Advertisement

ಅಯೋಧ್ಯೆ ಮಂದಿರಕ್ಕೆ ರಾಜ್ಯದ ಶಿಲೆಗಲ್ಲು

01:09 AM Oct 25, 2021 | Team Udayavani |

ಉಡುಪಿ: ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು ಪಂಚಾಂಗ ನಿರ್ಮಾಣಕ್ಕಾಗಿ ಕರ್ನಾಟಕದ 4,500 ಟನ್‌ ಶಿಲೆ ಕಲ್ಲುಗಳು ರವಾನೆಯಾಗುತ್ತಿವೆ.

Advertisement

2020ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಶಿಲಾನ್ಯಾಸ ನಡೆದು ಕಾಮಗಾರಿ ಆರಂಭಗೊಂಡಿತ್ತು. ಎಲ್‌ ಆ್ಯಂಡ್‌ ಟಿ, ರೂರ್ಕಿ, ಹೈದರಾಬಾದ್‌, ಚೆನ್ನೈ ಐಐಟಿ, ಟಾಟಾ ಸಂಸ್ಥೆಯವರು ಪರೀಕ್ಷೆ ನಡೆಸಿ ಹಾರುಬೂದಿ, 20 ಎಂಎಂ ಮತ್ತು 10 ಎಂಎಂ ಜಲ್ಲಿ, ಜಲ್ಲಿ ಪುಡಿ, ಅತಿ ಕಡಿಮೆ ಪ್ರಮಾಣದಲ್ಲಿ ಸಿಮೆಂಟ್‌ (ಶೇ. 2.5) ಮಿಶ್ರಣವನ್ನು 425 ಅಡಿ ಉದ್ದ ಮತ್ತು 325 ಅಡಿ ಅಗಲದ ಜಾಗದಲ್ಲಿ 40 ಅಡಿ ಆಳದಲ್ಲಿ ತುಂಬಿಸುವ ಕೆಲಸ ಆರಂಭಿಸಲಾಯಿತು. ಇದಕ್ಕಾಗಿ 40 ಅಡಿ ಮಣ್ಣನ್ನು ಹೊರಗೆ ಹಾಕಿ ವಿಶಿಷ್ಟ ಮಿಶ್ರಣ ತುಂಬಿಸಲಾಗಿದೆ.

ಮಿಶ್ರಣ ತುಂಬಿಸುವ ರೋಲರ್‌ ಕಂಪ್ಯಾಕ್ಟೆಡ್‌ ಕಾಂಕ್ರಿಟ್‌ ಮಿಶ್ರಣವನ್ನು ಒಟ್ಟು 44 ಪದರಗಳಲ್ಲಿ ಹಾಕಿದ್ದಾರೆ. ಒಂದು ಪದರ 12 ಇಂಚಿನಷ್ಟು ದಪ್ಪ ಇದ್ದು, ಇದರ ಮೇಲೆ ರೋಲರ್‌ ಹಾಕಿದಾಗ ಅದು 10 ಇಂಚಿಗೆ ಇಳಿಯುತ್ತದೆ. ಅನಂತರ ಇನ್ನೊಂದು ಪದರ ಹಾಕಬೇಕು. ಹೀಗೆ ಎಲ್ಲ ಪದರಗಳ ಕೆಲಸ ಮುಗಿದಿದೆ.

ಮಣ್ಣು ಹೊರತೆಗೆದು ಅಲ್ಲಿ ತುಂಬಿಸಿರುವ ವಿಶಿಷ್ಟ ಮಿಶ್ರಣದ ಮೇಲೆ ಪಂಚಾಂಗಕ್ಕೆ ಶಿಲೆಗಲ್ಲುಗಳನ್ನು ಹಾಕಲಾಗುತ್ತದೆ. ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಲೆಗಲ್ಲಿಗೆ ಈ ಭಾಗ್ಯ ದೊರೆತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಸಾದಹಳ್ಳಿಯ ಹನುಮಾನ್‌ ಗ್ರಾನೈಟ್ಸ್‌ ಸಂಸ್ಥೆ ಕಲ್ಲುಗಳನ್ನು ಪೂರೈಸುತ್ತಿದೆ. ಇದಲ್ಲದೆ ಕಾಶೀ ಸಮೀಪದ ಮಿರ್ಜಾಪುರದ ಶಿಲೆಗಲ್ಲುಗಳನ್ನೂ ತರಿಸಲಾಗುತ್ತಿದೆ. ಏಕಕಾಲದಲ್ಲಿ ಬೇಕಾದಷ್ಟು ಕಲ್ಲುಗಳ ಪೂರೈಕೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಹಂಚಿ ಹಾಕಲಾಗಿದೆ. ಈ ಪಂಚಾಂಗದ ಮೇಲೆ ರಾಜಸ್ಥಾನದ ಪಿಂಕ್‌ ಕಲರ್‌ ಕಲ್ಲಿನ (ಕೆಂಪು ಕಲ್ಲು) ಕಟ್ಟೆಯನ್ನು ಕಟ್ಟಲಾಗುತ್ತದೆ. ಇದು 16 ಅಡಿ ಎತ್ತರವಿರುತ್ತದೆ. ಮಂದಿರದ ಮುಖ್ಯ ರಚನೆ ಇದರ ಮೇಲೆ ಬರಲಿದೆ.
ಎಲ್‌ ಆ್ಯಂಡ್‌ ಟಿ ಮತ್ತಿತರ ಎಂಜಿನಿಯರಿಂಗ್‌ ಸಂಸ್ಥೆಯವರು, ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ತರು ಚಿಕ್ಕಬಳ್ಳಾಪುರದ ಕಲ್ಲುಗಳನ್ನು ಪರಿಶೀಲಿಸಿ ಆಯ್ಕೆ ಮಾಡಿದ್ದಾರೆ. ಒಂದು ಲೋಡ್‌ ಕಲ್ಲುಗಳನ್ನು (200 ಕಲ್ಲುಗಳು) ಪೂರ್ವಭಾವಿಯಾಗಿ ಕಳುಹಿಸಿದ್ದು ಒಪ್ಪಿಗೆ ಆಗಿದೆ. 4ಗಿ2, 2ಗಿ2 ಅಡಿಯ ಕಲ್ಲುಗಳು ಭದ್ರ ಪಂಚಾಂಗಕ್ಕೆ ಬಳಕೆಯಾಗುತ್ತಿದೆ. ಇದರ ಆರೂ ಮಗ್ಗುಲುಗಳನ್ನು ಫಿನಿಶಿಂಗ್‌ ಮಾಡಿ ಕಳುಹಿಸಲಾಗುತ್ತದೆ.

ಇದನ್ನೂ ಓದಿ:ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

Advertisement

ಮೊದಲ ಲೋಡ್‌ ಇಂದು ಸಾಗಾಟ
ಪೂಜೆ ಸಲ್ಲಿಸಿ ಕಳುಹಿಸಲೋಸುಗ ಮೊದಲ ಆರ್ಡರ್‌ ಆಗಿ 10 ಲೋಡ್‌ ವಾಹನಗಳಲ್ಲಿ ಕಲ್ಲುಗಳನ್ನು ಕಳುಹಿಸಲು
ಅ. 25ರಂದು ಮುಹೂರ್ತ ನಿಗದಿಯಾಗಿದೆ. ಒಂದು ಲೋಡ್‌ನ‌ಲ್ಲಿ (ಟ್ರಕ್‌) 30 ಟನ್‌ ಕಲ್ಲುಗಳಿರಲಿದ್ದು ಮುಂದಿನ ಮೂರು ತಿಂಗಳಲ್ಲಿ ಒಟ್ಟು 150 ಲೋಡ್‌ ಕಲ್ಲುಗಳು ಅಯೋಧ್ಯೆಗೆ ಹೋಗಲಿವೆ. ಬೆಂಗಳೂರಿನಿಂದ ಹೊರಟ ಟ್ರಕ್‌ ಮೂರು ದಿನಗಳಲ್ಲಿ ಅಯೋಧ್ಯೆ ತಲುಪಲಿದ್ದು ಪಂಚಾಂಗದ ಕಲ್ಲುಗಳನ್ನು ಪೇರಿಸುವ ಕೆಲಸ ಸುಮಾರು 15 ದಿನಗಳಲ್ಲಿ ಆರಂಭವಾಗಲಿದೆ.

ನೀರು ಹೀರದ ಕಲ್ಲು
ಮಂದಿರವನ್ನು ರಾಜಸ್ಥಾನದ ಮಕರಾನ, ಭರತ್‌ಪುರ ಜಿಲ್ಲೆಯ ಬನ್ಸಿಪಹಾಡ್‌ ಪಿಂಕ್‌ ಸ್ಟೋನ್‌ನಿಂದ ನಿರ್ಮಿಸಲಾಗುತ್ತದೆ. ಕರ್ನಾಟಕದ (ಚಿಕ್ಕಬಳ್ಳಾಪುರ) ಕಲ್ಲುಗಳನ್ನು ಪಂಚಾಂಗಕ್ಕೆ ಬಳಸಲಾಗುತ್ತಿದೆ. ಇದೇಕೆಂದರೆ ಈ ಕಲ್ಲುಗಳು ನೀರನ್ನು ಹೀರುವುದಿಲ್ಲ. ದೇವಸ್ಥಾನದ ಪ್ಲಿಂತ್‌ ಏರಿಯಾದ ಭದ್ರ ಪಂಚಾಂಗವನ್ನು ಈ ಕಲ್ಲುಗಳಿಂದ ನಿರ್ಮಿಸಲಾಗುತ್ತಿದೆ. ಮಂದಿರದ ಬಾಳಿಕೆಗಾಗಿ ಈ ಕಲ್ಲುಗಳನ್ನು ಆಯ್ಕೆ ಮಾಡಲಾಗಿದೆ.
– ಕೇಶವ ಹೆಗ್ಡೆ, ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷತ್‌, ಕರ್ನಾಟಕ, ಆಂಧ್ರಪ್ರದೇಶ

ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಅ. 25ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಸಾದಹಳ್ಳಿಯ ಹನುಮಾನ್‌ ಗ್ರಾನೈಟ್ಸ್‌ನಿಂದ ಚಿಕ್ಕಬಳ್ಳಾಪುರದ ಶಿಲೆಕಲ್ಲುಗಳಿಗೆ ಪೂಜೆ ಸಲ್ಲಿಸಿ ಅಯೋಧ್ಯೆಗೆ ಕಳುಹಿಸಲಾಗುತ್ತಿದೆ.
– ಮುನಿರಾಜು, ವಿಶೇಷ ಸಂಪರ್ಕ
ಸಹ ಪ್ರಮುಖ್‌, ವಿಹಿಂಪ,
ಕರ್ನಾಟಕ ದಕ್ಷಿಣ ಪ್ರಾಂತ, ಬೆಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next