Advertisement

ಬೀದಿ ಜಗಳ ಎಂದು ಕಡೆಗಣಿಸಬೇಡಿ ಅಲ್ಲೂ ಸಿಕ್ಕೀತು ಮಾದಕ ಮಾರ್ಜಾಲದ ಹೆಜ್ಜೆ‌ ಜಾಡು !

01:32 AM Mar 06, 2023 | Team Udayavani |

ಮಣಿಪಾಲ: ದಕ್ಷಿಣ ಕನ್ನಡ ಹಾಗೂ ಉಡುಪಿಯ ಜಿಲ್ಲೆಯ ನಗರ ಪ್ರದೇಶವನ್ನು ದುಬಾರಿ ಮಾದಕ ವಸ್ತುಗಳು ಹೆಚ್ಚು ಆಕ್ರ ಮಿಸಿಕೊಂಡಿದ್ದರೆ, ಗ್ರಾಮೀಣ ಪ್ರದೇಶಗಳನ್ನು ಅಪಾಯಕಾರಿ ಎನ್ನುವ ಪ್ರಮಾಣದಲ್ಲಿ ಗಾಂಜಾ ಆವರಿಸಿಕೊಳ್ಳುತ್ತಿದೆ.

Advertisement

ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಸಣ್ಣ ಪುಟ್ಟ ಅಪರಾಧ ಪ್ರಕರಣಗಳಿಂದ ಹಿಡಿದು ಭೀಕರ ಪ್ರಕರಣಗಳಿಗೂ ಮಾದಕ ವ್ಯಸನಿಗಳ ವರ್ತನೆಗೂ ತಳಕು ಹಾಕುತ್ತಿವೆ. ಗ್ರಾಮೀಣ ಪ್ರದೇಶದಿಂದ ಹಿಡಿದು ಜಿಲ್ಲೆಯ ಅಪ್ರಾಪ್ರ ವಯಸ್ಕರಿಂದ ಯುವಕರ ಬೀದಿ ಜಗಳಗಳನ್ನೂ ಕಡೆಗಣಿಸದೇ ಪೊಲೀಸರು ಬೆನ್ನು ಹತ್ತಿದರೆ ಮಾದಕ ಮಾರ್ಜಾಲದ ಹೆಜ್ಜೆ ಸುಳಿವು ಸಿಗಬಹುದು. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಬೀದಿ ಜಗಳವನ್ನು ಸಾಮಾನ್ಯವೆಂದು ಕಡೆಗಣಿಸುತ್ತಿರುವುದು ಅಪಾಯದ ತೀವ್ರತೆಯನ್ನು ಹೆಚ್ಚಿಸುತ್ತಿದೆ.

ಜಾತ್ರೆ, ಕಾಲೇಜುಗಳ ಆವರಣದಲ್ಲಿ ಗುಂಪು
ಗುಂಪುಗಳ ನಡುವಿನ ಸಣ್ಣ ಪುಟ್ಟ ಜಗಳದಲ್ಲೂ ಗಾಂಜಾ ಘಾಟು ಕಾಣಿಸತೊಡಗಿದೆ. ಇತ್ತೀಚೆಗೆ ಕೋಟ ವ್ಯಾಪ್ತಿಯಲ್ಲಿ ಬಾರ್‌ನಲ್ಲಿ ನಡೆದ ಮಾರಣಾಂತಿಕ ಹಲ್ಲೆಯ ಹಿಂದೆ ಗಾಂಜಾದ ಘಾಟಿತ್ತು. ಪೊಲೀಸರು ಪ್ರಕರಣದ ಬೆನ್ನು ಹತ್ತಿದಾಗ ಆ ಹಲ್ಲೆ ನಡೆಸಿದವರ ಹಿಂದಿನ ಬೀದಿ ಜಗಳಕ್ಕೂ ಈ ಪ್ರಕರಣಕ್ಕೂ ಸಂಬಂಧವಿತ್ತು ಎನ್ನಲಾಗಿದೆ.

ಕಾಲೇಜೊಂದರ ಉಪನ್ಯಾಸಕರೊಬ್ಬರ ಪ್ರಕಾರ, “ಕಾಲೇಜುಗಳಲ್ಲಿ ಕಾಣಿಸುವ ಈ ಗುಂಪು ಜಗಳ ಸಾಮಾನ್ಯ ಎಂದುಕೊಳ್ಳುತ್ತೇವೆ.ಆದರೆ ಹಲವು ಪ್ರಕರಣಗಳಲ್ಲಿ ಅದು ಮಾದಕ ವ್ಯಸನದ ಪರಿಣಾಮದ ಪ್ರಥಮ ಹಂತ. ಆಗಲೇ ಗಂಭೀರವಾಗಿ ಪರಿಗಣಿಸಿ ಕ್ರಮ ವಹಿಸಿದರೆ ಒಂದಿಷ್ಟು ಪರಿಹಾರ ಸಿಗಬಹುದು’. ಕೆಲವು ಬಾರಿ ಶಿಕ್ಷಣ ಸಂಸ್ಥೆಗಳೂ ತಮ್ಮ ಸಂಸ್ಥೆಗೆ ಕೆಟ್ಟ ಹೆಸರು ಬಂದೀತೆಂಬ ಭಯದಿಂದ ಸುಮ್ಮನಾ ಗುವುದಿದೆ. ಅದು ಕ್ರಮೇಣ ಹತೋಟಿ ತಪ್ಪುತ್ತದೆ. ಇದೇ ಅಪಾಯ ಉಭಯ ಜಿಲ್ಲೆಗ ಳಲ್ಲಿ ನಿಜವಾಗಿ ಪರಿಣಮಿಸುತ್ತಿದೆ.

ಯುವಜನರ ಮೇಲೆ ನಿಗಾ ಇಡಿ
ಕಾಲೇಜಿನ ವಿದ್ಯಾರ್ಥಿಗಳ ಮೇಲೆ ನಿಗಾ ಇಡುವಂತೆ ವಿವಿಧ ಕಾರಣಗಳಿಗೆ ಶಾಲೆ ಬಿಟ್ಟ ಯುವಜನರು ನಿರುದ್ಯೋಗಿಗಳಾಗಿ ಮಾದಕ ವ್ಯಸನಕ್ಕೆ ಗುರಿಯಾಗಬಹುದು. ಸಣ್ಣ ಪುಟ್ಟ ಅಪರಾಧ ಎಸಗಿ ಬದುಕುವುದೂ ಉಂಟು. ಮಾದಕ ವ್ಯಸನಕ್ಕೆ ಬಿದ್ದ ಕೆಲವರು ವಾರದಲ್ಲಿ ಎರಡು ದಿನ ಕೆಲಸ ಮಾಡಿ, ದಿನಕ್ಕೆ 700 ರಿಂದ 800 ರೂ. ಪಡೆದು ಉಳಿದ ದಿನಗಳನ್ನು ಮಾದಕ ವ್ಯಸನದಲ್ಲಿ ಕಳೆಯುತ್ತಾರೆ. ಮೋಜು ಮಸ್ತಿಯೇ ಬದುಕು. ಹಣ ಖಾಲಿಯಾಗಿ, ಮಾದಕ ವಸ್ತು ಬೇಕು ಎನಿಸಿದಾಗ ಹಣ ಹೊಂದಿಸಲು ಅಪರಾಧಿಗಳಾಗುವ ಸಂದರ್ಭವೂ ಇದೆ ಎಂಬುದು ಹಲವರ ಅಭಿಪ್ರಾಯ.

Advertisement

“ಗ್ರಾಮೀಣ ಮಟ್ಟದಲ್ಲಿ ಮಾದಕ ವ್ಯಸನಿಗಳಿಗೆ ಮಾದಕ ವಸ್ತುಗಳು ನಗರದಿಂದ ನಿರ್ದಿಷ್ಟ ವೇಳೆಯಲ್ಲಿ ಪೂರೈಕೆಯಾಗುತ್ತದೆ. ಕ್ರಮೇಣ ಈ ಮಾದಕ ವ್ಯಸನಿಗಳು ಕೆಲಸ ಕಾರ್ಯಗಳನ್ನು ಬಿಟ್ಟು ಪೆಡ್ಲರ್‌ಗಳಿಗಾಗಿ ಕಾಯುತ್ತಾರೆ. ಅದು ಸಿಕ್ಕ ಕೂಡಲೇ ಹತ್ತಿರದ ನಿರ್ಜನ ಪ್ರದೇಶವನ್ನು ಆಯ್ದುಕೊಂಡು ಮಾದಕ ವಸ್ತುಗಳ ಸೇವನೆ ಯಲ್ಲಿ ಮುಳುಗುತ್ತಾರೆ’ ಎಂಬುದು ಮಾದಕ ವ್ಯಸನಿಯ ತನಿಖೆಯಲ್ಲಿ ಬಯಲಾದ ಅಂಶ.

ಸಮುದ್ರ ತೀರ, ಕ್ರೀಡಾಂಗಣ ಇತ್ಯಾದಿ
ಗ್ರಾಮೀಣ ಪ್ರದೇಶಗಳ ಬೀಚ್‌ಗಳು, ಸಣ್ಣ ಪುಟ್ಟ ಮೈದಾನಗಳ ಮೂಲೆ, ಪಾಳು ಬಿದ್ದ ಕಟ್ಟಡಗಳು, ಕೆಲವು ನಿರ್ಜನ ಅಥವಾ ಜನಸಂಚಾರ ಕಡಿಮೆ ಇರುವ ತಾಣಗಳಲ್ಲಿ ಕತ್ತಲೆಯಾಗುವಂತೆ ಮದ್ಯ, ಡ್ರಗ್ಸ್‌ ಹಾಗೂ ಗಾಂಜಾ ಸೇವನೆಯಲ್ಲಿ ಯುವಜನರು ತೊಡಗುವುದು ಸಾಮಾನ್ಯ. ಕ್ರೀಡಾಂಗಣದಲ್ಲೂ ಆಟ ಮುಗಿಸಿದ ಬಳಿಕ ಕೆಲವರು ಈ ಡ್ರಗ್ಸ್‌ ಸೇವನೆಯಲ್ಲಿ ತೊಡಗಿಕೊಳ್ಳುವ ಪ್ರಸಂಗಗಳೂ ಇವೆ ಎನ್ನುತ್ತಾರೆ ಕೆಲವರು. ಹಾಗಾಗಿ ಪೊಲೀಸರು ಹಾಗೂ ನಾಗರಿಕರು ಇಂಥ ಸ್ಥಳಗಳ ಮೇಲೂ ನಿಗಾ ವಹಿಸಬೇಕಿದೆ.

ವಿವಿಧೆಡೆಯಿಂದ ನಗರಗಳಿಗೆ ಪೂರೈಕೆ
ಒಡಿಶಾ, ತ್ರಿಪುರಾ, ಬಿಹಾರ, ಮಧ್ಯಪ್ರದೇಶ, ಕೇರಳ ಹಾಗೂ ಆಂಧ್ರಪ್ರದೇಶದಿಂದ ರಾಜ್ಯಕ್ಕೆ ಗಾಂಜಾ ಪೂರೈಕೆಯಾಗುತ್ತಿದೆ. ಪೆಡ್ಲರ್‌ಗಳು ಅದನ್ನು ಕೆ.ಜಿ.ಗೆ 10 ಸಾವಿರದಿಂದ 20 ಸಾವಿರ ರೂ. ನೀಡಿ ಖರೀದಿಸುತ್ತಾರೆ. ಹಣ್ಣು, ತರಕಾರಿ, ವಿವಿಧ ಕೃಷಿ ಉತ್ಪನ್ನಗಳು, ಬಟ್ಟೆ, ದಿನಸಿ, ದಿನೋಪಯೋಗಿ ವಸ್ತುಗಳ ಸಾಗಣೆ ನೆಪದಲ್ಲಿ ವಿವಿಧ ಜಿಲ್ಲೆಗಳಿಗೆ ಪೂರೈಕೆಯಾಗುತ್ತದೆ. ಬಳಿಕ ಪೆಡ್ಲರ್‌ಗಳು ಅದನ್ನು ಕೆ.ಜಿ.ಗೆ 50 ರಿಂದ 60 ಸಾವಿರ ರೂ.ವರೆಗೆ ಮಾರಿ ಹಣ ಗಳಿಸುತ್ತಾರೆ. ಕೆಲವು ತಳ್ಳುಗಾಡಿ, ಗೂಡಂಗಡಿ, ಬೇಕರಿ, ಪಾನ್‌ ಶಾಪ್‌, ತಿನಿಸು ಅಂಗಡಿ, ತರಕಾರಿ, ಹಣ್ಣು ಮಾರಾಟ ಮಳಿಗೆಗಳ ಹಾಗೂ ಯುವಕರು ಹೆಚ್ಚು ಸೇರುವ ಸ್ಥಳಗಳಲ್ಲಿ ಗಾಂಜಾ ಮಾರಾಟ ಅಧಿಕವಾಗುತ್ತಿದೆ.

ಹಳ್ಳಿಗಳ ಮಕ್ಕಳ ದಾರಿ ತಪ್ಪಿಸುವುದೇ ಹೀಗೆ
ಗ್ರಾಮೀಣ ಪ್ರದೇಶಗಳಲ್ಲಿ ಪೆಡ್ಲರ್‌ಗಳು ಮೊದಲು ಅಪ್ರಾಪ್ತರನ್ನು, ವಿದ್ಯಾರ್ಥಿಗಳನ್ನು ಹಾಗೂ ಶಾಲೆ ಬಿಟ್ಟ ಯುವಕರನ್ನು ಹುಡುಕುತ್ತಾರೆ. ಅವರಿಗೆ ಗಾಂಜಾದ ಹೊಗೆಯ ನಶೆಯ ಮೂಲಕವೇ ಚಟ ಹಿಡಿಸುತ್ತಾರೆ. ಆರಂಭದಲ್ಲಿ ನಿರ್ದಿಷ್ಟ ಸಮಯವಿದ್ದರೂ ಕೊಂಚ ತಡ ಮಾಡಿ ಅದಕ್ಕೆ ಕಾಯುವಂತೆ ಮಾಡುತ್ತಾರೆ. ಕ್ರಮೇಣ ಈ ಯುವಜನರು ಅದಕ್ಕೆ ದಾಸರಾಗುತ್ತಾರೆ. ಕೆಲವೊಮ್ಮೆ ಗಾಂಜಾ ಕೊಳ್ಳಲು ಹಣವಿಲ್ಲದಿದ್ದಾಗ ಪುಕ್ಕಟೆಯಾಗಿ ನೀಡಿ, ಇಷ್ಟು ಮಾರಿದರೆ ನಿನಗೆ ಉಚಿತ ಎನ್ನುವ ಆಮಿಷವೊಡ್ಡುತ್ತಾರೆ. ಹೀಗೆ 1ರಿಂದ 2 ತಿಂಗಳ ಕಾಲ ಬಳಕೆಯಾದ ಆ ಯುವಕರು ಬಳಿಕ ದಂಧೆಯ ಸರಪಳಿಗೆ ಸೇರಿಕೊಂಡು ಸ್ಥಳೀಯ ಪೂರೈಕೆದಾರನಾಗುತ್ತಾನೆ. ಅಪ್ರಾಪ್ತರನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿರುವದು ಆತಂಕ ತಂದಿದೆ ಎನ್ನುತ್ತವೆ ಪೊಲೀಸ್‌ ಇಲಾಖೆಯ ಮೂಲಗಳು.

– ಉದಯವಾಣಿ ತಂಡ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next