Advertisement

ಸಾಮಾಜಿಕ ಅನಿಷ್ಠ ಪದ್ಧತಿ ನಿರ್ಮೂಲನೆಗೆ ಶ್ರಮಿಸಿ: ಶ್ರೀದೇವಿ

11:55 AM Sep 14, 2017 | Team Udayavani |

ದಾವಣಗೆರೆ: ನ್ಯಾಯಾಧೀಶರು, ವಕೀಲರು ಬಾಲ್ಯವಿವಾಹ, ದೇವದಾಸಿಯಂತಹ ಸಾಮಾಜಿಕ ಅನಿಷ್ಠ ಪದ್ಧತಿ ನಿರ್ಮೂಲನೆಗೆ ಶ್ರಮಿಸಬೇಕಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಎಂ. ಶ್ರೀದೇವಿ ಹೇಳಿದ್ದಾರೆ.

Advertisement

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಬುಧವಾರ ವ್ಯಾಜ್ಯಗಳ ಪರ್ಯಾಯ ಪರಿಹಾರ ಕೇಂದ್ರ (ಎಡಿಆರ್‌)ದಲ್ಲಿ ಪಾನಲ್‌ ವಕೀಲರಿಗೆ ಆಯೋಜಿಸಿರುವ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಕ್ಕೆ ವಿರುದ್ಧವಾದ ಪದ್ಧತಿ, ಆಚರಣೆಗಳ ಸಾಧಕ-ಬಾಧಕ, ನಿವಾರಣೆ, ಪರಿಹಾರದ ಬಗ್ಗೆ ಜನ ಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಸಮಾಜ ಸೇವೆಯಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿದ್ದವರು ತೊಡಗಿಸಿಕೊಳ್ಳಬೇಕು ಎಂದರು.

ಈ ಹಿಂದೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದ ನಂತರ ಪ್ಯಾನೆಲ್‌ ವಕೀಲರು ಕಾನೂನು ಅರಿವು, ಜಾಗೃತಿ ಮೂಡಿಸುವ ಮತ್ತು ಲೋಕ್‌ ಅದಾಲತ್‌ನಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸುತ್ತಿರುವುದು ನಿಜಕ್ಕೂಹೆಚ್ಚಿನ ಸಂತೋಷದ ವಿಚಾರ. ಈ ತರಬೇತಿಯ ನಂತರ ಇನ್ನೂ ಹೆಚ್ಚು ಸಕ್ರಿಯರಾಗುವ ಮೂಲಕ ಸಾರ್ವಜನಿಕರಿಗೆ ಕಾನೂನು ಅರಿವು, ನೆರವು ತಲುಪಿಸಬೇಕು ಎಂದು ತಿಳಿಸಿದರು.

ಈಗಾಗಲೇ ನ್ಯಾಯಾಧೀಶರು, ವಕೀಲರಾಗಿ ಕೆಲಸ ಮಾಡುತ್ತಿರುವರಿಗೆ ತರಬೇತಿ ಅತ್ಯಗತ್ಯ.ಕಲಿಕೆ ಎನ್ನುವುದು ನಿರಂತರ. ಹಾಗಾಗಿ ಎಲ್ಲರೂ ಸದಾ ಕಲಿಯಬೇಕು. 2013ರ ನಂತರ ದಂಡ ಪ್ರಕ್ರಿಯೆ, ಅಧಿನಿಯಮಗಳಲ್ಲಿ ಸಾಕಷ್ಟು ತಿದ್ದುಪಡಿ, ಬದಲಾವಣೆ ಆಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶರು, ವಕೀಲರು ಹೆಚ್ಚಿನ ತರಬೇತಿ ಪಡೆಯುವುದು ಸೂಕ್ತ. ತರಬೇತಿಯಲ್ಲಿ ಮಾಹಿತಿ, ವಿಚಾರವನ್ನ ಜನರಿಗೆ ಸಮರ್ಪಕ ವಾಗಿ ತಲುಪಿಸಬೇಕಿದೆ ಎಂದು
ತಿಳಿಸಿದರು.

ಸಣ್ಣ ಪುಟ್ಟ ತಪ್ಪುಗಳು ಸಹ ದೊಡ್ಡ ಪ್ರಮಾಣದ ಅವಘಡಕ್ಕೆ ಕಾರಣವಾಗುತ್ತವೆ.ಒಂದು ತಪ್ಪು ಅಮೂಲ್ಯ ಜೀವ ಹಾನಿಗೆ ಕಾರಣವಾಗಬಹುದು. ಹಾಗಾಗಿ ಸಣ್ಣ ಪುಟ್ಟ ಪ್ರಮಾಣದಲ್ಲಿ ಕಾನೂನು ಉಲ್ಲಂಘನೆ ಆಗಿರುವ ಬಗ್ಗೆ ಜಾಗೃತಿ ಮೂಡಿಸಬೇಕು.ಜಾಗೂರಕರಾಗದಿದ್ದಲ್ಲಿ ಕಾನೂನು ಪ್ರಕಾರ
ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಎಲ್ಲಿ ಕ್ರಿಮಿನಲ್‌, ಮೋಟಾರ್‌ ಅಪಘಾತ ಪ್ರಕರಣ ಹೆಚ್ಚು ದಾಖಲಾಗುತ್ತವೆಯೋ ಅಲ್ಲಿ ಕಾನೂನು ಉಲ್ಲಂಘನೆ ಜಾಸ್ತಿಎಂಬುದನ್ನ ಮನಗಾಣಬೇಕು. ಹೊನ್ನಾಳಿ ನ್ಯಾಯಾಲಯದಲ್ಲಿ ಮೋಟಾರ್‌ ಅಪಘಾತಕ್ಕೆ ಸಂಬಂಧಿಸಿದಂತೆ 16 ಪ್ರಕರಣ ಮಾತ್ರ ಬಾಕಿ ಇರುವುದು ಅಭಿನಂದನೀಯ. ಹೊನ್ನಾಳಿಗಿಂತ ಕಡಿಮೆ ವ್ಯಾಪ್ತಿ ಹೊಂದಿರುವ ಹರಿಹರದಲ್ಲಿ 500ಕ್ಕೂ ಹೆಚ್ಚು ಪ್ರಕರಣ ಬಾಕಿ ಇವೆ ಎಂದು ತಿಳಿಸಿದರು.

Advertisement

ಕೌಟಂಬಿಕ ನ್ಯಾಯಾಲಯದ ನ್ಯಾಯಾಧೀಶ ಬಿ.ಎಲ್‌. ಜಿನರಾಲ್ಕರ್‌ ಮಾತನಾಡಿ, ಜ್ಞಾನಮಟ್ಟ ಹೆಚ್ಚಿಸಿಕೊಳ್ಳುವ ಜೊತೆಗೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವ ನಿಟ್ಟಿನಲ್ಲಿ ಈ ರೀತಿಯ ತರಬೇತಿ ಅವಶ್ಯ. ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು
ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ ಮಾತನಾಡಿ, ಮೊದಲ ಬಾರಿಗೆ ಜಿಲ್ಲಾ ನ್ಯಾಯಾಧೀಶರೊಬ್ಬರು ಗ್ರಾಮೀಣ ಪ್ರದೇಶಕ್ಕೆ
ತೆರಳಿ, ಸರ್ಕಾರದಿಂದ ನೀಡುವ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಿದ್ದು ಮರೆಯಲಿಕ್ಕೆ ಸಾಧ್ಯವೇ ಇಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯ ನ್ಯಾಯಾಧೀಶ ಎ.ಎಸ್‌. ಸದಲಗಿ ಮಾತನಾಡಿ, ಕಾನೂನು ಎಂಬುದು
ಸಾಗರ. ನಾವು ಏನೇ ತಿಳಿದುಕೊಂಡಿದ್ದರೂ ಒಂದೇ ಒಂದು ಹನಿಯಷ್ಟು ತಿಳಿದುಕೊಂಡಂತೆ. ಹಾಗಾಗಿ ದಿನ ಬಳಕೆಯ ಕಾನೂನು ಜೊತೆಗೆ
ಇತರೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಇಂತಹ ತರಬೇತಿ ಕಾರ್ಯಕ್ರಮ ಉಪಯುಕ್ತ.ನಾವೆಲ್ಲರೂ ಸಾಧ್ಯವಾದಷ್ಟು ಸಮಾಜ ಸೇವೆ
ಮಾಡಬೇಕಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಜಿ. ರಮಾದೇವಿ ಇತರರು ಇದ್ದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯಸ್ವಾಗತಿಸಿದರು.
ಎಲ್‌. ಶ್ಯಾಂ ನಿರೂಪಿಸಿದರು.ಬಿ.ಪಿ. ಬಸವರಾಜ್‌ ವಂದಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next