Advertisement

ಕತೆ: ಸಂಬಂಧಗಳು

12:30 AM Dec 30, 2018 | |

ಗವಿಯಪ್ಪಚೆನ್ನಾಗಿಯೇ ನಿದ್ದೆ ಹೋಗಿದ್ದರು. ಗೇಟಿಗೆ ಬೀಗ ಹಾಕಿ ಬಾಗಿಲು ಭದ್ರಪಡಿಸಿ, ಹಾಲು ಕಾಯಿಸಿ ಹೆಪ್ಪು ಹಾಕಿ ಕಮಲಮ್ಮ ಅದೇ ತಾನೇ ಸೊಳ್ಳೆ ಪರದೆ ಕಟ್ಟುತ್ತ ಮಲಗಲು ಅಣಿಯಾಗುತ್ತಿದ್ದರು.

Advertisement

ಗವಿಯಪ್ಪನ ಮೊಬೈಲ್ ಹೊಡೆದುಕೊಳ್ಳತೊಡಗಿತು. ಸರಿರಾತ್ರಿ ಫೋನು! ಕಮಲಮ್ಮನಿಗೆ ದಿಗಿಲಾಗತೊಡಗಿತು. ಒಬ್ಬಳೇ ಮಗಳು ಸಂಜನಾ ಮದುವೆಯ ನಂತರ ತನ್ನ ಗಂಡ ಯತೀಶ ಮತ್ತವನ ತಾಯಿ ರಾಮಕ್ಕನೊಡನೆ ವಿಜಯನಗರದಲ್ಲಿ ವಾಸವಾಗಿದ್ದಳು. ಆದಷ್ಟು ಮಗಳಿಗೆ ನೆರವಾಗುವ ಉದ್ದೇಶದಿಂದ ಗವಿಯಪ್ಪನವರು ಕಮಲಮ್ಮನೊಂದಿಗೆ ಹೊಸೂರಿನಿಂದ ತಮ್ಮ ವಾಸ್ತವ್ಯವನ್ನು  ಬನಶಂಕರಿಯ ಹತ್ತಿರದ ಅಪಾರ್ಟ್‌ ಮೆಂಟ್‌ಗೆ ವರ್ಗಾಯಿಸಿದ್ದರು. ಸಂಜುವಿನ ಅತ್ತೆ ವಾರದಿಂದ ವೈರಲ್‌ ಜ್ವರದಿಂದ ಹಾಸಿಗೆ ಹಿಡಿದು ಆಸ್ಪತ್ರೆಗೆ ದಾಖಲು ಮಾಡಲು ಮಗಳು ಮತ್ತು ಅಳಿಯ ಮುಂದಾಗಿದ್ದರೂ ಆ ತಾಯಿ ಒಪ್ಪಿರಲಿಲ್ಲ.  “”ನನ್ನ ಕೈಯಲ್ಲಿ ಮ್ಯಾನೇಜ್‌ ಮಾಡಲು ಆಗುತ್ತಿಲ್ಲ  ನೀನೇ ಬಾ ಅಥವಾ ಮನೆಗೆಲಸದ ಸಾಕಮ್ಮನನ್ನು ಕಳಿಸು” ಎಂದು ಮಗಳು ಅದಾಗಲೇ ಕಮಲಮ್ಮನಿಗೆ ಹತ್ತು ಬಾರಿ ಕರೆ ಮಾಡಿದ್ದಳು. “”ಮದುವೆ ಮಾಡಿ ಕೊಟ್ಟ ಮೇಲೆ ಮುಗೀತು. ಸಣ್ಣಪುಟ್ಟದ್ದಕ್ಕೆ ನಾವು ತಲೆ ಹಾಕಬಾರದು. ಅಳಿಯನಿಗೆ ಬೇಜಾರಾಗುತ್ತೆ, ಏನೋ ಮಾಡಿಕೋತಾರೆ ಬಿಟ್ಟು ಬಿಡು” ಎಂದು ಗವಿಯಪ್ಪ ಕಮಲಮ್ಮನಿಗೆ ತಾಕೀತು ಮಾಡಿದ್ದರು. ಕಡ್ಡಿ ಗುಡ್ಡ ಮಾಡುವ ಮಗಳ ಬಗ್ಗೆ  ಕಮಲಮ್ಮನಿಗೆ ಅಸಮಾಧಾನ ಇದ್ದರೂ ಬಾಯಿಬಿಟ್ಟು ಹೇಳಲಾರರು. ಕಮಲಮ್ಮ ಫೋನು ಎತ್ತಿಕೊಳ್ಳಲು ಬರುವುದರೊಳಗೆ ಗವಿಯಪ್ಪ ಗಡಬಡಿಸಿ ಎದ್ದು ಗುಂಡಿ ಒತ್ತಿದರು. ಅಪರಿಚಿತ ನಂಬರು. ಆದರೆ, ಪರಿಚಿತ ದನಿ… ಮಗಳು !

“”ಏನು ಪುಟ್ಟ…. ಇಷ್ಟೊತ್ತನಾಗೆ?”
“”ಅಪ್ಪಾಜಿ ಈಗಲೇ ಬನ್ನಿ… ಈಗಲೇ”
“”ಯಾಕಮ್ಮ?”
“”ಊಂ… ಊಂ…”
“”ಅರೆ, ಯಾಕಳ್ತಾ ಇದೀಯಾ ಏನಾತು?”
“”ಊಂ… ಊಂ…”
“”ಅತ್ಯಮ್ಮ  ಹೆಂಗಿದಾರೆ… ಜ್ವರ ಹೆಂಗದೆ ?”
“”ಹೂಂ… ಈಗ ವಾಸಿ…”
“”ಮತ್ತೆ… ನಿನ್ನ ಗಂಡ…” ಸ್ವಲ್ಪ$ಗಾಬರಿಯಿಂದಲೇ ಗವಿಯಪ್ಪ ಕೇಳಿದರು.
“”ಬಿಡಿ… ಅದೊಂದು ಕಲ್ಲು ಬಂಡೆ… ಚಚ್ಚಿಕೋ ಬೇಕು ತಲೆನಾ… ಅವರ ವಿಷಯ ಬಿಡಿ… ಈಗಲೇ ಬನ್ನಿ”
“”ನನ್ನ ಕರ್ಕೊಂಡು ಹೋಗಿ. ನಾ ಒಂದು ಕ್ಷಣನೂ ಇಲ್ಲಿ ಇರಲ್ಲ”
“”ಅಯ್ಯೋ ಏನಾತು? ಯಾಕಮ್ಮ?”
“”ರಾತ್ರಿಗೆ ಚಪಾತಿ-ಪಲ್ಯ ಮಾಡು ಅಂತ ಅಂದಿದ್ದರು. ಮಧ್ಯಾಹ್ನದ ಅನ್ನಾನೇ ಮಿಕ್ಕಿತ್ತು ಅಂತ ಚಿತ್ರಾನ್ನ ಮಾಡಿ¨ªೆ. ಅತ್ತೆಗೆ ಗಂಜಿ ಮಾಡಿ ಕೊಟ್ಟಿ¨ªೆ. ಚಪಾತಿ ಮಾಡಿಲ್ಲ ಅಂತ ಗಲಾಟೆ ಮಾಡೋದಾ. ಅಷ್ಟೇ ಅಲ್ಲ ನನ್ನ ಮೊಬೈಲ… ಕಸಕೊಂಡು ಬಿಸಾಕಿ ಕಾಲಿಂದ ತುಳಿದು ತುಳಿದು ನಾಕು ಚೂರಾಗಿದೆ. ಅಪ್ಪಾಜಿ, ಸಾಧ್ಯನೇ ಇಲ್ಲ. ನಾನು ಬಾತ್‌ರೂಂನಿಂದ ಇನ್ನೊಂದು ಫೋನಿಂದ ಮಾತಾಡ್ತಾ ಇದೀನಿ. ಈಗಲೇ ಬನ್ನಿ”
“”ಸಂಜು, ತಾಳ್ಮೆ ತಕ್ಕೋ. ಹೋಗಿ ಮಲಕ್ಕೋ”
“”ಬೆಳಿಗ್ಗೆ ಬತ್ತಿನೀ. ನಿನ್ನ ಗಂಡನಿಗೆ ಫೋನ್‌ ಮಾಡಿ ಈಗಲೇ ಮಾತಾಡ್ತೀನಿ”
“”ಬೇಡ, ಈಗಲೇ ಬನ್ನಿ”
“”ಯಾಕೆ ಏನಾರಾ ಅಂದನಾ? ಹೊಡೆದು ಬಡಿದು ಮಾಡಿದ್ನಾ?”
“”ಇಲ್ಲ, ಇವತ್ತು ನನ್ನ ಮೊಬೈಲ… ಕಸಕೊಂಡು ಬಿಸಾಕಿ ಕಾಲಲ್ಲಿ ಒದ್ದು ಚೂರು ಚೂರು ಆಗಿದೆ. ನಾಳೆ ನಂಗೂ ಇದೇ ಗತಿ.  ನಂಗೊತ್ತು”
“”ನಿನ್ನ ಗಂಡಂಗೆ ಈಗಲೇ ಮಾತಾಡ್ತೀನಿ ಬಿಡು”
“”ಬೇಡ, ನೀವು ಬರಲಿಲ್ಲ ಅಂದರೆ ನಾನು ನೇಣು ಹಾಕೋತೀನಿ”
ಮಗಳು ಉಮ್ಮಳಿಸಿ ಅಳುವುದನ್ನು ಕೇಳಿ ಗವಿಯಪ್ಪಗಾಬರಿಯಾಗಿ “ಸರಿ ಬತ್ತೀನಿ ಇರು’ ಅಂದರು. 
ಬಗಲಲ್ಲೇ ನಿಂತು ಎಲ್ಲಾ  ಕೇಳಿಸಿಕೊಂಡ ಕಮಲಮ್ಮ , “”ಯತೀಶನಿಗೆ ಮೊದಲು ಫೋನ್‌ ಮಾಡಿ ಏನು ವಿಷಯ ಅಂತ ಕೇಳಿಕೊಳ್ಳಿ” ಅಂದರು.

“”ಎಷ್ಟು ಪಾಪದ ಹುಡುಗ. ಇವಳೇನು ರೇಗಿಸಿದಳ್ಳೋ” ಅಂತ ತಮಗೆ ತಾವೇ ಗೊಣಗಿಕೊಂಡರು.
ಮು¨ªೆ ರವುಂಡಾಗಿ ಕಟ್ಟಿಲ್ಲ ಎಂದು ಗವಿಯಪ್ಪನವರು   ತಟ್ಟೆಯನ್ನೇ ಮುಖಕ್ಕೆ ಎಸೆದು ತಮ್ಮ ಕಪಾಲದ ಹತ್ತಿರ ಗಾಯವಾಗಿ ಎರಡು ಹೊಲಿಗೆ ಕೂಡ ಹಾಕಿಸಿಕೊಂಡದ್ದು ಅವರಿಗೆ ನೆನಪಾಯಿತು. ಕಪಾಲದ ಹತ್ತಿರ ಆದ ಆ ಗಾಯದ ಕಚ್ಚು ಈಗಲೂ ಹಾಗೆಯೇ ಇದೆ. ಅವರಿಗೆ ಅರಿವಿಲ್ಲದಂತೆಯೇ ಕೈ ಅಲ್ಲಿಗೆ ಹೋಯಿತು. ಕಳೆದ ಮೂವತ್ತು ವರುಷಗಳಲ್ಲಿ ಇಂತಹವುಗಳು ಅದಷ್ಟೋ.
ಗವಿಯಪ್ಪನವರು ಹತ್ತಾರು ಜನರ ಹತ್ತಿರ ವಿಚಾರಿಸಿ ಅತ್ಯಂತ ಸಂಭಾವಿತ ಎಂದು ಅಳೆದು ತೂಗಿ ಯತೀಶನನ್ನು ಅಳಿಯನನ್ನಾಗಿ ಮಾಡಿಕೊಂಡಿದ್ಧರು. ಆಸ್ತಿಪಾಸ್ತಿ ಇಲ್ಲದಿದ್ದರೂ ಒಳ್ಳೆಯ ಕೆಲಸದಲ್ಲಿದ್ದು, ಕೈ ತುಂಬಾ ಸಂಪಾದಿಸುತ್ತಿದ್ದ ಯತೀಶ  ಯಾವ ರೀತಿಯಲ್ಲಿ ನೋಡಿದರೂ ಅನುರೂಪದ ಹುಡುಗನಾಗಿದ್ದು ಸಂಜು ಕೂಡ ಮೆಚ್ಚಿ ಮದುವೆಗೆ ಒಪ್ಪಿಗೆ ನೀಡಿ ಮದುವೆ ಮಾಡಿಕೊಂಡಿದ್ದು ಅದಾಗಲೇ ಮದುವೆಯಾಗಿ ಒಂದು ವರುಷವಾಗಿದ್ದರೂ ಒಮ್ಮೆ ಕೂಡ ಯತೀಶನ ಗುಣಾವಗುಣಗಳ ಬಗ್ಗೆ ಏನನ್ನೂ ಎತ್ತಿ ಆಡಿರಲಿಲ್ಲ.

ಬೀಗಿತ್ತಿ ರಾಮಕ್ಕ ಕೂಡ ಹೊಂದಿಕೊಂಡು ಹೋಗುವ ಸ್ವಭಾವದ ಹೆಂಗಸಾಗಿದ್ದು , ಮನೆಯ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗುತ್ತಾ ಒಂದಿನಿತೂ ಕೊರೆಯಾಗದಂತೆ ಸೊಸೆಯನ್ನು  ನೋಡಿಕೊಂಡಿದ್ದು ಯಾವತ್ತೂ ಕಾಯಿಲೆ-ಕಸಾಲೆ ಎಂದು ಮಲಗದ ರಾಮಕ್ಕ ಮೊದಲ ಬಾರಿಗೆ “ಜ್ವರ’ ಎಂದು ಮಲಗಿದ್ದರು.

Advertisement

ಗವಿಯಪ್ಪ-ಕಮಲಮ್ಮನವರ ಆರೈಕೆಯಲ್ಲಿ ಮುಚ್ಚಟೆಯಾಗಿ ಬೆಳೆದ ಸಂಜನಾ, ರಾಮಕ್ಕ ಮಲಗಿದ ಕ್ಷಣದಿಂದಲೇ ಮನೆವಾರ್ತೆ ನಿಭಾಯಿಸಲಾಗದೆ ತತ್ತರಿಸತೊಡಗಿದ್ದಳು. ಕಳೆದ ಒಂದು ವಾರದಿಂದ ಊಟ-ತಿಂಡಿ ಎಲ್ಲವನ್ನೂ ಹೊಟೇಲಿನಿಂದಲೇ ತಂದುದಾಗಿತ್ತು. ಅದೂ ಬೇಸರವಾಗಿ ಎರಡು ದಿನದಿಂದ ಸಂಜು, ಯತೀಶನ ನೆರವಿನೊಂದಿಗೆ ಕೈ ಬಾಯಿ ಸುಟ್ಟುಕೊಂಡು ಅಡುಗೆ ಶುರು ಮಾಡಿದ್ದಳು. ಇದರ ನಡುವೆ ಅಮ್ಮನಿಗೆ ಕರೆ ಮಾಡಿ, “ಅಡುಗೆಯ ಸಾಕಮ್ಮನನ್ನೂ ಕಳಿಸು’ ಎಂದು ಗೋಗರೆದಿದ್ದಳು.

ಕಚೇರಿಯಲ್ಲಿ ಸಾವಿರಾರು ಉದ್ಯೋಗಿಗಳನ್ನು ನಿಭಾಯಿಸುವ ಸಂಜು ತನ್ನ ಮನೆಯಲ್ಲಿ ಅನ್ನ-ಮು¨ªೆ-ಚಪಾತಿಯನ್ನು ನಿಭಾಯಿಸಲಾಗದೆ ಎರಡೇ ದಿನಕ್ಕೆ ಸೋತು ಹೋಗಿದ್ದಳು. ಅದರ ಫ‌ಲವೇ ಈ ರಾದ್ದಾಂತ. ಹಾಗೆ ನೋಡಿದರೆ ಸಂಜನಾ ತನ್ನ ಕೆಲಸದ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದು  ಆಕೆಗೆ ಮು¨ªೆ-ಚಪಾತಿ ಮನೆವಾರ್ತೆ ಬಗ್ಗೆ ಜಿಗುಪ್ಸೆಯೇ ಇತ್ತು. ಇದು ಯತೀಶನಿಗೆ ರೇಗಿಸಿದ್ದು ಅವಳ “ಅಯ್ಯೋ ನಾಕು ಸಾವಿರ ಕೊಟ್ಟರೆ ಅಡಿಗೆ ಮಾಡಿ ಹಾಕುತ್ತಾರೆ, ಅದೇನು ಬ್ರಹ್ಮ ವಿದ್ಯೆಯೇ?’ ಎಂಬ ಮಾತು ಅರಗಿಸಿಕೊಳ್ಳಲು ಕಷ್ಟವಾಗುತ್ತಿತ್ತು.

ಅವನಿಗೆ ಹೊಟೇಲ… ಅಂದರೆ ಅಷ್ಟಕ್ಕಷ್ಟೇ. ತನ್ನ ತಾಯಿ ಮಾಡುವ ಮೊಸಪ್ಪು ಬಸ್ಸಾರು ಉಗಿ ರೊಟ್ಟಿ ಕಡುಬು ಮು¨ªೆಗಳ ಮುಂದೆ ಈ ಹೊಟೇಲ… ಊಟ-ತಿಂಡಿಗಳು ಕಿಂಚಿತ್‌ ಎಂದು ಹತ್ತಾರು ಬಾರಿ ಆಡಿಕೊಂಡು ನಕ್ಕಿದ್ದನು. ಎಲ್ಲಕ್ಕಿಂತ ಮಿಗಿಲಾಗಿ ಈ ಮೊಬೈಲ… ಮತ್ತು ಲಾಪ್‌ಟಾಪ್‌ಗ್ಳನ್ನು ಸದಾ ಹತ್ತಿರ ಇಟ್ಟುಕೊಂಡು ಅದರಲ್ಲೇ ತನ್ನ ಜೀವ ಅಡಗಿದೆ ಎಂಬಂತೆ ಸಂಜನಾ ವರ್ತಿಸುವುದು ಅವನಿಗೆ ರೇಜಿಗೆ ಉಂಟು ಮಾಡುತ್ತಿತ್ತು.

ಸಂಜನಾಗಾದರೋ ಅವಳ ಸರ್ವಸ್ವ ಆ ಮೊಬೈಲ…ನಲ್ಲಿಯೇ ಇತ್ತು. ಅದು ಅವಳ ಕೈಗೆ ಬಂದ ಮೇಲೆಯೇ ಅವಳು ತನ್ನ ಕಾರ್ಯಕ್ಷೇತ್ರದಲ್ಲಿ ದಾಪುಗಾಲು ಹಾಕಿ ಮುನ್ನಡೆಯಲು ಸಾಧ್ಯ ಆಗಿದ್ದು ಎಂದು ನಂಬಿದ್ದಳು. ಅದರಲ್ಲಿ ಏನೆಲ್ಲ ತುಂಬಿಟ್ಟುಕೊಂಡಿದ್ದಳು ಎಂದರೆ ಅಂಗೈಯಲ್ಲೇ ತನ್ನ ಉನ್ನತ ಹುದ್ದೆಯನ್ನು ನಿಭಾಯಿಸಲು ಶಕ್ತಳಾಗಿದ್ದಳು.

ಅವಳ ತೀಕ್ಷ್ಣಮತಿ, ಚಾಕಚಕ್ಯತೆ, ಆತ್ಮವಿಶ್ವಾಸ, ತಾಕತ್ತು ಯತೀಶನಲ್ಲಿ ಒಮ್ಮೊಮ್ಮೆ ಅಸೂಯೆಯನ್ನೂ ಉಂಟುಮಾಡುತ್ತಿತ್ತು. ಅವಳು ಯಾರನ್ನೂ ಲೆಕ್ಕಿಸದೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಮನೋಭಾವ ಅವನಲ್ಲಿ ಕೀಳರಿಮೆಯ ಭಾವವನ್ನು ಉಂಟುಮಾಡುತ್ತಿತ್ತು.
ಅವಳಿಗೆ ಯತೀಶನ ಈ ದಾಳಿ ಅನಿರೀಕ್ಷಿತವಾಗಿತ್ತು. ತನ್ನತನದ ಮೇಲಣ ಪ್ರಹಾರದಂತೆ ಕಂಡು ತಲ್ಲಣಿಸಿ ಹೋಗಿದ್ದಳು.

ಗವಿಯಪ್ಪನವರು ಒಂದು ತಾಸಿನಲ್ಲೇ ಕಾರಿನಲ್ಲಿ ಅಳಿಯನ ಮನೆಗೆ ಬಂದಿಳಿದರು. ಎಂದಿನಂತೆ ಬಾಗಿಲು ತೆಗೆದು ಸ್ವಾಗತಿಸಿದ್ದು ಅಳಿಯನೇ.
“”ಸಂಜು ಪೋನ್‌ ಮಾಡಿದ್ದಳು. ಈ ಕ್ಷಣ ಬರಬೇಕು ಎಂದು. ಏನಪ್ಪಾ$ಕಥೆ” ಎಂದು ಕೇಳಿದರು. “”ನಿಮಗೆ ಆಕೆ ಎಲ್ಲ ಹೇಳಿರಬೇಕಲ್ಲ…” ಎಂದು ಒಳಗಿನ ದನಿಯಲ್ಲಿಯೇ ಯತೀಶ  ಮೆಲ್ಲಗೆ ನುಡಿದನು. ಒಳಗಿನಿಂದ ಬಂದ ಸಂಜು ಮೊಬೈಲ… ಚೂರುಗಳನ್ನೂ ಅಳಿದುಳಿದ ಅದರ ಅವಶೇಷಗಳನ್ನೂ ಎತ್ತಿಕೊಂಡು ತನ್ನ ಬ್ಯಾಗಿಗೆ ಹಾಕಿಕೊಳ್ಳುತ್ತ  “”ನಾನು ರೆಡಿ, ನಡೆಯಿರಿ” ಎಂದಳು. 

ಗವಿಯಪ್ಪನವರು ಯತೀಶನತ್ತ ನೋಡಲು ಆತ ನಿರ್ಭಾವುಕನಾಗಿ ಎತ್ತಲೋ ನೋಡುತ್ತಾ ಗವಿಯಪ್ಪನವರಿಗೆ “”ಕರೆದೊಯ್ಯಿರಿ” ಎಂದನು.
ಗವಿಯಪ್ಪನವರು ಕಸಿವಿಸಿ ಪಡುತ್ತ ಕುಳಿತೇ ಇದ್ದರು. ಏನೋ ನೆನೆಸಿಕೊಂಡವನಂತೆ ಯತೀಶ ಸರಸರ ರೂಮನ್ನು ಹೊಕ್ಕು ಸಂಜುವಿನ ಲಾಪ್‌ಟಾಪ್‌ ಹಿಡಿದುಕೊಂಡು ಬಂದು ಸಂಜುವಿನ ಕೈಗಿತ್ತು, “”ಇನ್ನು ನೀನು ಹೊರಡಬಹುದು” ಎಂಬ ಮುಖಭಾವ ಹೊತ್ತು ನಿಂತನು.
ಇದಾವುದರ ಅರಿವೇ ಇಲ್ಲದಂತೆ ರಾಮಕ್ಕ ಒಳ ಕೋಣೆಯಲ್ಲಿ ಸಣ್ಣಗೆ ನರಳುತ್ತಿದ್ದಳು.

ಸವಿತಾ ನಾಗಭೂಷಣ

Advertisement

Udayavani is now on Telegram. Click here to join our channel and stay updated with the latest news.

Next