Advertisement

ಶ್ರೀ ಮಲ್ಲಿಕಾರ್ಜುನ ಸ್ವಾಮಿ ಅದ್ಧೂರಿ ರಥೋತ್ಸವ

09:33 PM Feb 04, 2020 | Lakshmi GovindaRaj |

ತಿ.ನರಸೀಪುರ: ತಾಲೂಕಿನ ಮುಡುಕುತೊರೆಯಲ್ಲಿ ಮಂಗಳವಾರ ಶ್ರೀ ಭ್ರಮರಾಂಬ ಸಮೇತ ಶ್ರೀ ಮಲ್ಲಿಕಾರ್ಜುನಸ್ವಾಮಿ ಬ್ರಹ್ಮರಥೋತ್ಸವ, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

Advertisement

ಸೋಮಶೈಲ ಕ್ಷೇತ್ರವೆಂಬ ಖ್ಯಾತಿ ಪಡೆದಿರುವ ಮುಡುಕುತೊರೆಯಲ್ಲಿ ಜಾತ್ರೋತ್ಸವದ ಸಂಭ್ರಮ ಕಳೆಗಟ್ಟಿತ್ತು. ಬಣ್ಣಬಣ್ಣದ ವಸ್ತ್ರ ಹಾಗೂ ಹೂವುಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ವೀರಾಜಮಾನರಾಗಿದ್ದ ಶ್ರೀ ಭ್ರಮರಾಂಬಿಕೆ ಸಮೇತ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದರ್ಶನ ಪಡೆದು ಪುನೀತವಾದ ಭಕ್ತ ಸಾಗರ, ಹಣ್ಣು ಜವನ ಎಸೆದು ಧೂಪ ಹಾಕಿ ಕೈಮುಗಿದು ಪ್ರಾರ್ಥಿಸಿದರು.

ರಥೋತ್ಸವಕ್ಕೂ ಮೊದಲು ಇಪ್ಪತ್ತು ಮಂಟಪಗಳಲ್ಲಿಯೂ ಮಂಟಪೋತ್ಸವ ನಡೆದ ಬಳಿಕ ಪ್ರದಕ್ಷಿಣೆ ಹಾಕಿದ ಸ್ವಸ್ತಿಶ್ರೀ ಶಾಲಿವಾಹನ ಶಕ, ಕಾರಿ ನಾಮ ಸಂವತ್ಸರದ ಮಾಘಶುದ್ಧ ರೊಹೀಣಿ, ನಕ್ಷತ್ರದ ಶುಭಗಳಿಗೆಯಲ್ಲಿ ರಥದಲ್ಲಿ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಮಹಾಮಂಗಳಾರತಿ ನೇರವೇರಿಸಿದ ನಂತರ ಮಧ್ಯಾಹ್ನ 2 ಗಂಟೆಗೆ ವಿದ್ಯುಕ್ತವಾಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಮೊದಲು ಶ್ರೀ ಗಣಪತಿ-ಸುಬ್ರಹ್ಮಣ್ಯ, ನಂತರ ಶ್ರೀ ಪಾರ್ವತಿ ಹಾಗೂ ಶ್ರೀ ಮನೋನ್ಮಣಿ ಅಮ್ಮನವರು ಚಿಕ್ಕರಥಗಳು ಸಾಗಿದವು. ಬೆನ್ನಲ್ಲಿ ಶ್ರೀ ಭ್ರಮರಾಂಬಿಕ ಸಮೇತ ಶ್ರೀ ಮಲ್ಲಿಕಾರ್ಜುನಸ್ವಾಮಿ ರಥ ವೈಭವದಿಂದ ಸಾಗಿತು. ಪಶ್ಚಿಮಾಭಿಮುಖವಾಗಿ ಚಲಿಸಿ, ಉತ್ತರ ದಿಕ್ಕಿಗೆ ತಿರುಗಿ ಮತ್ತೆ ಪಡುವಣ ದಿಕ್ಕಿನತ್ತ ಸಾಗಿದ ರಥೋತ್ಸವ ಅಡಚಣೆ ಅಥವಾ ಅಡ್ಡಿ-ಆತಂಕಗಳಿಲ್ಲದೆ ಸ್ವಸ್ಥಾನಕ್ಕೆ ಮರಳಿತು. ಮೆರವಣಿಗೆಯುದ್ದಕ್ಕೂ ಮೂರು ರಥಗಳಿಗೂ ಹಣ್ಣು ಜವನಗಳ ವೃಷ್ಟಿಯಾಯಿತು.

ಬೆಳಗೆಯಿಂದ ಮುಡುಕುತೊರೆಯತ್ತ ಜನಸಾಗರವೇ ಹರಿದು ಬರಲಾರಂಭಿಸಿತು. ದೇವಾಲಯದಲ್ಲಿನ ಗರ್ಭಗುಡಿಯಲ್ಲಿಯೂ ಕೂಡ ವಿಶೇಷ ಪೂಜಾ ಕೈಂಕರ್ಯಗಳು ಸಾಂಗವಾಗಿ ನೇರವೇರಿದವು. ನದಿ ತೀರದಲ್ಲಿಯೂ ಮುತ್ತೇದೆಯರು ಪೂಜೆ ಕಾರ್ಯ ನಡೆಸಿದರು. ಮೂಲ ದೇವರ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದರು. ಮುಡುಕುತೊರೆ ಶ್ರೀ ಭ್ರಮರಾಂಬಿಕೆ ಅಮ್ಮನವರು ಹಾಗೂ ಶ್ರೀ ಮಲ್ಲಿಕಾರ್ಜುನಸ್ವಾಮಿ ಭಕ್ತ ಸಾಗರವೇ ಹರಿದಿತ್ತು.

Advertisement

ದಾಸೋಹ: ಮುಡುಕುತೊರೆ ಜಾತ್ರೋತ್ಸವ ದಾಸೋಹಕ್ಕೆ ಹೆಸರು ವಾಸಿ. ಅದರಂತೆ ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಬೆಳಗೆಯಿಂದ ಮಧ್ಯಾಹ್ನದವರೆಗೂ ಎಲ್ಲೆಡೆ ಭರ್ಜರಿಯಾಗಿ ದಾಸೋಹ ಹಾಗೂ ಮಜ್ಜಿಗೆ ಪಾನಕ ವಿತರಣೆ ಜೋರಾಗಿ ನಡೆಯಿತು. ದಾಸೋಹ ಭವನ(ಪರ ನಡೆಯುವ ಮನೆ)ಗಳು ಸೇರಿದಂತೆ ಬಯಲು ಪ್ರದೇಶಗಳಲ್ಲೇಲ್ಲಾ ಪೆಂಡಾಲ್‌ ಹಾಕಿ ಬರುವ ಭಕ್ತರು ಹಾಗೂ ಬಂಧು ಬಳಗಕ್ಕೆ ದಾಸೋಹ ನೀಡುತ್ತಿದ್ದುದು ಕಂಡು ಬಂದಿತ್ತು. ಹರಕೆ ಹೊತ್ತಿದ್ದ ಭಕ್ತರು ಮಜ್ಜಿಗೆ ಪಾನಕ ವಿತರಿಸಿ, ಜಾತ್ರೆಯಲ್ಲಿ ಬಿಸಿಲಿನಿಂದ ದಣಿದಿದ್ದವರ ದಾಹ ನೀಗಿಸುವ ಕಾಯಕ ಮಾಡಿದರು.

ಆನಂದ ಧಿಕ್ಷೀತ್‌ ಸೇರಿದಂತೆ ಅರ್ಚಕ ಮಹೇಶ್‌ ಪ್ರಸಾದ್‌, ಜಗದೀಶ್‌ಮೂರ್ತಿ, ನಾಗೇಶ್‌ಮೂರ್ತಿ, ರಮೇಶ್‌, ವಿಶ್ವನಾಥ್‌ ಸೇರಿದಂತೆ ಹಲವರ ತಂಡ ಧಾರ್ಮಿಕ ವಿಧಿ ವಿಧಾನ ನೇರವೇರಿಸಿದರು. ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ, ದೇವಾಲಯಕ್ಕೆ ಭೆಟಿ ನೀಡಿ ಪೂಜೆ ಸಲ್ಲಿಸಿದರು. ಮಳವಳ್ಳಿ ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ರಥೋತ್ಸವ ಆರಂಭಕ್ಕೂ ಮೊದಲು ವಿಶೇಷ ಪೂಜೆ ಸಲ್ಲಿಸಿದರು. ಜಿಪಂ ಸದಸ್ಯ ಮಂಜುನಾಥನ್‌, ಮಹಾಮಂಗಳಾರತಿ ಸ್ವೀಕರಿಸಿದರು. ನಂಜನಗೂಡು ಡಿವೈಎಸ್ಪಿ ಪ್ರಭಾಕರ್‌ ರಾವ್‌ ಶಿಂಧೆ, ತಾಪಂ ಸದಸ್ಯ ರತ್ನರಾಜ್‌ ಸೇರಿದಂತೆ ಸ್ಥಳೀಯ ಚುನಾುತ ಜನಪ್ರತಿನಿಧಿಗಳು ಹಾಗೂ ಮುಖಂಡರು ಭಾಗÊಹಿ‌ಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next