Advertisement

ಬರಿಗಾಲಿನ ಮಕ್ಕಳನ್ನು ಕಂಡರೆ ನಿಲ್ಲುತ್ತದೆ ಈ ಕಾರು !

11:44 AM Feb 24, 2022 | Team Udayavani |

ಮಹಾನಗರ: ಬರಿಗಾಲಿನಲ್ಲಿ ನಡೆಯುವ ಮಕ್ಕಳನ್ನು ಕಂಡರೆ ಈ ಕಾರು ನಿಲ್ಲುತ್ತದೆ. ಕಾರಿನ ಢಿಕ್ಕಿ ತೆರೆದುಕೊಳ್ಳುತ್ತದೆ. ಮಕ್ಕಳು ಬೇಕಾದ ಚಪ್ಪಲಿಗಳನ್ನು ಆಯ್ದುಕೊಳ್ಳುತ್ತಾರೆ, ಕಾಲಿಗೆ ಹಾಕಿ ಸಂಭ್ರಮಿಸುತ್ತಾರೆ, ಕಾರು ಮುಂದೆ ಸಾಗುತ್ತದೆ…

Advertisement

ಇದು ಮಂಗಳೂರಿನ ಕಂಪ್ಯೂಟರ್‌ ಎಂಜಿನಿಯರಿಂಗ್‌ ಪ್ರೊಫೆಸರ್‌, ಸೈಬರ್‌ ಭದ್ರತಾ ತಜ್ಞ ಡಾ| ಅನಂತ ಪ್ರಭು ಗುರುಪುರ ಅವರು ಸಮಾಜಸೇವೆಗೆ ಆಯ್ದುಕೊಂಡಿರುವ ಹೊಸ ವಿಧಾನ. ಈಗಾಗಲೇ ಮಕ್ಕಳಿಗೆ ಸ್ಲೇಟ್‌ ಮತ್ತಿತರ ಪರಿಕರ, ರಸ್ತೆ ಬದಿ ಬಿಸಿನಲ್ಲಿರುವ ವ್ಯಾಪಾರಿಗಳಿಗೆ ಕೊಡೆ, ಕೋವಿಡ್‌ ಸಂದರ್ಭ ಆಹಾರ ಕಿಟ್‌ ಮೊದಲಾದವುಗಳನ್ನು ನೀಡುತ್ತಾ ಬಂದಿರುವ ಅನಂತ ಪ್ರಭು ಅವರು ಸದ್ಯ ತಮ್ಮ ಕಾರಿನಲ್ಲಿ ಚಪ್ಪಲಿಗಳನ್ನು ತುಂಬಿಸಿಕೊಂಡಿದ್ದಾರೆ.

50 ಗಾತ್ರದ ಚಪ್ಪಲಿಗಳು
ಮಕ್ಕಳ ಕಾಲಿಗೆ ಸರಿ ಹೊಂದುವ ಗಾತ್ರವನ್ನು ಆಯ್ದುಕೊಳ್ಳಲು ಅನುಕೂಲವಾಗುವಂತೆ 50 ವಿಭಿನ್ನ ಗಾತ್ರದ ಚಪ್ಪಲಿಗಳನ್ನು ಇಟ್ಟುಕೊಂಡಿದ್ದಾರೆ. ಇವೆಲ್ಲವೂ ಹವಾಯಿ ಚಪ್ಪಲಿಗಳು. ಮಕ್ಕಳೇ ಚಪ್ಪಲಿಗಳನ್ನು ನೋಡಿ ಅವರಿಗೆ ಬೇಕಾದುದನ್ನು ಆಯ್ದುಕೊಳ್ಳಲು ಅವಕಾಶ ನೀಡುತ್ತಾರೆ.

ಇದನ್ನೂ ಓದಿ : ಕಾಲು ಸೋತವರಿಗೆ ತಂಗುದಾಣವಾಗಲಿ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಗಮನ ಕೊಡಲಿ

ಬರಿಗಾಲು ನೋಡಿ ನೋವಾಗಿದೆ
“ನಾನು ಕಾರ್ಯನಿಮಿತ್ತ ಮಂಗಳೂರು ಮಾತ್ರವಲ್ಲದೆ ರಾಜ್ಯಾದ್ಯಂತ ಕಾರಿನಲ್ಲಿ ಹೋಗುತ್ತಿರುತ್ತೇನೆ. ಅಲ್ಲಲ್ಲಿ ಮಕ್ಕಳು ಬರಿಗಾಲಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುವುದನ್ನು ಕಂಡಿದ್ದೇನೆ. ಇಂತಹ ಮಕ್ಕಳಿಗೆ ಚಪ್ಪಲಿ ಕೊಡಬೇಕು ಎಂದು ಯೋಚಿಸುತ್ತಿದ್ದೆ. ಇತ್ತೀಚೆಗೆ ಅದನ್ನು ಕಾರ್ಯಗತಗೊಳಿಸಲು ಆರಂಭಿಸಿ ಚಪ್ಪಲಿಗಳನ್ನು ಖರೀದಿಸಿದ್ದೇನೆ. ನನ್ನ ಉದ್ದೇಶ ಅರಿತ ವ್ಯಾಪಾರಿಯೋರ್ವರು ಸ್ವಲ್ಪ ಕಡಿಮೆ ಬೆಲೆಗೆ ಚಪ್ಪಲಿಗಳನ್ನು ನೀಡಿದ್ದಾರೆ. ಸದ್ಯ ಹವಾಯಿ ಚಪ್ಪಲಿಗಳನ್ನು ನೀಡುತ್ತಿದ್ದೇನೆ. ಮುಂದೆ ಮಳೆಗಾಲಕ್ಕೂ ಅನುಕೂಲವಾಗುವಂತೆ ಸ್ಯಾಂಡಲ್ಸ್‌ ಚಪ್ಪಲಿ ನೀಡುವ ಉದ್ದೇಶವಿದೆ’ ಎನ್ನುತ್ತಾರೆ ಡಾ| ಅನಂತ ಪ್ರಭು ಅವರು.

Advertisement
Advertisement

Udayavani is now on Telegram. Click here to join our channel and stay updated with the latest news.

Next