Advertisement

ನಶಿಸಿ ಹೋಗುವ ವಿಶಿಷ್ಟ ಕಲೆಗಳಿಗೆ ಪುನರುಜ್ಜೀವನದ ಯೋಗ!

10:35 AM Feb 15, 2023 | Team Udayavani |

ಮಂಗಳೂರು: ಕೊರಗರ ಡೊಳ್ಳು, ಸುಗ್ಗಿ ಕುಣಿತ, ಕುಡುಬಿ ನೃತ್ಯ, ಪಾಡ್ದನ… ಹೀಗೆ ತಳ ಸಮುದಾಯದ ಅಪರೂಪದ ಜನಪದ ಕಲೆಗಳು ಕಣ್ಮರೆಯಾಗುತ್ತಿವೆ ಎನ್ನುವ ಭೀತಿಯ ನಡುವೆ ಅವುಗಳನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿರುವ ವಿಶಿಷ್ಟ ಕಾರ್ಯಕ್ರಮವೇ “ಮೂಲಸಂಸ್ಕೃತಿ-ಕನ್ನಡ ಸಂಸ್ಕೃತಿ…’

Advertisement

ಈ ಯೋಜನೆಯಡಿ ಪ್ರತೀ ಜಿಲ್ಲೆಯ ತಳ ಸಮುದಾಯದ 10 ವಿಶೇಷ ಕಲೆಗಳನ್ನು ಗುರುತಿಸಿ, ನುರಿತ ತಜ್ಞರಿಂದ ಆಯ್ದ ಯುವಕರಿಗೆ ತರಬೇತಿ ನೀಡಿ, ಅವರ ಮೂಲಕ ಮುಂದಿನ ಪೀಳಿಗೆಗೆ ತಲುಪಿಸುವ ಯೋಜನೆ ಇದು. ತಳ ಸಮುದಾಯದ ವಿಶಿಷ್ಟ ಮತ್ತು ಅಪರೂಪದ ಕಲೆಗಳು ಹೆಚ್ಚಾಗಿ ಪರಿಶಿಷ್ಟ ಜಾತಿ / ಪಂಗಡದ ಸಮುದಾಯಗಳಲ್ಲಿ ಇರುವುದರಿಂದ ಆ ಸಮುದಾಯಗಳನ್ನು ವಿಶೇಷವಾಗಿ ಗಮನದಲ್ಲಿರಿಸಿ ಅಂತಹ ಕಲಾಪ್ರಕಾರಗಳನ್ನು ಗುರುತಿಸಲಾಗುತ್ತಿದೆ.

ತರಬೇತಿ ಆರಂಭ

ದ.ಕ. ಜಿಲ್ಲೆಯಲ್ಲಿ 5 ಪ್ರಕಾರಗಳ ಕಲೆಗೆ ಸಂಬಂಧಿಸಿ ಆಸಕ್ತ ತಲಾ 10 ಮಂದಿಯನ್ನು ಆಯ್ಕೆ ಮಾಡಿ ವಾರದಿಂದೀಚೆಗೆ ತರಬೇತಿ ನೀಡಲಾಗುತ್ತಿದೆ. ಪಾಡ್ದನ ತರಬೇತಿಯಲ್ಲಿ ಆಯ್ದ ಶಿಬಿರಾರ್ಥಿಗಳಲ್ಲದೆ 60ಕ್ಕೂ ಅಧಿಕ ಯುವ ಜನರು ಜಾತಿ ಭೇದವಿಲ್ಲದೆ ಸ್ವ ಆಸಕ್ತಿಯಿಂದ ಸೇರುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲೂ ಆಯ್ದ ಕಲಾ ಪ್ರಕಾರಗಳ ತರಬೇತಿ ನಡೆಯುತ್ತಿದೆ. 20 ದಿನಗಳ ಈ ತರಬೇತಿ ಶಿಬಿರ ಆಯೋಜಿಸಲು ಜಿಲ್ಲೆಗೆ ತಲಾ 10 ಲಕ್ಷ ರೂ.ಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಘೋಷಿಸಿದೆ.

ನಶಿಸುತ್ತಿರುವ ವಿಶೇಷ ಕಲೆಗಳನ್ನು ಪುನರುಜ್ಜೀವನಗೊಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಈ ಕಾರ್ಯಕ್ರಮದ ಉದ್ದೇಶ. ಮೊದಲ ಹಂತದಲ್ಲಿ ಪ್ರತೀ ಜಿಲ್ಲೆಯಲ್ಲೂ ತರಬೇತಿ ನೀಡಿ ಅನಂತರ ತರಬೇತಾದ ಯುವಕರಿಂದ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಪ್ರದರ್ಶನವೇರ್ಪಡಿಸಿ ಪ್ರಚುರಪಡಿಸುವ ಕಾರ್ಯವಾಗಲಿದೆ.
– ಸುನಿಲ್‌ ಕುಮಾರ್‌, ಸಚಿವರು, ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯ

Advertisement

ಗುರುತಿಸಲಾದ ವಿಶೇಷ ಕಲೆಗಳು
ದ.ಕ.                                 ಉಡುಪಿ

ಪಾಡ್ದನ                            ಕೊರಗರ ನೃತ್ಯ

ಕೊರಗರ ಡೊಳ್ಳು              ಕಂಗೀಲು

ದುಡಿ ಕುಣಿತ                      ಕಂಸಾಳೆ

ಕಂಗೀಲು                         ಸುಗ್ಗಿ ಕುಣಿತ

ನುಡಿಕಟ್ಟು                      ಕುಡುಬಿ ನೃತ್ಯ

 

_ಸತ್ಯಾ. ಕೆ

Advertisement

Udayavani is now on Telegram. Click here to join our channel and stay updated with the latest news.

Next