Advertisement

ಕಾಗೆ ಅರಚುತ್ತದೆ ಎಂಬ ಕಾರಣಕ್ಕೆ ಕೋಗಿಲೆ ನಾಚಬೇಕಿಲ್ಲ

09:58 PM Aug 25, 2022 | Team Udayavani |

ಅದು ಅಂತಿಂಥ ಶಿಕ್ಷೆಯಲ್ಲ !

Advertisement

ಬ್ರಿಟಿಷ್‌ ಸಾಮ್ರಾಜ್ಯಶಾಹಿತ್ವವನ್ನು ಮಗುಚಿ ಹಾಕಲು ಮಾಡಿದ ಸಂಚಿನ ಸೂತ್ರಧಾರ ಎಂಬ ಆರೋಪಕ್ಕೆ, ಭಾರತ ಹಾಗೂ ಬ್ರಿಟನ್‌ನಲ್ಲಿ ಬ್ರಿಟಿಷ್‌ ಅಧಿಕಾರಿಗಳ ಹತ್ಯೆಗೆ ಪ್ರೇರಣೆಯಾಗಿದ್ದಾರೆಂಬ ಕಾರಣಕ್ಕೆ ಎರಡು ಅವಧಿಯ ಜೀವಾವಧಿ ಶಿಕ್ಷೆ. ಬಹುಶಃ ಭಾರತದ ಸ್ವಾತಂತ್ರ್ಯಕ್ಕಾಗಿ, ಅಖಂಡ ಭಾರತವನ್ನು ಪ್ರೀತಿಸಿದ್ದಕ್ಕಾಗಿ 14 ವರ್ಷ­ಗಳ ಕಾಲ ಅಂಥದೊಂದು ಘೋರ ಶಿಕ್ಷೆಯನ್ನು ಅನುಭವಿಸಿದವರು ಅವರೊಬ್ಬರು ಮಾತ್ರ. ಆ ಶಿಕ್ಷೆಯಾದರೂ ಎಂಥದ್ದು?

ಹುಟ್ಟೂರಿನ ಸಂಪರ್ಕ ಕಾಣಲು ಸಾಧ್ಯವೇ ಇಲ್ಲದ ಅಂಡ ಮಾನಿನ ಕ್ರೂರ ಸೆಲ್ಯುಲರ್‌ ಜೈಲಿನಲ್ಲಿ ಅವರಿರಬೇಕಿತ್ತು. ಅಲ್ಲಿ  ರಾಜಕೀಯ ಕೈದಿಗಳಿಗೆ ಕೊಡುವ ಯಾವ ಉಪಚಾರವೂ ಇರ ಲಿಲ್ಲ. ದಿನದ ಎಷ್ಟೋ ಗಂಟೆಗಳ ಕಾಲ ಅವರ ಕೈ-ಕಾಲುಗಳಿಗೆ ಕಬ್ಬಿಣದ ಕೋಳ ತೊಡಿಸಿ ನಿಲ್ಲಿಸಲಾಗುತ್ತಿತ್ತು. ಇಡೀ ದಿನ ಹಗ್ಗದ ಹುರಿಯನ್ನು ಕೈಯಿಂದ ಹೊಸೆದು, ಹೊಸೆದ ಹಗ್ಗವನ್ನು ಬಿಡಿಸಿ ಬಿಡಿಸಿ ಅವರ ಕೈಗಳೆಲ್ಲವೂ ಜಿಡ್ಡುಗಟ್ಟಿ ಹೋಗಿತ್ತು. ಸಾಲದ್ದಕ್ಕೆ ಪ್ರತೀ ದಿನ ಮೂರು ಕಾಲು ಕೆ.ಜಿ. ಎಣ್ಣೆ ತೆಗೆಯುವುದಕ್ಕೆ ಗಾಣಕ್ಕೆ ಹೆಗಲು ಕೊಟ್ಟು ಎತ್ತಿನಂತೆ ಸುತ್ತಬೇಕಿತ್ತು. ನೆನಪಿಡಿ, ಈ ರೀತಿಯ ಶಿಕ್ಷೆಯನ್ನು ಅವರು ಒಂದು ದಿನವಲ್ಲ, ಒಂದು ವರ್ಷವಲ್ಲ, ಬರೋಬ್ಬರಿ 14 ವರ್ಷಗಳ ಕಾಲ ಅನುಭವಿಸಿದ್ದರು!

ಭಾರತ ಮಾತೆಯನ್ನು ಪರಕೀಯರಿಂದ ಬಂಧಮುಕ್ತ­ಗೊಳಿಸ ಬೇಕೆಂದು ಇಷ್ಟೆಲ್ಲ ಕಷ್ಟವನ್ನು ದಿಟ್ಟತನದಿಂದ ಸೈರಿಸಿಕೊಂಡ ಆ ವ್ಯಕ್ತಿಯ ಹೆಸರು ವಿನಾಯಕ ದಾಮೋದರ ಸಾವರ್ಕರ್‌ ಅರ್ಥಾತ್‌ ವೀರ ಸಾವರ್ಕರ್‌. ಅಂದು ತನ್ನ ಸಾಮ್ರಾಜ್ಯಶಾಹಿತ್ವಕ್ಕೆ ಸಿಂಹಸ್ವಪ್ನವಾಗಿದ್ದ ಈ ವ್ಯಕ್ತಿಯ ವೀರಗಾಥೆಯನ್ನು ಹೊಸಕಿ ಹಾಕುವುದಕ್ಕೆ ಬ್ರಿಟಿಷ್‌ ಸರಕಾರ ಇನ್ನಿಲ್ಲದ ಹಿಂಸಾಕ್ರಮಗಳನ್ನು ಅನುಸರಿಸಿತು. ಅದಕ್ಕೆ ತಕ್ಕಂತೆ ಸಾವರ್ಕರ್‌ ಅವರ ಕಾರ್ಯ­ವೈಖ ರಿಯೂ ಇತ್ತು. ತಾಯ್ನಾಡಿನಲ್ಲಿ ಮಾತ್ರವಲ್ಲ, ಬ್ರಿಟಿಷ್‌ ನಾಡಿನಲ್ಲೂ ಏಕಕಾಲಕ್ಕೆ ಸಾವರ್ಕರ್‌ ಕ್ರಾಂತಿಕಾರಿ ಚಟುವಟಿಕೆ ನಡೆಸಿದ್ದರು. ಅವರಿಂದ ಪ್ರೇರಣೆ ಪಡೆದ ಮದನ್‌ ಲಾಲ್‌ ಧಿಂಗ್ರಾ ಎಂಬ ಕ್ರಾಂತಿಕಾರಿ 1909ರಲ್ಲಿ ಬ್ರಿಟಿಷ್‌ ಕರ್ಜನ್‌ ವಾಯಲಿ ಎಂಬಾತ ನನ್ನು ಗುಂಡಿಟ್ಟು ಕೊಂದು ಗಲ್ಲಿಗೇರಿದ. ಅನಂತರ ಕಾನ್ಹೆರೆ ಎಂಬಾತ ನಾಸಿಕ್‌ನಲ್ಲಿ ಜಾಕ್ಸನ್‌ ಎಂಬ ಅಧಿಕಾರಿಯನ್ನು ಬಲಿ ಪಡೆದು ನೇಣುಗಂಬ ಏರಿದ. ಸಾವರ್ಕರ್‌ ಸ್ಥಾಪಿಸಿದ ಅಭಿನವ ಭಾರತ್‌ ದೇಶದ ಮೊತ್ತಮೊದಲ ಯುವಕ ಸಂಘ. ಬ್ರಿಟಿಷರ ವಿರುದ್ಧ ಹೋರಾಡುವುದಕ್ಕೆ ಯುವಕರನ್ನು ಪ್ರೇರೇಪಿ­ಸುವುದೇ ಈ ಸಂಘಟನೆಯ ಉದ್ದೇಶವಾಗಿತ್ತು. ಈ ಎಲ್ಲ ಚಟುವಟಿಕೆಗಳ ಹಿಂದೆ ಬ್ರಿಟಿಷ್‌ ಸರಕಾರ ಸಾವರ್ಕರ್‌ ಜಾಡನ್ನು ಗುರುತಿಸಿತ್ತು. ಇದಕ್ಕೆ ಮುಂಚಿತವಾಗಿ 1908ರಲ್ಲಿ ಅವರು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯ ಪುಸ್ತಕವನ್ನು ಬರೆದರು. ಅದು ಭಾರತ ಹಾಗೂ ಲಂಡನ್‌ನಲ್ಲಿ ನಿಷೇಧವಾದರೂ ಫ್ರಾನ್ಸ್‌ ಹಾಗೂ ಜರ್ಮನಿಗಳಲ್ಲಿ ಪ್ರಕಟವಾಯಿತು. ಈ ಕಾರಣಕ್ಕಾಗಿ ತಾಯ್ನಾಡಿಗೆ ಆಗಮಿಸುವುದಕ್ಕೆ ಮುನ್ನವೇ ಅವರನ್ನು ಸೆರೆ ಹಿಡಿದು, ಯುದ್ಧ ಕೈದಿಯ ರೂಪದಲ್ಲಿ ಕರೆತಂದು ಎರಡು ಅವಧಿಯ ಜೀವಾವಧಿ ಶಿಕ್ಷೆ ನೀಡಲಾಯಿತು. ಭಾರತಕ್ಕೆ ಕರೆತರುವಾಗ ಅವರು ಇಂಗ್ಲಿಷ್‌ ಕಡಲ್ಗಾಲುವೆಗೆ ಹಾರಿ ತಪ್ಪಿಸಿ­ಕೊಳ್ಳುವ ಪ್ರಯತ್ನ ನಡೆಸಿದ್ದರು.

ಹೀಗಾಗಿ ಸುತ್ತಲೂ ನೀರಿರುವ ಅಂಡಮಾನ್‌ ದ್ವೀಪದಲ್ಲಿ ಬ್ರಿಟಿಷ್‌ ಸರಕಾರ ಅವರಿಗೆ ಕಾಲಾ­ಪಾನಿ ಶಿಕ್ಷೆ ನೀಡಿತ್ತು. ಆ ಕ್ರೂರ ಶಿಕ್ಷೆಯನ್ನು ಅನುಭವಿಸುತ್ತಲೇ ಅಸಂಖ್ಯಾಕ ಕ್ರಾಂತಿಕಾರಿಗಳ ನಿರ್ಮಾಣಕ್ಕೆ ಸಾವರ್ಕರ್‌ ಪ್ರೇರಣೆಯಾದರು. ಕುತೂಹಲಕಾರಿ ಸಂಗತಿ ಎಂದರೆ ಸಾವರ್ಕರ್‌ ಕರಿನೀರಿನ ಶಿಕ್ಷೆ ಅನು­ಭವಿಸುತ್ತಿದ್ದ ಅದೇ ಸೆಲ್ಯುಲರ್‌ ಜೈಲಿನಲ್ಲಿ ಅವರ ಸೋದರನೂ ಅಷ್ಟೇ ಘೋರ ಪ್ರಮಾಣದ ಶಿಕ್ಷೆಗೆ ಗುರಿಯಾಗಿದ್ದರು. ಅವರ ಇಡೀ ಕುಟುಂಬವೇ ದೇಶಕ್ಕೆ ಅರ್ಪಣೆ ಯಾಗಿತ್ತು. ಈ ಕಾರಣ­ಕ್ಕಾಗಿಯೇ ಬೇರೆ ಯಾವ ಸ್ವಾತಂತ್ರ್ಯ ವೀರ ರಿಗೂ ಇಲ್ಲದ “ವೀರ’ ಎಂಬ ಬಿರುದು ಸಾವರ್ಕರ್‌ ಅವರಿಗೆ ನೀಡಿ ದೇಶ ಕೊಂಡಾಡುತ್ತಿದೆ.

Advertisement

ಅಂದು ಸಾವರ್ಕರ್‌ ಪ್ರಭೆಯಿಂದ ಕಂಗೆಟ್ಟಿದ್ದ ಬ್ರಿಟಿಷರ ರೀತಿಯಲ್ಲೇ ಇಂದು ಕಾಂಗ್ರೆಸ್‌ ಎಂಬ ಪ್ರಭಾವಿಗಳ ಕೂಟ ಸಾವರ್ಕರ್‌ ಯಶೋಗಾಥೆಯನ್ನು ಕೆಡಿಸುವುದಕ್ಕೆ ಹೊರಟಿದೆ. ಯುಪಿಎ ಸರಕಾರದಲ್ಲಿ ಸಚಿವರಾಗಿದ್ದ ಮಣಿಶಂಕರ್‌ ಅಯ್ಯರ್‌ ಅಂಡಮಾನ್‌ ಜೈಲಿನಲ್ಲಿ ಸಾವರ್ಕರ್‌ಗೆ ಅವಮಾನ ಮಾಡುವುದ­ರೊಂದಿಗೆ ಈ ಪರಂಪರೆ ಪ್ರಾರಂಭಗೊಂಡಿದೆ. ಕಾಂಗ್ರೆಸಿನ ಈ ವಿಫ‌ಲ ಆಟಕ್ಕೆ ರಾಜ್ಯದಲ್ಲಿ ಮಹಾನ್‌ ಸುಳ್ಳುಗಾರ ರಾಜಕಾರಣಿ ಸಿದ್ದರಾಮಯ್ಯನವರೇ ಕಮಾಂಡರ್‌ -ಇನ್‌-ಚೀಫ್.

ಬಾಂಗ್ಲಾ ಯುದ್ಧವನ್ನು ಗೆದ್ದ ಕಾರಣಕ್ಕೆ ದಿ| ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅಟಲ್‌ ಜೀ ದುರ್ಗೆಗೆ ಹೋಲಿಸಿದ್ದರು ಎಂದು ಕಾಂಗ್ರೆಸಿಗರು ಸಂದರ್ಭ ಸಿಕ್ಕಾಗಲೆಲ್ಲ ಜಪಿಸುತ್ತಲೇ ಬಂದಿದ್ದಾರೆ. ವಿಪಕ್ಷ ನಾಯಕರೇ ಇಂದಿರಾ ಅವರ ದೃಢ ನಿರ್ಧಾರ ಹಾಗೂ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದರು ಎಂಬುದನ್ನು ಪ್ರತಿ ಪಾದಿಸುವುದಕ್ಕಾಗಿ ಮಾತ್ರ ಕಾಂಗ್ರೆಸಿಗರು ಈ ವಾದವನ್ನು ಬಳಸಿಕೊಳ್ಳುತ್ತಾರೆ. ಇಂದಿರಾ ಅವರನ್ನು ದುರ್ಗೆಗೆ ಹೋಲಿಸಿಲ್ಲ ಎಂದು ಅಟಲ್‌ ಜೀ ಅನಂತರ ಸ್ಪಷ್ಟೀಕರಣ ನೀಡಿದ್ದರು ಎಂಬುದು ಬೇರೆ ಮಾತು. ಆದರೆ ಇಂದಿರಾ ಗಾಂಧಿಯವರನ್ನು  ವಾಜಪೇಯಿ ಅವರು ಕೊಂಡಾಡುವ ರೀತಿ ಮಾತನಾಡಿದ್ದಾರೆ ಎಂದು ಪುಳಕಿತ ರಾಗುವ ಕಾಂಗ್ರೆಸಿಗರು, ಅದೇ ಇಂದಿರಾ ಗಾಂಧಿ ವೀರ ಸಾವ ರ್ಕರ್‌ರನ್ನೂ  ಹೊಗಳಿದ್ದರು ಎಂಬುದನ್ನು ಮಾತ್ರ ಸಹಿಸಿಕೊಳ್ಳು ವು ದಿಲ್ಲ. ಸಾವರ್ಕರ್‌ರನ್ನು ಪ್ರಶಂಸಿಸಿ ಇಂದಿರಾ ಬರೆದ ಆ ಪತ್ರವನ್ನು ಇತ್ತೀಚಿಗಿನ ಕಾಂಗ್ರೆಸಿಗರು ಒಂದು ಐತಿಹಾಸಿಕ ಪ್ರಮಾದ ಎಂಬಂತೆ ಪರಿಗಣಿಸಿರುವುದನ್ನು ಕಂಡರೆ ಅವರ ಸೈದ್ಧಾಂತಿಕ ಅಧಃಪತನದ ಬಗ್ಗೆ ಮರುಕ ಮಾತ್ರ ವ್ಯಕ್ತಪಡಿಸಬಹುದಾಗಿದೆ.

ಸಾವರ್ಕರ್‌ ಜನ್ಮದಿನಾಚರಣೆ ಪ್ರಯುಕ್ತ ಇಂದಿರಾ ಗಾಂಧಿ ಅಂಚೆ ಚೀಟಿ ಪ್ರಕಟಿಸಿ, ಅಂದಿನ ಕೇಂದ್ರ ಮತ್ತು ಪ್ರಚಾರ ಇಲಾ ಖೆಯ ಮೂಲಕ ಸಾಕ್ಷ್ಯಚಿತ್ರವನ್ನೂ ಮಾಡಿಸಿದ್ದರು. ಸಾವರ್ಕರ್‌ ಒಬ್ಬ ನೈಜ ಕ್ರಾಂತಿಕಾರಿ. ಅವರಿಂದ ಲಕ್ಷಾಂತರ ಜನರು ಪ್ರೇರಿತ ರಾಗಿದ್ದರು. ಸಾವರ್ಕರ್‌ ಎಂಬ ಹೆಸರೇ ದೇಶಭಕ್ತಿಗೆ ಪರ್ಯಾಯ ಪದ ಎಂಬ ಅರ್ಥದಲ್ಲಿ ಇಂದಿರಾ ಗಾಂಧಿ ಸಂದೇಶ ಪತ್ರವನ್ನೇ ಕಳುಹಿಸಿರುವಾಗ, ತಮ್ಮ ರಾಜಕೀಯ ಜೀವನದಲ್ಲಿ ನಿಶ್ಚಿತವಾದ ಸಿದ್ಧಾಂತಕ್ಕೆ ಅಂಟಿಕೊಳ್ಳದ ಸಂದಭೋìಚಿತವಾಗಿ ಬಣ್ಣ ಬದಲಿಸು ವುದನ್ನೇ ಕಾಯಕವಾಗಿಸಿಕೊಂಡಿರುವ ಸಿದ್ದರಾಮಯ್ಯ­ನವರಂಥ ಅವಕಾಶವಾದಿ ರಾಜಕಾರಣಿಗೆ ಮಾತ್ರ ಸಾವರ್ಕರ್‌ ಅವರಂಥ ದೇಶ ಭಕ್ತನಲ್ಲಿ ದೋಷ ಕಾಣಿಸುತ್ತದೆ.

ಸಿದ್ದರಾಮಯ್ಯನವರಿಗೆ ರಾಜಕೀಯವಾಗಿ ನೆಲೆ ಕಲ್ಪಿಸಿದ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆಯೇ ಬದ್ಧತೆ ಇಲ್ಲ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಾದಾಮಿಗೆ ವಲಸೆ ಹೋಗಿ ಗೆದ್ದ ಅವರಿಗೆ ಅಲ್ಲಿಯ ಮತದಾರನ ಆಶಯಕ್ಕೆ ಬದ್ಧವಾಗಿ­ರಲು ಸಾಧ್ಯವಾಗಿಲ್ಲ. ಈ ಬಾರಿ ಮತ್ತೂಂದು ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯನವರಿಗೆ ಈ ದೇಶದ ಮೇಲೆ ಸಾವರ್ಕರ್‌ ಅವರಿಗೆ ಇದ್ದ ಸೈದ್ಧಾಂತಿಕ ಬದ್ಧತೆಯ ಅರಿವಾಗಲು ಸಾಧ್ಯವೇ?

ಸಾವರ್ಕರ್‌ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌ ಬಹು ಹಿಂದಿನಿಂದಲೂ ಸಂಚಿನ ಧೋರಣೆ ಪ್ರಕಟಿಸುತ್ತಲೇ ಬಂದಿದೆ. ರಾಹುಲ್‌ ಗಾಂಧಿ ಸಾರಥ್ಯದಲ್ಲಿ ಕಾಂಗ್ರೆಸ್‌ ರಾಷ್ಟ್ರವ್ಯಾಪಿ ಕುಸಿಯ ತೊಡಗಿದ ಅನಂತರವಂತೂ ಈ ಚಟುವಟಿಕೆ ಇನ್ನಷ್ಟು ವೇಗ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಮಾತ್ರ ಕುಟುಕು ಜೀವ ಹಿಡಿದುಕೊಂಡಿರುವ ಕಾಂಗ್ರೆಸ್‌ ನಾಯಕರು ತಮ್ಮ ವಿಫ‌ಲ ನಾಯಕನನ್ನು ಮೆಚ್ಚಿಸುವುದಕ್ಕಾಗಿ ಸಾವರ್ಕರ್‌ ನಿಂದನೆಯನ್ನು ಯಥೇತ್ಛವಾಗಿ ನಡೆಸುತ್ತಿ¨ªಾರೆ. ನೆಹರೂ ಪ್ರಣೀತ ಇತಿಹಾಸ ಮಾತ್ರ ಸತ್ಯ ಎಂದು ಬಿಂಬಿಸುವ ಧಾವಂತದಲ್ಲಿ ನಿಜವಾದ ಕ್ರಾಂತಿಕಾರಿಗಳಿಗೆ ಮಸಿ ಬಳಿಯುವ ಕೆಲಸವಾಗುತ್ತಿದೆ. ಅದಿಲ್ಲವಾ­ದರೆ ಸಿದ್ದರಾಮಯ್ಯನವರಂಥ ರಾಜಕಾರಣಿಗಳು ಮುಸ್ಲಿಂ ಏರಿ­ಯಾ­ದಲ್ಲಿ ಸಾವರ್ಕರ್‌ ಫೋಟೋ ಹಾಕಿದ್ದೇಕೆ ಎಂಬ ಅತಿರೇಕದ ಪ್ರಶ್ನೆಯನ್ನು ಮುಂದಿಡುತ್ತಿರಲಿಲ್ಲ. ದೇಶವನ್ನು ಪ್ರೀತಿಸಿದ್ದಕ್ಕಾಗಿ 14 ವರ್ಷ ನೇರ ಶಿಕ್ಷೆ, 13 ವರ್ಷ ಗೃಹಬಂಧನವನ್ನು ಅನುಭವಿಸಿದ ಮಹಾನ್‌ ಚೇತನದ ಭಾವಚಿತ್ರವನ್ನು ಸಿದ್ದರಾಮಯ್ಯನವರ ಅಪ್ಪಣೆ ಪಡೆದು ಹಾಕಬೇಕೆಂಬ ವಾದವೇ ಹಾಸ್ಯಾಸ್ಪದ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಅಮೃತ ಭಾರತಿಗೆ ಕನ್ನಡದ ಆರತಿ ಅಭಿಯಾನದ ವೇಳೆಯೂ ಸಿದ್ದರಾಮಯ್ಯ ಇಂಥದ್ದೇ ಆಕ್ಷೇಪ ವ್ಯಕ್ತಪಡಿಸಿದ್ದರು. ಸಾವರ್ಕರ್‌ ಜನ್ಮದಿನದಂದೇ ಈ ಅಭಿ ಯಾನ ಆರಂಭಿಸುವುದೇಕೆ ಎಂದು ಪ್ರಶ್ನಿಸಿದ್ದರು. ಆನೆಗೆ ಸದಾ ಸಿಂಹದ ಚಿಂತೆ ಎಂಬಂತೆ ವಿನಾಯಕ ದಾಮೋದರ್‌ ಸಾವರ್ಕರ್‌ ಹಾಗೂ ನರೇಂದ್ರ ದಾಮೋದರ್‌ ದಾಸ್‌ ಮೋದಿ ಎಂಬ ಎರಡು ಹೆಸರುಗಳು ಅವರನ್ನು ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಆತಂಕಕ್ಕೆ ದೂಡಿರಲೂ ಸಾಕು!

ಸಿದ್ದರಾಮಯ್ಯ ದೇಶದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯ ಬಗ್ಗೆ, ಅದರಲ್ಲಿ ಭಾಗಿಯಾದ ಸಾವರ್ಕರ್‌ರಂಥ ಕ್ರಾಂತಿಕಾರಿಗಳ ಬಗ್ಗೆ ಮಾತನಾಡುವ ಅರ್ಹತೆ  ಉಳಿಸಿಕೊಂಡಿಲ್ಲ. ಮತ ರಾಜ ಕಾರಣಕ್ಕಾಗಿ ಟಿಪ್ಪು ಓಲೈಕೆ ನಡೆಸುತ್ತಿರುವ ಅವರು ಬಹು ಸಂಖ್ಯಾಕರ ಭಾವನೆಗಳಿಗೆ ಬೆಲೆ ಕೊಡುತ್ತಾರೆ ಎಂದು ನಿರೀಕ್ಷಿಸುವುದೇ ತಪ್ಪು. ಅವರ ದುರುದ್ದೇಶಪೂರಿತ ಸುಳ್ಳು ಪ್ರತಿಪಾದನೆಗೆ ಹೆಚ್ಚೇನೂ ಪ್ರತಿಕ್ರಿಯಿಸುವುದಿಲ್ಲ.  ಕಾಗೆ ಅರಚುತ್ತದೆ ಎಂಬ ಕಾರಣಕ್ಕೆ ಕೋಗಿಲೆ ನಾಚುವುದಿಲ್ಲ.

 

– ವಿ. ಸುನಿಲ್‌ ಕುಮಾರ್‌,

ಕನ್ನಡ- ಸಂಸ್ಕೃತಿ ಹಾಗೂ

ಇಂಧನ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next