ಮುಂಡಗೋಡ: ಪಟ್ಟಣದ ಹಳೂರಿನ ಹಿರಿಯ ಪ್ರಾಥಮಿಕ ಶಾಲೆಯ ಹಿಂಬದಿಯಲ್ಲಿರುವ ಚರಂಡಿ ವಾಸನೆಯಿಂದ ತರಗತಿಯಲ್ಲಿ ಕುಳಿತುಕೊಳ್ಳಲಾಗದೆ ಶಾಲೆಯ ಆವರಣದಲ್ಲಿ ಕುಳಿತುಕೊಂಡು ವಿದ್ಯಾರ್ಥಿಗಳು ಪಾಠ ಕೇಳುತ್ತಿರುವ ಘಟನೆ ಡಿ.19ರ ಮಂಗಳವಾರ ನಡೆಯಿತು.
ಈ ಶಾಲೆಯಲ್ಲಿ 120 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕಳೆದ ಮೂರು ವರ್ಷಗಳಿಂದಲೂ ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸುವ ಚಿಂತನೆಯನ್ನು ಕೂಡಾ ಮಾಡಿಲ್ಲ.
ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರಗುತ್ತಿದ್ದೆ. ಆದರೆ ಶಾಲೆಯ ವಾತವರಣದಿಂದಾಗಿ ಬೇಸತ್ತು ಕಳೆದ ವರ್ಷ 60 ವಿದ್ಯಾರ್ಥಿಗಳು ಟಿ.ಸಿ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೆ ದುರ್ವಾಸನೆಯಿಂದ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಆರೋಗ್ಯ ಹಾನಿಯಾಗುತ್ತಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ನಾಗರಾಜ ಕಳಲಕೊಂಡ ಹೇಳಿದರು.
ಮೂರು ವರ್ಷಗಳಿಂದ ಇದೆ ಸಮಸ್ಯೆಯಾಗಿದೆ. ಪ.ಪಂ ಮತ್ತು ತಹಶೀಲ್ದಾರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನೆ ಆಗಿಲ್ಲ. ಮಂಗಳವಾರ ವಿದ್ಯಾರ್ಥಿಗಳು ತರಗತಿ ಕೊಠಡಿಯಲ್ಲಿ ಕುಳಿತುಕೊಳ್ಳುವುದಿಲ್ಲ. ನಾವು ಆವರಣದಲ್ಲಿ ಕುಳಿತುಕೊಂಡು ಪಾಠ ಕೇಳುತ್ತೇವೆ ಎಂದು ಹೇಳಿದ್ದರಿಂದ ಶಾಲೆಯ ಎಲ್ಲಾ ತರಗತಿ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಕುಳಿತುಕೊಂಡಿದ್ದಾರೆ ಎಂದು ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಶಾಂತ ಕರೆಗಾರ್ ಹೇಳಿದರು.
ಇಷ್ಟೆಲ್ಲ ಘಟನೆ ಆದರೂ ಬಿಇಒ ಶಾಲೆಗೆ ಭೇಟಿ ನೀಡದಿರುವುದರಿಂದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.