Advertisement

ದಿಲ್ಲಿಯಿಂದ ವಾಪಸ್‌ ಆದ ರಾಜ್ಯ ನಾಯಕರು: ಇಂದು ಪಟ್ಟಿ ಪ್ರಕಟ?

10:12 PM Mar 12, 2024 | Team Udayavani |

ಬೆಂಗಳೂರು: ಟಿಕೆಟ್‌ ಆಯ್ಕೆ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ದಿಲ್ಲಿಗೆ ತೆರಳಿದ್ದ ಬಿಜೆಪಿ ರಾಜ್ಯ ನಾಯಕರು ಮಂಗಳವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ್ದು, ಬುಧವಾರ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.

Advertisement

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ವಿಪಕ್ಷ ನಾಯಕ ಆರ್‌.ಅಶೋಕ ರಾಜ್ಯಕ್ಕೆ ವಾಪಸ್‌ ಆಗಿದ್ದಾರೆ. ರಾಜ್ಯ ನಾಯಕರು ನೀಡಿದ ಅಭಿಪ್ರಾಯ ಆಧರಿಸಿ ವರಿಷ್ಠರು ಇನ್ನೊಂದು ಸುತ್ತು ಪ್ರತ್ಯೇಕ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿಗೆ ವಾಪಸ್‌ ಆದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಬಿ.ಎಸ್‌.ಯಡಿಯೂರಪ್ಪ, ಎಲ್ಲ ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಪ್ರತಿಯೊಬ್ಬರ ಕುತೂಹಲಕ್ಕೂ ಸದ್ಯದಲ್ಲೇ ಉತ್ತರ ಸಿಗುತ್ತದೆ. ಅಚ್ಚರಿಯ ಅಭ್ಯರ್ಥಿಯನ್ನೂ ವರಿಷ್ಠರೇ ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ.

ಹಾಲಿ ಸಂಸದರು ವಿಶ್ವಾಸ ಕಳೆದುಕೊಳ್ಳುವುದು ಬೇಡ: ಆರ್‌.ಅಶೋಕ್‌
ಬೆಂಗಳೂರು:
ಹಾಲಿ ಸಂಸದರು ವಿಶ್ವಾಸ ಕಳೆದುಕೊಳ್ಳುವುದು ಬೇಡ ಎಂದು ದಿಲ್ಲಿಯಲ್ಲಿ ವಿಪಕ್ಷ ನಾಯಕ ಆರ್‌.ಅಶೋಕ ನೀಡಿರುವ ಹೇಳಿಕೆ ಈಗ ಕುತೂಹಲ ಸೃಷ್ಟಿಸಿದೆ. 28 ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಕೆಲ ಸಂಸದರು ನಿವೃತ್ತಿ ಘೋಷಣೆ ಮಾಡಿರುವುದರಿಂದ ಬದಲಿ ಆಭ್ಯರ್ಥಿ ಹಾಕುತ್ತೇವೆ. ಹಾಲಿ ಸಂಸದರು ವಿಶ್ವಾಸ ಕಳೆದುಕೊಳ್ಳುವುದು ಬೇಡ ಎಂದು ಕಿವಿ ಮಾತು ಹೇಳಿದ್ದಾರೆ.

ಪ್ರತಾಪ್‌ ಸಿಂಹ, ಅನಂತ್‌ಕುಮಾರ್‌ ಹೆಗಡೆಯವರ ಬಗ್ಗೆಯೂ ಚರ್ಚೆಯಾಗಿದೆ. ಆದರೆ ನಾಲ್ಕು ಗೋಡೆಗಳ ಮಧ್ಯೆ ನಡೆದ ಮಾತುಕತೆಯನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ. ಕಡೆ ಕ್ಷಣದವರೆಗೆ ಏನು ಬೇಕಾದರೂ ಆಗಬಹುದು. ನಾನಂತೂ ರಾಜವಂಶಸ್ಥ ಯದುವೀರ್‌ ಅವರನ್ನು ಸಂಪರ್ಕ ಮಾಡಿಲ್ಲ. ಅವರ ಸ್ಪರ್ಧೆಯ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರು.

Advertisement

ಸಂಸದ ಅನಂತ್‌ಕುಮಾರ್‌ ಹೆಗಡೆ ಸಂವಿಧಾನದ ಬಗ್ಗೆ ನೀಡಿರುವ ಹೇಳಿಕೆಗೂ, ಬಿಜೆಪಿಗೂ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆ. ಬಿಜೆಪಿ ಸಂವಿಧಾನವನ್ನು ಗೌರವಿಸುತ್ತದೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next