Advertisement

ಕೊರಗ-ಜೇನು ಕುರುಬರ ಗುಡಿ ಕೈಗಾರಿಕೆ ಉತ್ತೇಜನಕ್ಕೆ ವಿಶೇಷ ಯೋಜನೆ

12:40 AM Feb 29, 2024 | Team Udayavani |

ಕುಂದಾಪುರ: ವಿಶೇಷ ದುರ್ಬಲ ಬುಡಕಟ್ಟು (ಪಿವಿಜಿಟಿ) ಗುಂಪುಗಳ ಪೈಕಿ ರಾಜ್ಯದ ಕೊರಗ ಹಾಗೂ ಜೇನು ಕುರುಬ ಸಮುದಾಯದವರ ಸಾಮಾಜಿಕ – ಆರ್ಥಿಕ ಕಲ್ಯಾ ಣದ ಜತೆಗೆ ಗುಡಿ ಕೈಗಾರಿಕೆ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೇಂದ್ರ ಸರಕಾರದ “ಪಿಎಂ-ಜನ್‌ಮನ್‌’ ಯೋಜನೆಯಡಿ 5 ಜಿಲ್ಲೆಗಳಲ್ಲಿ ವಿವಿಧೋದ್ದೇಶ ಕೇಂದ್ರ (ಎಂಪಿಸಿ) ನಿರ್ಮಾಣವಾಗಲಿದೆ.

Advertisement

ಉಡುಪಿಯ 14, ದಕ್ಷಿಣ ಕನ್ನಡ ಜಿಲ್ಲೆಯ 10 ಕಡೆಗಳಲ್ಲಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆರಂಭದಲ್ಲಿ ಉಡುಪಿಗೆ 2, ಕೊಡಗಿಗೆ ಗರಿಷ್ಠ 6, ಚಾಮರಾಜನಗರ ಮತ್ತು ಮೈಸೂರಿಗೆ ತಲಾ 1 ಕಡೆ ಮಂಜೂರಾಗಿದೆ. ಉಳಿದೆಡೆಗೆ ಇನ್ನಷ್ಟೇ ಮಂಜೂರಾತಿ ಆಗಬೇಕಿದೆ.

ಏನಿದು ಯೋಜನೆ?
ನ. 15ರಂದು ಪ್ರಧಾನಿ ನರೇಂದ್ರ ಮೋದಿ ಈ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಜಿಟಿ) ಸಾಮಾಜಿಕ – ಆರ್ಥಿಕ ಕಲ್ಯಾಣಕ್ಕಾಗಿ “ಪಿಎಂ- ಜನ್‌ಮನ್‌’ ಯೋಜನೆಗೆ ಚಾಲನೆ ನೀಡಿದ್ದರು. 24 ಸಾವಿರ ಕೋ.ರೂ.ಗಳ ಬಜೆಟ್‌ ಮೀಸಲಿರಿಸಲಾಗಿದೆ. 3 ವರ್ಷದ ಯೋಜನೆ ಇದಾಗಿದ್ದು, ಕೇಂದ್ರದ 9 ಸಚಿವಾಲಗಳು 11 ವಲಯಗಳ ಮೇಲೆ ಗಮನ ಕೇಂದ್ರೀಕರಿಸಿ, ಆದಿವಾಸಿಗಳ ಪ್ರಗತಿಗೆ ಶ್ರಮಿಸಲಿದೆ. ಕರ್ನಾಟಕ ಸಹಿತ 18 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಗಳಲ್ಲಿರುವ 75 ಪಿವಿಜಿಟಿ ಸಮುದಾಯಗಳ ಗುಣಮಟ್ಟ ಸುಧಾರಣೆ ಯೋಜನೆಯ ಗುರಿ.

ಏನೆಲ್ಲ ಅಭಿವೃದ್ಧಿ?
ಪಿವಿಜಿಟಿಗಳಿಗೆ ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು, ಮೂಲ ಸೌಕರ್ಯ, ನೈರ್ಮಲ್ಯ, ಶಿಕ್ಷಣ, ಆರೋಗ್ಯ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ, ವಿದ್ಯುತ್‌, ರಸ್ತೆ, ದೂರ ಸಂಪರ್ಕದ ಜತೆಗೆ ತಾಲೂಕುವಾರು ಕೆಲವೊಂದು ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ವಿವಿಧೋದ್ದೇಶ ಕೇಂದ್ರಗಳು (ಎಂಪಿಸಿ) ನಿರ್ಮಾಣವಾಗಲಿವೆ.

ಏನಿದು ಎಂಪಿಸಿ?
60 ಲಕ್ಷ ರೂ. ವೆಚ್ಚದಲ್ಲಿ ವಿವಿಧೋದ್ದೇಶ (ಎಂಪಿಸಿ) ಕೇಂದ್ರಗಳನ್ನು ನಿರ್ಮಿಸಿ, ತರಬೇತಿ ನೀಡಲಾಗುತ್ತದೆ. ಉಡುಪಿಯಲ್ಲಿ ಆರಂಭಿಕ ಹಂತವಾಗಿ ಕೆರಾಡಿ ಹಾಗೂ ಹಾಲಾಡಿಯಲ್ಲಿ ನಿವೇಶನ ಗುರುತಿಸಲಾಗಿದೆ. ಪ್ರತೀ ಕೇಂದ್ರಕ್ಕೆ 60 ಲಕ್ಷ ರೂ. ಸಿಗಲಿದ್ದು, ಅಂಗನವಾಡಿ, ಮಿನಿ ಆರೋಗ್ಯ ಕೇಂದ್ರ, ಕೊರಗ- ಜೇನು ಕುರುಬರ ಕುಲ ಕಸುಬುಗಳನ್ನು ತಯಾರಿಸಲು ಅನುಕೂಲಕರ ವ್ಯವಸ್ಥೆ, ತರಬೇತಿ ಎಲ್ಲವೂ ಒಂದೇ ಸೂರಿನಡಿ ಇರಲಿದೆ.

Advertisement

13 ಸಾವಿರ ಕೊರಗರು
ಉಡುಪಿ ಜಿಲ್ಲೆಯಲ್ಲಿ 9 ಸಾವಿರ ಜನಸಂಖ್ಯೆಯಿದ್ದು, 385 ಕುಟುಂಬಗಳಿಗೆ ಮನೆ ಅಗತ್ಯವಿದೆ. ದ.ಕ.ದಲ್ಲಿ 4,374 ಮನೆಗಳಿದ್ದು, 1,111 ಕುಟುಂಬಗಳಿವೆ. 386 ಮನೆಗಳ ಅಗತ್ಯವಿದೆ. ಈ ಪೈಕಿ 72 ಮಂಜೂರಾಗಿದೆ. ಬಹುತೇಕ ಎಲ್ಲರೂ ಕುಲ ಕಸುಬನ್ನೇ ನೆಚ್ಚಿಕೊಂಡಿದ್ದಾರೆ.

ಬುಡಕಟ್ಟು ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಮೂಲ ಸೌಕರ್ಯಗಳ ಸುಧಾರಣೆಗೆ ಈ ಪಿಎಂ- ಜನ್‌ಮನ್‌ ಯೋಜನೆ ಅನುಷ್ಠಾನ ಗೊಳಿಸಲಾಗಿದೆ. ಹಂತ-ಹಂತವಾಗಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಎಂಪಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮನೆ ಇಲ್ಲದವರನ್ನು ಗುರುತಿಸುವ ಕಾರ್ಯವೂ ಆಗುತ್ತಿದೆ.
– ದೂದ್‌ಪೀರ್‌ ಉಡುಪಿ / ಶಿವಕುಮಾರ್‌, ದ.ಕ., ಜಿಲ್ಲಾ ಸಮನ್ವಯಾಧಿಕಾರಿಗಳು, ಐಟಿಡಿಪಿ ಇಲಾಖೆ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next