Advertisement

ಮೈಸೂರಿನಲ್ಲಿ 130 ಕೋಟಿ ರೂ. ವೆಚ್ಚದ ವಿಶೇಷ ಕ್ಯಾನ್ಸರ್ ಆಸ್ಪತ್ರೆ: ಸಚಿವ ಸುಧಾಕರ್

12:41 PM Oct 27, 2022 | Team Udayavani |

ಮೈಸೂರು: ಮೈಸೂರಿನಲ್ಲಿ 130 ಕೋಟಿ ರೂ. ವೆಚ್ಚದ ವಿಶೇಷ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಮುಂದಿನ‌ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗುವುದು ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Advertisement

ನಗರದಲ್ಲಿ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶೇಷ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಮುಂದಿನ ಕ್ಯಾಬಿನೆಟ್ ನಲ್ಲಿ ಅನುಮೋದನೆ ದೊರೆಯಲಿದ್ದು, ಮೊದಲ ಹಂತದಲ್ಲಿ 50 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು. ಕೆ.ಆರ್.ಆಸ್ಪತ್ರೆ ನವೀಕರಣಕ್ಕೆ 89 ಕೋಟಿ ವೆಚ್ಚದಲ್ಲಿ ಟೆಂಟರ್ ಕರೆದಿದ್ದು ಅಂತಿಮ ಹಂತದಲ್ಲಿದೆ. ನವೆಂಬರ್ ತಿಂಗಳಿನಲ್ಲಿ‌ ನಮ್ಮ ಕ್ಲಿನಿಕ್ ಗಳನ್ನು ಉದ್ಘಾಟಿಸಲಾಗುವುದು. ಡಿಸೆಂಬರ್ ಅಂತ್ಯದೊಳಗೆ 5 ಕೋಟಿ ಆಯುಷ್ಮಾನ್ ಕಾರ್ಡ್ ಗಳನ್ನು ವಿತರಿಸುವ ಗುರಿ ಇದೆ ಎಂದರು.

ಆರೋಗ್ಯ ಇಲಾಖೆಯಲ್ಲಿ ಖಾಲಿ ಬಿದ್ದಿರುವ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಿಕೊಳ್ಳಲಾಗುವುದು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ವೈದ್ಯರು, ಸಿಬ್ಬಂದಿ‌ ನೇಮಕಕ್ಕೆ ಈಗಾಗಲೇ ಅನುಮತಿ ನೀಡಲಾಗಿದೆ. ಕೆಲ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.

ಓಮಿಕ್ರಾನ್ ರೂಪಾಂತರ ಹೊಸ ತಳಿ ಪತ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಹಾರಾಷ್ಟ್ರದಲ್ಲಿ ಒಂದು ಪ್ರಕರಣ ಪತ್ತೆಯಾಗಿದ್ದು, ಅಮೆರಿಕಾದಲ್ಲಿ ಈ ಪ್ರಕರಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಿಗೆ ಮಾರ್ಗಸೂಚಿ ನೀಡಲಾಗಿದೆ. ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ‌ನೀಡಲಾಗಿದೆ. ರಾಜ್ಯದಲ್ಲಿ ಯಾವುದೇ ಆತಂಕವಿಲ್ಲ, ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಆದಷ್ಟು ಬೇಗ ಜನರು ಕೂಡ ಮೂರನೇ ಡೋಸ್ ಪಡೆಯುವುದು ಒಳ್ಳೆಯದು. ಮಾಸ್ಕ್ ಕಡ್ಡಾಯದ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ ಎಂದರು.

ಇದನ್ನೂ ಓದಿ:ಭಾರತಕ್ಕಿಂದು ನೆದರ್ಲ್ಯಾಂಡ್ ಸವಾಲು: ಟಾಸ್ ಗೆದ್ದ ರೋಹಿತ್ ಮೊದಲು ಬ್ಯಾಟಿಂಗ್ ಆಯ್ಕೆ

Advertisement

ತಮ್ಮ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಎಲ್ಲವನ್ನೂ ಕಲಿತಿದ್ದಾರೆ. ಆದರೆ ಅವರು ಬಹುವಚನ ಮಾತ್ರ ಕಲಿತಿಲ್ಲ. ಅವರು ಏಕವಚನದಲ್ಲಿ ಮಾತನಾಡುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ನಾನು ನ್ಯೂಕ್ಲಿಯಸ್ ಆಗಿದ್ದೇನೆ.  ಕೆಲ ಜಿಲ್ಲೆಗಳಲ್ಲಿ ಜೆಡಿಎಸ್ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಎದರಿಸುತ್ತಿದ್ದೇನೆ. ಅದಕ್ಕಾಗಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಕಾಂಗ್ರೆಸ್ ‌ನಿಂದ ಬಿಜೆಪಿಗೆ ಬಂದಿರುವ ಯಾರು ಸಹ ವಾಪಸ್ಸು ಹೋಗುವುದಿಲ್ಲ. ಎಚ್ ವಿಶ್ವನಾಥ್ ಸಹ ಹೋಗುವುದಿಲ್ಲ ಎಂದು ಭಾವಿಸಿದ್ದೇನೆ. ಆದರೆ ಬಿಜೆಪಿ ಸೇರ್ಪಡೆ ವೇಳೆ ಎಚ್.ವಿಶ್ವನಾಥ್ ನಮ್ಮ ಜೊತೆ ಇರಲಿಲ್ಲ ಎಂದರು.

ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ರಾಜ್ಯದ ಉತ್ತರ ದಕ್ಷಿಣ ಭಾಗದಲ್ಲಿ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿ, ಅವರು ಯಾವಗಲೂ ನಾನೊಂದು ತೀರ ನೀನೊಂದು ತೀರಾ ಎನ್ನುವಂತಿದ್ದಾರೆ. ಹೀಗಾಗಿ ಒಬ್ಬರು ದಕ್ಷಿಣ ಹಾಗೂ ಮತ್ತೊಬ್ಬರು ಉತ್ತರಕ್ಕೆ ಹೊರಟಿದ್ದಾರೆ. ಇದರಲ್ಲಿ ಅಚ್ಚರಿ ಏನು ಇಲ್ಲ. ಚುನಾವಣೆ ವೇಳೆ ಯಾತ್ರೆಗಳು ಸಾಮಾನ್ಯ. ನಾಲ್ಕುವರೆ ವರ್ಷದಿಂದ ಇವರಿಗೆ ಯಾವ ಸಮಸ್ಯೆಗಳೂ ಕಂಡಿಲ್ಲ. ಈಗ ಚುನಾವಣೆಗಾಗಿ ಬಂದಿದ್ದಾರೆ. ಜನರು ಎಲ್ಲರಿಗಿಂತ ಬುದ್ದಿವಂತರಿದ್ದಾರೆ. ಇವೆಲ್ಲವೂ ಜನರಿಗೆ ಅರ್ಥವಾಗಲಿದೆ ಎಂದು ಟಾಂಗ್ ನೀಡಿದರು.

ಪ್ರಗತಿ ಪರಿಶೀಲನೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಆರೋಗ್ಯಾಧಿಕಾರಿಗಳು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next