Advertisement

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

03:00 PM Apr 01, 2024 | Team Udayavani |

ದೊಡ್ಡಬಳ್ಳಾಪುರ: ನಮ್ಮೂರು ಏನೆಂದುಕೊಂಡ್ರಿ, ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರನ್ನೇ ನ್ಯಾಯಾಲಯಕ್ಕೆ ಕರೆಸಿಕೊಂಡು, ಅವರ ಹೇಳಿಕೆಯ ಪ್ರಮಾಣ ಪತ್ರವನ್ನು ದಾಖಲಿಸಿಕೊಳ್ಳಲಾಗಿತ್ತು ಎಂದು ಲೋಕ ಸಭೆ ಅಥವಾ ರಾಜ್ಯ ಸಭಾ ಚುನಾವಣಾ ವೇಳೆ, ಹಿರಿಯರು ಈಗಲೂ ನೆನಪಿಸಿಕೊಳ್ಳುತ್ತಾರೆ. ಅರೆ, ಇಲ್ಲಿನ ಸಣ್ಣ ಪಟ್ಟಣವಾಗಿದ್ದ ದೊಡ್ಡಬಳ್ಳಾಪುರಕ್ಕೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಇಲ್ಲಿಗೇಕೆ ಬಂದರು ಎನ್ನುವ ಕುತೂಹಲ ಸಹಜವಾಗಿ ಮೂಡಿಬರುತ್ತದೆ.

Advertisement

ಲೋಕಸಭಾ ಚುನಾವಣೆ ವೇಳೆ ಇಂದಿರಾ ಗಾಂಧಿ ಅವರು ರಾಜ್ಯ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮರುಚುನಾವಣೆಯಲ್ಲಿ ಸಂಸದರಾಗಿ ಅಯ್ಕೆಯಾ ಗಿದ್ದರು ಎಂದು ನೆನಪು ಮಾಡಿಕೊಂಡಂತೆ ರಾಜ್ಯ ಸಭೆಗೆ ಆಯ್ಕೆಯಾಗುವ ವಿಚಾರದಲ್ಲಿ ಉಂಟಾಗಿದ್ದ ಮತದಾ ರರ ಪಟ್ಟಿಯ ವಿವಾದ ಅಂದರೆ ದೊಡ್ಡಬಳ್ಳಾಪುರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಪ್ರಯ ತ್ನಿಸಿದ್ದ ವಿಚಾರ ಸಹ ಪ್ರಸ್ತಾಪವಾಗುತ್ತಲೇ ಇರುತ್ತದೆ.

ಏನಿದು ಪ್ರಕರಣ?: ಅಂದು ಪ್ರಧಾನ ಮಂತ್ರಿಯಾಗಿದ್ದ ಇಂದಿರಾಗಾಂಧಿ ಅವರು 1977ರ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಆಗ ಮೊರಾರ್ಜಿ ದೇಸಾಯಿ ಪ್ರಧಾನ ಮಂತ್ರಿಯಾಗಿದ್ದರು. ಈ ವೇಳೆ ಕಾಂಗ್ರೆಸ್‌ ಮುಖಂಡರು ಇಂದಿರಾಗಾಂಧಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಲು ಸಿದ್ಧತೆ ನಡೆಸಿದ್ದರು. ಆ ಸಂದರ್ಭದಲ್ಲಿ ರಾಜ್ಯಸಭೆಗೆ ಆಯಾ ರಾಜ್ಯದಲ್ಲಿ ಮತದಾರರಾದವರು ಮಾತ್ರ ಅಯ್ಕೆಯಾಗಬೇಕು ಎನ್ನುವ ನಿಯಮ ಇತ್ತು. ಆಗ ಕರ್ನಾಟಕ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್‌ ಪಕ್ಷ ಅಧಿಕಾರಿದಲ್ಲಿತ್ತು. ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಮಾಡಲು ಕಾಂಗ್ರೆಸ್‌ ಮುಖಂಡರು ಮತ್ತು ಅಂದಿನ ಕರ್ನಾಟಕದ ಮುಖ್ಯ ಮಂತ್ರಿ ದೇವರಾಜು ಅರಸು ನಿರ್ಧರಿಸಿ, ಇಂದಿರಾ ಗಾಂಧಿ ಅವರನ್ನು ರಾಜ್ಯದ ನಿವಾಸಿಗಳನ್ನಾಗಿಸಲು ದೊಡ್ಡಬಳ್ಳಾಪುರ ತಾಲೂಕಿನ ಸಮೀಪದ ನಂದಿಬೆಟ್ಟದ ತಪ್ಪಲಿನಲ್ಲಿರುವ ವಿಷ್ಣು ಆಶ್ರಮದ ವಿಳಾಸದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದೊಡ್ಡಬಳ್ಳಾಪುರದ ನಿವಾಸಿ ಅಮಾವಾಸ್ಯೆ ನೀಲ ಕಂಠಯ್ಯ ಎಂಬುವರು, ವಿಷ್ಣು ಆಶ್ರಮದ ವಿಳಾಸದಲ್ಲಿ ಇಂದಿರಾಗಾಂಧಿ ಖಾಯಂ ವಾಸಿಯಲ್ಲ. ದೊಡ್ಡಬಳ್ಳಾ ಪುರ ತಾಲೂಕು ಕಚೇರಿಗೆ ಮತದಾರರ ಪಟ್ಟಿ ಸೇರ್ಪಡೆಗೆ ಸಲ್ಲಿಸಿರುವ ಪ್ರಮಾಣಪತ್ರ ಸುಳ್ಳಾಗಿದೆ. ನ್ಯಾಯಾಲಯಕ್ಕೆ ಸಲ್ಲಿರುವ ದೂರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಮತದಾರರ ಪಟ್ಟಿಗೆ ಇಂದಿರಾಗಾಂಧಿ ಹೆಸರು ನೋಂದಣಿ ಮಾಡದಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಇವರ ಪರ ವಕೀಲರಾದ ರಾಮ್‌ ಜೇಠ್ಮಲಾನಿ, ಎ.ಲಕ್ಷ್ಮೀಸಾಗರ್‌ ಮತ್ತು ಎಸ್‌.ವಿ.ಜಗನ್ನಾಥ್‌ ವಕಾಲತ್ತು ವಹಿಸಿದ್ದರು. ಅರ್ಜಿಯಲ್ಲಿ ಇಂದಿರಾಗಾಂಧಿ ಅವರು ಮೊದಲ ಆರೋಪಿಯಾಗಿ ಮತ್ತು ಹಿರಿಯ ರಾಜಕಾರಣಿಯಾಗಿದ್ದ ಆರ್‌.ಎಲ್.ಜಾಲಪ್ಪ ಅವರು ಎರಡನೇ ಆರೋಪಿಯಾಗಿದ್ದರು.

ಪ್ರಕರಣ ಬೆಂಗಳೂರಿಗೆ ವರ್ಗ: ದೊಡ್ಡಬಳ್ಳಾಪುರ ನ್ಯಾಯಾಲಯದಲ್ಲಿ ಇಂದಿರಾಗಾಂಧಿ ಅವರ ಪ್ರಕರಣವು ವಿಚಾರಣೆ ಮುಂದುವರಿದಾಗ ಇಂದಿರಾ ಗಾಂಧಿ ಅವರ ಪರವಾಗಿದ್ದ ವಕೀಲರು ಈ ಪ್ರಕರಣ ಜನಪ್ರತಿಧಿಗಳ ಕಾಯಿದೆಯಡಿ ಹೈಕೋರ್ಟ್‌ನಲ್ಲಿ ವಿಚಾರಣೆ ಆಗಬೇಕಾಗಿದೆ. ಇದು ಸ್ಥಳೀಯ ನ್ಯಾಯಾ ಲಯದಲ್ಲಿ ವಿಚಾರಣೆಗೆ ಒಳಪಡುವಂತಿಲ್ಲ ಎಂದು ವಾದಿಸಿದರು. ಇದರಿಂದಾಗಿ ಇಂದಿರಾಗಾಂಧಿ ಅವರ ಮೊಕದ್ದಮೆ ಬೆಂಗಳೂರಿನ ಹೈಕೋರ್ಟ್‌ಗೆ ವರ್ಗಾ ವಣೆಗೊಂಡಿತು. ಕೆಲವು ವರ್ಷಗಳ ನಂತರ ದೂರು ದಾರ ಅಮಾವಾಸ್ಯೆ ನೀಲಕಂಠಯ್ಯ ಅವರು ನಿಧನ ರಾದ ನಂತರ ಈ ಮೊಕದ್ದಮೆ ಮುಕ್ತಾಯಗೊಂಡಿತು.

ನಂತರ ಲೋಕಸಭೆಗೆ ಆಯ್ಕೆ: ಮತದಾರರ ಪಟ್ಟಿ ಸೇರ್ಪಡೆ ವಿಚಾರ ವಿವಾದಕ್ಕೆ ಒಳಗಾದ ಹಿನ್ನೆಲೆಯಲ್ಲಿ ಇಂದಿರಾಗಾಂಧಿ ಅವರನ್ನು ಲೋಕಸಭೆಗೆ ಕರ್ನಾಟಕ ದಿಂದ ಕಳುಹಿಸುವ ಪ್ರಯತ್ನ ಪ್ರಾರಂಭಗೊಂಡಿತು. ಆಗ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದ ಡಿ.ಬಿ.ಚಂದ್ರೇಗೌಡ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ನಂತರ ನಡೆದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮರು ಚುನಾ ವಣೆಯಲ್ಲಿ ಇಂದಿರಾಗಾಂಧಿ ಸಂಸದರಾಗಿ ಅಯ್ಕೆ ಯಾಗಿ 1978ರಲ್ಲಿ ಲೋಕಸಭೆ ಪ್ರವೇಶ ಮಾಡಿದರು. ಈ ಪ್ರಕರಣ ದೊಡ್ಡಬಳ್ಳಾಪುರದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದಿದೆ.

Advertisement

ನ್ಯಾಯಾಲಯಕ್ಕೆ ಹಾಜರಾಗಿದ್ದ ಇಂದಿರಾ ಗಾಂಧಿ :

ದೊಡ್ಡಬಳ್ಳಾಪುರ ನ್ಯಾಯಾಲಯದಲ್ಲಿ ಅಮಾವಾಸ್ಯೆ ನೀಲಕಂಠಯ್ಯ ಅವರ ದೂರಿನ ವಿಚಾರಣೆಯನ್ನು ನ್ಯಾಯಾಧೀಶರಾದ ಎ.ಮೋಹನ್‌ ರಾವ್‌ ನಡೆಸಿದರು. ಆರೋಪಿಗಳಾದ ಇಂದಿರಾಗಾಂಧಿ ಮತ್ತು ಆರ್‌.ಎಲ್.ಜಾಲಪ್ಪ ಅವರ ಪರವಾಗಿ ವಕೀಲರಾದ ಜಿ.ರಾಮಸ್ವಾಮಿ, ರಾಜೇಂದ್ರಬಾಬು ಮತ್ತು ದೊಡ್ಡಬಳ್ಳಾಪುರದ ಎ.ಆರ್‌.ನಾಗರಾಜನ್‌ ವಾದಿಸಿದರು. ನ್ಯಾಯಾಲಯದ ವಿಚಾರಣೆಯಲ್ಲಿ ಆರೋಪಿ ಇಂದಿರಾಗಾಂಧಿ ಅವರು ಅನಿವಾರ್ಯವಾಗಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕಾಯಿತು. ಇದರಿಂದಾಗಿ 1979ರಲ್ಲಿ ಇಂದಿರಾ ಗಾಂಧಿ ಅವರು ದೊಡ್ಡಬಳ್ಳಾಪುರ ನ್ಯಾಯಾಲಯಕ್ಕೆ ಹಾಜರಾದರು. ಅಂದು ಅವರು ಬೆಳಗ್ಗೆ 10 ಗಂಟೆಗೆ ದೊಡ್ಡಬಳ್ಳಾಪುರಕ್ಕೆ ಆಗಮಿಸಿ, ಬೆಳಗ್ಗೆ 11 ಗಂಟೆಗೆ ನ್ಯಾಯಾಲಯದ ನಿಗದಿತ ಸಮಯಕ್ಕೆ ಸರಿಯಾಗಿ ನ್ಯಾಯಾಧೀಶರ ಮುಂದೆ ಇಂದಿರಾಗಾಂಧಿ ಹಾಜರಾಗಿ ತಾವು ಸಲ್ಲಿಸಿದ ಪ್ರಮಾಣಪತ್ರ ಸರಿಯಾಗಿದೆ ಎಂದು ನ್ಯಾಯಾಧೀಶರ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದರು. ಇದು ಅಂದಿನ ಕಾಲದಲ್ಲಿ ದೇಶದಾದ್ಯಂತ ಸುದ್ದಿಯಾಗಿತ್ತು ಎಂದು ಸ್ಮರಿಸುತ್ತಾರೆ ಹಿರಿಯ ವಕೀಲರುಗಳು.‌

– ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next