Advertisement

ಸುಬೈದಾ ಕೊಲೆ : ಇಬ್ಬರ ಸೆರೆ; ಮತ್ತಿಬ್ಬರಿಗಾಗಿ ಶೋಧ

02:46 PM Feb 03, 2018 | Team Udayavani |

ಕಾಸರಗೋಡು: ಪೆರಿಯ ಆಯಂಪಾರ ವಿಲ್ಲಾರಂಪದಿ ರಸ್ತೆಯ ಚೆಕ್ಕಿಪಳ್ಳದ ಮನೆಯಲ್ಲಿ  ಏಕಾಂಗಿ ಯಾಗಿ ವಾಸಿಸುತ್ತಿದ್ದ ಸುಬೈದಾ (60) ಅವರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

Advertisement

ಮಧೂರು ಪಟ್ಲ ಕುಂಜಾರು ಕೋಟೆಕಣಿ ನಸ್ರಿನ ಮಂಜಿಲ್‌ನ ಅಬ್ದುಲ್‌ ಖಾದರ್‌ ಕೆ.ಎಂ. ಯಾನೆ ಖಾದರ್‌(26) ಮತ್ತು  ಕುದ್ರೆಪ್ಪಾಡಿ ನಿವಾಸಿ ಅಬ್ದುಲ್‌ ಅಸೀಸ್‌ ಟಿ. ಅಲಿಯಾಸ್‌ ಬಾವಾ ಅಸೀಸ್‌(23)ನನ್ನು ಬಂಧಿತರು. ಮನೆಯಿಂದ ಕಳವು ಮಾಡಿದ ಐದೂವರೆ ಪವನ್‌ ಚಿನ್ನಾಭರಣ ಮತ್ತು ಎರಡು ಕಾರುಗಳನ್ನು ಪತ್ತೆಹಚ್ಚಲಾಗಿದೆ.  

ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳಿದ್ದು, ಈ ಪೈಕಿ ಇಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಉತ್ತರ ವಲಯ ಡಿಜಿಪಿ ರಾಜೇಶ್‌ ದಿವಾನ್‌, ಕಣ್ಣೂರು ಐ.ಜಿ. ಪಿ.ಮಹೀಂದ್ರಪಾಲ್‌ ಯಾದವ್‌ ತಿಳಿಸಿದ್ದಾರೆ.

ಉದ್ದೇಶ ಸ್ಪಷ್ಟವಾಗಿಲ್ಲ
ಕೊಲೆಯ ಹಿಂದೆ ದರೋಡೆ ಉದ್ದೇಶ ಮಾತ್ರ ಅಡಗಿದೆಯೇ ಅಥವಾ  ಬೇರೆ ಏನೇದರೂ ಇತ್ತೇ ಎಂಬುದು ಇತರ ಇಬ್ಬರನ್ನು ಬಂಧಿಸಿದ ಬಳಿಕವಷ್ಟೇ ಸ್ಪಷ್ಟಗೊಳ್ಳಬಹುದೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ ತಂಡದಲ್ಲಿ ಹೊಸದುರ್ಗ ಡಿವೈಎಸ್‌ಪಿ ದಾಮೋದರನ್‌ ಕೆ., ಸಿ.ಐ.ಗಳಾದ ವಿ.ಕೆ.ವಿಶ್ವಂಭರನ್‌, ಸಿ.ಕೆ.ಸುನೀಲ್‌ ಕುಮಾರ್‌, ಅಬ್ದುಲ್‌ ರಹೀಂ, ಎಸ್‌.ಐ.ಗಳಾದ ವಿಪಿನ್‌ ಎಸ್‌., ಮಧುಮದನನ್‌ ಮತ್ತು ಇತರ  ಅಧಿಕಾರಿಗಳಾದ ಜಯರಾಜ್‌, ನಾರಾಯಣನ್‌, ಬಾಲಕೃಷ್ಣನ್‌, ಬಾಲಚಂದ್ರನ್‌, ಮೋಹನನ್‌, ಲಕ್ಷ್ಮೀನಾರಾಯಣನ್‌, ಪ್ರಕಾಶನ್‌, ಅಬೂಬಕ್ಕರ್‌ ಕೆ., ಸುರೇಶ್‌, ಶಿವಕುಮಾರ್‌, ಶ್ರೀಜಿತ್‌, ಅಗಸ್ಟಿನ್‌ ತಂಬಿ, ಗೋಕುಲ್‌, ದೀಪಕ್‌, ಹರಿಪ್ರಸಾದ್‌ ಮೊದಲಾದವರಿದ್ದರು.

ಹಿಂಬಾಲಿಸಿ ಬಂದು ಕುಡಿಯಲು ನೀರು ಕೇಳಿದ್ದರು
ಆರೋಪಿಗಳು ಜ. 6ರಂದು ಕಾಸರಗೋಡಿನಿಂದ ಬಾಡಿಗೆಗೆ ಪಡೆದ ಐ 20 ಆಸ್ಟ್ರ ಕಾರಿನಲ್ಲಿ  ಸುಬೈದಾ ಅವರ ಮನೆ ಪಕ್ಕದ ಚೆಕ್ಕಿಪಳ್ಳದ ಉಂಬು  ಅಲಿಯಾಸ್‌  ಮಹಮ್ಮದ್‌ ಕುಂಞಿ ಅವರು ನಡೆಸುತ್ತಿರುವ, ಕುವೈತ್‌ನ ಕುಂಞಿ  ಮಹಮ್ಮದ್‌ ಅವರ ಮಾಲಕತ್ವದ ಕ್ವಾರ್ಟರ್ಸ್‌ ಅನ್ನು ಬಾಡಿಗೆಗೆ ಪಡೆಯುವ ಸೋಗಿನಲ್ಲಿ ಬಂದು  ಸುಬೈದಾ ಅವರಲ್ಲಿ  ಮಾತುಕತೆ ನಡೆಸಿದ್ದರು.  ಅಂದು  ಮನೆಯ  ಪರಿಸರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದರು. ಮರುದಿನ, ಅಂದರೆ ಜ.7ರಂದು ಮಧ್ಯಾಹ್ನ 12.30ಕ್ಕೆ ಆರೋಪಿಗಳು  ಸ್ವಿಫ್ಟ್‌ ಕಾರಿನಲ್ಲಿ ಸುಬೈದಾ  ಮನೆಗೆ ಬಂದಿದ್ದು, ಆಗ  ಬೀಗ ಹಾಕಲಾಗಿತ್ತು.  ಆರೋಪಿಗಳು ಹಿಂದಿರುಗುತ್ತಿದ್ದಾಗ ಸುಬೈದಾ ಅವರು ಪೆರಿಯ ಪೇಟೆಯಿಂದ ಬಸ್ಸಿನಿಂದ ಇಳಿದು ಬರುತ್ತಿರುವುದನ್ನು ಕಂಡು ಆಕೆಯನ್ನು ಹಿಂಬಾಲಿಸಿ ಆಕೆಯ ಮನೆಗೆ ಬಂದು ಕುಡಿಯಲು ನೀರು ಕೇಳಿದರು.  ಸುಬೈದಾ ಅಡುಗೆ ಕೋಣೆಗೆ ಹೋಗಿ ಶರ್ಬತ್‌ ತಯಾರಿಸಿ ಬರುತ್ತಿದ್ದ ವೇಳೆ ಆರೋಪಿಗಳು ಆಕೆಯ ಮೂಗಿಗೆ ಕ್ಲೋರೋಫೋಮ್‌ಯುಕ್ತ ಬಟ್ಟೆ ಬಿಗಿದು  ಪ್ರಜ್ಞಾಹೀನಗೊಳಿಸಿ  ಉಸಿರುಗಟ್ಟಿಸಿ ಕೊಲೆಗೈದರೆಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next