Advertisement

Subrahmanya: ನೆಟ್ಟಣ ರೈಲು ನಿಲ್ದಾಣ; ಬಸ್‌ಗಾಗಿ ಕಾದು ಸುಸ್ತಾದ ಪ್ರಕರಣ

01:10 PM Oct 17, 2024 | Team Udayavani |

ಸುಬ್ರಹ್ಮಣ್ಯ: ಕೆಲವು ದಿನಗಳ ಹಿಂದೆ ರೈಲಿನ ಮೂಲಕ ನೆಟ್ಟಣಕ್ಕೆ ಆಗಮಿಸಿ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ತೆರಳಲು ಬಸ್‌ ಇಲ್ಲದೇ ಪ್ರಯಾಣಿಕರು ಕಾದು ಸುಸ್ತಾದ ಘಟನೆಗೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ರೈಲು ನಿಲ್ದಾಣಕ್ಕೆ ಹೆಚ್ಚುವರಿ ಬಸ್‌ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಕೆಎಸ್‌ಆರ್‌ಟಿಸಿ ಇಲಾಖೆ ನೀಡಿದೆ.

Advertisement

ರೈಲಿನ ಮೂಲಕ ನೆಟ್ಟಣಕ್ಕೆ ಆಗಮಿಸಿದ್ದ ಪ್ರಯಾಣಿಕರಿಗೆ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಲು ಸಮರ್ಪಕ ಬಸ್‌ ಇಲ್ಲದೇ ಪ್ರಯಾಣಿಕರು ಹಲವು ತಾಸು ಕಾದು ಸುಸ್ತಾಗಿ ಸಂಬಂಧಿಸಿದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಅ.15ರಂದು ಉದಯವಾಣಿ ಸುದಿನದಲ್ಲಿ ‘ನೆಟ್ಟಣ: ಬಸ್‌ಗಾಗಿ ಕಾದು ಸುಸ್ತಾದ ಪ್ರಯಾಣಿಕರು’ ಎಂಬ ಶೀರ್ಷಿಕೆಯಡಿ ಇದರ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಸುದಿನ ವರದಿಯನ್ನು ಲಗತ್ತಿಸಿ ಜತೆಗೆ ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣಕ್ಕೆ ಸಮರ್ಪಕ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಿಸಿದವರನ್ನು ಉಲ್ಲೇಖೀಸಿ ಕುಕ್ಕೆ ಸುಬ್ರಹ್ಮಣ್ಯ ರೈಲು ಬಳಕೆದಾರರು ಎಕ್ಸ್‌ ಮೂಲಕ ಪೋಸ್ಟ್‌ ಮಾಡಿದ್ದರು. ಇದನ್ನು ಪುತ್ತೂರು-ಸುಬ್ರಹ್ಮಣ್ಯ ರೈಲು ಬಳಕೆದಾರರು ಕೆಎಸ್‌ಆರ್‌ಟಿಸಿಯನ್ನು ಉಲ್ಲೇಖೀಸಿ ಮರು ಪೋಸ್ಟ್‌ ಮಾಡಿದ್ದರು. ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್‌ಆರ್‌ಟಿಸಿ, ನಿಮ್ಮ ದೂರನ್ನು ಪರಿಶೀಲಿಸಲಾಯಿತು. ನಿಮಗೆ ತೊಂದರೆ ಆಗಿದ್ದಕ್ಕೆ ವಿಷಾದಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ತರಹದ ನ್ಯೂನತೆಗಳು ಕಂಡುಬರದಂತೆ ಸಂಬಂಧಪಟ್ಟ ಘಟಕ ವ್ಯವಸ್ಥಾಪಕರಿಗೆ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡುವಂತೆ ಸೂಚಿಸಲಾಗಿದೆ. ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಉತ್ತರಿಸಿದ್ದಾರೆ.

ಬೇಡಿಕೆಯಂತೆ ಬಸ್‌ ವ್ಯವಸ್ಥೆ
ನೆಟ್ಟಣದ ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣದ ಮೂಲಕ ಆಗಮಿಸುವ ಪ್ರಯಾಣಿಕರ ಪ್ರಯಾಣಕ್ಕೆ ಸಂಬಂ ಧಿಸಿದಂತೆ ಈಗಾಗಲೇ 6-7 ಕೆಎಸ್‌ಆರ್‌ಟಿಸಿ ಬಸ್‌ ಟ್ರಿಪ್‌ ಮಾಡುತ್ತಿದೆ. ಬೆಳಗ್ಗೆ 11.25, 11.45, 12.20, 12.45, ಹಾಗೂ ಅಪರಾಹ್ನ 1.30, 2 ಗಂಟೆಗೆ ರೈಲು ನಿಲ್ದಾಣದ ಮೂಲಕ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಇಚ್ಲಂಪಾಡಿ ಮೂಲಕ ತೆರಳುವ ಬಸ್‌ಗಳು ರೈಲು ನಿಲ್ದಾಣದ ಮೂಲಕವೇ ಸಂಚರಿಸುತ್ತಿವೆ. ಆದರೆ ರೈಲು ನಿಲ್ದಾಣಕ್ಕೆ ಆಗಮಿಸುವ ಸಂದರ್ಭದಲ್ಲಿ ಪೂರಕ ಬಸ್‌ ವ್ಯವಸ್ಥೆ ಕೆಲವೊಮ್ಮೆ ಇರುವುದಿಲ್ಲ ಎನ್ನುವುದು ಪ್ರಯಾಣಿಕರ ಆರೋಪವಾಗಿತ್ತು. ರಾತ್ರಿ ಹಾಗೂ ಮುಂಜಾನೆ ಸಮಯದಲ್ಲಿ ಆಗಮಿಸುವ ರೈಲುಗಳ ಪ್ರಯಾಣಿಕರ ಸಂಚರಕ್ಕೂ ಪೂರಕ ಬಸ್‌ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಬೇಡಿಕೆ ವ್ಯಕ್ತವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ ಅಧಿಕಾರಿಗಳು, ಕುಕ್ಕೆ ಸುಬ್ರಹ್ಮಣ್ಯದ ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣದ ಮೂಲಕ ಆಗಮಿಸುವ ಪ್ರಯಾಣಿಕರಿಗೆ ಬೇಡಿಕೆಯಂತೆ ಈ ಮೊದಲಿನಿಂದಲೂ ಬಸ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಮಾಹಿತಿ ಬಂದ ತತ್‌ಕ್ಷಣ ನಾವು ಸುಬ್ರಹ್ಮಣ್ಯದಿಂದ ಬಸ್‌ ಕಲ್ಪಿಸುತ್ತೇವೆ. ಇನ್ನೂ ಬೇಡಿಕೆಗಳಿದ್ದಲ್ಲಿ ಕ್ರಮ ಕೈಗೊಳ್ಳಲು ಸುಬ್ರಹ್ಮಣ್ಯ ಬಸ್‌ ನಿಲ್ದಾಣದ ಅಧಿಕಾರಿಗಳಿಗೆ ಸೂಚಿಸುತ್ತೇವೆ ಎಂದರು.

Advertisement

ವ್ಯವಸ್ಥಿತ ತಂಗುದಾಣ ಆಗಲಿ
ನೆಟ್ಟಣದಲ್ಲಿ ದಿನ ನಿತ್ಯ ನೂರಾರು ಪ್ರಯಾಣಿಕರು ಬಸ್‌ ಮೂಲಕ ಪ್ರಯಾಣಿಸುತ್ತಾರೆ. ರೈಲು ಆಗಮಿಸುವ ವೇಳೆ ಒಮ್ಮೆಲೇ ನೂರಾರು ಪ್ರಯಾಣಿಕರು ಇಲ್ಲಿ ಆಗಮಿಸುತ್ತಾರೆ. ಆದರೆ ನೆಟ್ಟಣ ಪೇಟೆಯಲ್ಲಿ ಸಮರ್ಪಕ ಬಸ್‌ ತಂಗುದಾಣ ವ್ಯವಸ್ಥೆ ಇಲ್ಲದೆ ರಸ್ತೆ ಬದಿ ನಿಂತುಕೊಂಡೆ ಬಸ್‌ಗೆ ಕಾಯಬೇಕಾಗಿದೆ. ಒಂದು ಬದಿಯಲ್ಲಿ ಬಸ್‌ ತಂಗುದಾಣ ಇದ್ದರೂ ಅದು ಇಕ್ಕಟ್ಟಿನಿಂದ ಕೂಡಿದೆ. ಇಲ್ಲಿನ ಪ್ರಯಾಣಿಕರ ಸಾಂದ್ರತೆಗೆ ತಕ್ಕಂತೆ ಎರಡೂ ಕಡೆಯಲ್ಲೂ ವ್ಯವಸ್ಥಿತ ಬಸ್‌ ತಂಗುದಾಣ ನಿರ್ಮಿಸಬೇಕು ಎಂಬುದು ಪ್ರಯಾಣಿಕರ ಬೇಡಿಕೆ.

Advertisement

Udayavani is now on Telegram. Click here to join our channel and stay updated with the latest news.

Next