Advertisement

ಯಾದಾದ್ರಿ ವೈಭವ; ಅದ್ಭುತ, ಅನನ್ಯತೆಯ ಶ್ರೀ ಲಕ್ಷ್ಮೀ ನರಸಿಂಹ ದೇಗುಲ

04:51 PM Mar 30, 2022 | Team Udayavani |

ತೆಲಂಗಾಣ ಪ್ರತ್ಯೇಕ ರಾಜ್ಯವಾದ ಬಳಿಕ ವಿಶ್ವಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇಗುಲ ಆಂಧ್ರಪ್ರದೇಶದಲ್ಲೇ ಉಳಿಯಿತು. ದೇಶಾದ್ಯಂತ ಕೋಟ್ಯಂತರ ಭಕ್ತರು ಹಾಗೂ ವಾರ್ಷಿಕ ಸಹಸ್ರಾರು ಕೋಟಿ ರೂ.ಆದಾಯ ಹೊಂದಿರುವ ಇಂತಹ ದೇಗುಲ ನಮ್ಮಲ್ಲಿ ಇಲ್ಲ ಎಂಬ ಧಾರ್ಮಿಕ ನಿರ್ವಾತವನ್ನು ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ ರಾವ್‌ ಅವರು ತಮ್ಮ ತೆಲಂಗಾಣದ ಯಾದಾದ್ರಿಯಲ್ಲಿ ತುಂಬಿಕೊಳ್ಳುತ್ತಿದ್ದಾರೆ.

Advertisement

ಪುರಾತನ ಐತಿಹಾಸಿಕ ಯಾದಾದ್ರಿ ನರಸಿಂಹ ದೇವಾಲಯವನ್ನು 1,800 ಕೋಟಿ ರೂ.ವೆಚ್ಚದಲ್ಲಿ ತಿರುಪತಿಗೆ ಸರಿ ಸಮಾನವಾಗಿ ಜಾಗತಿಕ ಸೌಲಭ್ಯಗಳೊಂದಿಗೆ ತಲೆ ಎತ್ತಿ ನಿಲ್ಲುವಂತೆ ಪುನಶ್ಚೇತನಗೊಳಿಸಲಾಗಿದೆ.

ವಿಶ್ವದಲ್ಲೇ ಕೃಷ್ಣಶಿಲೆ (ಗ್ರಾನೈಟ್‌) ಬಳಸಿ ಇಷ್ಟು ವೆಚ್ಚದಲ್ಲಿ ನಿರ್ಮಿಸಿರುವ ಅತೀ ದೊಡ್ಡ ದೇಗುಲ ಎಂಬ ಖ್ಯಾತಿ ಪಡೆದುಕೊಂಡಿದೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಿಂತ  ಹೆಚ್ಚು ವೆಚ್ಚದಲ್ಲಿ ಯಾದಾದ್ರಿ ಶ್ರೀಲಕ್ಷ್ಮೀ ನರಸಿಂಹ ದೇಗುಲ ಪುನರ್‌ ನಿರ್ಮಿಸಲಾಗಿದೆ. 2016ರಲ್ಲಿ ತಿರುಪತಿ ಮಾದರಿಯಲ್ಲಿ ಭವ್ಯ ದೇಗುಲ ಸ್ಥಾಪನೆಗೆ ಸಿಎಂ ಕೆ.ಸಿ. ಚಂದ್ರಶೇಖರರಾವ್‌ ಶಂಕುಸ್ಥಾಪನೆ ನೆರವೇರಿಸಿದ್ದರು. ಸೋಮವಾರ ಸ್ವತಃ ಚಂದ್ರಶೇಖರ ರಾವ್‌ ಅವರೇ ಈ ದೇಗುಲವನ್ನು ಲೋಕಾರ್ಪಣೆ ಮಾಡಿದ್ದಾರೆ. ತೆಲಂಗಾಣದ ಜನರು ಯಾದಾದ್ರಿ ನರಸಿಂಹ ದೇವರನ್ನು ವಿಶೇಷವಾಗಿ ಪೂಜಿಸುತ್ತಾರೆ. ತಿರುಪತಿಯಂತೆ ಯಾದಾದ್ರಿ ದೇಗುಲದಲ್ಲಿ ಲಡ್ಡು ಪ್ರಸಾದ ವಿತರಿಸಲಿದ್ದು, ಪ್ರತ್ಯೇಕ ಸಂಕೀರ್ಣ ತೆರೆಯಲಾಗಿದೆ. ಇಲ್ಲಿ ನಿತ್ಯ 10 ಸಾವಿರ ಮಂದಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಭಕ್ತರ ಸಂಖ್ಯೆ ಹೆಚ್ಚಾದಂತೆ, ಅದಕ್ಕೆ ತಕ್ಕಂತೆ ಆಹಾರ ಸಂತರ್ಪಣೆ ವ್ಯವಸ್ಥೆ ಯನ್ನು ಹೆಚ್ಚಿಸಲಾಗುತ್ತಿದೆ.

ವಿಶ್ವದ ಅತೀ ದೊಡ್ಡ ದೇಗುಲ
1,800 ಕೋಟಿ ರೂ. ವೆಚ್ಚದಲ್ಲಿ ಕೃಷ್ಣಶಿಲೆ(ಕಪ್ಪು ಗ್ರಾನೈಟ್‌)ಯಲ್ಲಿ ನಿರ್ಮಿಸಿರುವ ಯಾದಾದ್ರಿ ನರಸಿಂಹಸ್ವಾಮಿ ದೇಗುಲವು ವಿಶ್ವದಲ್ಲೇ ಅತೀ ದೊಡ್ಡ ದೇಗುಲ ಎಂಬ ಖ್ಯಾತಿ ಪಡೆದುಕೊಂಡಿದೆ. 2.5 ಲಕ್ಷ ಟನ್‌ ಗ್ರಾನೈಟ್‌ ಕಲ್ಲು ಬಳಸಲಾಗಿದೆ. ಅಯೋಧ್ಯೆರಾಮ ಮಂದಿರ ನಿರ್ಮಾಣಕ್ಕೆ 1,100 ಕೋಟಿ ರೂ. ವ್ಯಯಿಸಲಾಗುತ್ತಿದೆ. ಇದಕ್ಕಿಂತ ಹೆಚ್ಚು ವೆಚ್ಚದಲ್ಲಿ ಭವ್ಯವಾಗಿ ನರಸಿಂಹ ದೇಗುಲ ನಿರ್ಮಿಸಿದ್ದು, ಹಲವು ಕಿ.ಮೀ. ದೂರದಿಂದಲೇ ಭವ್ಯವಾದ ಗೋಪುರಗಳನ್ನು ನೋಡಬಹುದಾಗಿದೆ.

ಎಲ್ಲಿದೆ ಯಾದಾದ್ರಿ?
ತೆಲಂಗಾಣದ ಭುವನಗಿರಿ ಜಿಲ್ಲೆಯಲ್ಲಿರುವ ಯಾದಾದ್ರಿ ದೇವಸ್ಥಾನವು  ಬೆಂಗಳೂರಿನಿಂದ 645 ಕಿ.ಮೀ ದೂರದಲ್ಲಿದೆ. ಹೈದರಾಬಾದ್‌ನಿಂದ 60 ಕಿ.ಮೀ. ದೂರದಲ್ಲಿ ಇದೆ. ತಿರುಪತಿ ಮಾರ್ಗದಲ್ಲಿ ಈ ದೇಗುಲ ಬರಲಿದ್ದು, ಭುವನಗಿರಿ ರೈಲು ನಿಲ್ದಾಣದಿಂದ 13 ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಟ್ಯಾಕ್ಸಿ ಅಥವಾ ಬಸ್‌ ಮೂಲಕ ಯಾದಾದ್ರಿ ತಲುಪಬಹುದು. ಪ್ರಮುಖ ದಿಕ್ಕುಗಳಿಂದ ಭಕ್ತರು ದೇವಾಲಯವನ್ನು ತಲುಪಲು ಎಲ್ಲ ಪ್ರಮುಖ ನಗರಗಳನ್ನು ಸಂಪರ್ಕಿಸುವಂತೆ ಚತುಷ್ಪಥ ರಸ್ತೆ ನಿರ್ಮಿಸಲಾಗುತ್ತಿದೆ. ದೇವಸ್ಥಾನಕ್ಕೆ ಪ್ರತ್ಯೇಕ ಬಸ್‌ ಡಿಪೋ ತೆರೆಯಲಾಗಿದೆ. ಯಾದಾದ್ರಿಯನ್ನು ಯಾದಾದ್ರಿ ಗಿರಿಗುಟ್ಟ ದೇವಾಲಯ ಎಂದೂ ಕರೆಯಲಾಗುತ್ತದೆ.

Advertisement

ಯಾದಾದ್ರಿ ದೇಗುಲದ ವಿಶೇಷತೆ
ತಿರುಮಲ 7 ಬೆಟ್ಟಗಳಲ್ಲಿ ವ್ಯಾಪಿಸಿದ್ದರೆ, ಯಾದಾದ್ರಿ 8 ಬೆಟ್ಟಗಳಿಂದ ಕೂಡಿದೆ. ಇದರಲ್ಲಿ ಒಂದು ಬೆಟ್ಟವನ್ನು ದೇವಾಲಯ ನಗರಿಯಾಗಿ ನಿರ್ಮಿಸಲಾಗಿದೆ. ಮೂಲತಃ 25,000 ಚದರ ಗಜಗಳಲ್ಲಿದ್ದ ಈ ದೇಗುಲ ಈಗ 4 ಎಕರೆ ವಿಸ್ತಾರವಾಗಿದೆ.  ರಾಜಗೋಪುರ ಎಂದು ಕರೆಯಲ್ಪಡುವ ಮುಖ್ಯದ್ವಾರ 84 ಅಡಿ ಎತ್ತರವಿದೆ. 1,753 ಟನ್‌ ಬೆಳ್ಳಿ, 39 ಕೆಜಿ ಚಿನ್ನ ಬಳಸಿ ಗೋಡೆ ಹಾಗೂ ಗೋಪುರ ನಿರ್ಮಿಸಲಾಗಿದೆ. ರಾಜ ಗೋಪುರದ ವಾಸ್ತುಶಿಲ್ಪವು ದ್ರಾವಿಡರು, ಪಲ್ಲವರು, ಚೋಳರು, ಚಾಲುಕ್ಯರು, ಕಾಕತೀ ಯರ ಶೈಲಿಯಲ್ಲಿದೆ. ದೇಗುಲಕ್ಕೆ ಒಂದೇ ಒಂದು ಇಟ್ಟಿಗೆ, ಸಿಮೆಂಟ್‌ ಬಳಸಿಲ್ಲ. ಕನಿಷ್ಠ 3,000 ಟನ್‌ ಗಾರೆ ಉಪಯೋಗಿಸಲಾಗಿದೆ.

ಯಾದಾದ್ರಿ ಆದಾಯ
ತಿರುಪತಿಗೆ ನಿತ್ಯ 70 ಸಾವಿರ ಭಕ್ತರು ಭೇಟಿ ನೀಡುವರು. ವಿಶೇಷ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಏರರುತ್ತದೆ. ವಾರ್ಷಿಕ 2,678 ಕೋಟಿ ರೂ.(2016-17) ಆದಾಯ ಇದೆ. ಆದರೆ ಯಾದಾದ್ರಿಗೆ ನಿತ್ಯ 10 ಸಾವಿರ ಭಕ್ತರು ಭೇಟಿ ನೀಡುತ್ತಿದ್ದು, ಇದೀಗ ಈ ಸಂಖ್ಯೆ 30 ಸಾವಿರಕ್ಕೆ ಏರಿಕೆಯಾಗಿದೆ. ದೇಗುಲ ಲೋಕಾರ್ಪಣೆ ಬಳಿಕ ಭಕ್ತರ ಪ್ರಮಾಣ ವೃದ್ಧಿಯಾಗಲಿದೆ. ಯಾದಾದ್ರಿ ದೇಗುಲಕ್ಕೆ ವಾರ್ಷಿಕ 80 ಕೋಟಿ ರೂ. ಇದ್ದ ಆದಾಯ ಈ ವರ್ಷ 100 ಕೋಟಿ
ರೂ. ದಾಟಲಿದೆ.

ವಿಶ್ವದ ಏಕೈಕ ಧ್ಯಾನಸ್ಥ ನರಸಿಂಹ
ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿರುವಂತೆ, ಮಹರ್ಷಿ ಋಷಿಶೃಂಗನ ಪುತ್ರನಾದ ಯಾದ ರಿಷಿ ಈ ಸ್ಥಳದಲ್ಲಿ ವಿಷ್ಣುವನ್ನು ಮೆಚ್ಚಿಸಲು ತಪಸ್ಸು ಮಾಡಿದ್ದನು. ಇದರಿಂದ ಸಂತೃಪ್ತನಾದ ವಿಷ್ಣು ನರಸಿಂಹನ ರೂಪದಲ್ಲಿ ಕಾಣಿಸಿಕೊಂಡನು. ಮಹರ್ಷಿ ಯಾದನ ಕೋರಿಕೆ ಮೇರೆಗೆ ನರಸಿಂಹನು 3 ರೂಪಗಳಲ್ಲಿ ಇಲ್ಲಿಗೆ ಬಂದನು. ವಿಶ್ವದಲ್ಲೇ ಏಕೈಕ ಧ್ಯಾನಸ್ಥ ನರಸಿಂಹ ಪ್ರತಿಮೆ ಯಾದಾದ್ರಿಯಲ್ಲಿದೆ. ಈ ದೇವಾಲಯದಲ್ಲಿ ನರಸಿಂಹನ ಮೂರು ವಿಗ್ರಹಗಳು ಇವೆ. ಇದರ ಜತೆಗೆ ಲಕ್ಷ್ಮೀ ದೇವಿ ಕೂಡ ಇದ್ದಾಳೆ. 1246ರಲ್ಲಿ ಹೊಯ್ಸಳರ ರಾಜ ವೀರ ಸೋಮೇಶ್ವರನ ಆಳ್ವಿಕೆಯಲ್ಲಿ ಈ ದೇಗುಲ ನಿರ್ಮಿಸಲಾಗಿತ್ತು.

ಅದ್ದೂರಿ ಲೋಕಾರ್ಪಣೆ
ಹೈದರಾಬಾದ್‌: ಯಾದಾದ್ರಿಯಲ್ಲಿ ನವೀಕೃತ,ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲವನ್ನು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಅವರು ಸೋಮವಾರ ಅದ್ದೂರಿಯಾಗಿ ಲೋಕಾರ್ಪಣೆಗೊಳಿಸಿದರು. ಈ ವೇಳೆ ಮಹಾ ಸಂಪ್ರೋಕ್ಷಣಾ ಯಾಗ ನೆರವೇರಿಸಲಾಯಿತು.ಸಚಿವ ಸಂಪುಟ ಸದಸ್ಯರು, ಸಿಎಂ ಕುಟುಂಬಸ್ಥರು ಸಾಕ್ಷಿಯಾಗಿದ್ದರು.

156 ಅಡಿ ಎತ್ತರದ ಹನುಮ
ಯಾದಾದ್ರಿ ದೇವಾಲಯದ ಪ್ರವೇಶದ್ವಾರದಲ್ಲಿ 156 ಅಡಿ ಎತ್ತರದ ಹನುಮನ ವಿಗ್ರಹ ನಿರ್ಮಿ ಸಲಾಗುತ್ತಿದೆ.  ಹನುಮನನ್ನು ದೇವಾಲಯದ ಮುಖ್ಯ ಕಾವಲು ದೇವರು ಎಂದು ಪರಿಗಣಿಸಲಾಗುತ್ತದೆ. ಇದನ್ನು ಹಲವು ಕಿಲೋ ಮೀಟರ್‌ ದೂರದಿಂದ ನೋಡಬಹುದಾಗಿದೆ.

ದೇಗುಲ ನಿರ್ಮಾಣ ಕಾರ್ಯ ಹೇಗಿತ್ತು?
ದೇಗುಲ ನಿರ್ಮಿಸಲು ಎಂಜಿನಿಯರ್‌ಗಳು ಮತ್ತು ವಾಸ್ತುಶಿಲ್ಪಿಗಳು 1500 ನಕ್ಷೆಗಳನ್ನು ಮತ್ತು ಯೋಜನೆ ರೂಪಿಸಿದ್ದರು. ಹೈದರಾಬಾದ್‌ ಮೂಲದ ವಾಸ್ತುಶಿಲ್ಪಿ, ದಕ್ಷಿಣ ಭಾರತದ ಖ್ಯಾತ ಕಲಾ ನಿರ್ದೇಶಕ ಆನಂದ್‌ ಸಾಯಿ ರಚಿಸಿದ್ದ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ. ದೇವಾಲಯ ನಿರ್ಮಾಣಕ್ಕಾಗಿ 1,500 ಕಾರ್ಮಿಕರನ್ನು ನೇಮಿಸಲಾ ಗಿತ್ತು. ಅದರಲ್ಲಿ 500 ಮಂದಿ ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಶಿಲ್ಪಿಗಳು ಇದ್ದರು. ದೇವಾಲಯವನ್ನು ಸಂಪೂರ್ಣವಾಗಿ ಕೃಷ್ಣಶಿಲೆ ಬಳಸಿ ನಿರ್ಮಿಸಲಾಗಿದೆ. ಆಂಧ್ರದ ಪ್ರಕಾಶಂ ಜಿÇÉೆಯ ಗುಜೇìಪಲ್ಲಿ ಗಣಿಗಳಿಂದ ಗ್ರಾನೈಟ್‌ ತರಲಾಯಿತು. ದೇವಾಲಯದ ನಿರ್ಮಾಣಕ್ಕೆ ಬಳಸಿದ ಕಲ್ಲುಗಳು ಎಲ್ಲ ರೀತಿಯ ಹವಾಮಾನವನ್ನು ತಡೆದುಕೊಳ್ಳುವಷ್ಟು ಶಕ್ತವಾಗಿವೆ. ಸಹಸ್ರ ವರ್ಷ ಬಾಳಿಕೆ ಬರಲಿವೆ. ಇಡೀ ದೇವಾಲಯದಲ್ಲಿ ಎಲ್ಲಿಯೂ ಸಿಮೆಂಟ್‌ ಬಳಸಲಾಗಿಲ್ಲ.

ದೇಗುಲ ನಗರಿ ನಿರ್ಮಾಣ
ದೇಗುಲ ನಿರ್ವಹಣೆಗೆ ತಿರುಪತಿ ಟಿಟಿಡಿ ಮಾದರಿ ವಿಶೇಷ ಯಾದಗಿರಿಗುಟ್ಟ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. ಹೈದರಾ ಬಾದ್‌ನಿಂದ 70 ಕಿ.ಮೀ ದೂರದಲ್ಲಿರುವ ಯಾದಾದ್ರಿ ಭುವನಗಿರಿ ಜಿÇÉೆಯ ದೇಗುಲ ಪ್ರದೇಶ ವಿಸ್ತರಿಸಲು 1,900 ಎಕ್ರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದಕ್ಕೆ 300 ಕೋಟಿ ರೂ. ನೀಡಲಾಗಿದೆ. ದೇಗುಲದ ಸುತ್ತ ಮುತ್ತಲಿನ ಗುಡ್ಡಗಳ ನಡುವೆ ಸುಗಮ ಸಂಪ ರ್ಕಕ್ಕಾಗಿ 4 ಪಥದ ರಸ್ತೆ, ಆರು ಪಥದ ಯಾದಾದ್ರಿ ಹೊರಭಾಗ ರಿಂಗ್‌ ರಸ್ತೆ ನಿರ್ಮಿಸಲಾಗಿದೆ. ಕೃತಕ ಸರೋವರ, ಮದುವೆ ಸಭಾಂಗಣಗಳು, ಅತ್ಯಾ ಧುನಿಕ ಹೊಟೇಲ್‌ಗ‌ಳು, ವಾಣಿಜ್ಯ ಸಂಕೀರ್ಣ ಗಳು, ಬಸ್‌ ಟರ್ಮಿನಲ್‌, 25 ಎಕ್ರೆ ವಿಸ್ತೀರ್ಣ ದಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಇಲ್ಲಿಗೆ ಸಮೀ ಪದ ಹಳ್ಳಿಯೊಂದರಲ್ಲಿ ಜಲಾಶಯ ನಿರ್ಮಿಸಲೂ ಯೋಜಿಸಲಾಗಿದೆ. ಈ ಪ್ರದೇಶದಲ್ಲಿ ರಿಯಲ್‌ ಎಸ್ಟೇಟ್‌ ಬೆಲೆ ಮೂರು ಪಟ್ಟು ಹೆಚ್ಚಾಗಿದೆ.

ಕೆಸಿಆರ್‌ ಅವರು ಜಗತ್ತಿನ ವಾಸ್ತುಶಿಲ್ಪದ, ಧಾರ್ಮಿಕ ನಂಬಿಕೆಯ ದ್ಯೋತಕವಾದ ಯಾದಾದ್ರಿ ಮಂದಿರದ ದ್ವಾರವನ್ನು ಯಾತ್ರಿಕರಿಗೆ ತೆರೆದಿದ್ದಾರೆ.
-ಕೆ. ಕವಿತಾ, ಕೆಸಿಆರ್‌ ಪುತ್ರಿ

Advertisement

Udayavani is now on Telegram. Click here to join our channel and stay updated with the latest news.

Next