Advertisement

ಕೆಜಿಎಫ್ ನಿರೀಕ್ಷೆಯಲ್ಲಿ ಶ್ರೀನಿಧಿ ಶೆಟ್ಟಿ

12:10 PM Nov 19, 2018 | Team Udayavani |

ಕೆಲವು ಸಿನಿಮಾಗಳೇ ಹಾಗೆ. ತಂಡದ ಸದಸ್ಯರಿಗೆಲ್ಲಾ ಅದೃಷ್ಟ ತಂದುಕೊಡುತ್ತವೆ. ಅವಕಾಶದ ಬಾಗಿಲುಗಳನ್ನು ತೆರೆಯುತ್ತದೆ. ಈಗ ಈ ಮಾತು ಯಾಕೆ ಎಂದು ಕೇಳಿದರೆ ಅದಕ್ಕೆ ಉತ್ತರ “ಕೆಜಿಎಫ್’ ಚಿತ್ರ. ಯಶ್‌ ನಟನೆಯ “ಕೆಜಿಎಫ್’ ಚಿತ್ರದ ಟ್ರೇಲರ್‌ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಎಲ್ಲರಿಂದಲೂ ಮೆಚ್ಚುಗೆ ಪಡೆದಿದೆ.

Advertisement

ಇಷ್ಟಕ್ಕೆ “ಕೆಜಿಎಫ್’ ಟ್ರೇಲರ್‌ ಪರಿಣಾಮ ಮುಗಿದಿಲ್ಲ, ಆ ಚಿತ್ರದಲ್ಲಿ ದುಡಿದ ಕಲಾವಿದರಿಗೆ, ತಾಂತ್ರಿಕ ವರ್ಗದವರಿಗೆ ಮೆಚ್ಚುಗೆಯ ಜೊತೆಗೆ ಅವಕಾಶಗಳನ್ನು ಕೂಡಾ ತರುತ್ತಿದೆ. ಆ ಸಾಲಿನಲ್ಲಿ ಮೊದಲು ನಿಲ್ಲುವವರು ಶ್ರೀನಿಧಿ ಶೆಟ್ಟಿ. “ಕೆಜಿಎಫ್’ಗೆ ನಾಯಕಿಯಾಗುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಬೆಡಗಿ. ಮಂಗಳೂರು ಮೂಲದ ಶ್ರೀನಿಧಿ ಶೆಟ್ಟಿ 2016 ರಲ್ಲಿ ಮಿಸ್‌ ಸುಪ್ರ ಇಂಟರ್‌ನ್ಯಾಶನಲ್‌ ಕಿರೀಟ ಮುಡಿಗೇರಿಸಿಕೊಂಡವರು.

ಈಗ “ಕೆಜಿಎಫ್’ ಮೂಲಕ ಬಣ್ಣದ ಲೋಕ ಎಂಟ್ರಿಯಾಗಿದ್ದು, ಈ ಚಿತ್ರದಲ್ಲಿ ರೀನಾ ಎಂಬ ಪಾತ್ರ ಮಾಡಿದ್ದಾರೆ. ಚಿತ್ರದ ಟ್ರೇಲರ್‌ ಬಿಡುಗಡೆಯಾಗುತ್ತಿದ್ದಂತೆ ಶ್ರೀನಿಧಿ ಶೆಟ್ಟಿಯವರಿಗೆ ಸಾಕಷ್ಟು ಅವಕಾಶಗಳು ಬರಲಾರಂಭಿಸಿದೆ. ಬಾಲಿವುಡ್‌ ಸೇರಿದಂತೆ ತಮಿಳು, ತೆಲುಗಿನಿಂದಲೂ ಶ್ರೀನಿಧಿಗೆ ಅವಕಾಶಗಳು ಬರುತ್ತಿವೆ. ಆದರೆ, ಶ್ರೀನಿಧಿ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲವಂತೆ.

ಅದಕ್ಕೆ ಕಾರಣ, “ಕೆಜಿಎಫ್’. ಮೊದಲ ಚಿತ್ರ ಬಿಡುಗಡೆಯಾಗಿ, ಜನ ಹೇಗೆ ಸ್ವೀಕರಿಸುತ್ತಾರೆಂಬ ನಿರೀಕ್ಷೆಯಲ್ಲಿರುವ ಶ್ರೀನಿಧಿ, ಆ ನಂತರವೇ ಬೇರೆ ಸಿನಿಮಾ ಒಪ್ಪಿಕೊಳ್ಳಲು ನಿರ್ಧರಿಸಿದ್ದಾರೆ. ಜೊತೆಗೆ ಸಿನಿಮಾ ಬಿಡುಗಡೆಯಾದ ಮೇಲೆ ಇನ್ನಷ್ಟು ಅವಕಾಶಗಳು ಬರುವ ನಿರೀಕ್ಷೆ ಶ್ರೀನಿಧಿ ಶೆಟ್ಟಿಯವರದು. ಅಂದಹಾಗೆ, ಯಶ್‌ ಅಭಿನಯದ “ಕೆಜಿಎಫ್’ ಚಿತ್ರ ಡಿಸೆಂಬರ್‌ 21 ರಂದು ತೆರೆಕಾಣಲಿದೆ. ಈ ಚಿತ್ರವನ್ನು ಪ್ರಶಾಂತ್‌ ನೀಲ್‌ ನಿರ್ದೇಶಿಸಿದ್ದು, ವಿಜಯ್‌ ಕಿರಗಂದೂರು ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next