Advertisement

ವಿದ್ಯಾರ್ಥಿಗಳ ಹೋರಾಟ ಯಶಸ್ವಿ: ವಾಡಿ ಇಂದಿರಾಗಾಂಧಿ ವಸತಿ ಶಾಲೆ ಸ್ಥಳಾಂತರ

10:05 PM Aug 18, 2022 | Team Udayavani |

ವಾಡಿ: ಕಳಪೆ ಊಟ ವಸತಿ ಸೌಲಭ್ಯದಿಂದ ಬೇಸತ್ತು ವಿದ್ಯಾರ್ಥಿಗಳು ಎಐಡಿಎಸ್‌ಒ ನೇತೃತ್ವದಲ್ಲಿ ಹೋರಾಟಕ್ಕಿಳಿದ ಬಳಿಕ ಎಚ್ಚೆತ್ತುಕೊಂಡಿರುವ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಸ್ಥರದ ಅಧಿಕಾರಿಗಳು, ಸ್ಥಳೀಯ ಇಂದಿರಾಗಾಂಧಿ ವಸತಿ ಶಾಲೆಗೆ ಭೇಟಿ ನೀಡುವ ಮೂಲಕ ಮಕ್ಕಳ ಸಮಸ್ಯೆ ಆಲಿಸಲು ಮುಂದಾಗಿದ್ದಾರೆ.

Advertisement

ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಬುಧವಾರ ಸಂಜೆ ವಸತಿ ನಿಲಯಕ್ಕೆ ಹಟಾತ್ ಭೇಟಿ ನೀಡಿದ್ದ ಸಮಾಜ ಕಲ್ಯಾಣ ಇಲಾಖೆಯ ಚಿತ್ತಾಪುರ ತಾಲೂಕು ಅಧಿಕಾರಿ ಚೇತನ್ ಗುರಿಕಾರ, ನಿಲಯದ ಮಕ್ಕಳೊಂದಿಗೆ ಮಾತುಕತೆ ನಡೆಸಿ ಅಲ್ಲಿನ ಅವ್ಯವಸ್ಥೆ ಅರಿಯುವ ಪ್ರಯತ್ನ ಮಾಡಿದ್ದರು. ಶಿಕ್ಷಕರು ಮತ್ತು ಅಡುಗೆಯವರೊಂದಿಗೆ ಮಾತನಾಡಿ ಸಮಸ್ಯೆಗಳ ಬಗ್ಗೆ ತಿಳಿಸಿದುಕೊಂಡು ವರದಿ ದಾಖಲಿಸಿಕೊಂಡಿದ್ದರು.

ಗುರುವಾರ ಬೆಳಗ್ಗೆ ಇತರ ಅಧಿಕಾರಿಗಳೊಂದಿಗೆ ಇದೇ ಇಂದಿರಾಗಾಂಧಿ ವಸತಿ ನಿಲಯಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕಿ ಪಿ.ಶುಭಾ, ನಿಲಯದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕಣ್ಣಾರೆ ಪರೀಕ್ಷಿಸಲು ಮುಂದಾದರು. ಮಕ್ಕಳು ವಾಸವಿರುವ ಬಾಡಿಗೆ ಶಾಲಾ ಕಟ್ಟಡವನ್ನು ಅವಲೋಕಿಸಿದರು.

ಪಾಠದ ಕೋಣೆ, ವಸತಿ ಕೋಣೆ, ಶೌಚಾಲಯ ಅವ್ಯವಸ್ಥೆ ಗಮನಿಸಿದರು. ಊಟಕ್ಕೆ ಬಳಸುವ ಆಹಾರ ಧಾನ್ಯಗಳ ಗುಣಮಟ್ಟ ನೋಡಿದರು. ಅಡುಗೆ ಸಹಾಯಕರೊಂದಿಗೆ ಚರ್ಚಿಸಿ ತರಾಟೆಗೆ ತೆಗೆದುಕೊಂಡರು. ಉಂಟಾದ ಮಕ್ಕಳ ಅನಾನುಕೂಲಕರ ಸಮಸ್ಯೆಗೆ ವಿಷಾಧ ವ್ಯಕ್ತಪಡಿಸಿದರು. ಮಕ್ಕಳಿಂದ ದೂರು ಸ್ವೀಕರಿಸಿದ ಅಧಿಕಾರಿ ಶುಭಾ, ಸೋಮವಾರವೆ ಎಲ್ಲಾ ವಿದ್ಯಾರ್ಥಿಗಳನ್ನು ವಾಡಿ ನಗರದ ಖಾಸಗಿ ಕಟ್ಟಡದಿಂದ ಸ್ಥಳಾಂತರಿಸಿ ಕರದಾಳ ಗ್ರಾಮದಲ್ಲಿನ ನೂತನ ವಸತಿ ಶಾಲೆ ಕಟ್ಟಡಕ್ಕೆ ಕರೆದೊಯ್ಯಲಾಗುವುದು ಎಂದು ಭರವಸೆ ನೀಡಿದರು.

ಅಧಿಕಾರಿಗಳ ಆಶಾದಾಯಕ ಭರವಸೆಗೆ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು. ಇದೇ ವೇಳೆ ಕರದಾಳ ನೂತನ ಕಟ್ಟಡವನ್ನೂ ವೀಕ್ಷಿಸಿದರು. ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಚೇತನ್ ಗುರಿಕಾರ, ಗುರುಪಾದಪ್ಪ ನೀಲಗಿ, ನಿಲಯದ ಪ್ರಾಂಶುಪಾಲರು ಹಾಗೂ ಶಿಕ್ಷಕರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next