Advertisement

ರಾಮನಾಮ ವೈಭವೀಕರಿಸಿದ ಮಹಾಕವಿ ಕಂಬಂ

01:07 AM Apr 21, 2021 | Team Udayavani |

“ಕಾಲಂ ತಝ ಈಂಡು ಇನ್ನುಂ ಪೊಗಲಂ’ ಪ್ರಧಾನಿ ಮೋದಿ, ಅಯೋಧ್ಯೆ ರಾಮಮಂದಿರ ಭೂಮಿ ಪೂಜೆಯ ಸಂದರ್ಭದಲ್ಲಿ ಕಂಬ ರಾಮಾಯಣದ ಈ ಸಾಲನ್ನು ಉಲ್ಲೇಖೀಸಿದ್ದಾರೆ. “ಕಾಲವಿಳಂಬ ಮಾಡದೆ ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು’ ಎಂದರ್ಥ. ಶ್ರೀರಾಮನ ವಾಕ್ಯದಂತೆ ನಾವು ಬದುಕಬೇಕು ಎಂದು ನುಡಿದಿದ್ದರು.

Advertisement

ರಾಮಾವತಾರಂ ಅಥವಾ ಕಂಬ ರಾಮಾಯಣವು ತಮಿಳು ಕವಿ ಕಂಬಾರ್‌ ಇವರ ತಮಿಳಿನ ಮೇರು ಕೃತಿ. 12ನೇ ಶತಮಾನದಲ್ಲಿ ರಚಿಸಲ್ಪಟ್ಟಿತು. ಸಂಸ್ಕೃತ ವಾಲ್ಮೀಕಿ ರಾಮಾಯಣವನ್ನು ಆಧಾರವಾಗಿಟ್ಟುಕೊಂಡು ಬರೆದ ಈ ಕೃತಿ ಅಯೋಧ್ಯಾ ಶ್ರೀರಾಮನ ಜೀವನವನ್ನು ವರ್ಣಿಸುತ್ತದೆ. ಆದರೆ ರಾಮಾವತಾರಂ, ಆಧ್ಯಾತ್ಮಿಕ ಮತ್ತು ಕಥಾ ನಿರೂಪಣೆಯಲ್ಲಿ, ಸಂಸ್ಕೃತ ರಾಮಾಯಣಕ್ಕಿಂತ ಹಲವು ಅಂಶಗಳಿಂದ ಭಿನ್ನವಾಗಿದೆ. ತಮಿಳು ಸಾಹಿತ್ಯದಲ್ಲೇ ಅತ್ಯಂತ ಮೇರು ಗ್ರಂಥ ಎಂದು ಪರಿಗಣಿಸಲ್ಪಟ್ಟಿದೆ.

ಕಂಬ ರಾಮಾಯಣದ ನಿರೂಪಣ ವಿಶೇಷತೆ ಎಂದರೆ ಅದರ ಆರು ಖಂಡ ಅಥವಾ ಅಧ್ಯಾಯಗಳು. ಬಾಲ ಕಾಂಡ, ಅಯೋಧ್ಯಾ ಕಾಂಡ, ಅರಣ್ಯ ಕಾಂಡ, ಕಿಷ್ಕಿಂದಾ ಕಾಂಡ, ಸುಂದರ ಕಾಂಡ, ಯುದ್ಧಕಾಂಡ. ಖಂಡಗಳನ್ನು ಪದಳಂ ಎಂದು ಕರೆಯಲ್ಪಡುವ 123 ವಿಭಾಗಗಳನ್ನಾಗಿ ಮಾಡಲಾಗಿದ್ದು, 12,000 ಶ್ಲೋಕಗಳನ್ನು ಹೊಂದಿವೆ.

ಸುಮಾರು 400 ವರ್ಷಗಳಲ್ಲಿ ತಮಿಳರು, ಭಕ್ತಿ ಆಂದೋಳನದ ಪ್ರಭಾವಕ್ಕೊಳಗಾಗಿದ್ದರು. 9ನೇ ಶತಮಾನದ ಮಧ್ಯಭಾಗದಲ್ಲಿ ಚೋಳರಸರು ವೈಭವದ ಆಡಳಿತವನ್ನು ನಡೆಸುತ್ತಿದ್ದರು. ಅನೇಕ ಸಣ್ಣ ಮತ್ತು ಬೃಹತ್‌ ಶಿವ ಮತ್ತು ವಿಷ್ಣು ದೇವಾಲಯಗಳು ಕಾವೇರಿ ನದಿ ತಟದಲ್ಲಿ ಉದ್ಭವಿಸಿದ್ದವು. ಭೌದ್ಧರು ಮತ್ತು ಜೈನರು ತಮ್ಮ ಪ್ರಭಾವವನ್ನು ಕಳೆದುಕೊಂಡು, ಅಲ್ಲಿಂದ ಕಾಲ್ಕಿತ್ತರು. ಚೋಳರ ಆಳ್ವಿಕೆ 13ನೇ ಶತಮಾನದ ಅಂತ್ಯ ಭಾಗದವರೆಗೆ ವಿಸ್ತರಿಸಿತ್ತು. ಅವರ ರಾಜಧಾನಿ ತಂಜಾವೂರ್‌. ಚೋಳರಸರು ದೇವಾಲಯ ವಾಸ್ತುಶಿಲ್ಪಕ್ಕೆ ಅಪಾರ ಕೊಡುಗೆಗಳನ್ನು ಸಲ್ಲಿಸಿದ್ದರು. ತಮಿಳರು ತಮ್ಮ ಈಗಿನ ಸಂಗೀತ, ನೃತ್ಯ ಮತ್ತು ಸಾಹಿತ್ಯ ಪರಂಪರೆಗೆ ಚೋಳರಿಗೆ ಋಣಿಯಾಗಿರಬೇಕು. ಇಂತಹ ಚೋಳ ಸಾಮ್ರಾಜ್ಯದಲ್ಲಿ ಜನಿಸದವನೇ ಕಂಬನ್‌, ಅಥವಾ ಕಂಪನ್‌ ತನ್ನ ಮೇರು ಕೃತಿ, ರಾಮಾಯಣದ ಮೂಲಕ ತಮಿಳು ಸಾಹಿತ್ಯವನ್ನು ಶ್ರೀಮಂತಗೊಳಿಸಿದನು. ಆದರೆ ಅವನ ನಿಜ ನಾಮಧೇಯ, ಹುಟ್ಟೂರು, ಜನನ ದಿನಾಂಕ, ಮತ್ತವನ ಧರ್ಮ ಇತ್ಯಾದಿ ಬಗ್ಗೆ ವಿವಾದಗಳಿದ್ದರೂ, ಕಂಪನ್‌ ಕಾಳೀ ದೇವಸ್ಥಾನದ ಪೂಜಾರಿ, ಪುರೋಹಿತನೋರ್ವನ ಪುತ್ರ ಎಂದು ಹೇಳುತ್ತದೆ ಅನೇಕ ದಾಖಲೆಗಳು.

ಕಂಬನ ಕಾಲ 855 ಅಥವಾ ಕ್ರಿ.ಶ. 1185 ಎಂದು ಹೇಳಲಾಗುತ್ತದೆ. ಒಂದು ಅನಾಮಧೇಯ ಕವನ ತಿಳಿಸುವಂತೆ. ಕಂಬನು ರಾಮಾವತಾರಂ ಎಂಬ ಕೃತಿಯನ್ನು ತಮಿಳು ತಿಂಗಳು ಪಂಕುಣಿ, ಶಕ ವರ್ಷ 807ರಲ್ಲಿ ರಚಿಸಿದ್ದನು. ಅಂದರೆ ಕ್ರಿ.ಶ. 895ರಲ್ಲಿ.

Advertisement

ಕಂಬ ರಾಮಾಯಣದ ವಿಶೇಷತೆಗಳು: ರಾಮನಾಮವನ್ನು ವೈಭವೀಕರಿಸಿ, ಕಂಬ ರಾಮಾಯಣವನ್ನು ಎತ್ತರಕ್ಕೆ ಏರಿಸಿದ ಮಹಾಕವಿ ಕಂಬಂ. ಕಂಬನ ಕೃತಿಯು ಸರಳ ಶೈಲಿಯಲ್ಲಿ ನಿರೂಪಿತವಾಗಿದೆ. ತಾನು ಸ್ವತಃ ಆದರ್ಶವಾದಿ ಮತ್ತು ಮಾನವತಾವಾದಿಯಾದ್ದರಿಂದ ಕೃತಿಯಲ್ಲಿ ತನ್ನ ತಣ್ತೀಜ್ಞಾನವನ್ನು ವ್ಯಕ್ತಪಡಿಸುವ ಎಲ್ಲ ಅವಕಾಶಗಳನ್ನು ಸ್ಪಷ್ಟ ಶಬ್ದಗಳಲ್ಲಿ ನಿರೂಪಿಸಿದನು. ಪಾತ್ರ ಚಿತ್ರಣಗಳೂ ಅಷ್ಟೇ ಪ್ರಭಾವಶಾಲಿಯಾಗಿ ಮೂಡಿಬಂದಿವೆ.

ವಾಲ್ಮೀಕಿ ರಾಮಾಯಣ ಕ್ರಿ.ಶ. 1ನೇ ಶತಮಾನದಲ್ಲಿ ರಚನೆಯಾಗಿದ್ದರೆ (ಆದಿಕಾವ್ಯ ರಚನೆಯ ನಿಖರ ಕಾಲದ ಬಗ್ಗೆ ವಿವಾದಗಳಿವೆ) ಕಂಬ ರಾಮಾಯಣ 12ನೇ ಶತಮಾನದಲ್ಲಿ. ವಾಲ್ಮೀಕಿ ರಾಮಾಯಣದಲ್ಲಿ 7 ಖಂಡ – ಅಧ್ಯಾಯಗಳಿವೆ, ಕಂಬ ರಾಮಾಯಣದಲ್ಲಿ 6 ಖಂಡಗಳಿವೆ. 123 (ಪಾದಲಂ) ವಿಭಾಗಗಳಿವೆ. 12,000 ಶ್ಲೋಕಗಳಿವೆ. ವಾಲ್ಮೀಕಿ ರಾಮಾಯಣದಲ್ಲಿ 24,000 ಶ್ಲೋಕಗಳಿವೆ. ಕೃತಿಯಲ್ಲಿ ವಿರುಟ್ಟಂ ಮತ್ತು ಸಂತಂ ಶೈಲಿ ಬಳಸಿದ್ದರಿಂದ ಕಂಬ ರಾಮಾಯಣ ಸಾಹಿತ್ಯ ದೃಷ್ಟಿಯಿಂದ ಅತೀ ಮಹತ್ವವೆನಿಸಿದ ಗ್ರಂಥ ಎನಿಸಿದೆ.

ಕಂಬ ರಾಮಾಯಣ ಯುದ್ಧಕಾಂಡದಲ್ಲಿ ಕೊನೆಗೊಂಡರೆ, ವಾಲ್ಮೀಕಿ ರಾಮಾಯಣದಲ್ಲಿನ ಉತ್ತರಾಕಾಂಡ ಕಂಬ ರಾಮಾಯಣದಲ್ಲಿ ಕಂಡು ಬರುವುದಿಲ್ಲ. ಲವಕುಶ ಕಥೆಯೇ ಇಲ್ಲ. ವಾಲಿ ವಧೆಯ ಬಳಿಕ ಅವನ ಮಡದಿ ತಾರಾ ಸುಗ್ರೀವನನ್ನು ವರಿಸಿದಳು ಎಂದು ವಾಲ್ಮೀಕಿ ರಾಮಾಯಣ ತಿಳಿಸಿದರೆ, ಕಂಬ ರಾಮಾಯಣ, ಆಕೆ ವಿಧವೆಯಾಗಿಯೇ ಉಳಿಯುತ್ತಾಳೆ ಎಂದಿದೆ. ವಾಲ್ಮೀಕಿ ರಾಮಾಯಾಣದಲ್ಲಿ “ದೃಷ್ಟಿ ಸೀತೈ’ ಸೀತೆಯನ್ನು ಕಂಡೆ, ಎಂದು ಹನುಮಂತ, ರಾಮನಿಗೆ ತಿಳಿಸುತ್ತಾನೆ. ಕಂಬನ್‌, ದೃಷ್ಟಿ ಎಂಬ ಪದವನ್ನು ತತ್‌ಕ್ಷಣ ಬದಲಿಸಿ, ಪರಿಶುದ್ಧತೆಯ ಆಭರಣವನ್ನು ಕಂಡೆ ಎನ್ನುತ್ತಾನೆ. ಅಸುರಳಾಗಿ ಶೂರ್ಪನಖಾ ರಾಮನನ್ನು ಸಂಧಿಸಿದಳು ಎಂದು ವಾಲ್ಮೀಕಿ ರಾಮಾಯಣ, ಸುಂದರ ಹೆಣ್ಣಾಗಿ ರಾಮನನ್ನು ಭೇಟಿಯಾದಳು ಎಂದು ಕಂಬ ರಾಮಾಯಣದ ಉಲ್ಲೇಖ. ರಾಮ ಸೀತೆ ವಿವಾಹ ವ್ಯವಸ್ಥಿತ ವಿವಾಹ ಎಂದು ವಾಲ್ಮೀಕಿ ರಾಮಾಯಣ ಹೇಳಿದರೆ, ಅದು ಪ್ರೇಮ ವಿವಾಹ ಎಂದು ಕಂಬ ರಾಮಾಯಣ.

ದೈವಿಕತೆ – ಕಂಬನ ಕಲ್ಪನೆ: ಶ್ರೀರಾಮನನ್ನು ತಿರುಮೈಯ ಅವತಾರವೆಂದು ಪರಿಗಣಿಸುತ್ತಾನೆ. ತಿರುಮೈ ಅಂದರೆ ಪರಮಾತ್ಮ. ಶ್ರೀರಾಮನನ್ನು ಮೊದಲ ಬಾರಿಗೆ ಯುದ್ಧಭೂಮಿಯಲ್ಲಿ ಎದುರಿಸುವಾಗ, ರಾವಣನ ಮಾತಿನ ಮೂಲಕ ಕಂಬನ್‌ ದೈವೀಕತನವನ್ನು ವ್ಯಕ್ತಪಡಿಸುತ್ತಾನೆ. “ತಾನು ಎದುರಿಸಿದುದು, ಶಿವನನ್ನೂ ಅಲ್ಲ, ಪಿರಮನನ್ನೂ ಅಲ್ಲ, ತಿರುಮೈನನ್ನೂ ಅಲ್ಲ. ಅವರೆಲ್ಲರಿಗಿಂತ ಶ್ರೇಷ್ಠನಾದವನೊಬ್ಬನನ್ನು ಎದುರಿಸಿದ್ದೇನೆ. ಎಲ್ಲಿಂದಲೋ ಹುಟ್ಟಿ ಅನೇಕ ಪ್ರದೇಶಗಳನ್ನು ದಾಟಿ ಸರಯೂ ನದಿ ಹರಿಯುವಂತೆ, ಅದು ಕೊನೆಗೆ ಸಾಗರ ಸೇರುವ ಹಾಗೆ, ನಾಮ ಹಲವಿದ್ದರೂ ಪರಮಾತ್ಮ ಒಬ್ಬನೇ ಎಂಬ ಸಂದೇಶವನ್ನು ಆ ಕಾಲದಲ್ಲಿದ್ದ ಪರಿಸ್ಥಿತಿಯನ್ನು ತಿಳಿದು ತನ್ನ ಕೃತಿಯಲ್ಲಿ ಸಮಾಜವನ್ನು ತಿದ್ದಲು ಪ್ರಯತ್ನಿಸಿದ್ದಾನೆ.

ಸನ್ನಡತೆ ಕಂಬನ ದೃಷ್ಟಿಕೋನ: ಕಂಬನು, ಪ್ರದೇಶ, ಜನರು, ರಾಜ, ಮತ್ತವನ ಮಂತ್ರಿಗಳನ್ನು ವರ್ಣಿಸುವಾಗ, ಅವನ ಆದರ್ಶವಾದ ಮುನ್ನಲೆಗೆ ಬರುತ್ತದೆ. ಪ್ರಜೆಗಳು ಮತ್ತು ಆಡಳಿತಗಾರರು ಸದಾಚಾರದ ಬದುಕನ್ನು ಅನುಸರಿಸಬೇಕು. ಸ್ವಾಸ್ಥ್ಯ ಮತ್ತು ಶಾಂತಿ, ನೆಮ್ಮದಿಯ ಜೀವನವನ್ನು ಕಳೆಯಬೇಕು. ಪಂಚೇಂದ್ರಿಯಗಳ ಹತೋಟಿಯಿರಬೇಕು. ಸುಂದರವಾದ ಸರಯೂ ನದಿ ಮನೋಹರವಾದ ಕೋಸಲ ರಾಜ್ಯದಲ್ಲಿ ಹರಿಯುತ್ತಿರುವುದರಿಂದ ಅಲ್ಲಿನ ಜನರು ಪಂಚೇಂದ್ರಿಯಗಳ ದಾಸರಾಗಲಾರರು ಎಂದು ವರ್ಣಿಸಿದ್ದಾನೆ ಕವಿ ಕಂಬನ್‌. ಅಲ್ಲಿನ ಜನರನ್ನು ಬಣ್ಣಿಸುತ್ತಾ ಅಲ್ಲಿ ದಾನಶೀಲತೆಗೆ ಅವಕಾಶವೇ ಇಲ್ಲ. ದಾನ ಸ್ವೀಕರಿಸುವವರು ಯಾರೂ ಇಲ್ಲ. ಶೌರ್ಯಕ್ಕೆ ಅಲ್ಲಿ ಆಸ್ಪದವಿಲ್ಲ. ಕಾರಣ ಅಲ್ಲಿ ಶತ್ರುಗಳೇ ಇಲ್ಲ. ಸತ್ಯ ಎಂಬ ಒಂದು ಕಲ್ಪನೆಯೇ ಇಲ್ಲ. ಕಾರಣ ಅಲ್ಲಿ ಸುಳ್ಳು ಹೇಳುವವರಿಲ್ಲ! ಅಜ್ಞಾನ ಎಂಬುದೇ ಅಲ್ಲಿ ಇಲ್ಲ. ಎಲ್ಲರೂ ಉತ್ತಮವಾಗಿ ಓದಿದವರೇ. ಅವನು ತನ್ನ ಪ್ರಜೆಗಳನ್ನು ತನ್ನ ಮಕ್ಕಳಂತೆ ಪ್ರೀತಿಸುತ್ತಿದ್ದನು. ತನ್ನ ಮಗನಂತೆ ಅವರನ್ನು ಸನ್ನಡತೆಯಿಂದ ಸಲಹುತ್ತಿದ್ದನು. ಕಾಯಿಲೆಗೆ ಮದ್ದರೆಯುವಂತೆ ಅಪರಾಧಿಗಳನ್ನು ಶಿಕ್ಷಿಸುತ್ತಿದ್ದನು. ತನ್ನ ಜ್ಞಾನ ಮತ್ತು ನಡತೆಯಿಂದಾಗಿ ಆಧ್ಯಾತ್ಮ ಗುರವಿನಂತಿದ್ದನು ಎಂದು ರಾಜಾ ದಶರಥನ ವ್ಯಕ್ತಿ ಚಿತ್ರಣವನ್ನು ಕಂಬನು ಚಿತ್ರಿಸಿದ್ದಾನೆ.

– ಜಲಂಚಾರು ರಘುಪತಿ ತಂತ್ರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next