Advertisement

ವಿದ್ಯಾರ್ಥಿಗಳು ಮತ್ತು ಸಾಹಿತ್ಯ

06:00 AM Dec 14, 2018 | |

ವಿದ್ಯಾರ್ಥಿಗಳು ಮತ್ತು ಸಾಹಿತ್ಯ ಪುಸ್ತಕ ದೊರೆತ ಅರಿವು- ಮಸ್ತಕದಿ ಬೆರೆತ ತಿಳಿವುಗಳೊಂದಾದಾಗ ಜ್ಞಾನದ ಜನನವಾಗುತ್ತದೆ. ಸುಜ್ಞಾನಿಗಳ ಒಡಲಲ್ಲಿ ಓರ್ವ ಕವಿ ಅಥವಾ ಬರಹಗಾರ ಸೃಷ್ಟಿಯಾಗಬಲ್ಲ. ಮಾತುಗಳಿಂದ, ರಚನೆಯ ಕಲೆಯಿಂದ ಅದ್ಭುತ ಸಾಹಿತ್ಯ ಲೋಕ ಸೃಷ್ಟಿಯಾಗಬಲ್ಲುದು. ಮನದ ಭಾವನೆಗಳಿಗೆ ಬರಹ ರೂಪ ನೀಡಿ, ಸಂಬಂಧ ಬೆಸೆಯುವ ವಿಶೇಷ ಶಕ್ತಿ ಸಾಹಿತ್ಯಕ್ಕಿದೆ. “ರವಿ ಕಾಣದ್ದನ್ನು ಕವಿ ಕಂಡ’- ಎಂಬ ಮಾತಿನ ತಾತ್ಪರ್ಯದಂತೆ ನೈಜತೆಯನ್ನು ಬಿಂಬಿಸುವ ಶಕ್ತಿ-ಯುಕ್ತಿ ಕವಿ ಹೃದಯಕ್ಕಿದೆ. 

Advertisement

ವಚನ ಸಾಹಿತ್ಯ, ಗೀತ ಸಾಹಿತ್ಯ, ಗದ್ಯ ಸಾಹಿತ್ಯ, ವಿಮಶಾì ಸಾಹಿತ್ಯ ಮತ್ತೆ ಇವುಗಳಲ್ಲಿ ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಅಥವಾ ಆಧುನಿಕ ಕನ್ನಡ ಎಂಬ ಭಾಷಾ ಪ್ರಕಾರಗಳನ್ನೊಳಗೊಂಡ ಸಾಹಿತ್ಯ ಪ್ರಕಾರಗಳಿವೆ. ಹೀಗೆ “ಹಳೆ ಚಿಗುರು-ಹೊಸ ಬೇರು’ ಎಂಬಂತೆ ಹಲವು ಮಹೋನ್ನತ ಪ್ರಕಾರಗಳ ಆಗರವಿದು. ಕೆಲವರಿಗೆ ಗೀತ ಸಾಹಿತ್ಯದ ನೈಪುಣ್ಯ ಬಳುವಳಿಯಾಗಿ ದೊರೆತಿದ್ದರೆ, ಇನ್ನು ಕೆಲವರು ಗದ್ಯ ಸಾಹಿತ್ಯಗಳಲ್ಲಿ ಪರಿಣತರಾಗಿರುತ್ತಾರೆ. ಕೆಲವರದ್ದಂತೂ ಕಂಡದ್ದನ್ನು ವಿಭಿನ್ನ ಶೈಲಿಯಲ್ಲಿ ರೂಪಿಸುವ ಕವಿಮನಸು. ಇನ್ನು ಕೆಲವರಿಗೆ ವಿಷಯಗಳ ಸಂಪೂರ್ಣ ಪ್ರಸ್ತಾವನೆಯ ಮೂಲಕ ಅಂಕಿ-ಅಂಶಗಳ ತೆರೆದಿಟ್ಟು ಬರಹ ಸಿದ್ಧಪಡಿಸುವ ಪ್ರತಿಭೆ ಇದೆ. ಪುಟ್ಟ ಸಾಲುಗಳೊಡನೆ ಆರಂಭವಾಗುವ ಕವಿತೆಗಳು ಇಲ್ಲಿ ವಿಚಾರಾತ್ಮಕ ಲೇಖನಗಳ ಮೂಲಕ ಪ್ರಕಟಗೊಂಡಿರುತ್ತದೆ. ಇವೇ ಸಾಹಿತ್ಯದ ವ್ಯತ್ಯಾಸ ಮತ್ತು ವಿಶೇಷತೆ. 

ಸಾಹಿತಿಯಾದವನು ಒಂದು ವಿಚಾರವನ್ನು ಸೂಕ್ಷ್ಮವಾಗಿ-ಕೂಲಂಕಷವಾಗಿ ಅಧ್ಯಯಿಸಿರ ಬೇಕಾಗುತ್ತದೆ. ಪುಸ್ತಕ ಜ್ಞಾನ ಇಲ್ಲಿ ಅಗತ್ಯವಾದದ್ದು. ಸಾಮಾನ್ಯ ಜನರ ನೋಟಕ್ಕೂ, ಓರ್ವ ಬರಹಗಾರನ ನೋಟಕ್ಕೂ ವಿಶೇಷತೆ-ವಿಭಿನ್ನತೆ ಇರುತ್ತದೆ. ಉದಾಹರಣೆಗೆ, ಓರ್ವ ವ್ಯಕ್ತಿ ಒಂದು ಮರವನ್ನು ಗಮನಿಸಿದಾಗ ಆತನಿಗೆ ಆ ಮರದಲ್ಲಿ ಎಲೆ-ಕಾಂಡ-ರೆಂಬೆ-ಕೊಂಬೆಗಳು ಮಾತ್ರ ಕಾಣಿಸುತ್ತವೆ ಎಂದಿಟ್ಟುಕೊಳ್ಳೋಣ. ಆದರೆ, ಸಾಹಿತ್ಯಿಕವಾಗಿ ಚಿಂತಿಸುವ ಮನಸ್ಸಿಗೆ ಆ ಮರದ ಸೂಕ್ಷ್ಮಾಣುಸೂಕ್ಷ್ಮ ವಿಚಾರಗಳು, ಕಾಣದ ಕಲ್ಪನೆಗಳು ಕೂಡಾ ಚಿತ್ರಿತವಾಗಿರಬೇಕಾಗುತ್ತದೆ. 

 ನಮ್ಮಲ್ಲಿ ಸಾಹಿತಿಗಳ ಸಮೂಹವೇ ಇದ್ದಂತಹ ಒಂದು ಕಾಲವಿತ್ತು. ಸರ್ವಜ್ಞ ತನ್ನ ವಚನಸಾಹಿತ್ಯದ ಮೂಲಕ ಗಮನ ಸೆಳೆದರೆ, ಡಿ. ವಿ. ಜಿ. ಕಗ್ಗಗಳ ಮೂಲಕ, ಕುವೆಂಪು- ಕಾರಂತರಂತಹ ಮಹನೀಯರು ತಮ್ಮ ಕವಿತೆ-ಬರಹಗಳ ಮೂಲಕ ಜನಮನಸೆಳೆದಿದ್ದರು. ಆದಿಕವಿ ಪಂಪನಿಂದ ಹಿಡಿದು ಆಧುನಿಕ ಭಾರತದ ಅನೇಕ ಕವಿರತ್ನಗಳ ಅಮೋಘ ಸಾಹಿತ್ಯ ಪ್ರಪಂಚ ಎಲ್ಲರಿಗೂ ಮಾರ್ಗದಾಯಕವಾಗಿತ್ತು. ಮನಸ್ಸು ಮಂದಿರದಿ ಸುಪ್ತವಾಗಿರುವಂತಹ ಭಾವನೆಗಳ ಪ್ರತೀ ತುಣುಕುಗಳಿಗೂ ತಮ್ಮದೇ ಯೋಚನೆಯನ್ನು ಬೆರೆಸಿ, ಪದಮಾಲೆಗಳಲ್ಲಿ ಜೋಡಿಸಿ, ಕಲ್ಪಿತ ಮಾದರಿ ಶೈಲಿಗಳನ್ನಾಗಿ ರೂಪಿಸಿ, ಅದಕ್ಕೊಂದು ವಸ್ತುನಿಷ್ಠತೆಯ ರೂಪವನ್ನಿತ್ತು ಅಲಂಕೃತಗೊಳ್ಳುವ ಈ ಸಾಹಿತ್ಯದ ಒಲವು ಯುವಮನಗಳಿಂದ ಬಹುದೂರ ಪಯಣಿಸುತ್ತಿರುವಂತೆ ಭಾಸವಾಗುತ್ತಿದೆ. 

ಡಿವಿಜಿ ಒಂದು ಕಡೆಯಲ್ಲಿ ಹೇಳುತ್ತಾರೆ ನಗುವೊಂದು ರಸಪಾಕ-ಅಳುವೊಂದು ರಸಪಾಕ-ನಗು ಆತ್ಮ ಪರಿಮಳವ ಪಸರಿಸುವ ಕುಸುಮ, ದುಗುಡ ಆತ್ಮವ ಕಳೆದು ಸತ್ವವೆತ್ತುವ ಮಂತು- ಹೀಗೆ ತನ್ನ ಸಾಹಿತ್ಯ ಭಾಷೆಯಲ್ಲೇ ಜೀವನದ ನೋವು-ನಲಿವಿನ ಚಿತ್ರಣವನ್ನು ಅಮೋಘವಾಗಿ ಚಿತ್ರಿಸಿದ್ದಾರೆ. ಇನ್ನೊಂದೆಡೆ ಸಾಹಿತ್ಯದ ಕಂಪನ್ನು ಆಸ್ವಾದಿಸುತ್ತ ಹೋದಂತೆ, ಹತ್ತೆಡೆಯಲ್ಲಿ ತೋಡಿ ಬರಲಿಲ್ಲ ನೀರು ಎಂದೆನಬೇಡ, ಒಂದೆಡೆಯಲ್ಲಿ ತೋಡಿ ಹತ್ತೆಡೆಯಷ್ಟು ಇಂಚು ಉದಕವು ಬರುವುದು ನೋಡ- ಎನ್ನುತ್ತಾರೆ ಕವಿಗಳು. ಜೀವನವೆಂಬ ಪ್ರವಾಹದಲ್ಲಿ ನಾವು ವಿರುದ್ಧವಾಗಿ ಈಜಲೇಬೇಕು. ದಡದಿಂದ ದಡಕ್ಕೆ ದಾಟಲೇಬೇಕು. ಜೀವಂತ ಮತ್ಸ್ಯದ ಜೀವಂತಿಕೆ ಇರಬೇಕು- ಬದುಕಿನ ಕುರಿತಾದ ಒಂದು ಸಾಲು. ಇನ್ನೂ ಅವಲೋಕಿಸುತ್ತಾ ಹೋದಂತೆ ಮಳೆಗಾಲದೊಳು ನೀನು ಹಾಡುವುದಿಲ್ಲವೇ? ಪಿಕವನ್ನು ಕೇಳಿತು ಶುಕವು; ಕಪ್ಪೆಗಳು ವಟಗುಟ್ಟುವೆಡೆಯೊಳು ಮೌನವೇ ಲೇಸೆಂದಿತು ಪಿಕವು- ಹೀಗೆ ನೇರವಾಗಿ ಹೇಳುವ ಮಾತುಗಳನ್ನೇ ವಿಭಿನ್ನವಾದ ಮಾತಿನ ಮೂಲಕ ತಿಳಿಸಿ ವಾಸ್ತವತೆಯನ್ನು ಅರ್ಥೈಸುವ ಪರಿ ಇದು. ಮಾತನಾಡುವ ಕಲೆ-ಬದುಕುವ ಕಲೆಗಳ ಕುರಿತಾದ ಸಾಹಿತ್ಯ ಲಹರಿಯ ಆಲಾಪನೆಯಿದು. ಆಸಕ್ತಿಯುತವಾಗಿ ಜೊತೆಗೆ ಗುರುತಿನ ಪ್ರತೀಕವಾಗಿ ಕೈಜೋಡಿಸುವ ಚತುರತೆಯನ್ನು ಸಾಹಿತ್ಯ ಬೆಳೆಸುತ್ತದೆ. 

Advertisement

ಮೇಲಿನ ಸಾಲುಗಳೆಲ್ಲವೂ ಕವಿವರ್ಯರ ಪದಪುಂಜಗಳ ಮಾಲೆಯಿಂದ ಜೋಡಣೆಯಾಗಿ ಇಂದಿಗೂ ಎಲ್ಲರ ಮನೆಮನದಲ್ಲಿ     ಸ್ಥಾನಗಿಟ್ಟಿಸಿಕೊಂಡಿರುವಂಥ‌ವುಗಳು. ಇವೆಲ್ಲಾ ಕೇವಲ ನಿದರ್ಶನಗಳಷ್ಟೇ. ಸಾಹಿತ್ಯದತ್ತ ಒಲವು ತೋರಿಸಬೇಕಾದ ಯುವಜನತೆಗೆ ಇದೊಂದು ಸಣ್ಣ ಮಾರ್ಗ. ದುರದೃಷ್ಟ ಎಂದರೆ ಯೋಚಿಸಬೇಕಾದ ಮನಸುಗಳಿಗೆ ಯೋಚಿಸಲು ಸಮಯವಿಲ್ಲ. ಪುಸ್ತಕ ಹಿಡಿಯಬೇಕಾದ ಪುಟ್ಟ ಕೈಗಳಲಿ ಮೊರದಗಲದ ಜಂಗಮವಾಣಿಗಳು ಲಗ್ಗೆ ಇಟ್ಟಿವೆ. ಇಂದು ಲೇಖನ-ಕವಿತೆ ಬರೆಯಲು ಕಷ್ಟವೇ ಇಲ್ಲ. ಕಾರಣ ಕುಳಿತÇÉೇ ಜಾಲತಾಣದ ಮೂಲಕ ಪದಗಳನೊಂದಾಗಿಸುವ ವ್ಯವಸ್ಥೆಯಿದೆ. ಆದರೆ, ಸಾವಿರಕ್ಕೆ ಹತ್ತು ವಿದ್ಯಾರ್ಥಿಗಳಲ್ಲಿ ಮಾತ್ರ ಸಾಹಿತ್ಯದ ಮೇಲಿನ ಒಲವು ಕಂಡುಬರುತ್ತಿದೆ. ಆಲಸ್ಯತನದ ಮಂಜು ಕವಿದಿದೆ. ಯೋಚಿಸಲು ಸಹಕರಿಸಬೇಕಾದ ಜಾಲತಾಣಗಳು ಯೋಚನೆಯ ಬದಲು ಮತ್ಯಾವುದನ್ನೋ ಅನಗತ್ಯ ವಿಚಾರಗಳತ್ತ ಯೋಚಿಸುವಂತೆ ಪ್ರೇರೇಪಿಸುತ್ತಿದೆ. ಸಾಹಿತ್ಯ ಲೋಕವನ್ನು ಬೆಳೆಸಬೇಕಾದ ಕುಸುಮಗಳು ಯಾವುದೋ ಒಂದು ಅನಗತ್ಯ ಪೊರೆಯನ್ನು ಹೊದ್ದುಕೊಂಡು ಯಾರಿಗೂ ಕಾಣದಂತೆ ನಿರಾಸಕ್ತಿಗಳಾಗಿ ಗೋಚರಿಸುತ್ತಿವೆ. 

ಈ ಸಾಹಿತ್ಯ ಲೋಕ ಒಬ್ಬ ವ್ಯಕ್ತಿಯನ್ನು ಸಾಮಾಜಿಕವಾಗಿ ಗುರುತಿಸುವುದು ಮಾತ್ರವಲ್ಲದೆ ಕೌಶಲ್ಯ -ಜ್ಞಾನ ಭಂಡಾರ-ಶಬ್ದ ಭಂಡಾರಗಳನ್ನು ಹೆಚ್ಚಿಸುತ್ತವೆ. ಪದಪುಂಜಗಳೊಡನೆ ಆಟವಾಡಿಕೊಂಡು, ಸಮಯವನ್ನು ಸುಸೂತ್ರವಾಗಿ ಬಳಸಿಕೊಳ್ಳಲು ಸಹಕರಿಸುತ್ತದೆ. ಗಳಿಕೆಯೊಡನೆ ಕಲಿಕೆ ಎಂಬುದಿದ್ದರೆ- ಆ ಮಾತು ಬಹಳ ಅರ್ಥವತ್ತಾಗಿ ಹೋಲಿಕೆಯಾಗುವ ಕ್ಷೇತ್ರ ಎಂದರೆ ಅದೊಂದೇ ಸಾಹಿತ್ಯಿಕ ಕ್ಷೇತ್ರ.  

ಪ್ರಜ್ಞಾ ಬಿ.
ದ್ವಿತೀಯ ಪತ್ರಿಕೋದ್ಯಮ ವಿಭಾಗ, ಎಸ್‌ಡಿಎಮ್‌ ಕಾಲೇಜು, ಉಜಿರೆ 

Advertisement

Udayavani is now on Telegram. Click here to join our channel and stay updated with the latest news.

Next