Advertisement

ಸಾವಯವ ಕೃಷಿಯಲ್ಲಿ ಖುಷಿ ಕಂಡ ವಿದ್ಯಾರ್ಥಿಗಳು

05:35 AM Mar 16, 2019 | |

ಬೆಳ್ತಂಗಡಿ : ಗಣಿತ ಲೋಕ, ಔಷಧೀಯ ವನ, ಹಿಂದಿ ಸ್ಮಾರ್ಟ್‌ ಕ್ಲಾಸ್‌ ಮೊದಲಾದ ಅದ್ವಿತೀಯ ಕಾಣಿಕೆಗಳನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿ ಹೆಸರುವಾಸಿಯಾಗಿರುವ ಬೆಳ್ತಂಗಡಿ ತಾ|ನ ನಡ ಸರಕಾರಿ ಪ್ರೌಢಶಾಲೆ ಮೌನ ಕ್ರಾಂತಿಯನ್ನು ಮಾಡಿದೆ.

Advertisement

ಶಾಲೆಯ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಇಲ್ಲಿ ಸಾವಯವ ಕೃಷಿ ಕೈತೋಟವನ್ನು ನಿರ್ಮಿಸಿ ಅಧಿಕ ಇಳುವರಿ ಪಡೆದು ಕೊಳ್ಳುವುದರ ಮೂಲಕ ಯಶ ಕಂಡಿದ್ದಾರೆ. ಶಾಲೆಯಲ್ಲಿ ಕೊಯ್ಲು ಮಾಡಿಟ್ಟಿರುವ ತರಕಾರಿಯನ್ನು ನೋಡುವಾಗ ವಿದ್ಯಾರ್ಥಿಗಳ ಮುಖದಲ್ಲಿ ಸಾರ್ಥಕತೆ ಭಾವ ಕಾಣುತ್ತಿದೆ. ತಾವೇ ಬೆಳೆದ ಸಾವಯವ ತರಕಾರಿ ಗಳನ್ನು ಬಿಸಿಯೂಟದಲ್ಲಿ ಸವಿಯುವಾಗ ವಿದ್ಯಾರ್ಥಿಗಳ ಸಂತೋಷ ಅಷ್ಟಿಷ್ಟಲ್ಲ.

 ಜಾಗ ಸಮತಟ್ಟು
ಶಾಲಾಭಿವೃದ್ಧಿ ಸಮಿತಿ ಹಾಗೂ ಹೆತ್ತವರ ಸಹಕಾರದಿಂದ ಸುಮಾರು 1 ಎಕ್ರೆಯಷ್ಟು ಜಾಗವನ್ನು ಸಮತಟ್ಟುಗೊಳಿಸಿ, ಕೃಷಿ ಇಲಾಖೆ ನೆರವಿನೊಂದಿಗೆ ಮೈಸೂರಿನಿಂದ ಸಾವಯವ ಬೀಜಗಳನ್ನು ತರಿಸಿಕೊಂಡು ಇಲ್ಲಿ ನಾಟಿ ಮಾಡಲಾಗಿದೆ. ಪ್ರಗತಿಪರ ಕೃಷಿಕರಾದ ಪ್ರಭಾಕರ ಮಯ್ಯ ಹಾಗೂ ಅಜಿತ್‌ ಆರಿಗರ ಸೂಕ್ತ ಮಾರ್ಗದರ್ಶನದಲ್ಲಿ ಕೋಳಿ ಗೊಬ್ಬರ ಹಾಗೂ ಕುರಿ ಗೊಬ್ಬರಗಳನ್ನು ಮಿಶ್ರ ಮಾಡಿ ಕೊಂಡು ಬೀಜ ನಾಟಿ ಮಾಡಲಾಗಿತ್ತು. ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಏಕನಾಥ್‌ ಗೌಡ ಹಾಗೂ ಶಾಲೆಯ 9ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ನೀರು ಹಾಯಿಸಿ ತರಕಾರಿ ಗಿಡಗಳನ್ನು ಅತ್ಯಂತ ಸೂಕ್ತ ರೀತಿಯಲ್ಲಿ ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ. ಈಗ ಸುಮಾರು ಮುಕ್ಕಾಲು ಎಕ್ರೆ ಜಾಗದಲ್ಲಿ ಕೃಷಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ವಿಸ್ತರಿಸುವ ಚಿಂತನೆಯೂ ಇದೆ.

ಜಿಲ್ಲಾ ಸಭೆಯಲ್ಲಿ ಪ್ರಶಂಸೆ
ಶಾಲೆಯ ಕೈತೋಟವನ್ನು ನೋಡಲು ರಾಷ್ಟ್ರೀಯ ಆಹಾರ ಭದ್ರತ ಮಂಡಳಿಯ ಅಧ್ಯಕ್ಷರು, ಸದಸ್ಯರ ತಂಡ ಭೇಟಿ ನೀಡಿತ್ತು. ಜಿಲ್ಲಾಧಿಕಾರಿ ಅವರ ಜಿಲ್ಲಾ ಮಟ್ಟದ ಸಭೆಯಲ್ಲಿ ಶಾಲಾ ಕೈತೋಟದ ಬಗ್ಗೆ ಪ್ರಸ್ತಾವಿಸಿ ಪ್ರಶಂಸಿಸಲಾಗಿತ್ತು. ತಾ| ಅಕ್ಷರ ದಾಸೋಹದ ಸ. ನಿರ್ದೇಶಕ ಲಕ್ಷ್ಮಣ ಶೆಟ್ಟಿ ಉತ್ತೇಜನದಿಂದ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಅಡುಗೆ ಸಿಬಂದಿ ಬೇಸಗೆಯ ಸಂದರ್ಭದಲ್ಲಿಯೂ ಸೂಕ್ತ ರೀತಿಯಲ್ಲಿ ಕೈತೋಟವನ್ನು ನಿರ್ವಹಿಸುತ್ತಿದ್ದಾರೆ.

ವಿದ್ಯಾರ್ಥಿಗಳಲ್ಲಿ ಪಠ್ಯದ ಜತೆಗೆ ಸಾವಯವ ಹಾಗೂ ಸಾಂಪ್ರದಾಯಿಕ ಕೃಷಿ ಬಗ್ಗೆ ಅರಿವು ಮೂಡಿಸುವುದರ ಉದ್ದೇಶದಿಂದ ಹಾಗೂ ಮಧ್ಯಾಹ್ನದ ಬಿಸಿಯೂಟಕ್ಕೆ ವಿಷರಹಿತ ತರಕಾರಿ ಗಳನ್ನು ಬಳಕೆ ಮಾಡುವ ಇರಾದೆಯಿಂದ ಈ ಕೈತೋಟವನ್ನು ನಿರ್ಮಿಸಲಾಗಿದೆ.

Advertisement

ತೋಟದಲ್ಲಿ ಏನೇನಿದೆ ?
ತರಕಾರಿ ತೋಟದಲ್ಲಿ ಸೌತೆ ಕಾಯಿ, ಬಾಳೆ, ಪಡುವಲ ಕಾಯಿ, ಚೀನೀಕಾಯಿ, ಬೂದು ಕುಂಬಳ, ಹೀರೇಕಾಯಿ, ಬದನೆ, ಬಸಳೆ, ಅಲಸಂಡೆ, ಬೆಂಡೆಕಾಯಿ, ಸೋರೆಕಾಯಿ, ಹರಿವೆ ಸೊಪ್ಪು ಮೊದಲಾದವುಗಳನ್ನು ಯಥೇತ್ಛವಾಗಿ ಬೆಳೆಯಲಾಗಿದೆ. ಅಡುಗೆ ಕೋಣೆ ಅಂಗಳದಲ್ಲಿ ಒಂದೆಲಗ ನಾಟಿ ಮಾಡಲಾಗಿದೆ.

 ಕೈತೋಟ
ಶಿಕ್ಷಕರು ಮತ್ತು ಮಕ್ಕಳು ಅತ್ಯಂತ ಆಸಕ್ತಿಯಿಂದ ಪ್ರತಿದಿನ ಗಿಡಗಳ ಆರೈಕೆ ಮಾಡುತ್ತಿದ್ದಾರೆ. ಪ್ರಗತಿಪರ ಕೃಷಿಕರು ಹಾಗೂ ಹೆತ್ತವರು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಈಗಾಗಲೇ ಶಾಲೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಔಷಧೀಯವನ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಹಣ್ಣು ಹಂಪಲು ಗಿಡಗಳ ಅಕ್ಷರ ಕೈತೋಟ ರಚಿಸುವ ಯೋಜನೆಗೆ ಚಾಲನೆ ನೀಡಲಾಗುವುದು.
– ಶರ್ಮಿಳಾ ಬಿ.
ಶಾಲಾ ಮುಖ್ಯ ಶಿಕ್ಷಕಿ

Advertisement

Udayavani is now on Telegram. Click here to join our channel and stay updated with the latest news.

Next