಸ್ಸು, ನಂಜಾಗುವಿಕೆ, ಮಧುಮೇಹ, ರಕ್ತದೊತ್ತಡ ಕುಸಿಯುವುದು ಇತ್ಯಾದಿ ಅಪಾಯಪೂರಕ ಅಂಶಗಳು ಮೂತ್ರಪಿಂಡದ ತೀವ್ರ ಹಾನಿ ಆಗಿರುವ ರೋಗಿಯ ಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತವೆ ಮತ್ತು ರೋಗಿಗೆ AKI ಸಂಬಂಧಿತ ಕಾಯಿಲೆಯನ್ನು ನಿರ್ವಹಿಸುವುದು ಕಷ್ಟವಾಗುತ್ತದೆ.
 
ಮೂತ್ರಪಿಂಡದ ತೀವ್ರ ಹಾನಿ ಆಗಿರುವ ರೋಗಿಗಳಲ್ಲಿ ಪ್ರೋಟೀನ್‌ ನಷ್ಟವಾಗುವುದು ಅಥವಾ ಪೋಷಕಾಂಶದ ಕೊರತೆ ಕಾಣಿಸಿಕೊಳ್ಳುವುದು ಬಹಳ ಸಾಮಾನ್ಯ ಸಂಗತಿ. ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಆಹಾರ ಕ್ರಮವನ್ನು ರೂಪಿಸುವಾಗ ಸರಿಯಾಗಿ ತಪಾಸಣೆ ಮಾಡುವುದು ಮತ್ತು ಪೋಷಕಾಂಶಗಳ ಬೆಂಬಲವನ್ನು ಒದಗಿಸುವುದು ಬಹಳ ಆವಶ್ಯಕ. 

ಚಯಾಪಚಯ ಹಂತದಲ್ಲಿ ಇಲ್ಲದ ಮೂತ್ರಪಿಂಡದ ತೀವ್ರ ಹಾನಿಗೆ ಸಾಮಾನ್ಯವಾಗಿ ಮೂತ್ರನಾಳದ ಅಡಚಣೆ ಕಾರಣ ಆಗಿರಬಹುದು.  ಡಿ-ಹೈಡ್ರೇಶನ್‌ ಮತ್ತು ಇನ್ನಿತರ ಕಾರಣಗಳು ಇಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುವುದಿಲ್ಲ. 

ಚಯಾಪಚಯ ಹಂತದಲ್ಲಿರುವ ಮೂತ್ರಪಿಂಡದ ತೀವ್ರ ಹಾನಿಯು ಇದ್ದಾಗ ರೋಗಿಯು ಹೆಚ್ಚಾಗಿ ಬಹು ಅಂಗಾಂಗಗಳ ವೈಫ‌ಲ್ಯಕ್ಕೆ ಒಳಗಾಗುತ್ತಾನೆ. ಪ್ರೋಟೀನ್‌ ಕೊರತೆಯಿಂದಾಗಿ, ಕಾಯಿಲೆಯು  ನಿಧಾನವಾಗಿ ಗುಣವಾಗುವುದರಿಂದ ಮತ್ತು ಕಾಯಿಲೆಯ ತೊಡಕುಗಳಿಂದಾಗಿ ರೋಗಿಯು ಬಹಳ ಸಮಯ ಆಸ್ಪತ್ರೆಯಲ್ಲಿಯೇ ಇರಬೇಕಾಗುವುದು. ಪೋಷಕಾಂಶಗಳ ಸ್ಕ್ರೀನಿಂಗ್‌ ಅನ್ನು ಸಾಮಾನ್ಯವಾಗಿ ಆರಂಭಿಕ ಹಂತದಲ್ಲಿ ಮಾಡುತ್ತಾರೆ, ವಿಶೇಷ ಆರೈಕೆಯ ಶಿಫಾರಸುಗಳು ಮತ್ತು ಮೂತ್ರಪಿಂಡದ ರೋಗಲಕ್ಷಣಗಳಿಗೆ ನೀಡುವ ಆಹಾರ ಕ್ರಮಗಳಿಗೆ ಅನುಸಾರವಾಗಿ ರೋಗಿಗಳಿಗೆ ವಿಶೇಷ ಆಹಾರ ಕ್ರಮಗಳನ್ನು ರೂಪಿಸಬೇಕಾಗುತ್ತದೆ.  

Advertisement

ಪೋಷಕಾಂಶಗಳನ್ನು ಒದಗಿಸುವ ದೃಷ್ಟಿಯಿಂದ ಮೂತ್ರಪಿಂಡಗಳು ತೀವ್ರ ಹಾನಿಗೊಳಗಾಗಿರುವ ರೋಗಿಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು: 

1.ಚಯಾಪಚಯ ಹಂತದಲ್ಲಿ ಇಲ್ಲದ ಮೂತ್ರಪಿಂಡದ ತೀವ್ರ ಹಾನಿ 
((AKI in non catabolic stage))

2.ಚಯಾಪಚಯ ಹಂತದಲ್ಲಿರುವ ಮೂತ್ರಪಿಂಡದ ತೀವ್ರ ಹಾನಿ 
(AKI in catabolic stages)

ಇಲ್ಲಿನ ಮುಖ್ಯ ಉದ್ದೇಶ ಏನಾಗಿರಬೇಕು ಅಂದರೆ
1. ಪ್ರೋಟೀನ್‌ ನಷ್ಟವಾಗುವಿಕೆಯನ್ನು ತಡೆಯುವುದು.
2. ಸರಿಯಾದ ದೇಹತೂಕ ಮತ್ತು ಪೋಷಕಾಂಶಗಳ ಮಟ್ಟವನ್ನು ಕಾಪಾಡಿಕೊಳ್ಳುವುದು.
3. ಪೋಷಕಾಂಶಗಳ ಅಸಮತೋಲನದಿಂದ ಉಂಟಾಗುವ ತೊಂದರೆಯನ್ನು ತಪ್ಪಿಸಿಕೊಳ್ಳುವುದು.
4. ಗಾಯಮಾಯುವಿಕೆಯನ್ನು ಉತ್ತಮಪಡಿಸುವುದು.
5. ದೇಹದ ರೋಗಪ್ರತಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸುವುದು.
6. ಆಂಟಿ ಆಕ್ಸಿಡಾಂಟ್‌ ಚಟುವಟಿಕೆಯನ್ನು ಉತ್ತಮಪಡಿಸುವುದು ಮತ್ತು ಉರಿಯೂತವನ್ನು ತಗ್ಗಿಸುವುದು.

ಸಾರಾಂಶ:  ಮೂತ್ರಪಿಂಡಗಳು ಹಠಾತ್‌ ಹಾನಿಗೊಳಗಾಗಿರುವ ರೋಗಿಗಳಲ್ಲಿ ಪೋಷಕಾಂಶಗಳ ನಿರ್ವಹಣೆಯು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ರೋಗಿಯ ಆವಶ್ಯಕತೆ, ರೋಗಿಯ ಆರೋಗ್ಯ ಪರಿಸ್ಥಿತಿ ಮತ್ತು ಚಿಕಿತ್ಸಾ  ವಿಧಾನಗಳನ್ನು  ಗಮನದಲ್ಲಿ ಇರಿಸಿಕೊಂಡು ಅತ್ಯುತ್ತಮವಾದ ಮತ್ತು ವ್ಯಕ್ತಿಗೆ ಪೂರಕವಾಗುವ ಆಹಾರಕ್ರಮವನ್ನು ರೂಪಿಸಬೇಕಾಗುತ್ತದೆ. ಮೂತ್ರಪಿಂಡಗಳು ತೀವ್ರ ಹಾನಿಗೊಳಗಾಗಿರುವ ರೋಗಿಯು ಚೇತರಿಸಿಕೊಳ್ಳುವವರೆಗೆ ಪೋಷಕಾಂಶಗಳ ನಿರ್ವಹಣೆ ಮತ್ತು ನಿಗಾವಣೆ ಯನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುವುದು ಬಹಳ ಆವಶ್ಯಕ.  

ಹೆಚ್ಚಾಗಿ ಬಾಯಿಯ ಮೂಲಕ ಪೋಷಕಾಂಶಗಳನ್ನು ಒದಗಿಸುವುದನ್ನು ಸೂಚಿಸಲಾಗುತ್ತದೆ. 

ಶಕ್ತಿಯ ಆವಶ್ಯಕತೆ  
ರೋಗಿಯ ವೈಯಕ್ತಿಕ ಆವಶ್ಯಕತೆ ಮತ್ತು ರೋಗ ಪರಿಸ್ಥಿತಿಗೆ ತಕ್ಕಂತೆ ಆಹಾರ ಕ್ರಮವನ್ನು ರೂಪಿಸಬೇಕಾಗುವುದು. ಸಾಮಾನ್ಯವಾಗಿ ದಿನಕ್ಕೆ 20-35 ಕಿಲೋ ಕ್ಯಾಲರಿ/ಕೆ.ಜಿ ಅನ್ನು ಶಿಫಾರಸು ಮಾಡಲಾಗುವುದು. 

ಪ್ರೊಟೀನ್‌ ಆವಶ್ಯಕತೆ
ಇದು ಮತ್ತೆ ಕಾಯಿಲೆಯು ಚಯಾಪಚಯ ಹಂತದಲ್ಲಿ ಇದೆಯೋ ಅಥವಾ ಚಯಾಪಚಯ ಹಂತದಲ್ಲಿ ಇಲ್ಲದ ಮೂತ್ರಪಿಂಡದ ತೀವ್ರ ಹಾನಿಯೋ ಎಂಬುದನ್ನು ಅವಲಂಬಿಸುತ್ತದೆ. ಮೂತ್ರಪಿಂಡದ ತೀವ್ರ ಹಾನಿಯು ಚಯಾಪಚಯ ಹಂತದಲ್ಲಿ ಇಲ್ಲದಿದ್ದರೆ, ದಿನಕ್ಕೆ 0.8 -1.0 ಗಳ ಪ್ರೊಟೀನ್‌/ಕೆ.ಜಿ ಶಿಫಾರಸು ಮಾಡಲಾಗುವುದು. ರೋಗಿಯು ಡಯಾಲಿಸಿಸ್‌ನಲ್ಲಿ ಇದ್ದರೆ, ಆಗ ಡಯಾಲಿಸಿಸ್‌ ಕಾರಣದಿಂದ ಆಗುವ ಅಮಿನೋ ಆಸಿಡ್‌ ಮತ್ತು ಪ್ರೋಟೀನ್‌ ನಷ್ಟವನ್ನು ಸರಿದೂಗಿಸಲು ದಿನಕ್ಕೆ ಗರಿಷ್ಠ 1.7 ಗ್ರಾಂ ಪ್ರೊಟೀನ್‌/ಕೆ.ಜಿ ಅನ್ನು ಪೂರೈಸಬೇಕಾಗುವುದು.   

ಖನಿಜಾಂಶಗಳ ಆವಶ್ಯಕತೆ
ಪಾಸೆ#àಟ್‌ ((mg/d) – 800 – 1000
ಪೊಟ್ಯಾಶಿಯಂ (mg/g – 2000 – 2500)
ಸೋಡಿಯಂ (  g/d) – 1.8-2.5 

ದ್ರವಾಹಾರ
ರೋಗಿಯ ದೇಹತೂಕ ಮತ್ತು ಮೂತ್ರವಿಸರ್ಜನೆಯ ಪ್ರಮಾಣವನ್ನು ಹೊಂದಿಕೊಂಡು ವೈದ್ಯಕೀಯ ತಂಡದವರು ಸೇವಿಸಬೇಕಾದ ದ್ರವಾಹಾರದ ಪ್ರಮಾಣವನ್ನು ಸೂಚಿಸುತ್ತಾರೆ. 

ಇಲೆಕ್ಟ್ರೋಲೈಟ್‌ಗಳು 
ಶರೀರದಲ್ಲಿನ ಇಲೆಕ್ಟ್ರೋಲೈಟ್‌ ಮಟ್ಟವನ್ನು ಗಮನಿಸಬೇಕು ಮತ್ತು ಹೊಂದಾಣಿಕೆ ಮಾಡಿಕೊಳ್ಳ ಬೇಕು, ಕಾಯಿಲೆಯ ಹಂತವನ್ನು ಹೊಂದಿಕೊಂಡು ಇದೂ ಸಹ ವ್ಯತ್ಯಾಸವಾಗಬಹುದು.  

– ಅರುಣಾ ಮಲ್ಯ, 
ಡಯಟೀಶಿಯನ್‌,  ಕೆ. ಎಂ. ಸಿ. ಆಸ್ಪತ್ರೆ, 
ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತ, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next