Advertisement

ಗಾಯನ ಗಂಗೋತ್ರಿ

06:00 AM Dec 23, 2018 | Team Udayavani |

ಮೊನ್ನೆ ಧಾರವಾಡದ ಶುಕ್ರವಾರ ಪೇಟೆಯ ಸ್ವರಶಿರೋಮಣಿ ಗಂಗೂಬಾಯಿ ಹಾನಗಲ್‌ ಅವರ ಬಾಲ್ಯದ ಮನೆ ಮುಂದೆ ನಿಂತಾಗ ನೆನಪಾದದ್ದು ಹೊಸಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ… ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ? ಎಂಬ ವಚನ. ಎದೆಯೊಳಗೆಲ್ಲ ಸಂಕಟದ ಅಪಸ್ವರಗಳು ತಾಕಲಾಡತೊಡಗಿದ್ದವು. 

Advertisement

ಇದೀಗ ಜನವರಿ 4ರಿಂದ ಮೂರು ದಿನಗಳ ಕಾಲ ನಡೆಯುವ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನ್ನೂರು ಧಾರವಾಡ ಸಜ್ಜಾಗುತ್ತಿದೆ. ನಾಡಿನ ಮೂಲೆಮೂಲೆಗಳಿಂದ ಧಾರವಾಡಕ್ಕೆ ಅಗಮಿಸುವ ಸಾಹಿತ್ಯಾಸಕ್ತರು, ಅಭಿಮಾನಿಗಳು ತಪ್ಪದೇ ಭೇಟಿಮಾಡುವ ಸ್ಥಳಗಳೆಂದರೆ ಒಂದು ಕಾಲಕ್ಕೆ ಮೂಡಲ ಮನೆಗೆ ಮುತ್ತಿನ ನೀರಿನ ಎರಕ ಹೊಯ್ಯುತ್ತಿದ್ದ ಸಾಧನಕೇರಿ, ಬಣ್ಣ ಕಳೆದುಕೊಂಡು ನಿಂತ ಬೇಂದ್ರೆ ಭವನ. ಅದರ ಪಕ್ಕದಲ್ಲಿ ಹಸಿರು ತುಂಬಿಕೊಂಡ ಬೇಂದ್ರೆ ಮನೆಯಲ್ಲಿ ಅವರ ಮೊಮ್ಮಗಳು ಪುನರ್ವಸು ಮುಗುಳ್ನಗುವಿನಲ್ಲಿ ಸ್ವಾಗತಿಸುತ್ತಾರೆ, ಟೇಬಲ್‌ ಮೇಲಿಟ್ಟ ಸ್ಟೀಲ್‌ ಡಬ್ಬದಿಂದ ಚಮಚ ಸಕ್ಕರೆಯನ್ನಿತ್ತು ಬಾಯಿಸಿಹಿ ಮಾಡಿ ಬೀಳ್ಕೊಡುತ್ತಾರೆ. 

ಧಾರವಾಡದಿಂದ ಈಗತಾನೆ ಮರಳಿದ ನನಗೆ ಒಂದೆಡೆ ನನ್ನೂರಿನಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ನನ್ನ ಮನೆಯದೇ ಒಂದು ಶುಭಕಾರ್ಯವೆನ್ನುವಷ್ಟು ಪುಳಕ ಹುಟ್ಟಿಸುತ್ತಿದ್ದರೆ, ಇನ್ನೊಂದೆಡೆ ಹಿಂದೂಸ್ತಾನಿ ಕಿರಾನಾ ಘರಾನಾದ ಸಂಗೀತದ ಮೇರು ಪ್ರತಿಭೆ ಹುಟ್ಟಿ ಬೆಳೆದ ಬಾಲ್ಯದ ಪಾಳುಬಿದ್ದ ಗಂಗೋತ್ರಿ ತಳಮಳಗೊಳಿಸಿದೆ. ಗಾನ ಗಂಗೆಯ ಜನ್ಮಸ್ಥಳ ಎಂಬ ಫ‌ಲಕವನ್ನು ಹೊತ್ತು ನಿಂತ ಹಳೆಗೋಡೆಯ ಕರುಳು ಮಿಡಿವ “ಖಯಾಲು’ ಕೂಡ ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ಬಾರದೇ ಇದ್ದದ್ದು ವಿಷಾದದ ಸಂಗತಿ! 

 ಫ‌ಲಕದ ಅಕ್ಷರಗಳೂ ಮಾಸಿವೆ. ಒಡಕು ಮೆಟ್ಟಿಲುಗಳು ಸೋತು ಅರೆತೆರೆದ ಕಬ್ಬಿಣದ ಗೇಟಿನೊಡನೆ ಮುಷ್ಕರಹೂಡಿವೆ. ಅವನ್ನು ದಾಟಿದರೆ ಮುಂಬಾಗಿಲ ಹೊಸಿಲು, ಆಚೆ ಈಚೆ ಹುಟ್ಟಿದ ಹುಲ್ಲು ಕುರುಚಲು ಸಸ್ಯ , ಕೆಂಪು ಬಟ್ಟಲುಹೂವಿನ ಗಿಡಗಳು ಯಾರು ನೀನೆರೆಯದಿದ್ದರೇನು ನಾ ಅರಳದೆ ಇರುವೆನೇ ಎಂದು ಸವಾಲು ಹಾಕುವಂತಿವೆ. ಮುಂಬಾಗಿಲ ಚಿಲಕದ ದನಿಯಡಗಿದೆ. ಅರೆತೆರೆದ ಬಾಗಿಲಿನಲ್ಲಿ ಇಣುಕಿದರೆ ಒಳ ಪಡಸಾಲೆಯ ಬಾಗಿಲು ಮುಖಮುಚ್ಚಿಕೊಂಡಿದೆ. ಯಾರದು ಬಾಗಿಲನ್ನು ಹೀಗೇ ಹಾರು ಹೊಡೆದು ಹೋಗಿದ್ದಾರಲ್ಲ ! ತೊಟ್ಟಿಲು ತೂಗುತ್ತ ಜೋಗುಳ ಹಾಡಿದ ಅಂಬಾಬಾಯಿ ಆಡಲು ಹೋಗಿರುವ ಗಂಗಾಳನ್ನು ಹುಡುಕಲು ಇಲ್ಲಿÇÉೊ ಎಲಿಗಾರ ಓಣಿಗೋ, ಲಕಮನಹಳ್ಳಿ ಓಣಿಗೊ ಇಲ್ಲ ರಾಯರ ಮಠದ ಮೆಟ್ಟಿಲ ಮೇಲೆ ಕೂತುಬಿಟ್ಟರೋ ಏನೋ ! ತೆರೆದ ಕಿಟಕಿಯ ತುಂಬ ಜೇಡರ ಬಲೆ, ಇಣಿಕಿದರೆ ಬಿಸಿಲಿಗೆ ಕಾಣದ ಗವ್ವೆನ್ನುವ ಕತ್ತಲು ಮತ್ತು ನೇತಾಡುವ ಜೇಡನ ಬಲೆ. ಹೊರಗೆ ಎಡಕ್ಕೆ ಒಂದುಕಾಲಕ್ಕೆ ಇಳಿಸಂಜೆಯ ಹೊಂಬಾನಿನ ಸೊಬಗನ್ನು ಸವಿಯುತ್ತಿದ್ದ ಸಿಮೆಂಟಿನ ಕಟ್ಟೆಯಿದೆ. ಬಲಭಾಗದಲ್ಲಿ ತುಳಸಿಕಟ್ಟೆ. ಮತ್ತೆಲ್ಲ  ಕುರುಚಲು ಕಸ. ಕಾಲದ ಪಳೆಯುಳಿಕೆಗಳಂತೆ ಚೆಲ್ಲಾಡಿವೆ.   

ಮಗಳ ಹಿಂದುಸ್ತಾನಿ ಸಂಗೀತಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ಅಂಬಾಬಾಯಿ ತಮ್ಮ ಕರ್ನಾಟಕ ಸಂಗೀತದ ಹಾಡುಗಾರಿಕೆಯನ್ನೇ ನಿಲ್ಲಿಸಿಬಿಟ್ಟರಂತೆ. ಆ ಕಾಲದ ಎಲ್ಲಾ ಉದ್ದಾಮ ಸಂಗೀತಕಾರರಾದ ಬಡೆ ಗುಲಾಮ್‌ ಅಲಿಖಾನ್‌, ಉಸ್ತಾದ ಫ‌ಯಾಜ್‌ ಖಾನ್‌, ಪಂಡಿತ ಓಂಕಾರನಾಥ್‌, ಶಹನಾಯಿ ಮಾಂತ್ರಿಕ ಬಿಸ್ಮಿಲ್ಲಾ ಖಾನ್‌ ಮೊದಲಾದವರ ಪ್ರೀತಿಪಾತ್ರರಾಗಿದ್ದ ಗಂಗೂಬಾಯಿ ಖ್ಯಾತ ಚಿತ್ರನಟಿ ನರ್ಗೀಸಳ ತಾಯಿಯಾದ ಜದ್ದನಬಾಯಿಯವರ ಪ್ರೋತ್ಸಾಹದಿಂದಲೇ ಕೊಲ್ಕತಾದಲ್ಲಿಯ ಅಖೀಲ ಭಾರತ ಸಂಗೀತ ಸಮ್ಮೇಳನಕ್ಕೆ ಹೋಗಿ ಬಂದದ್ದು ನಮಗೀಗ ನೆನಪಷ್ಟೆ ! 

Advertisement

ಒಂದು ದಶಕದ ಹಿಂದೆ ಅಂದರೆ 2008 ರಲ್ಲಿ ಯಡಿಯೂರಪ್ಪನವರ ಕಾಲದಲ್ಲಿ ಸಾಂಸ್ಕೃತಿಕ ಮಹತ್ವದ ಮೇರುಗಾಯಕಿ ಗಂಗೂಬಾಯಿ ಅವರ ಜನ್ಮನಿವಾಸವನ್ನು ವಸ್ತುಸಂಗ್ರಹಾಲಯವನ್ನಾಗಿಸುವ ಮಹದುದ್ದೇಶದಿಂದ 25 ಲಕ್ಷ ರೂ. ಗಳನ್ನು ಪುನರ್‌ ನಿರ್ಮಾಣ ಕಾರ್ಯಕ್ಕಾಗಿ ಒದಗಿಸಿದ್ದೆಂದು ಹೇಳುವ  ಅನಾಥ ಫ‌ಲಕ ಇಂದು ಇತಿಹಾಸವಾಗಿದೆ. ಇಂಟ್ಯಾಕ್‌ ಸಂಸ್ಥೆ ಮಾರ್ಗದರ್ಶನದಲ್ಲಿ ಗಂಗಜ್ಜಿಯ ಮನೆ ನವೀಕರಣಗೊಂಡಿತ್ತು, ವಸ್ತುಸಂಗ್ರಹಾಲಯವಿತ್ತು, ಅಲ್ಲಿ ಸಂಗೀತಾಸಕ್ತರು ಆಗಮಿಸುತ್ತಿದ್ದರೆನ್ನುವುದೇ ಹುಸಿಯೆಂಬಂತೆ ಮನೆ ಹಾಳುಕೊಂಪೆಯಾಗಿದೆ. ಸೂರು ಕುಸಿದಿದೆ. ದುರ್ಬೀನು ಹಾಕಿ ಹುಡುಕಿದರೂ ಪುನರ್‌ ನಿರ್ಮಾಣ ಕಾರ್ಯದ ಒಂದಂಗುಲವೂ ಸಿಕ್ಕಲಿಕ್ಕಿಲ್ಲ. ಪಾಳುಬಿದ್ದ ಮನೆ ಜೀರ್ಣೋದ್ಧಾರಗೊಳಿಸಿ ಸಂರಕ್ಷಿಸುವ ಸರಕಾರದ  ಇಪ್ಪತ್ತೈದು ಲಕ್ಷದ ಕಥೆಯನ್ನು ಸಾರುತ್ತದೆ.  ಒಂದು ದಶಕದಲ್ಲಿ ಯಾರೂ ಇತ್ತ ಹೊರಳಿ ನೋಡಲೇ ಇಲ್ಲವೇ?

ಕನ್ನಡ ಸಾಹಿತ್ಯದ ಅನೇಕ ದಿಗ್ಗಜರ ಕರ್ಮಭೂಮಿ ಧಾರವಾಡ. ಕನ್ನಡ ಸಾಹಿತ್ಯಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ. ಈ ನೆಲದಲ್ಲಿ ಜನಿಸಿ ನೆಲೆಸಿದವರನ್ನು ನೆನೆಯುವುದೇ ಒಂದು ಅನಿರ್ವಚನೀಯ ಸಂತಸ.  ಬೇಂದ್ರೆ ಭವನವನ್ನು ಬಿಟ್ಟರೆ ಬೇರೆ ಸಾಹಿತಿಗಳ ಸ್ವಗ್ರಹಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಕಟುವಾಸ್ತವ ! ಆನಂದಕಂದರ ಮನೆಯನ್ನೊಮ್ಮೆ ನೋಡಿ ಗಕ್ಕನೆ ನಿಂತುಬಿಟ್ಟಿದ್ದೆ ಪರಿವೆಯಿರದೆ. ಈಗ್ಯಾವ ಸ್ಥಿತಿಯಲ್ಲಿದೆಯೋ ಏನೊ. ಪೇಡಾ ನಗರಿ, ವಾಣಿಜ್ಯ ನಗರಿ, ವಿದ್ಯಾ ನಗರಿ ಎಂದೆಲ್ಲ ಅಗ್ಗಳಿಕೆಗೆ ಪಾತ್ರವಾಗಿರುವ ಧಾರವಾಡದ ಬೆಡಗಿ ಹೊರಗಿನಿಂದ ಬರುವ ಅತಿಥಿಗಳನ್ನು ಹೇಗೆಲ್ಲ ಸಂಭಾಳಿಸುತ್ತಾಳ್ಳೋ ಗೊತ್ತಿಲ್ಲ. ಊರ ತುಂಬ ಅಗೆದು ಬಿಟ್ಟ ರಸ್ತೆಗಳ ದುರಸ್ತಿ ನಿಧಾನಗತಿಯಲ್ಲಿ ಸಾಗುತ್ತಿದೆ. 2011ರಿಂದ ಆಮೆಗತಿಯಲ್ಲಿ ಸಾಗಿದ ಹುಬ್ಬಳ್ಳಿ-ಧಾರವಾಡ BRT ಸಂಚಾರಮಾರ್ಗ ಈಗ ಆರಂಭಗೊಂಡರೂ ಕಾರ್ಯಪೂರ್ತಿ ಆಗಿಲ್ಲ.  ಅರ್ಧಂಬರ್ಧಗೊಂಡ  ಸೇತುವೆಯ ಕಾರ್ಯ, ಸುಗಮ ವಾಹನ ಸಂಚಾರವನ್ನೇ ಅಸ್ತವ್ಯಸ್ತಗೊಳಿಸುವ ರಸ್ತೆಗಳು ಯಾವಾಗ ದುಸ್ತಿರಗೊಳ್ಳುತ್ತವೋ ನೋಡಬೇಕು. 

ಜಿಲ್ಲಾಡಳಿತದ ಕಾರ್ಯವೈಖರಿಯನ್ನೊಮ್ಮೆ ನೋಡಿದರೆ- ಮನೆಯೊಳಗೆ ಮನೆಯೊಡೆಯನಿ¨ದ್ದಾನೊ ಇಲ್ಲವೊ ಎಂದು ಮತ್ತೆ ಯೋಚಿಸುವಂತಾಗಿದೆ.

ರೇಣುಕಾ ನಿಡಗುಂದಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next