Advertisement

4-5 ತಿಂಗಳಿಂದ ಗ್ಯಾರೇಜ್‌ನಲ್ಲೇ  ನಿಂತಿದೆ ಶ್ರದ್ಧಾಂಜಲಿ  ವಾಹನ!

04:22 PM Nov 19, 2018 | Team Udayavani |

ಗದಗ: ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಜಿಮ್ಸ್‌ ಆಡಳಿತ ಮಂಡಳಿ ಸಮನ್ವಯತೆ ಹಾಗೂ ಅನುದಾನ ಕೊರತೆಯಿಂದಾಗಿ ಜಿಲ್ಲೆಯ ಏಕೈಕ ಶ್ರದ್ಧಾಂಜಲಿ ವಾಹನಕ್ಕೆ ಚಿಕಿತ್ಸೆ ಸಿಗದೇ ಗ್ಯಾರೇಜ್‌ನಲ್ಲೇ ಸಾಯುತ್ತಿದೆ!

Advertisement

ಹೌದು. ಒಂದೆರಡು ವರ್ಷಗಳ ಹಿಂದೆ ಒಡಿಸ್ಸಾದಲ್ಲಿ ವ್ಯಕ್ತಿಯೊಬ್ಬ ಹಣವಿಲ್ಲದೆ ಪತ್ನಿಯ ಶವವನ್ನು ಹೆಗಲ ಮೇಲೆ ಹೊತ್ತು ಸಾಗಿದರೆ, ತುಮಕೂರಿನಲ್ಲಿ ಮೊಪೆಡ್‌(ದ್ವೀಚಕ್ರ ವಾಹನ)ನಲ್ಲಿ ಮಗಳ ಮೃತ ದೇಹವನ್ನು ಸಾಗಿಸಿದ ಹೃದಯ ವಿದ್ರಾವಕ ಘಟನೆಗಳು ಆಳುವ ಸರಕಾರಗಳ ಕಣ್ಣು ತೆರೆಸಿದ್ದವು. ಅದರ ಫಲವಾಗಿಯೇ ಈ ಹಿಂದಿನ ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿ ಶ್ರದ್ಧಾಂಜಲಿ ವಾಹನಕ್ಕೆ ಚಾಲನೆ ನೀಡಿತ್ತು. ಮೊದಲ ಹಂತದಲ್ಲಿ ರಾಜ್ಯದ 30 ಜಿಲ್ಲಾ ಕೇಂದ್ರಗಳಿಗೆ ತಲಾ ಒಂದು ವಾಹನವನ್ನು ಒದಗಿಸಿತ್ತು.

ಏನಿದು ‘ಶ್ರದ್ಧಾಂಜಲಿ’ ಸೇವೆ?: ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಡುವ ಬಡರೋಗಿಗಳ ಕಳೆಬರವನ್ನು ಮನೆಗೆ ಸಾಗಿಸುವುದು. ಇಲ್ಲವೇ ಮನೆಯಲ್ಲೇ ಮೃತಪಟ್ಟ ಸಂದರ್ಭಗಳಲ್ಲಿ ಅಂತ್ಯಕ್ರಿಯೆಗಾಗಿ ಚಿತಾಗಾರ ಅಥವಾ ರುದ್ರಭೂಮಿಗೆ ಉಚಿತವಾಗಿ ಸಾಗಿಸುವುದು ‘ಶ್ರದ್ಧಾಂಜಲಿ’ ವಾಹನಗಳ ಸೇವೆಯ ಮುಖ್ಯ ಉದ್ದೇಶ. ಅದಕ್ಕಾಗಿ ಹಿಂದಿನ ಸರಕಾರ 108 ಆರೋಗ್ಯ ಕವಚ ಯೋಜನೆಯ ಹಳೇ ಅಂಬುಲೆನ್ಸ್‌ಗಳನ್ನೇ ‘ಶ್ರದ್ಧಾಂಜಲಿ’ ವಾಹನಗಳನ್ನಾಗಿ ಪರಿವರ್ತಿಸಲಾಗಿತ್ತು.

ವಾಹನಗಳಿಗೆ ಇಂಧನ, ನಿರ್ವಹಣೆ ಮತ್ತು ಹೊರಗುತ್ತಿಗೆಯಲ್ಲಿ ನಿಯೋಜಿಸಿರುವ ಚಾಲಕನಿಗೆ ಸರಕಾರಿಂದ ಪ್ರತ್ಯೇಕ ಅನುದಾನ ನೀಡಲಾಗಿತ್ತು. ಆನಂತರ ಅಧಿಕಾರಕ್ಕೆ ಬಂದ ಜೆಡಿಎಸ್‌- ಕಾಂಗ್ರೆಸ್‌ ಸರಕಾರ ಶ್ರದ್ಧಾಂಜಲಿ ವಾಹನಗಳ ನಿರ್ವಹಣೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಿಲ್ಲ. ಪರಿಣಾಮ ಜಿಲ್ಲೆಯ ಶ್ರದ್ಧಾಂಜಲಿ ವಾಹನ ನಾಲ್ಕೈದು  ತಿಂಗಳಿಂದ ಗ್ಯಾರೇಜ್‌ನಲ್ಲಿ ರಿಪೇರಿಗಾಗಿ ಕಾದು ನಿಂತಿದೆ.

ಪರಿಣಾಮ ಸಾರ್ವಜನಕರು ತಮ್ಮ ಸಂಬಂಧಿಕರ ಶವಗಳನ್ನು ಸಾಗಿಸಲು ಖಾಸಗಿ ವಾಹನಗಳ ಮೊರೆ ಹೋಗುವಂತಾಗಿದೆ. ಆದರೆ, ಕೆಲ ವಾಹನದಾರರು ಶವ ಸಾಗಿಸಬೇಕೆಂದರೆ, ಮೂಗು ಮುರಿದರೆ, ಇನ್ನೂ ಕೆಲವರು ಸಿಕ್ಕಿದ್ದೇ ಅವಕಾಶವೆಂದು ಬೇಕಾಬಿಟ್ಟಿ ಸುಲಿಗೆ ಮಾಡುತ್ತಿದ್ದಾರೆ. 40-50 ಕಿ.ಮೀ ದೂರಕ್ಕೂ ಐದಾರು ಸಾವಿರ ರೂ. ಕೇಳುತ್ತಾರೆ ಎಂದು ಹೇಳಲಾಗಿದೆ.

Advertisement

ಅಧಿಕಾರಿಗಳಿಗೇ ಮಾಹಿತಿಯಿಲ್ಲ?: ಈ ಕುರಿತು ಮಾಹಿಗಾಗಿ ಜಿಲ್ಲಾ ಆರೋಗ್ಯ ಅಧಿಕಾರಿ ಎಂ.ಎಸ್‌. ಹೊನಕೇರಿ ಅವರನ್ನು ಸಂಪರ್ಕಿಸಿದರೆ, ಇದು ನಮಗೆ ಸಂಬಂಧಿವಿಲ್ಲ. ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸೆರನ್ನೇ ಕೇಳಬೇಕು ಎಂದು ಜಾರಿಕೊಳ್ಳುತ್ತಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಜಿ.ಎಸ್‌.ಪಲ್ಲೇದ, ಜಿಲ್ಲಾಸ್ಪತ್ರೆ ಆವರಣದಲ್ಲಿ ‘ಶ್ರದ್ಧಾಂಜಲಿ’ ವಾಹನ ನಿಲುಗಡೆ, ಅಗತ್ಯವಿದ್ದವರೆ ಸೇವೆ ಒದಗಿಸುವಂತೆ ವೈದ್ಯರಿಂದ ಪ್ರಮಾಣ ಪತ್ರ ಕೊಡಿಸುವುದಷ್ಟೇ ನಮ್ಮ ಕೆಲಸ. ವಾಹನ ನಿರ್ವಹಣೆ, ಇಂಧನ ಎಲ್ಲವೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಈ ವರೆಗೆ ಡಿಎಚ್‌ಒ ಕಚೇರಿಯಿಂದಲೇ ನಿರ್ವಹಣೆಯಾಗಿದೆ. ಇತ್ತೀಚೆಗಷ್ಟೇ ಶ್ರದ್ಧಾಂಜಲಿ ವಾಹನದ ಚಾಲಕನನ್ನೂ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಿದ್ದಾರೆ ಎಂದು ತಿಳಿಸಿದರು.

ಸರಕಾರದಲ್ಲಿ ಅನುದಾನ ಕೊರತೆಯೋ, ಅಧಿಕಾರಿಗಳ ನಡುವಿನ ಸಂಪರ್ಕದ ಸಮಸ್ಯೆಯೋ ಗೊತ್ತಿಲ್ಲವಾದರೂ ಬಡವರ ಅನುಕೂಲಕ್ಕಾಗಿ ಜಾರಿಗೊಳಿಸಿರುವ ‘ಶ್ರದ್ಧಾಂಜಲಿ’ ಸೇವೆ ಜಿಲ್ಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಹಂತಕ್ಕೆ ತಲುಪಿರುವುದು ಸುಳ್ಳಲ್ಲ.

ಆಸ್ಪತ್ರೆಗಳಿಂದ ಮನೆಗಳಿಗೆ ಶವ ಸಾಗಿಸಲು ಖಾಸಗಿ ವಾಹನದಾರರು ಮುಂದೆ ಬರುವುದಿಲ್ಲ. ಬಂದವರೂ ಮನಸ್ಸಿಗೆ ಬಂದಷ್ಟು ಹಣ ಕೇಳುತ್ತಾರೆ. ಹೀಗಾಗಿ ‘ಶ್ರದ್ಧಾಂಜಲಿ’ ವಾಹನದಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಿದೆ. ಹೀಗಾಗಿ ಆದಷ್ಟು ಬೇಗ ದುರಸ್ತಿಗೊಳಿಸುವುದರೊಂದಿಗೆ ಹೆಚ್ಚುವರಿಯಾಗಿ ನಾಲ್ಕೈದು ವಾಹನಗಳನ್ನು ಒದಗಿಸಿದರೆ ಒಳ್ಳೆಯದು.
. ಮುತ್ತಣ್ಣ ಭರಡಿ, ಸಾಮಾಜಿಕ ಕಾರ್ಯಕರ್ತ

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next